Thursday, November 1, 2007

ಭಾವುಕ ಜೀವಿ ಕಥೆಗಾರ ವ್ಯಾಸ



ಕನ್ನಡ ಸಾಹಿತ್ಯಲೋಕದಲ್ಲಿ ನಾನು ಇಷ್ಟಪಡುವ ಕೆಲವೇ ಕೆಲವು ಪ್ರಮುಖರಲ್ಲಿ ಸಾಹಿತಿ, ಕಥೆಗಾರ ಎಂ.ವ್ಯಾಸರು ಒಬ್ಬರಾಗಿದ್ದಾರೆ. ಅವರು ಕನ್ನಡ ಸಾಹಿತ್ಯಲೋಕದಲ್ಲಿ ತೆರೆಮರೆಯಲ್ಲಿದ್ದರೂ ಕೂಡ, ಅಪಾರ ಅಭಿಮಾನಿಗಳನ್ನು ಪಡೆದುಕೊಂಡವರು. ತಮ್ಮ ವಿಭಿನ್ನ ಶೈಲಿಯ ಕಥೆಗಳ ಮೂಲಕ ಸಾಹಿತ್ಯ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದವರು ವ್ಯಾಸರು. ಕನ್ನಡದ ದೈನಿಕಗಳಾದ ಪ್ರಜಾವಾಣಿ, ಕನ್ನಡಪ್ರಭ , ಉದಯವಾಣಿ, ವಿಜಯಕರ್ನಾಟಕ ಸೇರಿದಂತೆ ಹೆಚ್ಚಿನ ಪತ್ರಿಕೆ, ವಾರ ಪತ್ರಿಕೆ, ಮಾಸಿಕಗಳಲ್ಲಿ ಅವರ ಕಥೆಗಳು ಆಗಾಗ ಪ್ರಕಟವಾಗುತ್ತಿರುತ್ತದೆ.

ನಾನು ಕೂಡ ಅವರ ಅಭಿಮಾನಿಯಾಗಿದ್ದೆ. ಉಷಾಕಿರಣ ಪತ್ರಿಕೆಯಲ್ಲಿದ್ದಾಗ ಬೆಂಗಳೂರಿನಿಂದ ಮಂಗಳೂರಿಗೆ ನಾನು ವರ್ಗಾವಣೆಗೊಂಡಿದ್ದೆ. ಆ ಸಂದರ್ಭದಲ್ಲಿ ಕಾಸರಗೋಡಿನ (ರೂಮ್‌ಮೇಟ್) ಪತ್ರಕರ್ತ ಮಿತ್ರ ಬಾಲಮುರಳಿ ಒತ್ತಾಯದ ಮೂಲಕ ವ್ಯಾಸರು ಲೇಖನ ಬರೆಯಲು ಆರಂಭಿಸಿದ್ದರು. ಅವರ ಬರಹ ಮತ್ತು ಕಥೆಗಳೆರಡೂ ಕೂಡ ವಿಭಿನ್ನ ಶೈಲಿಯವು. ಆಳವಾದ ಚಿಂತನೆಯ ಬರಹಗಳನ್ನು ವ್ಯಾಸರು ತಮ್ಮದೇ ರೂಪದಲ್ಲಿ ಅಕ್ಷರಕ್ಕಿಳಿಸುತ್ತಾರೆ. ಕಾಸರಗೋಡಿನ ಮಣ್ಣಿಪ್ಪಾಡಿಯ ಪ್ರಶಾಂತವಾದ ವಾತಾವರಣದ ತೋಟದಲ್ಲಿನ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುವ ವ್ಯಾಸರು ತುಂಬಾ ಮೌನಿ, ಏಕಾಂತ ಜೀವಿ.

ಅವರು ಎಲ್ಲಾ ಪತ್ರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ, ಯುವ ಬರಹಗಾರರ ಲೇಖನ ಓದಿ, ಅವರನ್ನು ಪ್ರೋತ್ಸಾಹಿಸುವ ವ್ಯಾಸರು ಕನ್ನಡ ಸಾಹಿತ್ಯ ವಲಯದ ಅಪರೂಪದ ವ್ಯಕ್ತಿ. ಈಗಾಗಲೇ ಸುಮಾರು 300 ಕ್ಕಿಂತಲೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಹೆಚ್ಚಿನ ಸಾಹಿತಿಗಳು ಪ್ರಶಸ್ತಿ, ಸನ್ಮಾನ ಅಂತ ರಾಜಕಾರಣಿಗಳ ಚುಂಗು ಹಿಡಿದು ಓಡಾಡುತ್ತಿದ್ದರೆ, ವ್ಯಾಸರು ಮಾತ್ರ ಅದ್ಯಾವ ಗೊಡವೆಗೂ ಹೋಗದವರು. ಈವರೆಗೂ ಅವರನ್ನು ಕನ್ನಡ ಸಾಹಿತ್ಯಲೋಕ ಗಂಭೀರವಾಗಿ ಪರಿಗಣಿಸದೆ ಇರುವುದು ವಿಪರ್ಯಾಸ. ವೇದಿಕೆ, ಹಾರ, ಸನ್ಮಾನ ಅಂದರೆ ಮಾರು ದೂರ ಸರಿಯುವ ವ್ಯಾಸರಿಗೆ ಯುವ ಬರಹಗಾರರು, ಮಿತ್ರರೆಂದರೆ ಪಂಚಪ್ರಾಣ.

ತುಂಬಾ ಭಾವುಕ ಸ್ವಭಾವದ ಅವರು ತಮ್ಮ ಕಥೆಗಳ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಕಂಬನಿ, ಕೃತ ಅವರ ಕಥಾ ಸಂಕಲನಗಳು, ಸುಳಿ, ಕ್ಷೇತ್ರ ಅವರ ಕವನ ಸಂಕಲನಗಳಾಗಿವೆ.ವ್ಯಾಸರ ಕಥೆಗಳ ಚುಂಬಕ ಶಕ್ತಿಯ ಶೈಲಿ ಹೇಗಿರುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ಮಯೂರದಲ್ಲಿ ಪ್ರಕಟವಾದ "ಕೆಂಡ'' ಕಥೆಯ ಕೆಲವು ಸಾಲುಗಳನ್ನು ಓದಿ. ಮೌನದಲ್ಲೇ ಮಾತುಗಳು ಹುಟ್ಟುತ್ತವೆ. ಅದನ್ನು ನಿನ್ನ ಮಾವ ಧ್ಯಾನ ಅನ್ನುತ್ತಿದ್ದರು.

ಕಥೆಯೊಂದು ಮನಸ್ಸಿನಲ್ಲಿ ಹುಟ್ಟಿಕೊಂಡರೆ ಸಾಕು,

ಮೌನ ಮುನಿಯಂತಾಗಿ ಬಿಡುತ್ತಿದ್ದರು.

ದಿನಗಟ್ಟಲೆ ಅವರು ವರ್ತಮಾನದಿಂದ ಅದೃಶ್ಯರಾಗಿ ಬಿಡುತ್ತಿದ್ದರು.

ನನಗೆ ಮೌನ ಅಭ್ಯಾಸವಾಗಿ ಬಿಟ್ಟಿತ್ತು.

ಧ್ಯಾನದ ಮೌನವಲ್ಲ, ಶವದ ಮೌನ. ಸ್ಮಶಾನ ಮೌನ.


ನೀನು ಈ ಗೂಡಿನಲ್ಲಿ ಹೇಗಿದ್ದೆ ? ಬಹಳ ತಡವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ.

ಈವರೆಗೆ ಪ್ರಕಟವಾಗಿರುವ ವ್ಯಾಸರ ಕಥೆ, ಕವನಗಳೆಲ್ಲವೂ ಮೂರಕ್ಷರದ್ದು, ಅದು ಅವರ ವಿಶೇಷತೆ. ಮಿತ್ರ ಮುರಳಿಯೊಂದಿಗೆ ಅವರನ್ನು ಭೇಟಿಯಾಗಿ ಬಂದ ಮೇಲೆ ಊರಿಗೆ ಹೋದಾಗಲೆಲ್ಲ, ಹಿರಿಯ ಜೀವದೊಂದಿಗೆ ಒಂದಿಷ್ಟು ಹೊತ್ತು ಕಳೆದು ಬರುವುದು ರೂಢಿ. ಅವರೊಂದಿಗೆ ಮಾತನಾಡುವಾಗೆಲ್ಲ ನನಗೆ ತೇಜಸ್ವಿ, ಖಾಸನೀಸರ ನೆನಪು ಆಗಾಗ ಕಾಡುತ್ತಿರುತ್ತೆ. ತೇಜಸ್ವಿಯೂ ಪ್ರಶಸ್ತಿ, ಸನ್ಮಾನಗಳಿಂದ ದೂರ ಉಳಿದವರು, ಖಾಸನೀಸರಂತೂ ಹದಿನೇಳು ವರ್ಷಗಳ ಕಾಲ ಪಾರ್ಕಿನ್‌ಸನ್ ಖಾಯಿಲೆಯಲ್ಲಿ ನರಳಿ ಇಹಲೋಕ ತ್ಯಜಿಸಿದ್ದರು. ಆದರೆ ಅವರ ಕಥೆಗಳಲ್ಲಿ ಮಾತ್ರ ಖಾಸನೀಸ ಇನ್ನೂ ಜೀವಂತವಾಗಿದ್ದಾರೆ.

ಇತ್ತೀಚೆಗೆ ಮತ್ತೊಬ್ಬ ಪತ್ರಕರ್ತ ಮಿತ್ರ ಹರೀಶ್ ಆದೂರ್ ಸಂದೇಶವೊಂದನ್ನು ಕಳುಹಿಸಿದ್ದ, ಮೂಡುಬಿದಿರೆಯ ತಮ್ಮ ಮನೆಯಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಇಟ್ಟುಕೊಂಡಿದ್ದೇನೆ. ಕಾರ್ಯಕ್ರಮದಲ್ಲಿ ವ್ಯಾಸರು ಭಾಗವಹಿಸುತ್ತಿದ್ದಾರೆ ಅಗತ್ಯವಾಗಿ ಬರಬೇಕೆಂದು ವಿನಂತಿಸಿಕೊಂಡಿದ್ದ. ಅನಿವಾರ್ಯ ಕಾರಣಗಳಿಂದ ಹೋಗಲಾಗಿಲ್ಲ. ಸಭೆ, ಸಮಾರಂಭದಿಂದ ದೂರ ಉಳಿಯುವ ವ್ಯಾಸರು ಯುವ ಬರಹಗಾರನ ಒತ್ತಾಯಕ್ಕೆ ಮಣಿದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ತುಂಬಾ ಸಂತೋಷ ನೀಡಿತ್ತು. ಜತೆಗೆ ಆದೂರ್‌ನಂತಹ ಮಿತ್ರರ ಸಾಹಿತ್ಯ ಚಟುವಟಿಕೆಗಳು ಶ್ಲಾಘನೀಯ.

ಆ ನೆಲೆಯಲ್ಲಿ ತಮ್ಮ ಪಾಡಿಗೆ ತಾವು ಕೃಷಿಯೊಂದಿಗೆ, ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಮೌನ ಹಕ್ಕಿ ವ್ಯಾಸರಿಗೆ ಅಕ್ಷರಗಳ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಕೋರುವೆ.


Tuesday, October 30, 2007

ತೆಹಲ್ಕಾ ಸೃಷ್ಟಿಸಿದ ಕೋಲಾಹಲ



ಏನ್ ಸಾರ್ ಈ ರೀತಿ ಕೋಮುಗಲಭೆ, ಲೂಟಿ, ಅನಾಚಾರ ನಡೆಯುತ್ತಿದ್ದರೆ ಮುಂದಿನ ಕಥೆ ಏನು ಅಂದರೆ ಸಾಕು, ಆ ನನ್ಮಕ್ಕಳನ್ನ ಮೊದಲು ಗುಂಡಿಟ್ಟು ಸಾಯಿಸಬೇಕು.ಮುಸ್ಲಿಮರಿಂದಾಗಿ ಇಲ್ಲಿನ ನೆಮ್ಮದಿ ಹಾಳಾಗುತ್ತಿದೆ ಎಂಬ ಮಾತುಗಳು ಪುಂಖಾನುಪುಂಖವಾಗಿ ಹರಿದು ಬರುತ್ತದೆ.ಬಹುತೇಕ ಹಿರಿಯರು-ಕಿರಿಯರು ಎನ್ನದೆ ಇಂತಹದ್ದೇ ಆಕ್ರೋಶದ ಮಾತುಗಳನ್ನ ಆಡುತ್ತಿರುತ್ತಾರೆ. ಸಮಾಜದಲ್ಲಿ ಮತ್ತೆ,ಮತ್ತೆ ಹಿಂದೂ-ಮುಸ್ಲಿಂ ಸಂಘರ್ಷಗಳು ಆಗಾಗ ಎದುರಾಗುತ್ತಲೇ ಇವೆ.ಹೀಗೆ ಆದಾಗಲೆಲ್ಲ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇರುತ್ತದೆ.

ಆದರೆ ನಮ್ಮ ಬಹುಮುಖಿ ಸಂಸ್ಕೃತಿಯಲ್ಲಿ ಕೇವಲ ಹಿಂದೂ-ಮುಸ್ಲಿಂರ ಘರ್ಷಣೆಯಂತೆಯೇ, ಹಿಂದೂ-ಜೈನ್, ಹಿಂದೂ-ಬುದ್ಧಿಸ್ಟ್, ಹಿಂದೂ-ಕ್ರಿಶ್ಚಿಯನ್, ಹಿಂದೂ-ಸಿಖ್ ನಡುವೆ ಘರ್ಷಣೆ ನಡೆ(ಯುತ್ತಿದೆ)ದಿದೆ. ಯಾವಾಗ ಆಳುವ ವರ್ಗಕ್ಕೆ ಓಟ್ ಬ್ಯಾಂಕ್ ರಾಜಕಾರಣಕ್ಕೊಂದು ಅಸ್ತ್ರ ಬೇಕಾಯಿತೋ ಆಗ ಇಂತಹ ಕುತಂತ್ರ ರಾಜಕಾರಣ, ಓಲೈಕೆ, ಹಿಂದೂತ್ವದಂತಹ ವಿಚಾರಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ಪರಿಣಾಮ ಹಿಂದೂ-ಮುಸ್ಲಿಂರ ನಡುವಿನ ಅಂತರ ಮತ್ತಷ್ಟು ದೂರವಾಗತೊಡಗಿತು. ಹಾಗಂತ ನಾನು ಕೂಡ ಇಲ್ಲಿ ಮುಸ್ಲಿಂ ಪರವಾಗಿ ವಾದಿಸುತ್ತಿಲ್ಲ.

ಗೋದ್ರಾ ಘಟನೆಯನ್ನು ಖಂಡಿಸುವ ಬುದ್ಧಿಜೀವಿಗಳು, ಎಡಪಂಥದವರಿಗೆ, ಕೋಮು ಸಾಮರಸ್ಯ ಸಾರುವ ಮಂದಿಗೆ ಹಿಂದೂಗಳ ಮೇಲಾಗುವ ದಬ್ಬಾಳಿಕೆ, ಹತ್ಯೆಗಳು ಯಾಕೆ ಕಾಣಿಸುತ್ತಿಲ್ಲ ಎಂಬ ವಾದವೂ ಇದೆ. ಆದರೆ ಇದರಲ್ಲಿ ಸಂಘಪರಿವಾರದ ಪ್ರವೀಣ್ ಭಾಯ್ ತೊಗಾಡಿಯಾ, ಪ್ರಮೋದ್ ಮುತಾಲಿಕ್‌ ಅವರಂತಹವರ ಮೋಡಿಯ ಮಾತು ಹಾಗೂ ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸ ದ್ವೇಷದ ದಳ್ಳುರಿಯನ್ನು ಸದಾ ಉರಿಯುವಂತೆ ಮಾಡಿರುವುದಂತು ಸತ್ಯ.

ಕಾಂಗ್ರೆಸ್ಸಿಗೆ ಮುಸ್ಲಿಂ ಓಲೈಕೆ, ಬಿಜೆಪಿಗೆ ಹಿಂದೂತ್ವ, ಎಡಪಕ್ಷಗಳಿಗೆ ಮುಸ್ಲಿಂ ಪರ ಇರುವುದೇ ಪ್ರಮುಖ
ಬಂಡವಾಳವಾಗಿದೆ. ಇಂತಹ ಸಂರ್ಭದಲ್ಲಿ ತೆಹಲ್ಕಾ ಪತ್ರಿಕೆ ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಹಿಂಸಾಚಾರದ ತನಿಖಾ ವರದಿಯನ್ನು ಮಾಡುವ ಜರೂರತ್ತು ಇತ್ತೇ ಎಂಬ ಪ್ರಶ್ನೆ ಕೇಳಿಬಂದಿದೆ. ಅಲ್ಲದೇ ಪ್ರಮುಖ ಚಾನೆಲ್‌ಗಳಾದ ಸಿಎನ್‌ಎನ್, ಐಬಿಎನ್7, ಆಜ್‌ತಕ್ ವರದಿಯನ್ನು ಪ್ರಸಾರ ಮಾಡದಂತೆ ರಾಜ್ಯ ಸರಕಾರ ಆ ದಿನ ನಿಷೇಧ ಹೇರಿತ್ತು.

ತೆಹಲ್ಕಾ ನಡೆಸಿದ ಆಪರೇಶನ್ ಕಳಂಕ್ ಹೆಸರಿನ ಈ ತನಿಖಾ ವರದಿ ಗೋದ್ರಾ ನಂತರ ನಡೆದ ಹತ್ಯಾಕಾಂಡ ಭೀಕರ ಸ್ವರೂಪದ ಚಿತ್ರಣದ ಬಗ್ಗೆ ಬಿಜೆಪಿಯ ರಾಜಕಾರಣಿಗಳು, ವಕೀಲರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದನ್ನು ತನ್ನ ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದಿತ್ತು. ಸುಮಾರು ಆರು ತಿಂಗಳ ಕಾಲ ಪತ್ರಕರ್ತ ಆಶೀಶ್ ಚೇತನ್ ತನಿಖೆ ನಡೆಸಿ ಸಿದ್ಧಪಡಿಸಿದ ವರದಿ ಇದಾಗಿದೆ.ಆದರೆ ಇದೀಗ ಪ್ರಶ್ನೆ ಎದುರಾಗಿರುವುದು ಈ ಸಮಯದಲ್ಲಿ ಕೋಮುಗಲಭೆಗೆ ಸಂಬಂಧಿಸಿದ ವರದಿಯ ಅಗತ್ಯ ಏನಿತ್ತು.

ತೆಹಲ್ಕಾ ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಡಿಸೆಂಬರ್‌ನಲ್ಲಿ
ಗುಜರಾತ್‌ನಲ್ಲಿ ಚುನಾವಣೆ ನಡೆಯುತ್ತಿದ್ದು, ಆ ನೆಲೆಯಲ್ಲಿ ಮೋದಿ ವಿರುದ್ಧವಾಗಿ ಆಪರೇಶನ್ ಕಳಂಕ್ ಹೆಸರಿನಲ್ಲಿ ವರದಿ ಮಾಡಲಾಗಿದೆ ಎಂದು ದೂರಲಾಯಿತು. ಏನೇ ಆದರೂ ತೆಹಲ್ಕಾ ಮಹತ್ತರವಾದದ್ದನ್ನು ಸಾಧಿಸದೆ ಇರಬಹುದು. ಯಾಕೆಂದರೆ ಕೋಮು ಹಿಂಸಾಚಾರದ ಕುರಿತು ತನಿಖೆ ನಡೆಸಿ ನಾನಾವತಿ ಆಯೋಗ ವರದಿ ಸಲ್ಲಿಸಿತ್ತು. ಅದರಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೂಡ ವಿವರವಾದ ವರದಿ ಸಲ್ಲಿಸಿತ್ತು. ತೆಹಲ್ಕಾ ಘಟನೆಯಲ್ಲಿ ಭಾಗಿಯಾದ ಆಡಳಿತರೂಢ ಜನಪ್ರತಿನಿಧಿಗಳ ಬಾಯಿಂದಲೇ ಸತ್ಯ ಹೊರಡಿಸಿರುವುದು ಇಲ್ಲಿನ ಹೈಲೈಟ್ ಮತ್ತು ತನಿಖೆಗೆ ಸರಕಾರ ನೇಮಿಸಿದ ನಾನಾವತಿ ಆಯೋಗದ ಜಸ್ಟೀಸ್ ನಾನಾವತಿ ಮತ್ತು ಕೆ.ಜಿ.ಶಾ ಅವರು ಹಣ ಪಡೆದಿದ್ದಾರೆ ಎಂಬುದಾಗಿ ಸರಕಾರಿ ವಕೀಲ ಅರವಿಂದ ಪಾಂಡ್ಯ ತೆಹಲ್ಕಾದ ರಹಸ್ಯ ಕ್ಯಾಮೆರಾದ ಮುಂದೆ ಬಾಯ್ಬಿಟ್ಟಿರುವುದು ಆಘಾತಕಾರಿ ವಿಷಯವಾಗಿದೆ.

ಹಿಂದುತ್ವದ ವಿಷಯವನ್ನು ಬದಿಗೆ ಸರಿಸಿ, ಪತ್ರಕರ್ತರಾದವರು,ನಿಜಾಂಶ ತಿಳಿಯುವ ಕುತೂಹಲ ಇದ್ದವರು ತೆಹಲ್ಕಾ ವಿಶೇಷವಾಗಿ ಹೊರತಂದ 106ಪುಟಗಳ ದಿ.ಟ್ರೂಥ್ ಗುಜರಾತ್ 2002 ಸಂಚಿಕೆಯನ್ನು ಓದಬೇಕು. ಹಾಗಂತ ಅದನ್ನೆ ಒಪ್ಪಬೇಕಂತ ಅಲ್ಲ. ತನಿಖಾ ಪತ್ರಿಕೋದ್ಯಮ ಎಷ್ಟು ಪರಿಣಾಮಕಾರಿ ಎನ್ನುವುದು ತಿಳಿಯುತ್ತದೆ. ಈ ವರದಿ ಅದಾಗಲೇ ಸಾಕಷ್ಟು ಗೊಂದಲ ಸೃಷ್ಟಿಸಿರುವುದಂತೂ ನಿಜ. ಈ ಬಗ್ಗೆ ಸ್ವತಃ ನಾನಾವತಿಯವರೇ ಕೂಲಂಕಷ ತನಿಖೆ ನಡೆಸಿ ತೆಹಲ್ಕಾದ ಸತ್ಯಾಸತ್ಯತೆಯನ್ನು ಪರಾಮರ್ಶಿಸಲಾಗುವುದು ಎಂದು ಹೇಳಿದ್ದಾರೆ. ಹಾಗಾದರೆ ಕೋಮುಹಿಂಸಾಚಾರ - ಮೋದಿ ಇವೆರಡು ವಿಚಾರಗಳಲ್ಲಿ ಪತ್ರಿಕೆ ಬಯಲಿಗೆಳೆದ ವಿಷಯಗಳನ್ನ ನಂಬಬೇಕೋ ಅಥವಾ ಹಿಂದುತ್ವಕ್ಕೆ ಕಟ್ಟುಬಿದ್ದು ಮೋದಿಗೆ ಜೈಕಾರ ಹಾಕಬೇಕೋ ಎಂಬುದೀಗ ಪ್ರಶ್ನೆ...

ಅತೃಪ್ತ ಮುಸ್ಲಿಂ ಗುಂಪಿನ ಅಟ್ಟಹಾಸದಿಂದಾಗಿ 2002 ರ ಫೆ.27ರಂದು ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ಪರಿಣಾಮ 58 ಮಂದಿ ಕರಸೇವಕರು ಜೀವಂತ ದಹನವಾಗಿ ಹೋಗಿದ್ದರು. ಆ ನಂತರ ಗೋದ್ರಾದಲ್ಲಿ ನಡೆದದ್ದು ಇತಿಹಾಸದಲ್ಲಿ ನಡೆಯದೇ ಇದ್ದಂತಹ ಬರ್ಭರ ಜನಾಂಗೀಯ ಹತ್ಯೆ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಗಲಭೆಯಲ್ಲಿ 790 ಮುಸ್ಲಿಮರು, 254 ಹಿಂದೂಗಳು ಬಲಿಯಾಗಿದ್ದರು. 223 ಮಂದಿ ಕಾಣೆಯಾಗಿದ್ದರು, 919 ಮಹಿಳೆಯರು ವಿಧವೆಯರಾಗಿ, 606 ಮಕ್ಕಳು ಅನಾಥರಾಗಿದ್ದರು.

ಅನಧಿಕೃತ ಅಂಕಿ ಅಂಶಗಳ ಪ್ರಕಾರ ಎರಡು ಸಾವಿರಕ್ಕೂ ಅಧಿಕ ಮಂದಿ ಕೊಲೆಯಾಗಿ,9000 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ.ಇದು ಮೋದಿ ಅವರನ್ನು ಪರಮೋಚ್ಛ ನಾಯಕನನ್ನಾಗಿ ಮಾಡಿದರೆ, ಮತ್ತೊಂದೆಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಆಧುನಿಕ ಹಿಟ್ಲರ್ ಎಂಬ ಅಪಖ್ಯಾತಿಗೆ ಒಳಗಾದರು. ಅಧಿಕಾರದ ಗದ್ದುಗೆ ಏರಿದ ಮೋದಿ ನಂತರದಲ್ಲಿ "ನಿಮಗೆ ಸಹಾಯ ಬೇಕೆ ? ಹಾಗಾದರೆ ಮೋದಿಗೆ ನೇರವಾಗಿ ದೂರವಾಣಿ ಕರೆ ಮಾಡಿ ಎಂಬ ದೊಡ್ಡ ನಾಮಫಲಕಗಳು ಗುಜರಾತ್‌ನಲ್ಲಿ ರಾರಾಜಿಸತೊಡಗಿದವು.

ನೀವು ಆ ದೂರವಾಣಿ ಸಂಖ್ಯೆಗೆ ಕರೆ ಮಾಡಿದಲ್ಲಿ ಆ ಕಡೆಯಿಂದ ನಮಸ್ಕಾರ ನಾ, ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ ನಿಮ್ಮ ತೊಂದರೆಗಳನ್ನು ನನ್ನ ಬಳಿ ಹೇಳಿಕೊಳ್ಳಿ ,ನಾನು ಖಂಡಿತ ನಿಮ್ಮ ತೊಂದರೆಗಳನ್ನು ಪರಿಹರಿಸುವ ಯತ್ನ ಮಾಡುತ್ತೇನೆ ಎಂಬ ಭರವಸೆ ನೀಡುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು. ಇದು ಮೋದಿಯವರ ಮತ್ತೊಂದು ಮುಖ. ಇದೀಗ ಸಂಘಪರಿವಾರವೇ ತಮ್ಮ ನಾಯಕನ ಬಗ್ಗೆ ಅಪಸ್ವರ ಎತ್ತಿವೆ. ಮೋದಿ ಹಿಂದುಗಳಿಗೆ ಹಾಗೂ ಹಿಂದುತ್ವಕ್ಕೆ ಏನೂ ಮಾಡಿಲ್ಲ ಎಂದು ಒಳಗೊಳಗೆ ಕತ್ತಿ ಮಸೆಯುತ್ತಿವೆ.

ಅಂದರೆ ಒಂದಿಡಿ ಜನಾಂಗವನ್ನೇ ನಾಶ ಮಾಡಬೇಕು ಅನ್ನುವುದರಲ್ಲಿ ಯಾವ ಪುರುಷಾರ್ಥ ಇದೆ. ಗುಜರಾತ್‌ನಲ್ಲಿ ನಡೆದಂತೆ ವಿದೇಶಗಳಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರು ಹಿಂದೂಗಳ ಮಾರಣಹೋಮ ನಡೆಸಿದರೆ ಅದು ಎಷ್ಟು ಅಮಾಯಕ, ಅಪದ್ಧವೋ , ಅದೇ ರೀತಿ ಮತಾಂಧರು, ಮೂಲಭೂತವಾದಿಗಳು ನಡೆಸಿದ ಅನಾಹುತಕ್ಕೆ ಒಂದಿಡಿ ಜನಾಂಗದ ವಿರುದ್ಧ ಸೇಡು ತೀರಿಸಿಕೊಳ್ಳುವುದರಲ್ಲಿ ಅರ್ಥ ಇದೆಯಾ?. ಅಂತಹ ಜನಾಂಗಕ್ಕೆ ದೇಶದಲ್ಲಿ ಬದುಕಲು ಹಕ್ಕು ಇಲ್ಲ ಎಂಬುದು ನ್ಯಾಯವೇ ಎಂಬ ಬಗ್ಗೆ ಆಲೋಚಿಸಬೇಕಾಗಿದೆ...