
ಬೆಂಗಳೂರಿನಿಂದ ಸುಮಾರು 500ಕಿ.ಮೀ.ದೂರದಲ್ಲಿರುವ ಉಡುಪಿ ಜಿಲ್ಲೆಯಲ್ಲಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ಕೊಲ್ಲೂರು. ಈ ಕ್ಷೇತ್ರ ಕೇರಳ, ತಮಿಳುನಾಡು ಸೇರಿದಂತೆ ಅನೇಕ ಭಾಗದ ಸಹಸ್ರಾರು ಭಕ್ತರನ್ನು ಹೊಂದಿದೆ. ಪ್ರತಿನಿತ್ಯ ಬೇರೆ, ಬೇರೆ ರಾಜ್ಯದ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಕೊಲ್ಲೂರು ಮೂಕಾಂಬಿಕೆ ಭಕ್ತರಿಂದಾಗಿ ಸಾಕಷ್ಟು ಖ್ಯಾತಿ ಪಡೆದಿದ್ದಾಳೆ. ಆದರೆ ಧಾರ್ಮಿಕವಾಗಿ ಹೆಸರು ಗಳಿಸಿರುವ ಈ ಕ್ಷೇತ್ರ, ಪ್ರವಾಸೋದ್ಯಮದ ದೃಷ್ಟಿಯಲ್ಲಿ ಇದೊಂದು ಸುಂದರ ತಾಣ ಎಂಬುದನ್ನು ಗಮನಿಸಬೇಕು.
ಅಭಯಾರಣ್ಯದಿಂದ ಆವೃತ್ತವಾಗಿರುವ ಕೊಲ್ಲೂರು ದಟ್ಟ ಹಸಿರಿನಿಂದ ನೋಡುಗರ ಮನಸೆಳೆಯಬಲ್ಲ ಊರು ಇದಾಗಿದೆ. ದಾರಿಯುದ್ದಕ್ಕೂ ಹಾವಿನಂತೆ ಮುಂದಕ್ಕೆ ಸಾಗುವ ರಸ್ತೆಯಲ್ಲಿ ಎಡ - ಬಲದಲ್ಲಿ ಕಣ್ಣು ಹಾಯಿಸಿದರೆ ಕಾಣ ಸಿಗುವುದು ಹಚ್ಚಹಸುರಿನ ಅಭಯಾರಣ್ಯ, ರಾತ್ರಿ ಸಮಯದಲ್ಲಂತೂ ಇಲ್ಲಿನ ಪ್ರಯಾಣ ಹೆದರಿಕೆ ಹುಟ್ಟಿಸುತ್ತೆ, ಒಮ್ಮೊಮ್ಮೆ ರಸ್ತೆಯಲ್ಲೇ ಕಾಡೆಮ್ಮೆಗಳು ಠಿಕಾಣಿ ಹೂಡಿರುತ್ತವೆ. ಹುಲಿ, ಚಿರತೆಗಳ ದರ್ಶನ ಆಗಾಗ ಆಗುತ್ತಿರುತ್ತದೆ.
ಕೊಲ್ಲೂರು ಧಾರ್ಮಿಕವಾಗಿ ಹೆಸರು ಗಳಿಸಿದಷ್ಟು, ಪ್ರವಾಸಿ ತಾಣವಾಗಿ ಇನ್ನೂ ರೂಪುಗೊಂಡಿಲ್ಲ ಎನ್ನಬಹುದಾಗಿದೆ. ಇಲ್ಲಿನ ಆನೆಝರಿ ಹಾಗೆ ಮುಂದಕ್ಕೆ ಸಾಗಿ ಎಡಕ್ಕೆ ತಿರುಗಿ 10ಕಿ.ಮೀ.ಸಾಗಿದರೆ ಕಾಡಿನ ಮಧ್ಯೆ ಸಿಗುವ ಬಾವ್ಡಿ ಎಂಬ ಊರು. ಅಲ್ಲಿರುವುದೇ ನಾಲ್ಕಾರು ಮನೆ. ಅಲ್ಲಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಅದ್ಭುತವಾದ ಜಲಪಾತ ನಮ್ಮ ಮನಸೂರೆಗೊಳ್ಳುತ್ತದೆ. ಅದರಂತೆ ಕೊಲ್ಲೂರು ದೇವಳ ಸಮೀಪದ ಎಡಭಾಗದ ರಸ್ತೆಯಿಂದ ಮುಂದಕ್ಕೆ ಸಾಗಿದರೆ ಅಭಯಾರಣ್ಯದ ಹೊರಕ್ಕೆ ದೊಡ್ಡದಾಗಿ ಫಲಕವೊಂದು ಕಾಣಿಸುತ್ತದೆ, ಅರಸಿನಗುಂಡಿಗೆ ಹೋಗುವ ದಾರಿ ಅಂತ, ಅದರಲ್ಲಿ ಸಾಗಿ ಆ ಜಲಪಾತದ ವೈಭವವನ್ನು ಅನುಭವಿಸಿಯೇ ನೋಡಬೇಕು. ಹಾಗೆ ಟ್ರಕ್ಕಿಂಗ್ ಮಾಡುತ್ತ ಹೋದರೆ ಕೊಡಚಾದ್ರಿ ಬೆಟ್ಟಕ್ಕೆ ಹೋಗಬಹುದಾಗಿದೆ. ಅಲ್ಲಿ ಸೂರ್ಯಾಸ್ತ, ಸೂರ್ಯೋದಯದ ದೃಶ್ಯವಂತೂ ಮರೆಯಲಾರದ್ದು. ಹಾಗೆ ಇಲ್ಲಿನ ಮುದೂರಿನಲ್ಲಿರುವ ಬೆಳ್ಕಲ್ ಜಲಪಾತವೂ ಕೂಡ ಆಕರ್ಷಕವಾಗಿದೆ.
ಕೊಲ್ಲೂರಿಗೆ ದಿನಬೆಳಗಾದರೆ ಸಾವಿರಾರು ಭಕ್ತರು ಆಗಮಿಸುತ್ತಾರೆ, ಆದರೆ ಅವರಿಗೆ ಈ ತಾಣಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದ್ದರೂ ಕೆಲವರಿಗೆ ಅದು ಬೇಕಾಗಿಲ್ಲ. ಬೇಕಾದವರಿಗೆ ಮಾಹಿತಿ ತಿಳಿದಿಲ್ಲ ಎಂಬಂತಾಗಿದೆ. ಆ ನೆಲೆಯಲ್ಲಿ ಹಚ್ಚ ಹಸುರಿನ ಕೊಲ್ಲೂರು ಸುಂದರವಾದ ಪ್ರವಾಸಿ ತಾಣ ಹೌದೋ ಅಲ್ಲವೊ ಎಂಬ ಅನುಮಾನವಿದ್ದರೆ ಒಮ್ಮೆ ಬಿಡುವು ಮಾಡಿಕೊಂಡು ಬನ್ನಿ.......
No comments:
Post a Comment