Saturday, August 27, 2011

ಹೆಗ್ಡೆಯವರ ರಾತ್ರಿ ಜೀವನ!; ಕುಮಾರಣ್ಣ ನೀವೆಷ್ಟು ಸಾಚಾ...?


ನಮ್ಮಲ್ಲೊಂದು ಗಾದೆ ಮಾತಿದೆ...ಕೋಲು ಕೊಟ್ಟು ಪೆಟ್ಟು ತಿನ್ನೋದು ಅಂತ. ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ಈಗ ಮತ್ತೊಮ್ಮೆ ಅದೇ ಕೆಲಸ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ತಡೆಗಾಗಿ ಅಣ್ಣಾ ಹಜಾರೆ ಪಟ್ಟು ಹಿಡಿದು ಉಪವಾಸ ಸತ್ಯಾಗ್ರಹ ಆರಂಭಿಸಿದಾಗಿನಿಂದಲೂ ಕೆಲವು ಕಾಂಗ್ರೆಸ್ ಮುಖಂಡರು ಅಂಡೆ ಪಿರ್ಕಿ ತರಹ ಮಾತನಾಡಿ ಮಾನ ಹರಾಜು ಹಾಕಿಕೊಂಡಿದ್ದಾರೆ. ಈಗ ಆ ಸಾಲಿಗೆ ಕುಮಾರಸ್ವಾಮಿಯೂ ಸೇರಿದಂತಾಗಿದೆ. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆಯವರು ರಾತ್ರಿ ಜೀವನಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಗೊತ್ತಾ? ಇವೆಲ್ಲ ಅವರ ದುಡಿಮೆಯಿಂದಲೇ ಸಾಧ್ಯನಾ? ಹಾಗಂತ ಅವರು ಅದಕ್ಕೆಲ್ಲ ಲೆಕ್ಕ ಕೊಡ್ತಾರಾ? ಕೆಲವೊಂದು ವಿಷಯದ ಬಗ್ಗೆ ನಾವು ಆಳವಾಗಿ ಚರ್ಚೆ ಮಾಡಲು ಹೋದ್ರೆ ಕೆಲವರಿಗೆ ಬೇಸರವಾಗುತ್ತದೆ...ಹೀಗೆ ಸುವರ್ಣ ವಾಹಿನಿ ಟಾರ್ಗೆಟ್ ಕಾರ್ಯಕ್ರಮದಲ್ಲಿ ಉಡಾಫೆಯಾಗಿ ಪ್ರಶ್ನಿಸುವ ಮೂಲಕ ಹೀರೋ ಆಗಲು ಹೋದ ಕುಮಾರಣ್ಣ ಇದೀಗ ಸಂತೋಷ್ ಹೆಗ್ಡೆಯವರು ಕೊಟ್ಟ ತಿರುಗೇಟು ಭರ್ಜರಿಯಾಗಿ ತಪರಾಕಿ ಬಾರಿಸಿಕೊಂಡಂತಾಗಿದೆ.

ಕುಮಾರಸ್ವಾಮಿಯವರೇ ನಾನು ಕಳೆದ 42 ವರ್ಷಗಳಿಂದ ಒಬ್ಬಳೇ ಹೆಂಡತಿ, ಒಂದೇ ಮನೆಯಲ್ಲಿ ಸಂಸಾರ ನಡೆಸುತ್ತಿದ್ದೇನೆ. ನನಗೆ ಎರಡನೇ (ರಾಧಿಕಾ ಕುರಿತು) ಮನೆ ಇಲ್ಲ. ಹಾಗಂತ ನೀವು ಹೆಗ್ಡೆಯವರ ರಾತ್ರಿ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ. ನಾನು ನನ್ನ ಕೆಲಸ ಮುಗಿಸಿ ನನ್ನ ಮನೆಗೆ ನೇರ ಹೋಗುತ್ತೇನೆ. ನೀವು ಇನ್ನೊಬ್ಬರ ಬಗ್ಗೆ ಟೀಕಿಸುವ ಮೊದಲು ನಿಮ್ಮ ನಡತೆಯನ್ನು ಸರಿಪಡಿಸಿಕೊಳ್ಳಿ ಎಂದು ಸಂತೋಷ್ ಹೆಗ್ಡೆ ನಗರದ ಫ್ರೀಡಂಪಾರ್ಕ್‌ನಲ್ಲಿ ಬಹಿರಂಗವಾಗಿಯೇ ಚಾಟಿ ಬೀಸಿದ್ದಾರೆ.

ನಿಜಕ್ಕೂ ಕುಮಾರಸ್ವಾಮಿಯವರಿಗೆ ಹೆಗ್ಡೆಯವರ ವಿರುದ್ಧ ಆ ರೀತಿ ಟೀಕಿಸುವ ಅಗತ್ಯವಾದರೂ ಏನಿತ್ತು? ಸಂತೋಷ್ ಹೆಗ್ಡೆಯವರು ರಾತ್ರಿ ಜೀವನಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಅಂತ ಗೊತ್ತಾ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಹುಳುಕನ್ನು ಇಟ್ಟುಕೊಂಡವರೇ ಎಂದು ತಮ್ಮನ್ನ ತಾವು ಸಮರ್ಥಿಸಿಕೊಳ್ಳುವ ಭರದಲ್ಲಿ ಯಾವ ರೀತಿ ಟೀಕಿಸಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದೇ ಹೋಯಿತಾ? ಹೆಗ್ಡೆಯವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಅಗತ್ಯವಾದರೂ ಕುಮಾರಸ್ವಾಮಿಗೆ ಇತ್ತಾ? ಕೇವಲ ಸಂಬಳದಿಂದಲೇ ಇವೆಲ್ಲವೂ ಸಾಧ್ಯನಾ ಎಂಬ ಬಾಲಿಶ ಪ್ರಶ್ನೆಯನ್ನು ಕೇಳುವ ಕುಮಾರಸ್ವಾಮಿಯವರಿಗೆ, ಅವರೊಬ್ಬ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಕೆಲಸ ಮಾಡಿ ನಿವೃತ್ತರಾದವರು, ಲೋಕಾಯುಕ್ತ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದವರು. ಹಾಗಂತ ಅವರಿಗೆ ರಾತ್ರಿ ಜೀವನವೊ, ಹಗಲು ಜೀವನವೋ ನಡೆಸದಿರುವಷ್ಟು ದರಿದ್ರತನ ಬಂದಿಲ್ಲ.

ಒಟ್ಟಿನಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿ ಕಾನೂನಿನ ಕಣ್ಣಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ದಾಖಲೆಗಳನ್ನು ಹೊರಹಾಕುತ್ತಿದ್ದ ಕುಮಾರಸ್ವಾಮಿಯೇ ಈಗ ಲೋಕಾಯುಕ್ತ ವರದಿಯಿಂದಾಗಿ ಕೋರ್ಟ್‌ನಲ್ಲಿ ಜಾಮೀನಿಗಾಗಿ ಅಲೆಯುವಂತಾಗಿದೆ. ಅಲ್ಲದೇ ಜನಲೋಕಪಾಲ್ ಮಸೂದೆಗೆ ಒತ್ತಾಯಿಸಿ ಬೀದಿಗಿಳಿದ ಹೆಗ್ಡೆಯವರು ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿರುವುದು ಇವೆಲ್ಲವೂ ಒಳಗೊಳಗೆ ರೋಷ ಹುಟ್ಟಿಸಿದ್ದಂತೂ ಸತ್ಯ ಎಂಬುದು ಸಾಬೀತಾಗಿದೆ.

ಯಾಕೆಂದರೆ ಯಾವುದೇ ನಿಟ್ಟಿನಲ್ಲಿ ನೋಡಿದರೂ ಕೂಡ ಕುಮಾರಸ್ವಾಮಿ ಸಂತೋಷ್ ಹೆಗ್ಡೆಯವರ ಬಗ್ಗೆ ಮಾಡಿದ ಟೀಕೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ದುಂದು ವೆಚ್ಚನೋ, ರಾತ್ರಿ ಜೀವನಾನೋ ಅದು ಅವರ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಜನಲೋಕಪಾಲ್ ಬಗ್ಗೆ ಮಾತನಾಡುತ್ತ ಈ ರೀತಿಯಾಗಿ ಹೆಗ್ಡೆಯವರ ವೈಯಕ್ತಿಕ ತೇಜೋವಧೆ ಮಾಡಲು ಹೊರಟಿರುವುದು ತಪ್ಪು. ಹಾಗಂತ ಈ ರಾಜಕಾರಣಿಗಳಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಬೇಕಾಗುತ್ತದೆ. ಬ್ರಹ್ಮಾಂಡ ಭ್ರಷ್ಟಾಚರ ಮಾಡಿದರೂ ಕೂಡ ತಮ್ಮನ್ನು ತಾವೇ ಸಮರ್ಥಿಸಿಕೊಳ್ಳುವ ಅಥವಾ ಅವರ ಭಟ್ಟಂಗಿಗಳಿಂದ ಹೊಗಳಿಸಿಕೊಳ್ಳುವ ಇಂತಹವರಿಂದ ಹೆಗ್ಡೆಯವರು ಏನಾದರೂ ಪಾಠ ಕಲಿಯಬೇಕಾಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಅಷ್ಟಕ್ಕೂ ಹೆಗ್ಡೆಯವರು ಮಾಡಿದ ತಪ್ಪಾದರೂ ಏನು? ಅಕ್ರಮ ಗಣಿಗಾರಿಕೆ ವರದಿಯಲ್ಲಿ ಇವರೆನ್ನೆಲ್ಲ ಇಂದ್ರ-ಚಂದ್ರ ಅಂತ ಹೊಗಳಿ ಇವರು ದೂರು ಕೊಟ್ಟವರ ವಿರುದ್ಧ ಮಾತ್ರವೇ ಉಲ್ಲೇಖಿಸಬೇಕಿತ್ತಾ?

ಅಣ್ಣಾ ಹಜಾರೆಯ ವಿರುದ್ಧವೂ ಕಾಂಗ್ರೆಸ್‌ನ ಮನೀಷ್ ತಿವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಬಾಯಿಗೆ ಬಂದಂತೆ ಹಲುಬಿದ್ದಾರೆ. ಅಣ್ಣಾ ಸ್ವತಃ ಭ್ರಷ್ಟ, ಅವರಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯಾವ ನೈತಿಕತೆ ಇದೆ ಎಂದು ತಿವಾರಿ ಪ್ರಶ್ನಿಸಿದ್ದರೆ, ಅಣ್ಣಾ ಹಜಾರೆ ಗಾಂಧಿವಾದಿಯಲ್ಲ, ಹಿಟ್ಲರ್‌ವಾದಿ ಎಂಬುದಾಗಿ ಬಿಕೆ ಅಣಿ ಮುತ್ತು ಉದುರಿಸಿದ್ದರು. ಒಟ್ಟಾರೆ ಇಂತಹ ಎಡಬಿಡಂಗಿ ರಾಜಕಾರಣಿಗಳು ಬಾಯಿಗೆ ಬಂದಂತೆ ಹಲುಬುವ ಮೂಲಕ ತಮ್ಮ ಮಾನವನ್ನು ತಾವೇ ಹರಾಜು ಹಾಕಿಕೊಂಡಿರುವುದಂತು ಸತ್ಯ. ಈಗಾಗಲೇ 20-20 ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲೇ ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸದೇ ವಚನಭ್ರಷ್ಟ ಎನಿಸಿಕೊಂಡು ಛೀ..ಥೂ ಎನಿಸಿಕೊಂಡಿದ್ದ ಕುಮಾರಸ್ವಾಮಿ, ಹೆಗ್ಡೆಯವರ ಮೇಲೆ ಕೆಸರೆರಚಲು ಹೋಗಿ ತಾವೇ ಉಗಿಸಿಕೊಂಡು ಇಂಗು ತಿಂದ ಮಂಗನಂತಾಗುವಂತಾಗಿದೆ.

ಇನ್ನೊಬ್ಬರ ಮೇಲೆ ವಾಗ್ದಾಳಿ ನಡೆಸುವ, ಟೀಕಿಸುವ ಈ ರಾಜಕಾರಣಿಗಳು ಎಷ್ಟು ಸಾಚಾ ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಅವರ ವೈಯಕ್ತಿಕ ಬದುಕು, ರಾಸಲೀಲೆ, ದುಂದು ವೆಚ್ಚ, ಐಶಾರಾಮಿ ಜೀವನ ಎಲ್ಲವೂ ನಗ್ನ ಸತ್ಯವಾಗಿ ಗೋಚರಿಸುತ್ತಿರುವಾಗ ತಮ್ಮನ್ನು ತಾವೇ ಸತ್ಯಹರಿಶ್ಚಂದ್ರರು ಎಂದು ಘೋಷಿಸಿಕೊಳ್ಳುವ ಈ ಪಡಪೋಶಿ ರಾಜಕಾರಣಿಗಳು ಎಲ್ಲರನ್ನ ಬೆತ್ತಲು ಮಾಡುತ್ತೇವೆ ಎಂದು ತಾವೇ ಜನಸಾಮಾನ್ಯರೆದುರು ಬೆತ್ತಲಾಗುತ್ತಿದ್ದಾರೆ...ಶೇಮ್...ಶೇಮ್....

No comments: