Sunday, June 29, 2008
ರಜನೀಶ್ರ ಶೂನ್ಯ ನಾವೆ.....
ಯಾವುದೇ ಕಟ್ಟುಪಾಡಿಗೆ ಒಳಗಾಗಿ ಮತಾಂಧರಂತೆ, ಒಂದು ವರ್ಗದ ವಕ್ತಾರರಂತೆ ಅವರು ಮಾತನಾಡಿಲ್ಲ ಆ ಕಾರಣಕ್ಕಾಗಿಯೇ ಅವರು ಇಷ್ಟವಾಗುತ್ತಾರೆ. ರಜನೀಶ್ ಚಾಂಗ್ ತ್ಸು ಅವರ ಹಿನ್ನೆಲೆಯನ್ನಿಟ್ಟುಕೊಂಡು ಮಾತನಾಡಿದ ಶೂನ್ಯ ನಾವೆಯಲ್ಲಿನ ಒಂದು ಅಂಶವನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಯಾಕೆಂದರೆ ರಜನೀಶ್ ಯಾವುದರ ಬಗ್ಗೆಯೇ ಮಾತನಾಡಲಿ, ಅದು ನಮ್ಮನ್ನು ಅಷ್ಟು ಆಕರ್ಷಿಸುತ್ತದೆ. ಇವತ್ತಿನ ಸ್ಥಿತಿಗತಿ, ನಮ್ಮ ಕಾರ್ಯದ ಒತ್ತಡ, ನಾವು ಆ ಸನ್ನಿವೇಶದ ನಡುವೆ ಸಿಕ್ಕಿಬೀಳುತ್ತಿರುವುದನ್ನು ನೋಡಿದರೆ, ರಜನೀಶ್ ಅವರು ಈ ಮಾತು ಸತ್ಯ ಎನ್ನಿಸುತ್ತದೆ....
ಅವರ ಪ್ರಕಾರ ಮನುಷ್ಯ ಅನುಪಯುಕ್ತನಾಗಿರಬೇಕು, ಅರೇ ಇದೇನಪ್ಪಾ, ಎಲ್ಲರೂ ಕ್ರಿಯಾಶೀಲರಾಗಿ ಅಂದರೆ ಈತ ರಜನೀಶರ ಅನುಪಯುಕ್ತರಾಗಿರಿಯನ್ನೇ ಬಹಳ ಖುಷಿಕೊಡುವ ವಿಚಾರ ಎಂದು ಬರೆಯುತ್ತಿದ್ದಾರಲ್ಲಪ್ಪ ಅಂತ ಹುಬ್ಬುಗಟ್ಟಿಕ್ಕಬೇಡಿ. ಅದನ್ನು ಅವರು ಒಂದು ಕಥೆಯ ಮೂಲಕ ವಿವರಿಸುತ್ತಾರೆ. ಒಂದು ನಗರದಲ್ಲಿನ ಯುವಕರನ್ನು ಬಲಾತ್ಕಾರವಾಗಿ ಸೇನೆಗೆ ಸೇರಿಸಲ್ಪಟ್ಟಿದ್ದರಂತೆ. ಏಕೆಂದರೆ ಅವರೆಲ್ಲರೂ ಉಪಯುಕ್ತರು. ಆದರೆ ಒಬ್ಬ ಗೂನು ಬೆನ್ನಿನವನನ್ನು ಮಾತ್ರ ಸೇರಿಸಿಕೊಂಡಿಲ್ಲ.
ಈತ ಅನುಪಯುಕ್ತ ಎಂದು ಬಿಟ್ಟುಬಿಟ್ಟಿದ್ದರು. ನೀವು ಗೂನು ಬೆನ್ನಿನವನಂತಿರಿ, ಏಕೆಂದರೆ ಇವರ ದೃಷ್ಟಿಯಲ್ಲಿ ಉಪಯುಕ್ತರು ಸದಾ ಗೊಂದಲಕ್ಕೆ ಒಳಗಾಗುವವರು. ಜಗತ್ತು ನಿಮ್ಮನ್ನು ಬಳಸಿಕೊಳ್ಳುವುದು, ಪ್ರತಿಯೊಬ್ಬರು ನಿಮ್ಮನ್ನು ಉಪಯೋಗಿಸಲು ಸಿದ್ದರಾಗಿರುವರು, ಹಸ್ತಕ್ಷೇಪ ಮಾಡುತ್ತಲೇ ಇರುತ್ತಾರೆ, ನಿಮ್ಮನ್ನಾಳಲು ಸದಾ ಸಿದ್ದರಾಗಿರುತ್ತಾರೆ. ನೀವು ಅಪ್ರಯೋಜಕರಾಗಿದ್ದಾಗ ನಿಮ್ಮನ್ನು ಜನ ಮರೆತೇ ಬಿಡುತ್ತಾರೆ.
ನಿಮ್ಮನ್ನು ನಿಮ್ಮ ಮೌನದಲ್ಲಿರಲು ಬಿಡುವರು. ಅವರು ನಿಮ್ಮ ಬಗ್ಗೆ ಚಿಂತೆ ಮಾಡುವುದಿಲ್ಲ. ಆ ಕಾರಣಕ್ಕಾಗಿಯೇ ರಜನೀಶ್ ಆ ಮಾತನ್ನು ಬಹಳ ಒತ್ತಿ ಹೇಳಿದ್ದಾರೆ. ಎಚ್ಚರಿಕೆಯಿಂದಿರಿ ಮತ್ತು ಬಲು ಉಪಯುಕ್ತರಾಗದಿರಿ. ಹೀಗಿರದಿದ್ದರೆ ಎಲ್ಲರೂ ನಿಮ್ಮನ್ನು ಶೋಷಣೆ ಮಾಡುವರು. ನಂತರ ಇವರು ನಿಮ್ಮನ್ನು ನಿರ್ವಹಿಸುವರು, ನಿಯಂತ್ರಿಸುವರು, ಮತ್ತಾಗ ನೀವು ಗೊಂದಲಕ್ಕೆ ಒಳಗಾಗುವಿರಿ.
ಯಾಕೆಂದರೆ ನೀವೀಗ ರಾಜಕೀಯದಲ್ಲಿನ ದೊಂಬರಾಟವನ್ನು ಗಮನಿಸಿ ರಜನೀಶ್ ಮಾತುಗಳು ಸತ್ಯ ಎನಿಸುತ್ತದೆ. ಅಲ್ಲಿ 20-30ವರ್ಷ ಕತ್ತೆ (? ) ದುಡಿದ ಹಾಗೇ ದುಡಿದು ತಮಗೆ ಉನ್ನತ ಹುದ್ದೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತಾರೆ, ಆದರೆ ಕೊನೆಗೆ ಅವರನ್ನು ಹೇಳದೇ ಕೇಳದೆ ಒಂದೋ (ಸಿಂಧ್ಯಾ ತರ, ಅವರೇನೂ ಬಿಎಸ್ಪಿಗಾಗಿ ಹೆಚ್ಚು ದುಡಿಯಲಿಲ್ಲ ಬಿಡಿ) ಮೂಲೆಗುಂಪು ಮಾಡುತ್ತಾರೆ, ಇಲ್ಲ ಕಿತ್ತೊಗೆಯುತ್ತಾರೆ.
ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಹೀಗೆ ಮೂಲೆಗುಂಪು ಮಾಡಿದ ಉದಾಹರಣೆ ಬಹಳಷ್ಟಿದೆ. ಆದರೆ ನಿರುಪಯುಕ್ತತೆಯಲ್ಲಿ ಅದರದ್ದೇ ಆದ ಉಪಯುಕ್ತತತೆ ಇದೆ ಎಂಬುದು ರಜನೀಶ್ ಅಭಿಮತ. ಇದೊಂದು ಜೀವಂತ ಅಂಶ ನೀವಿದನ್ನು ಪೂರ್ಣವಾಗಿ ಬಿಟ್ಟು ಬಿಟ್ಟರೆ ಆಗ ಯಾವುದೂ ಸಹ ಉಪಯುಕ್ತವಲ್ಲ, ನಿಷ್ಪ್ರಯೋಜಕ ವಸ್ತುಗಳು ಇರುವುದರಿಂದಲೇ ಉಪಯುಕ್ತ ವಸ್ತುಗಳು ಇರುವುದು.ಆದರೆ ಜಗತ್ತಿನಲ್ಲಿ ಏನಾಗುತ್ತಿದೆ ನೋಡಿ, ವಿನೋದದ ಎಲ್ಲಾ ಚಟುವಟಿಕೆಗಳನ್ನೂ ನಾವು ಇಲ್ಲವಾಗಿಸಿದ್ದೇವೆ.
ಏಕೆಂದರೆ ನಮ್ಮ ಅನಿಸಿಕೆ, ಆಗ ನಮ್ಮಲ್ಲಿಯ ಶಕ್ತಿಯನ್ನು ಪೂರ್ತಿ ಉಪಯೋಗಕರವಾದುದಕ್ಕೆ ವಿನಿಯೋಗಿಸಬಹುದು ಎಂದು. ಆದರೆ ಕೆಲಸವಿಂದು ಬೇಸರ ತರುವಂತಾಗಿದೆ, ನಾವಿಂದು ವಿರುದ್ಧ ಧ್ರುವದೆಡೆಗೆ ಸಾಗಲೇಬೇಕಾಗಿದೆ...ನಿಮ್ಮ ಸುತ್ತಲಿನ ಯಶಸ್ವಿ ವ್ಯಕ್ತಿಗಳನ್ನು ನೋಡಿ, ರಾಜಕಾರಣಿಗಳು, ಧನವಂತರು, ಬೃಹತ್ ಕೈಗಾರಿಕೋದ್ಯಮಿಗಳನ್ನು ಏನಾಗುತ್ತಿದೆ ಅವರಿಗೆ? ಅವರು ಸಂಗ್ರಹಿಸಿರುವ ವಸ್ತುಗಳನ್ನು ನೋಡಬೇಡಿ, ನೇರವಾಗಿ ಅವರನ್ನು ನೋಡಿ.
ನೀವೇನಾದರು ಅವರ ಬಳಿ ಇರುವ ವಸ್ತುಗಳನ್ನು ನೋಡಿದರೆ ಮೋಸ ಹೋಗುವಿರಿ, ವಸ್ತುಗಳಿಗೆ ಅಲ್ಸರ್ ಬರುವುದಿಲ್ಲ, ಕಾರುಗ ಳಿಗೆ ಹೃದಯಾಘಾತವಾಗುವುದಿಲ್ಲ, ಮನೆಗಳನ್ನು ಆಸ್ಪತ್ರೆಗೆ ಸೇರಿಸುವುದಿಲ್ಲ. ಅದಕ್ಕೆ ನೀವು ವಸ್ತುಗಳನ್ನು ನೋಡಬೇಡಿ ಎನ್ನುವ ರಜನೀಶ್, ಈ ವಸ್ತುಗಳ ಮಧ್ಯೆ ಇರುವ ಮನುಷ್ಯನನ್ನು ನೋಡಿ ಎಂದೆನ್ನುತ್ತಾರೆ, ಯಾಕೆಂದರೆ ಆಗ ನಿಮಗೆ ಕಾಣುವುದು ಆತನ ಮತ್ಸರ, ಬಡತನ, ಮುಖವಾಡದ ಬದುಕು, ಆಗ ಭಿಕ್ಷುಕ ಕೂಡ ಈತನಿಗಿಂತ ಮೇಲಾಗಿ ಕಾಣಿಸುತ್ತಾನೆ. ಈತನಿಗಿಂತ ಶ್ರೀಮಂತ ಆತನಾಗುತ್ತಾನೆ. ಬಡವನ ಜೀವನ ಶ್ರೀಮಂತನ ಜೀವನಕ್ಕಿಂತ ಶ್ರೀಮಂತವಾಗಿರುತ್ತದೆ.... ಈಗ ಹೇಳಿ ರಜನೀಶ್ ಮಾತು ಎಲ್ಲೋ ಒಂದೆಡೆ ನಿಜವೆನಿಸುವುದಿಲ್ಲವೇ......
ಎಡಪಕ್ಷಗಳ ''ಎಡ''ಬಿಡಂಗಿತನ....

Tuesday, May 27, 2008
ಹೂ ಕಿಲ್ಡ್ ಗಾಂಧಿ.....

Thursday, May 8, 2008
ಚಂದಮಾಮನಿಗೆ ಅರವತ್ತು......

Sunday, May 4, 2008
ಆಶ್ವಾಸನೆಗಳ ಭರವಸೆಯಲ್ಲಿ ಕೊಚ್ಚಿಹೋದ ಮತದಾರ !!
ಕರ್ನಾಟಕ ರಾಜ್ಯ ರಾಜಕಾರಣದಲ್ಲೀಗ ಮತದಾರರಿಗೆ ಭರವಸೆಗಳ ಸುಗ್ಗಿ ಕಾಲ...ಶತಾಯಗತಾಯ ಅಧಿಕಾರದ ಗದ್ದುಗೆ ಏರಲೇ ಬೇಕೆಂಬ ಹಂಬಲ ಚುನಾವಣಾ ಅಖಾಡದಲ್ಲಿರುವವರದ್ದಾದರೆ, ರಾಜ್ಯದ ಸೂತ್ರವನ್ನು ಹಿಡಿಯುವಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಇನ್ನಿಲ್ಲದ ಪೈಪೋಟಿ ನಡೆಯುತ್ತಿದೆ.
ಭರ್ಜರಿ ಪ್ರಚಾರದೊಂದಿಗೆ ಮತದಾರರ 'ಬೇಟೆಗೆ' ಇಳಿದಿರುವ ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ ಮೊದಲಿಗೆ ರೈತರನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇಂದಿರಾ ಆವಾಜ್ ಯೋಜನೆಯಡಿಯಲ್ಲಿ ರೈತರ ಸಾಲ ಮನ್ನಾ, ಪ್ರತಿ ಹಸಿರು ಕಾರ್ಡ್ ಹೊಂದಿರುವವರಿಗೆ 2ರೂ.ಗೆ ಅಕ್ಕಿ, ಕಲರ್ ಟಿವಿ, ಹಸಿರು ಕಾರ್ಡ್ದಾರರಿಗೆ ಯಶಸ್ವಿನಿ ಯೋಜನೆ ವಿಸ್ತರಣೆ, ನಿರುದ್ಯೋಗಿಗಳಿಗೆ 2ವರ್ಷ ತರಬೇತಿ, ಮಾಸಿಕ ಭತ್ಯೆ ಸೇರಿದಂತೆ ಇನ್ನಿತರ ಭರವಸೆ ನೀಡಿದೆ.
ಕೇಂದ್ರ ಸರಕಾರ ಕೂಡ ಈ ಬಾರಿ ಬಜೆಟ್ನಲ್ಲಿ ರೈತರ 60ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಘೋ ಷಿಸಿದೆ. ಇವೇ ಅಸ್ತ್ರಗಳನ್ನು ಬಳಸಿಕೊಂಡು ಕಾಂಗ್ರೆಸ್, ರಾಜ್ಯದಲ್ಲಿಯೂ ರೈತರನ್ನ ಗಮನದಲ್ಲಿಟ್ಟು ಕೊಂಡು, ಅಕ್ಕಿ. ಟಿವಿಗಳ ಆಮಿಷದ ಮೂಲಕ ಮತದಾರರನ್ನು ಸೆಳೆಯಲು ಹೊರಟಿದೆ. ಆ ಕಾರಣಕ್ಕಾಗಿಯೇ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರು ರಾಜ್ಯರಾಜಕಾರಣದಲ್ಲಿ ಪಾಂಚಜನ್ಯ
ಮೊಳಗಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಲಿಂಗಾಯಿತ ಮತ್ತು ಒಕ್ಕಲಿಗ ಮತ ಮತ್ತು ಹಿಂದುಳಿದ ಮತಗಳೇ ನಿರ್ಣಾಯಕವಾ ಗಿದ್ದರಿಂದ, ದೇವೇಗೌಡರಿಗೆ ಎದುರಾಳಿಯಾಗಿ ಕೃಷ್ಣರನ್ನು ಅಖಾಡಕ್ಕೆ ಇಳಿಸಲಾಗಿದೆ. ಎಸ್.ಎಂ.ಅವರು ತಮ್ಮ ಅಧಿಕಾರಾವಧಿಯಲ್ಲಿ ಹೈಟೆಕ್ ಮಂತ್ರ ಜಪಿಸುತ್ತಿದ್ದರು. ಈಗ ಅಕ್ಕಿ, ಅನ್ನ ದಾಸೋಹ, ರೈತರ ಪರ ಮುಖವಾಡದೊಂದಿಗೆ ಪ್ರಚಾರಕ್ಕೆ ಇಳಿದಿದ್ದಾರೆ.
ಆದರೆ ಇದೇ ಎಸ್.ಎಂ.ಕೃಷ್ಣರ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ತಲೆದೋರಿದ ಬಿಕ್ಕಟ್ಟು, ಬರಗಾಲದಿಂದಾಗಿ ಕಂಗೆಟ್ಟ ಸುಮಾರು ನೂರಾರು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಸೌಜನ್ಯಕ್ಕಾದರೂ ಭೇಟಿ ನೀಡಿದ್ದೀರಾ ಎಂಬ ಮಾತನ್ನು ಮಾಧ್ಯಮದವರು ಕೇಳಿದಾಗ, ಅದಕ್ಕೆ ಉಡಾಫೆಯ ಉತ್ತರ ನೀಡಿದ್ದರು. ತೆಂಗಿನ ಮರಗಳಿಗೆ ತಗುಲಿದ ನುಸಿ ರೋಗ ನಿವಾರಣೆ ಹೆಸರಲ್ಲಿ ಕೋಟ್ಯಂತರ ರೂಪಾಯಿ ಗುಳುಂ ಮಾಡಲಾಗಿತ್ತು.
ನುಸಿರೋಗದಿಂದ ತತ್ತರಿಸಿದ ರೈತರು ''ನೀರಾ'' ತೆಗೆಯಲು ಮುಂದಾದವರ ಮೇಲೆ ಗೋಲಿಬಾರ್ ನಡೆಸಿದ್ದು ಕೃಷ್ಣ ನೇತೃತ್ವದ ಸರಕಾರ. ಈಗ ಅಧಿಕಾರದ ಗದ್ದುಗೆಗಾಗಿ ರೈತರನ್ನ ಮುಂದಿಟ್ಟುಕೊಂಡು ಮತಯಾಚನೆಗೆ ಹೊರಟಿದ್ದಾರೆ.ಆಶ್ವಾಸನೆಗಳು ಕೊಡಲು ಹಣ ಕೊಡಬೇಕೆಂದಿಲ್ಲ, ಮತ್ತು ಆಶ್ವಾಸನೆ ನೀಡುವುದು ಅಪರಾಧವೂ ಅಲ್ಲ!!
ಕಳೆದ ಚುನಾವಣೆಯಲ್ಲೂ ಧರಂಸಿಂಗ್ ಅಧಿಕಾರಕ್ಕೆ ಏರುವ ಮುನ್ನು ನಿರುದ್ಯೋಗಿಗಳಿಗೆ ಭತ್ಯೆಯ ಆಶ್ವಾಸನೆ ನೀಡಿತ್ತು. ಬಳಿಕ ಮೈತ್ರಿ ಸರಕಾರ ರಚನೆಗೊಂಡಾಗ ಅದರ ಮಾತೇ ಇಲ್ಲ, ಆಗ ನಮ್ಮನ್ನು ನೀವು ಪೂರ್ಣಪ್ರಮಾಣದಲ್ಲಿ ಬೆಂಬಲಿಸಿಲ್ಲದ ಕಾರಣ ಆಶ್ವಾಸನೆ ಈಡೇರಿಕೆ ಮಾಡಲು ಸಾಧ್ಯವಿಲ್ಲ ಎಂದು ಧರಂ ಗರಂ ಆಗಿ ಹೇಳಿದ್ದರು.ಅಷ್ಟಕ್ಕೂ ಟಿವಿ, 2 ರೂ.ಅಕ್ಕಿ, ಸಾಲ ಮನ್ನಾ ಅಂತ ಸಾಲು, ಸಾಲು ಪಟ್ಟಿ ನೀಡುತ್ತಾರೆ, ಹಾಗಂತ ಅವರ ಆಸ್ತಿಯ ಹಣ ಸುರಿದು ಸಾಲ ಮನ್ನಾ, ಟಿವಿ ಖರೀದಿ ಮಾಡುವುದಿಲ್ಲ, ಅವೆಲ್ಲವೂ ಮತ್ತೆ ಸರಕಾರ ಬೊಕ್ಕಸಕ್ಕೆ ಖೋತಾ!!.
ಅಧಿಕಾರದ ಗದ್ದುಗೆ ಏರುವ ಮುನ್ನಾ ನೂರೆಂಟು ಆಶ್ವಾಸನೆ ಕೊಟ್ಟು, ಬಳಿಕ ಅಧಿಕಾರಕ್ಕೆ ಏರಿ ಆಶ್ವಾಸನೆ ಈಡೇರಿಸಿದರೂ ಅದು ಜನಸಾಮಾನ್ಯರಿಗೆ ಹೊರೆಯಾಗುತ್ತ ಹೋಗುತ್ತದೆ. ಕಳೆದ 50ವರ್ಷಗಳಿಂದ ಕಾಂಗ್ರೆ ಸ್ ದೇಶವನ್ನು ಲೂಟಿ ಮಾಡಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ಕೇವಲ 20 ತಿಂಗಳ ಅಧಿಕಾರದ ಅವಧಿ ಯಲ್ಲೇ ಕಾಂಗ್ರೆಸ್ ಅನ್ನು ಮೀರಿ ಬೆಳೆದಿದೆ ಎನ್ನುವುದಕ್ಕೆ ಈ ಬಾರಿ ಚುನಾವಣೆಯಲ್ಲಿ ಅದರ ನಿಲುವು ಗಮನಿಸಿದರೆ ತಿಳಿಯುತ್ತದೆ. ಲ್ಯಾಂಡ್ ಮಾಫಿಯಾ, ಗಣಿ ದೊರೆಗಳಿಗೆ ಮಣೆ ಹಾಕುವ ಮೂಲಕ ಕೋಟ್ಯಾಧೀಶ್ವರರು ಜನಪ್ರತಿನಿಧಿಗಳಾಗಲು ಹೊರಟಿದ್ದಾರೆ.
ಹಾಗಾದರೆ ಇವರಿಗೆಲ್ಲಾ ಜನಸೇವೆಯ ಮೇಲೆ ಅಷ್ಟೊಂದು ಕಾಳಜಿಯಾ ಅಥವಾ ಅವರ ಸ್ವ ರಕ್ಷಣೆಗಾಗಿ ಅಧಿಕಾರದ ಬೆನ್ನತ್ತಿ ಹೊರಟಿದ್ದಾರೋ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ.ಅಪ್ಪ-ಮಕ್ಕಳ ಪಕ್ಷ ಕಳ್ಳರದ್ದು, ಭೂ ಕಬಳಿಕೆ ಮಾಡುತ್ತಾರೆ ಎಂದೆಲ್ಲಾ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದ ಬಿಜೆಪಿಯ ಯಡಿಯೂರಪ್ಪ ಅವರು ಭ್ರಷ್ಟರಿಗೆ, ಕ್ರಿಮಿನಲ್, ಭೂ ಕಳ್ಳರಿಗೆ ರೆಡ್ ಕಾರ್ಪೆಟ್ ಹಾಸಿ ಪಕ್ಷದಲ್ಲಿ ಸೀಟು ಕೊಟ್ಟಿದ್ದಾರೆ.
ಅಷ್ಟೇ ಅಲ್ಲಾ ಬಿಜೆಪಿ ಕೂಡ ಕಾಂಗ್ರೆಸ್ ಪ್ರಣಾಳಿಕೆಯಂತೆ ರೈತರಿಗೆ ಉಚಿತ ವಿದ್ಯುತ್, ಕಲರ್ ಟಿವಿ, ಬಡವರಿಗೆ 2ರೂ.ಅಕ್ಕಿ, ಆಶ್ರಯ, ಇಂದಿರಾ ಅವಾಜ್ ಗೃಹ ಸಾಲಮನ್ನಾ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.ಯಾವ ಪಕ್ಷದಲ್ಲೂ ಸಿದ್ದಾಂತ, ನೈತಿಕತೆ ಉಳಿದಿಲ್ಲ, ಭರವಸೆಗಳ ಮೂಟೆಯೊಂದಿಗೆ ಮತದಾರರ ಮುಂದೆ ಕೈಮುಗಿಯುವ ಜನಪ್ರತಿನಿಧಿಗಳು ಅಧಿಕಾರದ ಗದ್ದುಗೆ ಏರಿದ ಮೇಲೆ ''ಕೈ'' ಕೊಡುವ ಚಾಳಿಯನ್ನು ಮತದಾರರ ನೋಡಿ,ನೋಡಿ ಸುಸ್ತಾಗಿದ್ದಾನೆ.
ಈಗಾಗಲೇ ರಾಜ್ಯದಲ್ಲಿ ಕೋಟ್ಯಂತರ ರೂಪಾಯಿಯ ಮದ್ಯ, ನಗದು, ಸೀರೆ, ಬಟ್ಟೆಗಳನ್ನು ವಶಪಡಿಸಿಕೊಳ್ಳ ಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಖರ್ಗೆಯ ಹೆಲಿಕ್ಯಾಪ್ಟರ್, ದೇವೇಗೌಡರ ಕಾರು, ಯಡಿಯೂರಪ್ಪನವರ ಕಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಬಿಹಾರ, ಉತ್ತರ ಪ್ರದೇಶ ಚುನಾವಣೆ ಗೂಂಡಾಗಿರಿಯಿಂದ ನಲುಗುತ್ತಿರುವುದನ್ನು ಕೇಳಿದ್ದೇವೆ.
ಆದರೆ ಈ ಬಾರಿ ಚುನಾವಣಾ ಆಯೋಗ ಎಷ್ಟೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಅಕ್ರಮಗಳಿಗೆ ಕಡಿವಾಣ ಹಾಕುವುದು ತುಸು ಕಠಿಣವೇ ಆಗಬಹುದಾದ ಲಕ್ಷಣ ಗೋಚರಿಸತೊಡಗಿದೆ.ವೈಯಕ್ತಿಕ ಪ್ರತಿಷ್ಠೆ, ಅಸಮಾ ಧಾನ, ಪಿತೂರಿ, ಸ್ವಾರ್ಥಗಳ ಸರಮಾಲೆ ಮೂಲಕ ರಾಜ್ಯ ರಾಜಕೀಯದ ಚದುರಂಗದಾಟದಲ್ಲಿ
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್ಪಿ, ಬಿಎಸ್ಪಿ, ಸಿಪಿಐಎಂ ಅಖಾಡ ಇಳಿದಿದ್ದರೆ, ತ್ರಿಶಂಕು ಸ್ಥಿತಿಯಲ್ಲಿರುವ ಮತದಾರನಿಗೆ ಸುಭಗರನ್ನು ಗುರುತಿಸಿ ಆರಿಸುವುದೇ ಒಂದು ದೊಡ್ಡ ಸವಾಲಾಗಿ ಬಿಟ್ಟಿದೆ..........
Monday, April 28, 2008
ಸಂಜೀವ್ ಗಾಂಧಿ ಯಾರು ?!
ಕೆಲವೊಂದು ವಿಚಾರಗಳು ಅನಾವಶ್ಯಕ ಎಂದೆನಿಸಿದರೂ ಕೂಡ, ಕೆಲವೊಮ್ಮೆ ಆಗಾಗ ವಿವಾದಗಳನ್ನು ಹುಟ್ಟು ಹಾಕುತ್ತಲೇ ಇರುತ್ತದೆ, ಇಂದಿಗೂ ಸುಭಾಶ್ಚಂದ್ರ ಬೋಸ್ ಅವರ ಸಾವಿನ ಪ್ರಕರಣ, ಲಾಲ್ ಬಹದ್ದೂರ್ ಶಾಸ್ತ್ರಿಗಳ ನಿಧನ, ಗಾಂಧಿ ನಿಲುವಿನ ಬಗ್ಗೆ, ಸಂಜಯ್ ಗಾಂಧಿ ಬಲಿ, ಸಾವರ್ಕರ್ ದೇಶಪ್ರೇಮ ಹೀಗೆ....
ಅದರಲ್ಲೂ ಗಾಂಧಿ ಕುಟುಂಬದ ಬಗ್ಗೆ ನೆಹರೂ ಕುರಿತು, ಇಂದಿರಾ ಬಗ್ಗೆ ಈಗಾಗಲೇ ಸಾಕಷ್ಟು ವಾದ-ವಿವಾದಗಳು ನಡೆಯುತ್ತಲೇ ಇದೆ, ಇತ್ತೀಚೆಗೆ ನನ್ನ ಎದುರಿಗೆ ಧುತ್ತನೇ ಸಂಜಯ್ ಗಾಂಧಿ ಬಗ್ಗೆ ಪ್ರಶ್ನೆ ಎಸೆದಾಕೆ ರಶ್ಮಿ ಪೈ, ಆಕೆ ಗಾಂಧಿ ಕುಟುಂಬದ ತಲೆಮಾರಿನ ಹೆಸರನ್ನು ನೋಡುತ್ತಿದ್ದಾಗ, ಅಲ್ಲಿ ಸಂಜಯ್ ಗಾಂಧಿ ಮುಂದೆ ಮೊಹಮ್ಮದ್ ಯೂನುಸ್ ಅಂತ ದಾಖಲಿಸಲಾಗಿತ್ತು. ಸಂಜಯ್ಗೂ - ಯೂನುಸ್ಗೂ ಏನು ಸಂಬಂಧ, ಇದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಯಾವ ಸಂಬಂಧ ಎಂಬಂತೆ, ಇದರ ಹಿಂದಿನ ರಹಸ್ಯ ಈಗಾಗಲೇ ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ.
ಆದರೂ ಆ ಹೆಸರಿನ ಹಿಂದಿನ ಇರುವ ರಹಸ್ಯವಾದರು ಏನು, ಹಾಗಾದರೆ ಯಾವ ಸಂಬಂಧ....ಎಂಬುದಕ್ಕಿಂತ ಸ್ವಲ್ಪ ವಿವರವಾಗಿ ನೆಹರು ವಂಶದ ಬಗ್ಗೆ ರಾವ್ ಅವರು ದಾಖಲಿಸಿದ ವಿವರಗಳನ್ನು ಓದುತ್ತಾ ಹೋದರೆ ನಿಮಗೆ ತಿಳಿಯುತ್ತೆ...ಇಂದಿಗೂ ಸಂಜಯ್ ಗಾಂಧಿಯನ್ನು ತಾಯಿ ಇಂದಿರಾಳೇ ಕೊಲೆ ಮಾಡಿಸಿದ್ದಾರೆ, ಆತನ ಬಳಿ ಇದ್ದ ರಿಸ್ಟ್ ವಾಚ್ ಏನಾಯಿತು ಎಂಬಂತಹ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದಿರುವಂತೆ ಇವತ್ತಿಗೂ ಅಂತಹ 'ಚಿದಂಬರ ರಹಸ್ಯ'ದೆಡೆಗೊಂದು ಕುತೂಹಲ ಎಲ್ಲರಲ್ಲಿಯೂ ಇದೆ.ಕೆ.ಎನ್.ರಾವ್ ಅವರು ಬರೆದ ' ನೆಹರು ವಂಶ ' ಪುಸ್ತಕದಲ್ಲಿ ಅವರೇ ಬರೆದಿರುವಂತೆ, ಜವಾಹರಲಾಲ್ ನೆಹರು ಅವರ ಏಕೈಕ ಪುತ್ರಿ ಇಂದಿರಾ ಪ್ರಿಯದರ್ಶಿನಿ ನೆಹರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ.
ಕಮಲ ನೆಹರು ಇಂದಿರಾ ತಾಯಿ, ಆಕೆ ತೀರಿಕೊಂಡಿದ್ದು ಸ್ವಿಡ್ಜ್ರ್ಲ್ಯಾಂಡ್ನಲ್ಲಿ. ನೆಹರು ಪ್ರೀತಿಯ ಮಗಳು ಇಂದಿರಾಳ ಮದುವೆ ಗೆ ಮಾತ್ರ ಕಮಲ ನೆಹರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು,ಯಾಕೆ ಫಿರೋಜ್ ಜತೆಗಿನ ಮದುವೆಗೆ ವಿರೋಧ ವ್ಯಕ್ತಪಡಿ ಸಲಾ ಯಿತು, ಫಿರೋಜ್ ಯಾರು? ಆತ ಕಿರಾಣಿ ಅಂಗಡಿ ವರ್ತಕನ ಮಗನಾಗಿದ್ದ, ವೈನ್ ಸಪ್ಲೈಯ್ರ್ ಮಗನಾಗಿದ್ದ ಹೀಗೆ ನಾನಾ ರೀತಿಯಲ್ಲಿ ಫಿರೋಜ್ನನ್ನು ಗುರುತಿಸಲಾಗಿತ್ತು. ರಾಜೀವ್ ಅಜ್ಜನ ಹೆಸರು ಪಂಡಿತ್ ಜವಾಹರಲಾಲ್ ನೆಹರು, ಎಲ್ಲರಿಗೂ ತಿಳಿದಿರುವಂತೆ ಇಬ್ಬರು ಅಜ್ಜಂದಿರು ಇರುತ್ತಾರೆ, ಒಂದು ತಂದೆಯ ತಂದೆ, ಇನ್ನೊಂದು ತಾಯಿಯ ತಂದೆ.
ಹೆಚ್ಚಿನ ಸಮಾಜದಲ್ಲಿ ತಂದೆಯ ತಂದೆಗೆ ಹೆಚ್ಚಿನ ಸ್ಥಾನಮಾನ. ಹಾಗಾದರೆ ರಾಜೀವ್ ಅಜ್ಜನ ಹೆಸರೇನು ಎಂಬುದಾಗಿ ಕೆ. ಎನ್. ರಾವ್ ನೆಹರು ವಂಶ ಪುಸ್ತಕದ ಲೇಖನದಲ್ಲಿ ಪ್ರಶ್ನಿಸುತ್ತಾರೆ. ನಿಜಕ್ಕೂ ರಾಜೀವ್ ಗಾಂಧಿ ಮತ್ತೊಬ್ಬ ಅಜ್ಜ(ತಂದೆಯ ತಂದೆ) ಮುಸ್ಲಿಂ, ಆತ ಗುಜರಾತ್ ಜುನಾಗಢ್ ಪ್ರದೇಶದ 'ಜಂಟಲ್ಮೆನ್" ಆಗಿದ್ದರು.ಅವರ ಹೆಸರು ನವಾಬ್ ಖಾನ್ ಅವರು ಮದುವೆ ಯಾಗಿದ್ದು ಪಾರ್ಸಿ ಮಹಿಳೆಯನ್ನ, ವಿವಾಹದ ನಂತರ ಆಕೆಯನ್ನು ಇಸ್ಲಾಂಗೆ ಮತಾಂತರಿಸಲಾಯಿತು.
ಹೀಗೆ ಸಾಗುವ ನೆಹರು ವಂಶ ಪುರಾಣ ಕಥನ, ರಾಜೀವ್ ತಂದೆ ಫಿರೋಜ್, ಇಂದಿರಾ ಗಾಂಧಿಯನ್ನು ಮದುವೆಯಾಗುವ ಮುನ್ನ ಫಿರೋಜ್ ಖಾನ್ ಆಗಿದ್ದರು. ಫಿರೋಜ್ ತಾಯಿ ಕುಟುಂಬದ ಹೆಸರು ಗಾಂಡಿ, ಈ ಹೆಸರನ್ನು ಇಂದಿರಾ ಮದುವೆ ಬಳಿಕ ಗಾಂಧಿ ಎಂದು ಬದಲಾಯಿಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧಿ!!.ಚಂಚಲ ಚಿತ್ತದ ಇಂದಿರಾಗೆ ಆಪ್ತರಾಗುತ್ತ ಹೋದವರು ಫಿರೋಜ್ ಖಾನ್, ಬಳಿಕ ಆಕೆಯನ್ನು ಲಂಡನ್ನ ಮಸೀದಿಯಲ್ಲಿ ವಿವಾಹವಾಗಿದ್ದರು.
ಇದು ನೆಹರುಗೆ ನುಂಗಲಾರದ ತುಪ್ಪವಾಗಿತ್ತು.ಫಿರೋಜ್ ಮದುವೆಯ ಬಳಿಕ ಇಂದಿರಾ ಹೆಸರು ಕೂಡ ಮೈಮುನಾ ಬೇಗಂ ಎಂ ದಾಗಿತ್ತು, ಅಷ್ಟೇ ಅಲ್ಲ ಆಕೆ ಮುಸ್ಲಿಂರಂತೆಯೇ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದರು. ಫಿರೋಜ್ ಇಂದಿರಾಗಾಂಧಿಯನ್ನು ಲಂಡನ್ ಮಸೀದಿಯಲ್ಲಿ ಮದುವೆಯಾಗಿದ್ದು, ನೆಹರು ಅವರನ್ನು ಕೆಂಡಮಂಡಲರನ್ನಾಗಿಸಿತ್ತು. ಆದರೆ ಅವರಿಬ್ಬರು ಭಾರತಕ್ಕೆ ಹಿಂದಿರುಗಿದ ಕೂಡಲೇ ವೈದಿಕ ಸಂಪ್ರದಾಯದಲ್ಲಿ ಮದುವೆಯಾದಂತೆ ಎಲ್ಲ ಪತ್ರಿಕೆಗಳಲ್ಲೂ ಫೋಟೋ ಪ್ರಕಟಿಸಲಾಗಿತ್ತು. (ಈ ಮೊದಲೇ ಅವರಿಬ್ಬರು ಲಂಡನ್ ಮಸೀದಿಯಲ್ಲಿ ಮದುವೆಯಾದ ಫೋಟೋವನ್ನು ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯೊಂದು ಪ್ರಕಟಿಸಿತ್ತು).
ಇಂತಹ ಸಂಗತಿಗಳನ್ನೇ ನೆಹರು ರಹಸ್ಯವಾಗಿಡುವಲ್ಲಿ ತುಂಬಾ ಮುತುವರ್ಜಿ ವಹಿಸುತ್ತಿದ್ದರು, ಅದರಂತೆಯೇ ಫಿರೋಜ್-ಇಂದಿರಾ ಪುತ್ರರಾದ ರಾಜೀವ್, ಸಂಜಯ್ ಬಗೆಗೂ ಅನುಮಾನದ ಹುತ್ತಗಳು ಸುತ್ತುತ್ತಲೇ ಇವೆ.ಇಂದಿರೆಯ ಆಡಳಿತ ಅವಧಿಯಲ್ಲಿ ಸಂಜಯ್ ರಾಜಕೀಯ ಶಕ್ತಿಯನ್ನು ದುರ್ಬಳಕೆ ಮಾಡಿಕೊಂಡಿದ್ದ. ಅಲ್ಲದೇ ಕಾರು ಕದ್ದು ಸಿಕ್ಕಿ ಬಿದ್ದ ಸಂಜಯ್ನನ್ನು ರಕ್ಷಿಸಲು ಇಂದಿರಾ ಮತ್ತು ಸಹೋದ್ಯೋಗಿಗಳು ಇನ್ನಿಲ್ಲದಂತೆ ಶ್ರಮಿಸಿದ್ದರು.ಸಂಜಯ್ ಗಾಂಧಿ ನಿಜವಾದ ಹೆಸರು ಸಂಜೀವ್ ಗಾಂಧಿ, ಈತ ಯುಕೆಯಲ್ಲಿ ಕಾರು ಕದ್ದು ಸಿಕ್ಕಿ ಬಿದ್ದಿದ್ದು, ಅಲ್ಲಿ ಆತನ ಪಾಸ್ಫೋರ್ಟ್ ಅನ್ನು ವಶಪಡಿಸಿಕೊಂಡಿದ್ದರು.
ನಂತರ ಯುಕೆಯಲ್ಲಿ ಭಾರತದ ರಾಯಭಾರಿಯಾಗಿದ್ದ ನೆಹರು ಆಪ್ತಮಿತ್ರ ಕೃಷ್ಣಮೆನನ್ ಅವರು ಸಂಜಯ್ ಎಂಬ ಹೆಸರಲ್ಲಿ ಹೊಸ ಪಾಸ್ಫೋರ್ಟ್ ಮಾಡಿಕೊಟ್ಟಿದ್ದರು.ಎಲ್ಲಕ್ಕಿಂತ ಹೆಚ್ಚಾಗಿ ಸಂಜಯ್ ಇಂದಿರಾಗಾಂಧಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ, ಅಲ್ಲದೇ ಪರೋಕ್ಷವಾಗಿ ಸರಕಾರವನ್ನೇ ಹಿಡಿತಲ್ಲಿ ಇಟ್ಟುಕೊಂಡಿದ್ದ, ಆತ ರಾಷ್ಟ್ರವನ್ನು ತನ್ನ ಸ್ವಂತದ ಆಸ್ತಿ ಎಂಬಂತೆ ವರ್ತಿಸುತ್ತಿದ್ದ. ಅಷ್ಟಾಗಿಯೂ ಇಂದಿರೆ ಪುತ್ರ ವ್ಯಾಮೋಹಕ್ಕೆ ಒಳಗಾಗಿ ಗಾಂಧಾರಿಯಂತೆ ಕಣ್ಣಿದ್ದು ಕುರುಡರಾಗಿದ್ದರು.ಇದಕ್ಕೆಲ್ಲಾ ಅಸ್ತ್ರ ಎಂಬಂತೆ ಸಂಜಯ್ ತಾಯಿ ಇಂದಿರೆಯನ್ನು ಅಂಗೈಯಲ್ಲಿಟ್ಟ ಬುಗುರಿಯಂತೆ ತಿರುಗುಸುತ್ತಿದ್ದ, ಮತ್ತೆ ಪದೇ, ಪದೇ ಅದೇ ಮಾತನ್ನು ಕೇಳುತ್ತಿದ್ದ ಹೇಳು ನನ್ನ ನಿಜವಾದ ಅಪ್ಪ ಯಾರು ಅಂತ ??
ಇಂದಿರಾ ಪತಿ ಫಿರೋಜ್ ಖಾನ್ ಅವರನ್ನು ಪ್ರಧಾನಿ ನಿವಾಸ ತೀನ್ಮೂರ್ತಿ ಭವನದೊಳಗೆ ಕಾಲಿಡದಂತೆ ನೆಹರು ಕಟ್ಟಪ್ಪಣೆ ಹೊರಡಿಸಿದ್ದರು. ಇಂತಹ ಜಂಜಾಟಗಳ ನಡುವೆ ಇಂದಿರಾ ಮತ್ತು ಫಿರೋಜ್ ಕಾನೂನು ಬದ್ಧವಾಗಿ ಅಲ್ಲದಿದ್ದರೂ ಅವರು ಪ್ರತ್ಯೇಕವಾಗಿಯೇ ವಾಸಿಸತೊಡಗಿದ್ದರು. 1960ರಲ್ಲಿ ಫಿರೋಜ್ ಸಾವನ್ನಪ್ಪಿದ್ದರು ಕೂಡ ಈ ಸಾವು ಕೂಡ ಇಂದಿಗೂ ನಿಗೂಢವಾಗಿಯೇ ಉಳಿದಿದೆ.ಸಂಜಯ್ ಗಾಂಧಿ ಫಿರೋಜ್ ಗಾಂಧಿ ಮಗನಲ್ಲ ಆತ ಮತ್ತೊಬ್ಬ ಮುಸ್ಲಿಂ ಜಂಟಲ್ ಮೆನ್ ಆಗಿದ್ದ ಮೊಹಮ್ಮದ್ ಯೂನಿಸ್ ಪುತ್ರ ಎಂಬ ವಾಸ್ತವ ಸಂಗತಿ ಸಂಜಯ್ ತಿಳಿದುಹೋಗಿತ್ತು.
ಅಲ್ಲದೇ ಯೂನಿಸ್ಗೆ ಸಂಜಯ್ ಸಿಖ್ ಯುವತಿ ಮೇನಕಳಾನ್ನು ಮದುವೆಯಾಗುವುದು ಇಷ್ಟ ಇಲ್ಲವಾಗಿತ್ತು. ಅಷ್ಟರಲ್ಲಾಗಲೇ ಸಂಜಯ್ ಕರ್ನಲ್ ಆನಂದ್ ಎಂಬವರ ಮಗಳನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ, ಆಕೆಯನ್ನೇ ಮದುವೆಯಾಗ ಬೇಕು ಎಂದು ಕರ್ನಲ್ ಸಂಜಯ್ಗೆ ಬೆದರಿಕೆ ಕೂಡ ಒಡ್ಡಿದ್ದರು. ಆದರೆ ಸಂಜಯ್ ಮೇನಕಳನ್ನು ವರಿಸಿಬಿಟ್ಟಿದ್ದ.
ಸಂಜಯ್ ಮುಸ್ಲಿಂ ಯುವತಿಯನ್ನೇ ಮದುವೆಯಾಗಬೇಕು ಎಂದು ಹಂಬಲಿಸಿದ್ದರು. ಸಂಜಯ್ ವಿಮಾನ ಅಪಘಾತದಲ್ಲಿ ತೀರಿ ಕೊಂಡಾಗ ಯೂನುಸ್ ವೇದನೆಗೊಳಗಾಗಿರುವುದಾಗಿ ಯೂನುಸ್ ತಮ್ಮ ವ್ಯಕ್ತಿ,ಮೋಹ ಮತ್ತು ರಾಜಕೀಯ ಎಂಬ ಪುಸ್ತಕದಲ್ಲಿ ದಾಖಲಿಸಿರುವುದಾಗಿ ನೆಹರು ಅವರ ದೀರ್ಘಕಾಲದ ಖಾಸಗಿ ಕಾರ್ಯದರ್ಶಿಯಾಗಿದ್ದ ಎಂ.ಒ.ಮಥಾಯ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.ಹೀಗೆ ನೆಹರು ಕಾಲದ ನೆನಪು (ರಿಮಿನಿಸೆಸ್ಸ್ ಆಫ್ ದಿ ನೆಹರು ಏಜ್ ) ಎಂಬ ಪುಸ್ತಕದಲ್ಲಿ ಎಸ್.ಒ.ಮಥಾಯ್ ಅವರು ಇಂತಹ ಹಲವಾರ ರಹಸ್ಯಗಳನ್ನು ಹೊರಗೆಡಹಿದ್ದರು. ಆದರೆ ಭಾರತ ಸರಕಾರ ಆ ಪುಸ್ತಕವನ್ನು ನಿಷೇಧಿಸಿತ್ತು!!.
Thursday, April 3, 2008
ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ
ಇತ್ತೀಚೆಗೆ ಜೈತ್ರಯಾತ್ರೆ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬೆಳಗಾವಿ ಯಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ರಾಷ್ಟ್ರೀಯ ಪಕ್ಷಗಳು ದ್ವಂದ್ವ ನೀತಿ ಅನುಸರಿಸುತ್ತವೆ.ಕೇಂದ್ರದಿಂದ ನ್ಯಾಯ ಸಿಗುವುದಿಲ್ಲ. ರಾಜ್ಯಕ್ಕೆ ತಕ್ಕ ಗೌರವ ಸಲ್ಲಬೇಕಾದರೆ ತಮಿಳುನಾಡನ್ನು ಮಾದರಿಯಾಗಿಟ್ಟುಕೊಂಡು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸ ಬೇಕು ಎಂಬುದಾಗಿ ಹೇಳಿದ್ದರು.
ಆದರೆ ರಾಜಕೀಯವಾಗಿ ಕುಮಾರಸ್ವಾಮಿಯವರ ಹೇಳಿಕೆಯನ್ನು ತಿರಸ್ಕರಿಸಬಹುದು ಅಥವಾ ಅವರ ವಿಶ್ವಾಸ ದ್ರೋಹವನ್ನೇ ನೆಪವಾಗಿಟ್ಟುಕೊಂಡು ಹಂಗಿಸಬಹುದು. ನಾವು ಅವೆರಡನ್ನೂ ಬಿಟ್ಟು ರಾಜ್ಯದ ವಿಷಯವನ್ನು ಗಮದಲ್ಲಿಟ್ಟುಕೊಂಡರೆ, ಕುಮಾರಸ್ವಾಮಿಯವರು ಹೇಳಿದ ಮಾತಿನಲ್ಲಿ ಸತ್ಯಾಂಶ ಇದೆ. ಅಲ್ಲದೇ 1996ರ ಬಳಿಕ ಹಲವು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸಿರುವುದನ್ನು ಮನಗಾಣಬೇಕಾಗಿದೆ.
1960ರಲ್ಲಿ ಹಿಂದಿ ವಿರೋಧಿ ಚಳವಳಿಯೊಂದಿಗೆ ಜನ್ಮತಳೆದ ಡಿಎಂಕೆ ಜನಪ್ರಿಯವಾಗುವುದರೊಂದಿಗೆ ರಾಜ ಕೀಯವಾಗಿ ಬಹಳಷ್ಟು ಪ್ರಬಲವಾಯಿತು. 1967ರಲ್ಲಿ ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಬಲವನ್ನು ಕುಗ್ಗಿಸುವ ಮೂಲಕ ಡಿಎಂಕೆಯ ಸಿಎನ್ ಅಣ್ಣಾದೊರೈ ಪ್ರಥಮ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದರು. ಅಣ್ಣಾ ಮರಣಾ ನಂತರ 1969ರಲ್ಲಿ ಕರುಣಾನಿಧಿ ಮುಖ್ಯಮಂತ್ರಿ ಗಾದಿಗೆ ಏರಿದ್ದರು.
ಬಳಿಕ ಕಾಂಗ್ರೆಸ್ ತೊರೆದು ಡಿಎಂಕೆ ಸೇರಿದ್ದ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಎಂ.ಜಿ.ರಾಮಚಂದ್ರನ್(ಎಂಜಿಆರ್) ಕರುಣಾನಿಧಿ ನಡುವಿನ ವಿರಸದಿಂದಾಗಿ 1972ರಲ್ಲಿ ಎಡಿಎಂಕೆ(ನಂತರ ಎಐಎಡಿಎಂಕೆ ಆಗಿದ್ದು) ಅನ್ನು ಹುಟ್ಟು ಹಾಕುವ ಮೂಲಕ ಡಿಎಂಕೆಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಬೆಳೆದಿದೆ. ಇಂದು ತಮಿಳುನಾಡಿನ ಡಿಎಂಕೆ ಕೇಂದ್ರದಲ್ಲಿ ಬಲವಾಗಿ ಧ್ವನಿ ಎತ್ತುವಷ್ಟು ಶಕ್ತವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ತಮಿಳುನಾಡಿನಲ್ಲಿ ಪ್ರತಿ ಮನೆಯಲ್ಲೂ ಗ್ಯಾಸ್ ಸಿಲೆಂಡರ್ (ಪ್ರತಿಮನೆಯಲ್ಲಿ ಟಿವಿ)ಇದೆ, ಇಲ್ಲಿನ ರೈಲು ವ್ಯವಸ್ಥೆ, ಪ್ಲೈ ಒವರ್, ಬಸ್ ಟಿಕೇಟ್ ದರ, ವಿದ್ಯುತ್ ದರ ಎಲ್ಲವೂ ಜನಪರವಾಗಿದೆ.
ಇದು ಸಾಧ್ಯವಾಗಿದ್ದು ಪ್ರಾದೇಶಿಕ ಪಕ್ಷಗಳ ಹೋರಾಟದ ಫಲ. ಅದೇ ರೀತಿಯಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತಕ್ಕೆ ಸೆಡ್ಡು ಹೊಡೆದು 1982 ಮಾರ್ಚ್ 29ರಂದು ತೆಲುಗು ಸಿನಿಮಾರಂಗದ ಖ್ಯಾತ ಚಿತ್ರನಟ ಎನ್.ಟಿ.ರಾಮರಾವ್(ಎನ್ಟಿಆರ್) ತೆಲುಗು ದೇಶಂ ಪಕ್ಷವನ್ನು ಸ್ಥಾಪಿಸಿದರು.1984ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 35ಸೀಟುಗಳನ್ನು ಪಡೆದಿತ್ತು. 1999-2004ರಲ್ಲಿ ನಡೆದ 13ನೇ ಲೋಕಸಭಾ ಚುನಾವಣೆಯಲ್ಲೇ ಅದು ನಾಲ್ಕನೇ (29ಸೀಟುಗಳನ್ನು ಗಳಿಸಿತ್ತು) ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ನಂತರ 1996ರಲ್ಲಿ ಚಂದ್ರಬಾಬು ನಾಯ್ಡು ಅವರು ಅಧಿಕಾರಕ್ಕೆ ಬಂದ ಮೇಲೆ ಆಂಧ್ರಪ್ರದೇಶ, ಹೈದರಾಬಾದ್ ಹೆಸರು ಜಾಗತಿಕವಾಗಿ ಬೆಳೆಯಿತು. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ 1969ರಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದ ರಾಮಕೃಷ್ಣ ಹೆಗಡೆಯವರು, ನಂತರದಲ್ಲಿ 1975ರ ತುರ್ತುಪರಿಸ್ಥಿತಿಯಿಂದ ರೋಸಿಹೋದ ಅವರು, ಜನತಾ ಪಕ್ಷವನ್ನು ಸೇರಿದ್ದರು.
ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ಸೇವೇ ಸಲ್ಲಿಸಿದ್ದ, ರಾಮಕೃಷ್ಣ ಹೆಗಡೆ 1983ರಲ್ಲಿ ಬಿಜೆಪಿ ಮತ್ತು ಎಡಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿಯಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ, ಸಾರ್ವಜನಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೀಗೆ ಪ್ರಮುಖ ನಿರ್ಧಾರಗಳು ಜನಪರವಾಗಿದ್ದವು.
ಅಲ್ಲದೆ ಮೌಲ್ಯಾಧಾರಿತ ರಾಜಕಾರಣಿ ಎಂದೆ ಹೆಸರು ಪಡೆದಿದ್ದರು(ಹಗರಣಗಳ ವಿವಾದಗಳಲ್ಲಿ ಸಿಲುಕಿದ್ದು ಕೂಡ ಅಷ್ಟೇ ವಿಪರ್ಯಾಸ) ನಂತರ ಆರೋಪ, ಅಧಿಕಾರ, ಒಳರಾಜಕೀಯ, ಹಗರಣಗಳಿಂದ 1986ರಲ್ಲಿ ರಾಜೀನಾಮೆ ನೀಡಿದ ಹೆಗಡೆ, ನಂತರ ಮತ್ತೆ ಅಧಿಕಾರಕ್ಕೆ ಬಂದ ಅವರು 1988ರವರೆಗೆ ಮುಖ್ಯಮಂತ್ರಿ ಯಾಗಿದ್ದರು. ಬಳಿಕ ರಾಷ್ಟ್ರೀಯ ನವನಿರ್ಮಾಣ ವೇದಿಕೆ,ನಂತರ ಲೋಕಶಕ್ತಿಯನ್ನು ಹುಟ್ಟುಹಾಕಿದರು ಕೂಡ ಅದು ದುರ್ಬಲಗೊಂಡಿತ್ತು.
ಆದರೆ ಇಂದು ಜನತಾಪಕ್ಷ ಒಡೆದು, ಒಡೆದು ಅವುಗಳೇ ತಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದಿಕೊಂಡಿರುವುದು ಹಾಗೂ ಸಮಾಜವಾದಿಗಳಾಗಿ, ಕಾಂಗ್ರೆಸ್ ವಿರೋಧಿ ಧೋರಣೆ ಹೊಂದಿದ್ದ ನಾಯಕರುಗಳೇ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ದುರಂತವಲ್ಲದೆ ಇನ್ನೇನು. ಇವತ್ತು ಕರ್ನಾಟಕದ ಪ್ರತಿಯೊಂದು ಸಮಸ್ಯೆಗೂ ನಮ್ಮ ರಾಜಕಾರಣಿಗಳು ಕೇಂದ್ರದಲ್ಲಿ ಹ್ಯಾಪು ಮೋರೆ ಹಾಕಿಕೊಳ್ಳವಂತಾಗಿದೆ.
ಅದೇ ತಮಿಳುನಾಡು ವಿಷಯಕ್ಕೆ ಬನ್ನಿ ಕಾವೇರಿ ವಿವಾದ, ಹೊಗೇನಕಲ್ ವಿವಾದ, ವಿದ್ಯುತ್ ಸರಬರಾಜು ಯಾವುದೇ ಇರಲಿ ತನ್ನ ರಾಜ್ಯದ ಹಿತಾಸಕ್ತಿಯನ್ನು ಬಲಿಗೊಡುವುದಿಲ್ಲ, ಅದ್ಯಾಕೆ ಇತ್ತೀಚೆಗೆ ಮಧುರೈಯಲ್ಲಿ ಸಾಂಪ್ರದಾಯಿಕ ಹೆಸರಲ್ಲಿ ನಡೆಯುವ ಜಲ್ಲಿಕಾಟ್ಟು (ಗೂಳಿಕಾಳಗ)ಗೆ ಸ್ವತಃ ಸರಕಾರವೇ ಸರ್ವೊಚ್ಛನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿ, ಅದರಿಂದ ಯಾರಿಗೂ ಜೀವಹಾನಿ ಇಲ್ಲ, ಜಲ್ಲಿಕಾಟ್ಟುಗೆ ಕೆಲವು ಶತಮಾನಗಳ ಇತಿಹಾಸ ಇದೆ ಎಂಬುದಾಗಿ ಸಮರ್ಥಿಸಿಕೊಂಡಿತ್ತು.
ಆದರೂ ನ್ಯಾಯಾಲಯ ಷರತ್ತನ್ನು ವಿಧಿಸಿ ಗೂಳಿಕಾಳಗಕ್ಕೆ ಅನುಮತಿ ನೀಡಿತ್ತಾದರೂ, ಇಬ್ಬರು ಪ್ರಾಣಕಳೆದು ಕೊಂಡಿದ್ದರು.ಇಂದು ತಮಿಳುನಾಡಿನಲ್ಲಿ ಡಿಎಂಕೆ (ದ್ರಾವಿಡ ಮುನ್ನೇತ್ರಾ ಕಜಗಂ), ಎಐಡಿಎಂಕೆ (ಅಣ್ಣಾ ದ್ರಾವಿಡ ಮುನ್ನೇತ್ರಾ ಕಜಗಂ), ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಪಕ್ಷ, ರಾಷ್ಟ್ರೀಯ ತೆಲಂಗಾಣ ಪಕ್ಷ, ಇಂಡಿಯಾ ಫಾರ್ವರ್ಡ್ ಬ್ಲಾಕ್ (ಪಶ್ಚಿಮಬಂಗಾಳ), ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಮೇಘಾಲಯ,ಪಶ್ಚಿಮಬಂಗಾಲ),
ಅಸ್ಸೋಮ್ ಗಣ ಪರಿಷತ್ (ಅಸ್ಸಾಂ), ಬಿಜು ಜನತಾದಳ (ಒರಿಸ್ಸಾ), ಇಂಡಿಯನ್ ಫೆಡರಲ್ ಡೆಮೋಕ್ರೆಟಿಕ್ ಪಾರ್ಟಿ(ಕೇರಳ), ಇಂಡಿಯನ್ ನ್ಯಾಶನಲ್ ಲೋಕದಳ (ಹರಿಯಾಣ),ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಕೇರಳ),ಜನತಾದಳ (ಬಿಹಾರ,ಜಾರ್ಖಂಡ್,ನಾಗಾಲ್ಯಾಂಡ್) ರಾಷ್ಟ್ರೀಯ ಜನತಾದಳ (ಬಿಹಾರ್,ಜಾರ್ಖಂಡ್),ಸಮಾಜವಾದಿ ಪಕ್ಷ (ಮಧ್ಯಪ್ರದೇಶ, ಉತ್ತರಪ್ರದೇಶ, ಉತ್ತರಖಂಡ), ಶಿವಸೇನೆ(ಮಹಾರಾಷ್ಟ್ರ),ಯುನೈಟೆಡ್ ಗೋವನ್ಸ್ ಡೆಮೋಕ್ರೆಟಿಕ್ ಪಾರ್ಟಿ(ಗೋವಾ)ಇವು ಪ್ರಮುಖ ಪ್ರಾದೇಶಿಕ ಪಕ್ಷಗಳು.
ತಮಿಳುನಾಡಿನಲ್ಲಂತೂ ಜನ ಒಮ್ಮೆ ಕರುಣಾನಿಧಿಯವರನ್ನು ಅಧಿಕಾರದ ಗದ್ದುಗೆ ಏರಿಸಿದರೆ, ಮತ್ತೊಮ್ಮೆ ಎಐಎಡಿಎಂಕೆ ಜಯಲಲಿತಾ ಅವರನ್ನು, ಹೀಗೆ ಕಳೆದ 40ವರ್ಷಗಳಿಂದ ಪ್ರಾದೇಶಿಕ ಪಕ್ಷಗಳೇ ಇಲ್ಲಿ ಪ್ರಾಬಲ್ಯ ಪಡೆದಿದೆ. ಯಾವುದೇ ರಾಷ್ಟ್ರೀಯ ಪಕ್ಷಗಳು ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ. ಉತ್ತರಪ್ರದೇಶದಲ್ಲಿಯೂ ಬಹುಜನ್ ಸಮಾಜ ಪಕ್ಷ ಗಟ್ಟಿಯಾಗಿ ನೆಲೆಯೂರಿದೆ, ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ, ತೆಲಂಗಾಣ ರಾಷ್ಟ್ರ ಸಮಿತಿ ಬಲವರ್ಧಿಸಿಕೊಂಡಿವೆ.
ಕರ್ನಾಟಕದ ಜನ ಹೆಸರಿಗಷ್ಟೇ ಬುದ್ಧಿವಂತರಾಗಿದ್ದೇವೆ. ರಾಷ್ಟ್ರೀಯ ಪಕ್ಷಗಳಲ್ಲಿನ ರಾಜಕೀಯ ನಾಯಕರಿಗೆ ಇಚ್ಛಾಶಕ್ತಿಯ ಕೊರತೆ ತುಂಬಿಕೊಂಡಿದ್ದರೆ, ಕೇವಲ ಭರವಸೆಗಳ ಮೂಟೆಯೊಂದಿಗೆ ಅಧಿಕಾರದ ಗದ್ದುಗೆ ಏರುವುದು ಮಾತ್ರ ಮುಖ್ಯವಾಗಿದೆ ವಿನಃ ಜನಪರ ಕಾಳಜಿ ಬೇಕಾಗಿಲ್ಲ ಎನ್ನುವುದಕ್ಕೆ ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಬಗೆಹರಿಯದೆ ಇರುವ ಸಮಸ್ಯೆಗಳೇ ಸಾಕ್ಷಿ. ಕರ್ನಾಟಕದ ಸಮಸ್ಯೆಯನ್ನು ಪಟ್ಟು ಹಿಡಿದು ಮಾಡಿಸಿಕೊಳ್ಳಲಿಕ್ಕಾದರೂ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ, ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆಯಂತೆ, ಅಂತಹ ನಾಯಕರು ಮತ್ತು ಮತದಾರರು ಯಾರು...!!