Wednesday, January 16, 2008

ಶಾಸಕರೊಬ್ಬರ ಅಜ್ಞಾತವಾಸ ಕಥನ....

ಇದು ಜನಪ್ರತಿನಿಧಿಯೊಬ್ಬರ ಬದುಕಿನ ಚಿತ್ರಣ. ಅಧಿಕಾರ, ರಾಜಕೀಯ ,ಮೋಹ ಎಷ್ಟರಮಟ್ಟಿಗೆ ಅವರ ಜೀವನದಲ್ಲಿ ಹಾಸು ಹೊಕ್ಕಾಗಿರುತ್ತದೆ ಎನ್ನುವುದಕ್ಕೆ ಇಲ್ಲಿರುವ ಮಾಜಿ ಶಾಸಕ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯರೊಬ್ಬರ ಬದಕಿನ ಚಿತ್ರಣನ್ನ ಓದಿ....ಕುಂದಾಪುರ ತಾಲೂಕಿನ ಹೈಕಾಡಿಯಲ್ಲಿ ಇರುವ ಹಾಲಿ ವಿಧಾನ ಪರಿಷತ್ ಸದಸ್ಯ, ಮಾಜಿ ಶಾಸಕ ಪ್ರತಾಪ್ ಚಂದ್ರ ಶೆಟ್ಟಿ ಅವರ ಮನೆಗೆ ಕಾಲಿಟ್ಟಾಗ ಗೌಜಿ, ಗದ್ದಲಗಳಿಲ್ಲದೆ ಪ್ರಶಾಂತವಾಗಿತ್ತು.

ಅಲ್ಲಿ ಮೊದಲಿನಂತೆ ದಂಡು ಇರಲಿಲ್ಲ, ಅರ್ಧ ತಾಸಿನ ಬಳಿಕ ನಿದ್ದೆಯಿಂದ ಎದ್ದು ಬಂದ ಅವರು ಏನು ಎಂದು ವಿಚಾರಿಸಿದಾಗ, ವಿಷಯ ತಿಳಿಸಿ ವಿವರಕ್ಕಾಗಿ ಕಾದರೆ ಯಾವ ಮಾತನ್ನೂ ಆಡಲೂ ಅವರು ಸಿದ್ದರಿರಲಿಲ್ಲ. ಇದು ಕಳೆದ ಐದಾರು ವರ್ಷಗಳ ಕಠಿಣ ವೃತವೇನೋ ಎಂಬಂತೆ ಪಾಲಿಸಿಕೊಂಡು ಬಂದಿದ್ದಾರೆ. ಹಾಗಂತ ಆಪ್ತ ಕಾರ್ಯಕರ್ತರಲ್ಲಿ ಸಮಾಲೋಚನೆ, ಮಾತುಕತೆ ನಡೆಸುತ್ತಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌‌ನ ಭದ್ರಕೋಟೆಯಾಗಿತ್ತು.

ಈ ಕ್ಷೇತ್ರವನ್ನು ಸುಮಾರು 16ವರ್ಷಗಳ ಕಾಲ ಆಳಿದವರು ಕೊಳ್ಕೆಬೈಲ್ ಪ್ರತಾಪ್‌‌ಚಂದ್ರ ಶೆಟ್ಟಿಯವರು. 1983ರಲ್ಲಿ ರಾಜಕೀಯ ರಂಗ ಪ್ರವೇಶಿಸಿದ್ದ ಪ್ರತಾಪರು ಸಹಜವಾಗಿಯೇ ತನ್ನ ಪ್ರತಾಪವನ್ನು ತೋರ್ಪಡಿಸಿದ್ದರು. ಇವರ ಹಿಂದೆ ಕಾರ್ಯಕರ್ತರ ದಂಡೆ ನೆರೆದಿರುತ್ತಿತ್ತು. ರಾಜಕೀಯದಲ್ಲಿ ಚಾಣಾಕ್ಷ ಎಂಬ ಬಿರುದು ಇತ್ತು. ಎಲ್ಲವನ್ನೂ ಕುಳಿತಲ್ಲೇ ಮಾಡಿಸಿಕೊಳ್ಳಬಲ್ಲ ತಾಕತ್ತು ಅವರಿಗಿದ್ದಿತ್ತು. ಅದೇ ರೀತಿಯಾಗಿ ವಿಧಾನಸಭೆಯಲ್ಲೂ ಅವರ ಧ್ವನಿಗೆ ಬೆಲೆಯೂ ಇದ್ದಿತ್ತು.

ಆದರೆ ಅವರಿಗೆ ಕಾರ್ಯಕರ್ತರೆಡೆಗಿದ್ದ ಕುರುಡು ವ್ಯಾಮೋಹ ಅವರನ್ನು 1999ರಲ್ಲಿ ನಡೆದ ಚುನಾವಣೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಕೇವಲ ಒಂದು ಸಾವಿರ ಮತಗಳ ಅಂತರದಿಂದ ಅವರದ್ದೇ ಊರಿನ ದಾಯಾದಿ, ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಎದುರು ಪರಾಜಯ ಹೊಂದಿದ್ದರು.1999ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ಸಚಿವರಾಗುತ್ತಿದ್ದರು. ಅದು ಕೊನೆಗೂ ಈಡೇರಲಿಲ್ಲ. ಈ ವಿಷಯದಲ್ಲಿ ತಾಲೂಕಿಗೆ ಸಚಿವ ಸ್ಥಾನದ ಅದೃಷ್ಟವೇ ಇಲ್ಲ ಎಂಬಂತಾಗಿ ಬಿಟ್ಟಿದೆ.

ಬಹುಶಃ ಯಾವ ಶಾಸಕರೂ ಈ ಪರಿಯಲ್ಲಿ ನೊಂದುಕೊಂಡ ಇತಿಹಾಸ ಇರಲಿಕ್ಕಿಲ್ಲ. ಆದರೆ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ತನ್ನನ್ನು ಗೆಲ್ಲಬಲ್ಲ ಇನ್ನೊಬ್ಬ ವ್ಯಕ್ತಿ ಕ್ಷೇತ್ರದಲ್ಲಿ ಯಾರಿದ್ದಾರೆ ಎಂಬ ಬಲವಾದ ನಂಬಿಕೆಯಲ್ಲಿದ್ದ ಅವರಿಗೆ ಈ ಸೋಲು ಯಾವ ಪರಿ ಅಜ್ಞಾತವಾಸಕ್ಕೆ ನೂಕಿ ಬಿಟ್ಟಿತ್ತೆಂದರೆ, ಆ ಸಂದರ್ಭದಲ್ಲಿ ಮೌನಕ್ಕೆ ಶರಣಾದ ಅವರಲ್ಲಿ ಹಿಂದಿನ ಗೆಟಪ್ಪು ಹೊರಟು ಹೋಗಿತ್ತು. ಅತೀ ಆತ್ಮೀಯರಷ್ಟೇ ಅವರಲ್ಲಿಗೆ ಬಂದು ಹೋಗುತ್ತಿದ್ದದ್ದು ಬಿಟ್ಟರೆ, ಪಕ್ಷದ ಕಾರ್ಯಕರ್ತರನ್ನು ದೂರವಿಟ್ಟರು.

ದೂರವಾಣಿ ಕರೆಗಳಿಗೂ ಅವರು ಮನೆಯಲ್ಲಿ ಇದ್ದೂ ಇಲ್ಲ ಎಂಬ ಉತ್ತರ ಸಿಗುತ್ತಿತ್ತು. ಸಾರ್ವಜನಿಕವಾಗಿ ಕಾಣಿಸುವುದೇ ಅಪರೂ ಪವಾಯಿತು. ಗಾಢ ಆಲೋಚನೆಯಲ್ಲಿ ಮಗ್ನರಾಗತೊಡಗಿದ ಪ್ರತಾಪರನ್ನು 2003ರಲ್ಲಿ ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.ಆದರೂ ಮಾಜಿ ಶಾಸಕ ಎಂಬ ಶಾಕ್‌ನಿಂದ ಆವಾಗಲೂ ಹೊರಬರಲು ಸಿದ್ಧರಿರಲಿಲ್ಲ.

ಇತ್ತೀಚೆಗಷ್ಟೇ ಕೆಲವು ಸಮಾರಂಭಗಳಲ್ಲಿ ಅವರ ಮುಖ ಕಾಣಿಸತೊಡಗಿದೆ.ಪದವಿ ಶಿಕ್ಷಣ ಮುಗಿದ ಬಳಿಕ ಪ್ರತಾಪರು ಆಯ್ದು ಕೊಂಡ ಕ್ಷೇತ್ರ ಬ್ಯಾಂಕಿಂಗ್. ತಂದೆ ಹುಯ್ಯಾರು ಹಿರಿಯಣ್ಣ ಪಟೇಲ್ ನಿಧನರಾದ ಬಳಿಕ ಮೈಸೂರಿನ ಬ್ಯಾಂಕಿ (ಆ ಸಂದರ್ಭದಲ್ಲಿ ಈಗಿನ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಕೂಡ ಬ್ಯಾಂಕ್‌‌ ಕೆಲಸದಲ್ಲಿ ಜತೆಗಿದ್ದರು)ನಲ್ಲಿ ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಹಾಲಾಡಿಗೆ ಬಂದಿದ್ದರು.

1983ರಲ್ಲಿ ಪ್ರತಾಪರು ಜನತಾದಳದ ಮಾಣಿಗೋಪಾಲ್ ಅವರನ್ನು ಸೋಲಿಸುವ ಮೂಲಕ ಪ್ರಥಮಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆ ನಂತರದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಂತವರು ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್. ಇಂದಿಗೂ ಪ್ರತಾಪ್‌‌ಗೆ ಬಲಗೈಯಾಗಿರುವವರು ಆಸ್ಕರ್ ಮಾತ್ರ1985 ರಲ್ಲಿ ಅಪ್ಪಣ್ಣ ಹೆಗ್ಡೆ, 1989ರಲ್ಲಿ ಗೋವರ್ಧನ್, 1994ರಲ್ಲಿ ಎ.ಜಿ.ಕೊಡ್ಗಿ ವಿರುದ್ಧ ಜಯಗಳಿಸಿದ್ದರು.

1999ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರ ಎದುರು ಪರಾಭವ ಹೊಂದಿದ್ದರು. ಇದೀಗ ಆಧ್ಯಾತ್ಮಿಕ ಹಾಗೂ ಕೃಷಿ ಪುಸ್ತಕಗಳನ್ನು ಆಳವಾಗಿ ಓದುವುದರಲ್ಲಿ ಮಗ್ನರಾಗಿದ್ದಾರೆ. ಯೋಗದ ಬಗ್ಗೆ ಒಲವು ಹೊಂದಿದ್ದು ಮುಂದಿನ ರಾಜಕೀಯ ತಂತ್ರಗಾರಿಕೆಯಲ್ಲಿ ಮಗ್ನರಾಗಿದ್ದಾರೆ....

ಗೋಡ್ಸೆ ಎಂಬ ಹೀರೋ !!!



ಸಾಗರದ ಹೆಗ್ಗೋಡಿನ ಶಿಲ್ಪಿ ಹಿರಿಯರಾದ ದಿ.ಕೆ.ವಿ.ಸುಬ್ಬಣ್ಣನವರು ಸಮಾಜ ಮತ್ತು ಜನತಂತ್ರದ ಕುರಿತು ಬರೆದ ಲೇಖನದಲ್ಲಿ, ಗಾಂಧಿ ನಾಯಕತ್ವದ ಪ್ರಸ್ತುತ ಸ್ವಾತಂತ್ರ್ಯ ಹೋರಾಟದ 30 ವರ್ಷಗಳು ಇತಿಹಾಸದ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ಅವಧಿಯಾಗಿದೆ. ಪ್ರಾಚೀನ ಹಾಗೂ ಆಧುನಿಕತೆ ಬಹು ಭದ್ರವಾಗಿ ಬೆಸೆದುಕೊಂಡಿರುವ ಕೊಂಡಿಕಾಲ ಅದು.

ಆ ಕಾಲದಲ್ಲಿ ಗಾಂಧಿ ಮಾರ್ಗದರ್ಶನ ದೊರೆಯದೆ ಹೋಗಿದ್ದರೆ ಈ ದೇಶ ಈಗಿರುವ ಹಾಗೆ ಉಳಿಯುತ್ತಿರಲಿಲ್ಲ. ನಿಶ್ಚಿತವಾಗಿ ಒಂದೋ ಪಾಕಿಸ್ತಾನ ಮಾದರಿಯಂತೆ ಭಾರತ ಹಿಂದೂ ರಾಷ್ಟ್ರವಾಗಿರುತ್ತಿತ್ತು, ಅಥವಾ ಆಧುನಿಕ ಚೀನಾದ ಹಾಗೆ, ತನ್ನ ಪೂರ್ತಿ ಪರಂಪರೆಗಳನ್ನು ಪೂರ್ಣ ತುಂಡರಸಿ ಆಧುನಿಕವನ್ನಪ್ಪಿಕೊಂಡಿರುತ್ತಿತ್ತು. ಆದರೆ ಭಾರತ ಹಾಗಾಗದೆ ಎರಡೂ ದಾರಿ ಬಿಟ್ಟು ತನ್ನದೆ ಹಾದಿಯಲ್ಲಿ ಬೆಳೆದು ನಿಂತಿರುವುದು ಮಹತ್ವವಾದ ಅಂಶವಾಗಿದೆ.


ಈ ಮಾತನ್ನು ಪ್ರಸ್ತಾಪಿಸಲು ಪ್ರಮುಖ ಕಾರಣ ಇಂದು ಗಾಂಧಿಯ ತತ್ವಗಳಾಗಲಿ, ಗ್ರಾಮಸ್ವರಾಜ್ಯದ ಕಲ್ಪನೆಯಾಗಲಿ ಯಾವುದೂ ಯಾರಿಗೂ ಬೇಕಾಗಿಲ್ಲ. ಅದರಲ್ಲೂ ಗಾಂಧಿ,ಗಾಂಧಿ ಎಂದು ಜಪಿಸುತ್ತಿದ್ದ ಕಾಂಗ್ರೆಸ್ಸೂ ಕೂಡ ನೈತಿಕ ಬಲವನ್ನು ಕಳೆದುಕೊಂಡಿದೆ. ಶಾಂತಿಮಂತ್ರ ಜಪಿಸಿದ್ದ ಗಾಂಧಿ ನಾಡು ಗುಜರಾತ್‌‌ನಲ್ಲಿ ರಕ್ತದೋಕುಳಿ ಹರಿದಿದೆ.

ಯಾವ ಹಿಂದು-ಮುಸ್ಲಿಂರ ಏಕತೆಗಾಗಿ ಹೋರಾಡಿ ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದರೊ, ಅಂತಹ ಗಾಂಧಿಯ ಅಹಿಂಸಾ ತತ್ವ ಗುಜರಾತ್‌‌ನಲ್ಲಿ ಗಾಳಿಗೆ ತೂರಿಹೋಗಿದೆ. ಗಾಂಧಿಯ ಒಂದೇ ಒಂದು ಕರೆಗೆ ಲಕ್ಷಾಂತರ ಜನ ಒಗೊಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ್ದರು, ದೇಶಾದ್ಯಂತ ಸಂಚರಿಸಿ ಪ್ರತಿಯೊಂದು ಸ್ಥಿತಿಗತಿಯ ಕುರಿತು ಕೂಲಂಕಷ ಅಧ್ಯಯನ ನಡೆಸಿದ್ದ ಗಾಂಧಿ ಇಂದು ಯುವ ಮನಸ್ಸಿನಿಂದ ದೂರವಾಗಿದ್ದಾರೆ.

ಗಾಂಧಿ ನುಡಿದಂತೆ ಬದುಕಿನಲ್ಲಿ ನಡೆದ ಸಾಧಕ, ಆದರೆ ನಮ್ಮ ರಾಜಕೀಯ ಪುಡಾರಿಗಳಿಗೆ ಅಂತಹ ಮನೋಬಲ ಇದೆಯೇ, ಕೇವಲ ಅಧಿಕಾರದ ಗದ್ದುಗೆಗಾಗಿ ಗಾಂಧಿ, ಅಹಿಂಸೆ, ಜಾತ್ಯತೀತ ಎಂದೆಲ್ಲ ಬೊಗಳೆ ಬಿಟ್ಟು ಕುರ್ಚಿಯನ್ನು ಹಿಡಿದರೆ ವಿನಃ ಬೇರೆನೂ ಆಗಿಲ್ಲ. ಇತ್ತೀಚೆಗೆ ಆಂಧ್ರದ ತಾಡಂಪಲ್ಲಿಗುಡಂ ಪಟ್ಟಣದ ಬಿಜೆಪಿ ಮುಖಂಡ ಆರ್‌‌ಎಸ್‌‌ಎಸ್ ನಾಯಕ ಶ್ಯಾಂಪ್ರಸಾದ್ ಮುಖರ್ಜಿ ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು ಸ್ಥಾಪಿಸಿರುವುದು ಗಾಂಧಿ ಬಗ್ಗೆ ಇಷ್ಟೆಲ್ಲಾ ಪೀಠಿಕೆಗೆ ಕಾರಣ.

ಕೋಮುದ್ವೇಷದ ಜ್ವಾಲಾಗ್ನಿ ಮಹಾತ್ಮ ಗಾಂಧಿಯನ್ನು ನಾಥೂರಾಂ ಗೋಡ್ಸೆಯ ಮೂಲಕ ಬಲಿ ತೆಗೆದುಕೊಂಡಿತ್ತು. ಇಂದು ಯಾರು ಆದರ್ಶವಾಗಬೇಕಿತ್ತು. ಅವರಾರು ಮಾದರಿಯಾಗುತ್ತಿಲ್ಲ. ಭಯೋತ್ಪಾದಕ, ಪಂಜಾಬ್ ಪ್ರತ್ಯೇಕತವಾದಿ ಖಾಲ್ಸಾ ಉಗ್ರಗಾಮಿ ಸಂಘಟನೆಯ ಬಿಂದ್ರನ್‌‌ವಾಲೆಯನ್ನು ಸಿಖ್ ಸಮುದಾಯ ವೀರತ್ವ ಏರಿಸಿದೆ, ಅದರಂತೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಂತಕರಾದ ಸತ್ವಂತ್ ಸಿಂಗ್ ಮತ್ತು ಕೇಹರ್ ಸಿಂಗ್‌‌ಗೂ ಕೂಡ ಸಿಖ್ ಸಮುದಾಯ ವೀರಪುರುಷರು ಎಂಬ ಪಟ್ಟ ನೀಡಿ ಉನ್ನತ ಮಟ್ಟಕ್ಕೇರಿಸಿದೆ.

ಅದೇ ತೆರನಾಗಿ ಪೆರಿಯಾರ್, ದ್ರಾವಿಡ್ ಚಳವಳಿ ಎಂದೆಲ್ಲ ಕ್ರಾಂತಿ ಎಬ್ಬಿಸಿದ್ದ ತಮಿಳುನಾಡಿನ ಜನ ಚಿತ್ರನಟಿ ಖುಷ್ಬೂ, ಜಯಲಲಿತಾ ಅವರಂತವರಿಗೆ ದೇವಾಲಯ ಕಟ್ಟಿವೆ. ವಿಪರ್ಯಾಸ ಎಂಬಂತೆ ತಮಿಳುನಾಡಿನ ಜನರಿಂದ ಆರಾಧಿಸಲ್ಪಟ್ಟ ಖುಷ್ಬೂಗೆ, ಲೈಂಗಿಕತೆ ಬಗ್ಗೆ ಹೇಳಿಕೆ ನೀಡಿದ್ದಕ್ಕೆ, ದೇವಾಲಯದಲ್ಲಿ ಪಾದರಕ್ಷೆ ಹಾಕಿ ಪ್ರವೇಶಿಸಿದ್ದಕ್ಕೆ ಕೋರ್ಟ್ ಮೆಟ್ಟಿಲು ಹತ್ತಿಸಿದ್ದಾರೆ.ಎರಡು ದಶಕಗಳ ಕಾಲ ಕಾಡಿನ ರಾಜನಾಗಿ ಮೆರೆದ ನರಹಂತಕ ವೀರಪ್ಪನ್‌‌ನ್ನು ಗೋಪಿನಾಥಂನಲ್ಲಿ ಪ್ರತಿಮೆ ಪೂಜಿಸುತ್ತಿದ್ದಾರೆ.

ಬಹುಶಃ ಇನ್ನು ಮುಂದೆ ಈ ಪಟ್ಟಿಯಲ್ಲಿ ಉಗ್ರಗಾಮಿ ಸಂಘಟನೆಯ ಒಸಾಮ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ, ಎಲ್‌‌ಟಿಟಿಇಯ ಪ್ರಭಾಕರನ್....ಹೀಗೆ ಎಂಥೆಂತಹ ಮಹಾನುಭಾವರ ಸೇರ್ಪಡೆಯಾಗಲಿಕ್ಕಿದೆಯೋ ಹೇ ರಾಮ್.....!!!....