Friday, October 26, 2007

ಆದರ್ಶ ಸಮಾಜದ ಬೆನ್ನೇರಿ ಹೊರಟವರು....



ಇತ್ತೀಚೆಗೆ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರ ಸಹೋದರ, ನಟ ಪವನ್ ಕಲ್ಯಾಣ್ ಅವರು ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ತಮ್ಮ ರಿವಾಲ್ವರ್ ಅನ್ನು ನೀಡಿದ ಬಳಿಕ, ತಾನು ಬಡಜನರ ರಕ್ಷಣೆಗಾಗಿ 'ಜನಸಾಮಾನ್ಯರ ರಕ್ಷಣಾ ಸಂಘಟನೆ'ಯನ್ನು ಹುಟ್ಟು ಹಾಕುತ್ತಿರುವುದಾಗಿ ಘೋಷಿಸಿದ್ದರು.

ನೂರಾರು ಬೆಂಬಲಿಗರೊಂದಿಗೆ ಹೈದರಾಬಾದ್ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ಆಗಮಿಸಿದ್ದ ಪವನ್ ಕಲ್ಯಾಣ್ ತುಂಬಾ ನಾಟಕೀಯವಾಗಿ ತನ್ನ ರಿವಾಲ್ವರ್, ಅದಕ್ಕೆ ಸಂಬಂಧಪಟ್ಟ ದಾಖಲಾತಿಯನ್ನು ಆರಕ್ಷಕರ ವಶ ಒಪ್ಪಿಸಿ ತನ್ನ ನಿಲುವಿನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದರು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಇಂತಹ ಸಂಘಟನೆಯನ್ನು ಸ್ಥಾಪಿಸುತ್ತಿದ್ದು, ಅದಕ್ಕಾಗಿ ಒಂದು ಕೋಟಿ ರೂಪಾಯಿ ವಂತಿಗೆ ನೀಡುತ್ತಿರುವುದಾಗಿ ತಿಳಿಸಿದ್ದರು.

ಮದರಾಸ್ ರೈಫಲ್ ಕ್ಲಬ್ ಸದಸ್ಯರಾಗಿರುವ ಪವನ್ ಕಲ್ಯಾಣ್, 1998ರಲ್ಲಿ ರಿವಾಲ್ವರ್ ಲೆಸೆನ್ಸ್ ಪಡೆದಿದ್ದರು.ಇದೀಗ ತನಗೆ ಅದರ ಅಗತ್ಯ ಇಲ್ಲ ಎಂದು ಹೇಳಿದ್ದರು.ಪವನ್ ಕಲ್ಯಾಣ್ ಅವರ ಹೇಳಿಕೆಯನ್ನು ಗಮನಿಸಿದ ಬಳಿಕ, ನೆನಪಿಗೆ ಬಂದಿದ್ದೆ ಕರ್ನಾಟಕದಲ್ಲಿ ಬಾಂಬ್ ಎಸೈ ಎಂದೇ ಹೆಸರು ಪಡೆದ ಗಿರೀಶ್‌ ಲೋಕನಾಥ್‌ ಮಟ್ಟೆಣ್ಣವರ್‌.

ಪವನ್ ನಟರಾದರೇ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಟ್ಟೆಣ್ಣ , ಭ್ರಷ್ಟಾಚಾರದ ವಿರುದ್ಧ, ಜನರ ಹಿತರಕ್ಷಣೆಗಾಗಿ ಶಾಸಕರ ಭವನದಲ್ಲಿ ಬಾಂಬ್ ಇಡುವ ಮೂಲಕ ಕರ್ನಾಟಕದಾದ್ಯಂತ ಒಂದೇ ದಿನದಲ್ಲಿ ಮನೆಮಾತಾಗಿದ್ದರು. ಆ ಸಂದರ್ಭದಲ್ಲಿ ಹಾಯ್ ಬೆಂಗಳೂರ್ ಪತ್ರಿಕೆ ಆತನಿಗೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಬಳಿಕ ಮಟ್ಟೆಣ್ಣ ಭ್ರಷ್ಟಾಚಾರ ವಿರೋಧಿ ವೇದಿಕೆ ಅಂತ ಮಾಡಿಕೊಂಡು ಊರನ್ನ ಸುತ್ತ ತೊಡಗಿದರು, ಹಾಗೆ ಅವರು ಭಾರತೀಯ ಜನತಾ ಪಕ್ಷ ಸೇರುವುದಾಗಿ ಘೋಷಿಸಿದ್ದರು.

ಕ್ರಾಂತಿ ಮಾಡಲು ಹೊರಟ ಮಟ್ಟೆಣ್ಣ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ರಾಜಕಾರಣ, ರಾಜಕೀಯ ನಾಯಕರು ಅದೆಷ್ಟು ಪರಿಶುದ್ಧರಾಗಿದ್ದಾರೆ ಎಂಬುದನ್ನು ವಿವರಿಸಬೇಕಾದ ಅಗತ್ಯ ಇಲ್ಲ. ಅವರು ಪಕ್ಷ ಮೂಲಕ ಅದ್ಯಾವ ಕ್ರಾಂತಿ ಮಾಡುತ್ತಾರೋ. ಅದೇ ರೀತಿ ಆಂಧ್ರದಲ್ಲಿ ಪವನ್ ಕಲ್ಯಾಣ್ ಕೂಡ ಅಂತಹ ನಿರ್ಧಾರಕ್ಕೆ ಗಂಟು ಬಿದ್ದಿದ್ದಾರೆ. ತೆಲುಗು ಸಿನಿಮಾ ರಂಗದಲ್ಲಿ ಕಳೆದ 30 ವರ್ಷಗಳಿಂದ ಅಭಿನಯಿಸಿ ಖ್ಯಾತಿ ಗಳಿಸಿದ ಚಿರಂಜೀವಿ ಹಣ, ಯಶಸ್ವಿ ಎಲ್ಲವೂ ಗಳಿಸಿದ್ದಾರೆ.

ಆದರೆ ಸಹೋದರ ಪವನ್ ನಟರಾಗಿ, ಸಾಮಾಜಿಕ ಸೇವಕನಾಗಿ ಆಗಲಿ ಮುಂಚೂಣಿಯಲ್ಲಿದ್ದ ವ್ಯಕ್ತಿಯಾಗಿರಲಿಲ್ಲ. ಇದೀಗ ದಿಢೀರನೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಟೊಂಕ ಕಟ್ಟಿ ನಿಲ್ಲುವುದಾಗಿ ಘೋಷಿಸಿದ್ದಾರೆ.ಪ್ರಪಂಚದಲ್ಲಿ ಕ್ರಾಂತಿಗಳಿಗೆ ಯಾವುದೇ ಬರ ಇಲ್ಲ. ಕರ್ನಾಟಕದಲ್ಲಿ 12ನೇ ಶತಮಾನದ ಬಸವಣ್ಣನವರ ಕ್ರಾಂತಿಯೇ ಐತಿಹಾಸಿಕವಾಗಿ ಪ್ರಮುಖವಾದದ್ದು. ಅದರ ಬಳಿಕ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿನ ಚಳವಳಿಗಳು ಯಶಸ್ವಿಯಾಗಿದ್ದವು.

ಆದರೆ ನಂತರದ ಲೋಹಿಯಾ, ಜೈಪ್ರಕಾಶ್ ನಾರಾಯಣ್, ಮಾವೋವಾದಿ, ರೈತ, ದಲಿತ, ನಕ್ಸಲ್ ಚಳವಳಿಗಳೆಲ್ಲ ಇಂದು ಏನಾಗಿವೆ ಎಂಬುದು ನಮ್ಮ ಕಣ್ಣ ಮುಂದಿದೆ. ಹಾಗೇ ಜನರ ಕಲ್ಯಾಣಕ್ಕಾಗಿ ಹುಟ್ಟಿಕೊಂಡ ಚಳವಳಿಗಳ ಸಂಘಟನೆಗಳೇ ಇವತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಒಡೆದು ಬೇರೆ, ಬೇರೆ ಹೆಸರಿನ ಸಂಘಟನೆಗಳಾಗಿ ಜನ್ಮ ತಳೆದಿವೆ.....

Sunday, October 21, 2007

ದತ್ತ ಪೀಠ ವಿವಾದದ ಸುತ್ತ


ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯಲ್ಲಿ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಸೇರಿದಂತೆ ಸಂಘ ಪರಿವಾರ ಮತ್ತೆ ಬಿಗುಪಟ್ಟು ಹಿಡಿದಿದೆ.ಆದರೆ ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡಬಾರದು ಎಂದು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ಫರ್ಮಾನು ಹೊರಡಿಸಿದ್ದಾರೆ.

ದೇಶದ ಶ್ರದ್ಧಾ ಕೇಂದ್ರಗಳು, ಜಾತಿ, ಒಲೈಕೆ, ಹಿಂದುತ್ವದಂತಹ ವಿಷಯಗಳು 'ರಾಜಕೀಯ ಪಕ್ಷ' ಗಳ ಓಟ್ ಬ್ಯಾಂಕ್‌ನ ಪ್ರಮುಖ 'ದಾಳ' ವಾಗಿ ಬಿಟ್ಟಿವೆ ಎನ್ನುವುದಕ್ಕೆ ನಡೆಯುತ್ತಿರುವ ಘಟನೆಗಳು ಮತ್ತಷ್ಟು ಪುಷ್ಠಿ ನೀಡುತ್ತಿವೆ. ಬಾಬಾಬುಡನ್ ಗಿರಿ ಬಡ ಹಿಂದು ಮತ್ತು ಮುಸ್ಲಿಮರ ಧಾರ್ಮಿಕ ಕೇಂದ್ರವಾಗಿತ್ತು.ಹಿಂದು ಧರ್ಮದ ಕಂದಾಚಾರಗಳ ವಿರುದ್ಧ ಸಿಡಿದೆದ್ದ ಚಾರುವಾಕರಂತೆ,ಮುಸ್ಲಿಂ ಕಂದಾಚಾರಗಳನ್ನು ವಿರೋಧಿಸಿದ ಸೂಫಿ ಪಂಥದ ಸಮಾಗಮ ಕ್ಷೇತ್ರ ಇದಾಗಿತ್ತು.

ಇದನ್ನು ಬಡ ಹಿಂದು-ಮುಸ್ಲಿಮರು ಬೇರೆ, ಬೇರೆ ಹೆಸರಲ್ಲಿ ಆರಾಧಿಸುತ್ತಾ,ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ನಿರಾತಂಕವಾಗಿ ಪೂಜೆ,ವಿಧಿವಿಧಾನಗಳು ನಡೆಯುತ್ತಿದ್ದವು.ಮುಸ್ಲಿಮರು ನಾಸಿರುದ್ದೀನ್ ಎಂದು ಅಡ್ಡಬಿದ್ದರೆ, ಹಿಂದುಗಳು ನಾಗನಾಥ ಎಂದು ಆರಾಧಿಸುತ್ತಿದ್ದರು, ಹಿಂದು-ಮುಸ್ಲಿಂ ಎರಡರಲ್ಲೂ ಭೇದ-ಭಾವ,ಕಂದಾಚಾರಾ, ಅಸ್ಪ್ರಶ್ಯತೆಗಳಿಂದ ಕಂಗೆಟ್ಟ ಜಾತಿಗಳಾಗಿದ್ದವು.

ಅಂತಹ ಸಂದರ್ಭದಲ್ಲಿ ಸಹಬಾಳ್ವೆಯನ್ನು ಕಲಿಸಿಕೊಟ್ಟಿದ್ದ ಸೂಫಿ ಪಂಥ 12ನೇ ಶತಮಾನದ ಬಸವಣ್ಣನವರ ಶರಣ ಸಂಪ್ರದಾಯದಂತೆ, ಬಡ ಜನತೆ, ಜಾತಿ-ಧರ್ಮಗಳನ್ನು ಮೀರಿ ಬಾಬಾ ಬುಡನ್‌ಗಿರಿಯಲ್ಲಿ ನೆಲೆಸಿದ್ದ ದಾದಾ ಹಯಾತ್ ಮೀರ್ ಖಲಂದರ್‌ನನ್ನು ದತ್ತಾತ್ತ್ರೇಯನೆಂದೂ, ಬಾಬಾ ಬುಡನ್ ಎಂದೂ ನಂಬಿಕೊಂಡು ಪೂಜಿಸುತ್ತಿದ್ದರು.ಆತ ಮರಣವನ್ನಪ್ಪಿದ ಮೇಲೂ ಅದೇ ಸಂಪ್ರದಾಯ ಮುಂದುವರಿಯಿತು.

ಸುಮಾರು 90ರ ದಶಕದವರೆಗೆ ಈ ಶ್ರದ್ಧಾ ಕೇಂದ್ರಗಳ ಬಗೆಗಿನ ವಿವಾದದ ಪ್ರಮಾಣ ಕಡಿಮೆಯಾಗಿತ್ತು. 1992ರ ಬಾಬರ್ v/s ರಾಮನ ವಿವಾದ ಮತ್ತು ಮಸೀದಿ ಧ್ವಂಸದ ಘಟನೆ ಎಲ್ಲಾ ಅನಾಹುತಗಳಿಗೂ ಮೂಲವಾಯಿತು. ಅವೆಲ್ಲ ರಾಜಕೀಯಗೊಂಡ ಮೇಲೆ ಚುನಾವಣಾ ವಿಷಯಗಳಾಗಿ ಜನರ ಸೌಹಾರ್ದತೆಯನ್ನೇ ಬಲಿ ತೆಗೆದುಕೊಂಡು ಬಿಟ್ಟವು. ಕೋಮು ವಿಷ ಜ್ವಾಲೆ, ಓಲೈಕೆಯ ರಾಜಕಾರಣದಿಂದಾಗಿ ಇಂದು ಮಧುರಾ, ಕಾಶಿ, ಅಯೋಧ್ಯೆ, ತಾಜ್ ಮಹಲ್, ಕುತುಬ್ ಮಿನಾರ್ ಸೇರಿದಂತೆ ಐತಿಹಾಸಿಕ, ಧಾರ್ಮಿಕ ತಾಣಗಳೆಲ್ಲವೂ ವಿವಾದದ ಕೇಂದ್ರಗಳಾಗಿವೆ.

ದತ್ತ ಪೀಠದ ವಿವಾದವೀಗ ಮತ್ತೆ ಚುನಾವಣೆಯ ಅಜೆಂಡವಾದಂತಿದೆ. ಕಳೆದ ಚುನಾವಣೆಯಲ್ಲಿ ದತ್ತ ದೇವರ ಕೃಪೆಯಿಂದ ಬಿಜೆಪಿ ಅಧಿಕ ಸೀಟುಗಳನ್ನು ಪಡೆಯುವಲ್ಲಿ ಸಹಕಾರಿಯಾಗಿತ್ತು. ಜಾತಿ-ಮತ, ಭೇದ-ಭಾವ ತೊಡೆದು ಸೌಹಾರ್ದತೆಯ ಕೇಂದ್ರವಾಗಿದ್ದ ಬಾಬಾಬುಡನ್ ಗಿರಿಯ ಸುತ್ತ ಈಗ ಪೊಲೀಸ್ ಸರ್ಪಗಾವಲು. ನಿರಾತಂಕವಾಗಿ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದ ಬಡ ಹಿಂದು - ಮುಸ್ಲಿಂ ಭಕ್ತರಲ್ಲಿ ಇದೀಗ ತುಂಬಿರುವುದು ಆತಂಕ ಮಾತ್ರ.