Sunday, June 29, 2008

ರಜನೀಶ್‌‌ರ ಶೂನ್ಯ ನಾವೆ.....

ಓಶೋ ರಜನೀಶ್ ಮಾತು ಎಷ್ಟು ಸುಂದರವೋ, ಅವರ ತರ್ಕಬದ್ದವಾದ ಬರಹವೂ ಅಷ್ಟೇ ಆಪ್ತವಾಗುತ್ತವೆ. ಆದರೆ ರಜನೀಶ್ ಬಗ್ಗೆ ಒಂದು ವರ್ಗ ತೀವ್ರವಾಗಿ ವಿರೋಧಿಸುತ್ತದೆ, ಆತ ಸೆಕ್ಸ್ ಗುರು, ಲೈಂಗಿಕತೆ ಬಗ್ಗೆ ಮಾತನಾಡುತ್ತಾನೆ ಹೀಗೆ ಆರೋಪಗಳು ಪುಂಖಾನುಪುಂಖವಾಗಿ ಹೊರಬೀಳುತ್ತವೆ. ಆದರೆ ರಜನೀಶ್ ರಾಜಕಾರಣಿ, ಪಂಡಿತ, ಪುರೋಹಿತ, ಮುಲ್ಲಾ, ಪಾದ್ರಿ ಹೀಗೆ ಎಲ್ಲದರ ಬಗ್ಗೆಯೂ ಟೀಕಿಸಿ ಮಾತನಾಡಿದ್ದಾರೆ.

ಯಾವುದೇ ಕಟ್ಟುಪಾಡಿಗೆ ಒಳಗಾಗಿ ಮತಾಂಧರಂತೆ, ಒಂದು ವರ್ಗದ ವಕ್ತಾರರಂತೆ ಅವರು ಮಾತನಾಡಿಲ್ಲ ಆ ಕಾರಣಕ್ಕಾಗಿಯೇ ಅವರು ಇಷ್ಟವಾಗುತ್ತಾರೆ. ರಜನೀಶ್ ಚಾಂಗ್ ತ್ಸು ಅವರ ಹಿನ್ನೆಲೆಯನ್ನಿಟ್ಟುಕೊಂಡು ಮಾತನಾಡಿದ ಶೂನ್ಯ ನಾವೆಯಲ್ಲಿನ ಒಂದು ಅಂಶವನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಯಾಕೆಂದರೆ ರಜನೀಶ್ ಯಾವುದರ ಬಗ್ಗೆಯೇ ಮಾತನಾಡಲಿ, ಅದು ನಮ್ಮನ್ನು ಅಷ್ಟು ಆಕರ್ಷಿಸುತ್ತದೆ. ಇವತ್ತಿನ ಸ್ಥಿತಿಗತಿ, ನಮ್ಮ ಕಾರ್ಯದ ಒತ್ತಡ, ನಾವು ಆ ಸನ್ನಿವೇಶದ ನಡುವೆ ಸಿಕ್ಕಿಬೀಳುತ್ತಿರುವುದನ್ನು ನೋಡಿದರೆ, ರಜನೀಶ್ ಅವರು ಈ ಮಾತು ಸತ್ಯ ಎನ್ನಿಸುತ್ತದೆ....

ಅವರ ಪ್ರಕಾರ ಮನುಷ್ಯ ಅನುಪಯುಕ್ತನಾಗಿರಬೇಕು, ಅರೇ ಇದೇನಪ್ಪಾ, ಎಲ್ಲರೂ ಕ್ರಿಯಾಶೀಲರಾಗಿ ಅಂದರೆ ಈತ ರಜನೀಶರ ಅನುಪಯುಕ್ತರಾಗಿರಿಯನ್ನೇ ಬಹಳ ಖುಷಿಕೊಡುವ ವಿಚಾರ ಎಂದು ಬರೆಯುತ್ತಿದ್ದಾರಲ್ಲಪ್ಪ ಅಂತ ಹುಬ್ಬುಗಟ್ಟಿಕ್ಕಬೇಡಿ. ಅದನ್ನು ಅವರು ಒಂದು ಕಥೆಯ ಮೂಲಕ ವಿವರಿಸುತ್ತಾರೆ. ಒಂದು ನಗರದಲ್ಲಿನ ಯುವಕರನ್ನು ಬಲಾತ್ಕಾರವಾಗಿ ಸೇನೆಗೆ ಸೇರಿಸಲ್ಪಟ್ಟಿದ್ದರಂತೆ. ಏಕೆಂದರೆ ಅವರೆಲ್ಲರೂ ಉಪಯುಕ್ತರು. ಆದರೆ ಒಬ್ಬ ಗೂನು ಬೆನ್ನಿನವನನ್ನು ಮಾತ್ರ ಸೇರಿಸಿಕೊಂಡಿಲ್ಲ.

ಈತ ಅನುಪಯುಕ್ತ ಎಂದು ಬಿಟ್ಟುಬಿಟ್ಟಿದ್ದರು. ನೀವು ಗೂನು ಬೆನ್ನಿನವನಂತಿರಿ, ಏಕೆಂದರೆ ಇವರ ದೃಷ್ಟಿಯಲ್ಲಿ ಉಪಯುಕ್ತರು ಸದಾ ಗೊಂದಲಕ್ಕೆ ಒಳಗಾಗುವವರು. ಜಗತ್ತು ನಿಮ್ಮನ್ನು ಬಳಸಿಕೊಳ್ಳುವುದು, ಪ್ರತಿಯೊಬ್ಬರು ನಿಮ್ಮನ್ನು ಉಪಯೋಗಿಸಲು ಸಿದ್ದರಾಗಿರುವರು, ಹಸ್ತಕ್ಷೇಪ ಮಾಡುತ್ತಲೇ ಇರುತ್ತಾರೆ, ನಿಮ್ಮನ್ನಾಳಲು ಸದಾ ಸಿದ್ದರಾಗಿರುತ್ತಾರೆ. ನೀವು ಅಪ್ರಯೋಜಕರಾಗಿದ್ದಾಗ ನಿಮ್ಮನ್ನು ಜನ ಮರೆತೇ ಬಿಡುತ್ತಾರೆ.

ನಿಮ್ಮನ್ನು ನಿಮ್ಮ ಮೌನದಲ್ಲಿರಲು ಬಿಡುವರು. ಅವರು ನಿಮ್ಮ ಬಗ್ಗೆ ಚಿಂತೆ ಮಾಡುವುದಿಲ್ಲ. ಆ ಕಾರಣಕ್ಕಾಗಿಯೇ ರಜನೀಶ್ ಆ ಮಾತನ್ನು ಬಹಳ ಒತ್ತಿ ಹೇಳಿದ್ದಾರೆ. ಎಚ್ಚರಿಕೆಯಿಂದಿರಿ ಮತ್ತು ಬಲು ಉಪಯುಕ್ತರಾಗದಿರಿ. ಹೀಗಿರದಿದ್ದರೆ ಎಲ್ಲರೂ ನಿಮ್ಮನ್ನು ಶೋಷಣೆ ಮಾಡುವರು. ನಂತರ ಇವರು ನಿಮ್ಮನ್ನು ನಿರ್ವಹಿಸುವರು, ನಿಯಂತ್ರಿಸುವರು, ಮತ್ತಾಗ ನೀವು ಗೊಂದಲಕ್ಕೆ ಒಳಗಾಗುವಿರಿ.

ಯಾಕೆಂದರೆ ನೀವೀಗ ರಾಜಕೀಯದಲ್ಲಿನ ದೊಂಬರಾಟವನ್ನು ಗಮನಿಸಿ ರಜನೀಶ್ ಮಾತುಗಳು ಸತ್ಯ ಎನಿಸುತ್ತದೆ. ಅಲ್ಲಿ 20-30ವರ್ಷ ಕತ್ತೆ (? ) ದುಡಿದ ಹಾಗೇ ದುಡಿದು ತಮಗೆ ಉನ್ನತ ಹುದ್ದೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತಾರೆ, ಆದರೆ ಕೊನೆಗೆ ಅವರನ್ನು ಹೇಳದೇ ಕೇಳದೆ ಒಂದೋ (ಸಿಂಧ್ಯಾ ತರ, ಅವರೇನೂ ಬಿಎಸ್ಪಿಗಾಗಿ ಹೆಚ್ಚು ದುಡಿಯಲಿಲ್ಲ ಬಿಡಿ) ಮೂಲೆಗುಂಪು ಮಾಡುತ್ತಾರೆ, ಇಲ್ಲ ಕಿತ್ತೊಗೆಯುತ್ತಾರೆ.

ಜೆಡಿಎಸ್‌, ಕಾಂಗ್ರೆಸ್, ಬಿಜೆಪಿ ಹೀಗೆ ಮೂಲೆಗುಂಪು ಮಾಡಿದ ಉದಾಹರಣೆ ಬಹಳಷ್ಟಿದೆ. ಆದರೆ ನಿರುಪಯುಕ್ತತೆಯಲ್ಲಿ ಅದರದ್ದೇ ಆದ ಉಪಯುಕ್ತತತೆ ಇದೆ ಎಂಬುದು ರಜನೀಶ್ ಅಭಿಮತ. ಇದೊಂದು ಜೀವಂತ ಅಂಶ ನೀವಿದನ್ನು ಪೂರ್ಣವಾಗಿ ಬಿಟ್ಟು ಬಿಟ್ಟರೆ ಆಗ ಯಾವುದೂ ಸಹ ಉಪಯುಕ್ತವಲ್ಲ, ನಿಷ್ಪ್ರಯೋಜಕ ವಸ್ತುಗಳು ಇರುವುದರಿಂದಲೇ ಉಪಯುಕ್ತ ವಸ್ತುಗಳು ಇರುವುದು.ಆದರೆ ಜಗತ್ತಿನಲ್ಲಿ ಏನಾಗುತ್ತಿದೆ ನೋಡಿ, ವಿನೋದದ ಎಲ್ಲಾ ಚಟುವಟಿಕೆಗಳನ್ನೂ ನಾವು ಇಲ್ಲವಾಗಿಸಿದ್ದೇವೆ.

ಏಕೆಂದರೆ ನಮ್ಮ ಅನಿಸಿಕೆ, ಆಗ ನಮ್ಮಲ್ಲಿಯ ಶಕ್ತಿಯನ್ನು ಪೂರ್ತಿ ಉಪಯೋಗಕರವಾದುದಕ್ಕೆ ವಿನಿಯೋಗಿಸಬಹುದು ಎಂದು. ಆದರೆ ಕೆಲಸವಿಂದು ಬೇಸರ ತರುವಂತಾಗಿದೆ, ನಾವಿಂದು ವಿರುದ್ಧ ಧ್ರುವದೆಡೆಗೆ ಸಾಗಲೇಬೇಕಾಗಿದೆ...ನಿಮ್ಮ ಸುತ್ತಲಿನ ಯಶಸ್ವಿ ವ್ಯಕ್ತಿಗಳನ್ನು ನೋಡಿ, ರಾಜಕಾರಣಿಗಳು, ಧನವಂತರು, ಬೃಹತ್ ಕೈಗಾರಿಕೋದ್ಯಮಿಗಳನ್ನು ಏನಾಗುತ್ತಿದೆ ಅವರಿಗೆ? ಅವರು ಸಂಗ್ರಹಿಸಿರುವ ವಸ್ತುಗಳನ್ನು ನೋಡಬೇಡಿ, ನೇರವಾಗಿ ಅವರನ್ನು ನೋಡಿ.

ನೀವೇನಾದರು ಅವರ ಬಳಿ ಇರುವ ವಸ್ತುಗಳನ್ನು ನೋಡಿದರೆ ಮೋಸ ಹೋಗುವಿರಿ, ವಸ್ತುಗಳಿಗೆ ಅಲ್ಸರ್ ಬರುವುದಿಲ್ಲ, ಕಾರುಗ ಳಿಗೆ ಹೃದಯಾಘಾತವಾಗುವುದಿಲ್ಲ, ಮನೆಗಳನ್ನು ಆಸ್ಪತ್ರೆಗೆ ಸೇರಿಸುವುದಿಲ್ಲ. ಅದಕ್ಕೆ ನೀವು ವಸ್ತುಗಳನ್ನು ನೋಡಬೇಡಿ ಎನ್ನುವ ರಜನೀಶ್, ಈ ವಸ್ತುಗಳ ಮಧ್ಯೆ ಇರುವ ಮನುಷ್ಯನನ್ನು ನೋಡಿ ಎಂದೆನ್ನುತ್ತಾರೆ, ಯಾಕೆಂದರೆ ಆಗ ನಿಮಗೆ ಕಾಣುವುದು ಆತನ ಮತ್ಸರ, ಬಡತನ, ಮುಖವಾಡದ ಬದುಕು, ಆಗ ಭಿಕ್ಷುಕ ಕೂಡ ಈತನಿಗಿಂತ ಮೇಲಾಗಿ ಕಾಣಿಸುತ್ತಾನೆ. ಈತನಿಗಿಂತ ಶ್ರೀಮಂತ ಆತನಾಗುತ್ತಾನೆ. ಬಡವನ ಜೀವನ ಶ್ರೀಮಂತನ ಜೀವನಕ್ಕಿಂತ ಶ್ರೀಮಂತವಾಗಿರುತ್ತದೆ.... ಈಗ ಹೇಳಿ ರಜನೀಶ್ ಮಾತು ಎಲ್ಲೋ ಒಂದೆಡೆ ನಿಜವೆನಿಸುವುದಿಲ್ಲವೇ......

ಎಡಪಕ್ಷಗಳ ''ಎಡ''ಬಿಡಂಗಿತನ....


ಕಾರ್ಮಿಕರ, ರೈತರ, ಶೋಷಿತರ ಧ್ವನಿಯಾಗಿದ್ದ ಕಮ್ಯೂನಿಷ್ಟ್ ಪಕ್ಷ ಯಾವ ಹಾದಿ ಹಿಡಿದಿದೆ. ಅಧಿಕಾರದ ಗದ್ದುಗೆ ಏರಲು ಎಲ್ಲಾ ಪಕ್ಷಗಳಿಗೂ ಒಂದೊಂದು ಅಜೆಂಡಾ ಇದ್ದಂತೆ, ಎಡಪಕ್ಷಗಳು ಕಾರ್ಮಿಕ, ರೈತ ಸಮಸ್ಯೆಗಳ ಅಜೆಂಡಾ ಮುಂದಿಟ್ಟು ಅಧಿಕಾರ ಪಡೆದು ಅದು ಸಾಧಿಸಿದ್ದಾದರು ಏನನ್ನು?. ಸತತವಾಗಿ ಕೆಂಪುಕೋಟೆಯನ್ನು ಭದ್ರಪಡಿಸಿ ಕೊಂಡಿರುವ ಪಶ್ಚಿಮಬಂಗಾಲದಲ್ಲಿ ರೈತರ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಗಮನ ಹರಿಸಿದರೆ, ಎಡಪಕ್ಷಗಳ ತತ್ವ ಸಿದ್ದಾಂತಗಳು ಗಾಳಿಗೆ ತೂರಿ ಹೋಗಿದೆ ಎಂಬುದರಲ್ಲಿ ಯಾವ ಅನುಮಾನವಿಲ್ಲ.
ಜಾಗತೀಕರಣದ ಪ್ರಬಲ ವಿರೋಧಿಯಾಗಿರುವ ಎಡಪಕ್ಷದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಆಧುನಿ ಕತೆಯ ಹರಿಕಾರರಾಗಲು ಹೊರಟಿದ್ದಾರೆ. ತಾವು ಅಭಿವೃದ್ದಿ ವಿರೋಧಿಗಳಲ್ಲ, ಹಳೇ ಸಿದ್ದಾಂತಕ್ಕೆ ಜೋತು ಬಿದ್ದರೆ ಪ್ರಗತಿ ಸಾಧ್ಯವಿಲ್ಲ ಎಂದು ವಿಶ್ಲೇಷಣೆಗಿಳಿದ ಬುದ್ಧದೇವ್, ಪ್ರಗತಿಯ ಹರಿಕಾರರಾಗಲು ಹೋಗಿ ರೈತರ ಜನಸಾಮಾನ್ಯರ ಬದುಕನ್ನು ಬೀದಿಪಾಲು ಮಾಡಿಬಿಟ್ಟಿದ್ದಾರೆ.
ಪಶ್ಚಿಮಬಂಗಾಳದಲ್ಲಿ 1947 ರಿಂದ 2000ವರೆಗೆ ಅಭಿವೃದ್ಧಿ ಹೆಸರಿನಲ್ಲಿ 47ಲಕ್ಷ ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಇದ ರಿಂದ ಸುಮಾರು 70 ಲಕ್ಷ ಜನರು ತೊಂದರೆ ಅನುಭವಿಸುವಂತಾಗಿದೆ. ಇದರಲ್ಲಿ 36ಲಕ್ಷ ಜನ ವಾಸಿಸಲು ಜಾಗವಿಲ್ಲದೆ ಪರದಾಡುವಂತಾದರೆ, 34 ಲಕ್ಷ ಜನ ಹೊಟ್ಟೆಪಾಡಿಗಾಗಿ ಇದ್ದ ಸಾಗುವಳಿ ಭೂಮಿಯನ್ನೂ ಕಿತ್ತುಕೊಂಡಿದ್ದರು! ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಈ ರೀತಿ ಕೈಗಾರಿಕಾ ಹೆಸರಿನಲ್ಲಿ ಭೂಮಿ ಕಳೆದುಕೊಂಡವರು ಸರಾಸರಿ 60ಮಿಲಿಯನ್ ಮಂದಿ!
ಅದರಲ್ಲಿ ಶೇ.10ರಷ್ಟು ಭಾಗ ಪಶ್ಚಿಮಬಂಗಾಳದ ರೈತರು. ಹೀಗೆ ಭೂಮಿ ಕಳೆದುಕೊಂಡವರಲ್ಲಿ ಶೇ.20 ಬುಡಕಟ್ಟು ಜನಾಂಗ, ಶೇ.30 ದಲಿತರು, ಇನ್ನುಳಿದ ಶೇ.20 ಅತ್ಯಂತ ಕಡು ಬಡವರು, ಮೀನು ಹಿಡಿಯುವವರು ಮತ್ತು ಕೂಲಿ ಕಾರ್ಮಿಕರು. ಇವರಾರು ಧ್ವನಿ ಎತ್ತಲು ಶಕ್ತರಾಗದ ಜನ!!
1951-1955ರವರೆಗೆ ನಡೆದ ಅಭಿವೃದ್ದಿ ಕಾರ್ಯದಲ್ಲಿ ಭೂರಹಿತವಾದ ಶೇ.28ರಷ್ಟು ಜನರಿಗೆ ಪುನರ್ವಸತಿ ಕಲ್ಪಿಸಿಕೊಡಲಾಗಿತ್ತು. ಅದರಂತೆ ಒರಿಸ್ಸಾ ಶೇ.33ರಷ್ಟು, ಗೋವಾ ಶೇ.34, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪುನರ್ವಸತಿ ಕಲ್ಪಿಸಿಕೊಟ್ಟ ರಾಜ್ಯ ಪಶ್ಚಿಮಬಂಗಾಳ(ಕೇವಲ ಶೇ.9), ಮತ್ತೊಂದು ರಾಜ್ಯ ಕೇರಳ(ಶೇ.13), ಇವೆರಡೂ ರಾಜ್ಯಗಳು ರೈತರ ಮತ್ತು ಕಾರ್ಮಿಕರ ಪರ ಎಂದು ಅಧಿಕಾರದ ಗದ್ದುಗೆ ಏರಿದ್ದರೂ ಸಹ ಇವರು ರೈತರ ಬಗ್ಗೆ ತೋರಿದ ಕಾಳಜಿ ಎಷ್ಟರ ಮಟ್ಟಿಗೆ ಇದೆ ಎಂಬುದು ಈ ಅಂಕಿ-ಅಂಶಗಳಿಂದ ಸಾಬೀತಾಗುತ್ತದೆ.!! ರೈತರ ಬದುಕಿನ ಬಗ್ಗೆ, ಅವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಪಶ್ಚಿಮಬಂಗಾಳದಲ್ಲಿ ಒತ್ತಡ ಬಿದ್ದಿದ್ದರೆ ಅದು ಮಾನವ ಹಕ್ಕುಗಳ ಕಾರ್ಯಕರ್ತರಿಂದ.
ಸಿಂಗೂರ್‌ನಲ್ಲಿ ಭೂಮಿ ಕಳೆದುಕೊಂಡವರ ರೈತರಿಗೆ ಪುನರ್ವಸತಿ ಕಲ್ಪಿಸಿಕೊಡುವ ಬಗ್ಗೆ ಪಶ್ಚಿಮಬಂಗಾಳ ಸರಕಾರ ಆಶ್ವಾಸನೆ ನೀಡಿದೆ. ಆದರೆ 70 ಲಕ್ಷ ಜನರಿಂದ ಜಾಗ ಕಿತ್ತುಕೊಂಡಿದ್ದರೂ ಸಹ ಅವರ ಹೊಟ್ಟೆಪಾಡಿಗಾಗಲಿ, ಪುನರ್ವಸತಿ ಕುರಿತಾಗಲಿ ಸರಕಾರ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ!.ಪಶ್ಚಿಮಬಂಗಾಳ ಹೆಚ್ಚಿನ ಭೂಮಿಯನ್ನು ವಶಪಡಿಸಿಕೊಳ್ಳುವ ಮೂಲಕ ಖಾಸಗಿ ಬಂಡವಾಳ ಹೂಡಿಕೆದಾರರಿಗೆ ಅವಕಾಶ ಮಾಡಿಕೊಡುತ್ತಿದೆ ವಿನಃ ಜನಸಾಮಾನ್ಯರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಸುಮಾರು 250 ರೈತರು ಬೆಳೆದಿರುವ 997 ಹೆಕ್ಟೇರ್ ಕೃಷಿ ಭೂಮಿಯನ್ನು ಸಿಂಗೂರ್‌ನಲ್ಲಿ ವಶಪಡಿಸಿಕೊಂಡಿತ್ತು. ಆದರೆ ಆ ಭೂಮಿಯನ್ನು ನೋಂದಾಯಿಸಿರಲಿಲ್ಲ, ಆ ನಿಟ್ಟಿನಲ್ಲಿ ಅವರಾರಿಗೂ ಪರಿಹಾರವೂ ಇಲ್ಲ, ಪುನರ್ವಸತಿಗೆ ಅವಕಾಶವೂ ಇಲ್ಲ. ಹೀಗೆ ಕೃಷಿ ಭೂಮಿ ಕಳೆದುಕೊಂಡ ಒಂದು ಸಾವಿರ ಕುಟುಂಬಗಳು ವಿವಿಧ ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದೆ. ಕೃಷಿ ಮಾಡುತ್ತಿರುವ ರೈತರು ದಿನದ ಸಂಬಳಕ್ಕಾಗಿ ದುಡಿಯುವವರು, ಶೇ.50ಕ್ಕಿಂತಲೂ ಹೆಚ್ಚಿನ ಜನರಿಗೆ ಕೆಲಸವಿಲ್ಲ. ಅವರೆಲ್ಲ ಬಡತನ ರೇಖೆಗಿಂತ ಕೆಳಗಿರುವವರು.
ಹೆಚ್ಚಿನವರು ತಮ್ಮ ಮಕ್ಕಳನ್ನು ಶಾಲೆಯಿಂದ ಬಲವಂತವಾಗಿ ಬಿಡಿಸಿ, ಕೆಲಸ ಮಾಡಲು ಕಳುಹಿಸುತ್ತಿದ್ದಾರೆ. ಅದಕ್ಕಿಂತಲೂ ಆಘಾತಕಾರಿ ಅಂಶ ಆದಾಯ ಗಳಿಕೆಗಾಗಿ ಹೆಚ್ಚಿನವರು ಪಾತಕ ಕೃತ್ಯ ಮತ್ತು ವೇಶ್ಯಾವಾಟಿಕೆಗೆ ಇಳಿದುಬಿಟ್ಟಿದ್ದಾರೆ!! ಇವೆಲ್ಲದರ ಪರಿಣಾಮ ಪಶ್ಚಿಮಬಂಗಾಳ ಸರಕಾರ ಈಗ ಕರಾಳ ನೋವನ್ನು ಅನುಭವಿಸುತ್ತಿದೆ. ಇತ್ತೀಚೆಗಷ್ಟೇ ಪಶ್ಚಿಮಬಂಗಾಳದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನ ಎಡಪಕ್ಷಗಳನ್ನು ತಿರಸ್ಕರಿಸಿದ್ದಾರೆ.
ಜೂನ್ 29ರ ಟೈಮ್ಸ್ ಆಫ್ ಇಂಡಿಯಾದಲ್ಲಿ ಖ್ಯಾತ ಲೇಖಕಿ ಮಹಾಶ್ವೇತ ದೇವಿಯವರು ಕಾರೋಲ್ ಅಂದ್ರಾದೆ ಅವರಿಗೆ ನೀಡಿದ ಸಂದರ್ಶನದಲ್ಲಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಅವರು ಗುಜರಾತ್‌ನ ನರೇಂದ್ರ ಮೋದಿಗಿಂತ ಕಡೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತ್ಯತೀತ, ರೈತ ಪರ ಮುಖವಾಡದ ಎಡಪಕ್ಷ ಮೂಲಭೂತವಾದಿಗಳ ಒತ್ತಡಕ್ಕೆ ಮಣಿದೇ ತಸ್ಲೀಮಾ ನಸ್ರೀನ್‌ಳಿಗೆ ರಕ್ಷಣೆ ನೀಡಲಾಗದೆ ಕೋಲ್ಕತಾದಿಂದ ಹೊರಗಟ್ಟಿದೆ.
ಪಶ್ಚಿಮಬಂಗಾಳದ ನಂದಿಗ್ರಾಮದಲ್ಲಿ ನಡೆದ ಹಿಂಸೆ, ಅತ್ಯಾಚಾರ ಭಯಾನಕ ಹುಟ್ಟಿಸುವಂತಾದದ್ದು, ಆ ಕಾರಣಕ್ಕಾಗಿಯೇ ಪಶ್ಚಿಮಬಂಗಾಳದ ಹೃದಯಭಾಗದಂತಿರುವ ನಂದಿಗ್ರಾಮ ಮತ್ತು ಸಿಂಗೂರ್‌ನಲ್ಲಿ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಎಡಪಕ್ಷವನ್ನು ಜನ ತಿರಸ್ಕರಿಸಿದ್ದಾರೆ.
ನಿಜಕ್ಕೂ ಪಶ್ಚಿಮಬಂಗಾಳ ಸರಕಾರಕ್ಕೆ ಆಡಳಿತದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಹಾಶ್ವೇತ ದೇವಿ ಹೇಳಿರುವ ಮಾತಿನಲ್ಲಿ ಯಾವುದೇ ಹುರುಳಿಲ್ಲದಿಲ್ಲ. ಅಲ್ಲದೇ ಗುಜರಾತ್‌ನಲ್ಲಿ ಕೋಮು ಹಿಂಸಾಚಾರ ನಡೆದ ಬಳಿಕ ತಾನು ಅಹಮದಾಬಾದ್, ಬರೋಡಾ ಮತ್ತು ಸೂರತ್‌ಗೆ ಭೇಟಿ ನೀಡಿದ್ದೆ, ಅಲ್ಲಿ ಉತ್ತಮವಾದ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿದೆ, ವಿದ್ಯುತ್ ವ್ಯವಸ್ಥೆ ಮಾದರಿಯಾಗಿದೆ. ಅದೇ ಪಶ್ಚಿಮಬಂಗಾಳವನ್ನು ಒಮ್ಮೆ ನೋಡಿ, ರಸ್ತೆ ಇಲ್ಲ, ಆರೋಗ್ಯ ಕೇಂದ್ರ, ವಿದ್ಯುತ್ ಏನೂಂದ್ರೆ ಏನೂ ಇಲ್ಲ ಇಲ್ಲಿ ಎಂದು ದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಅಣುಒಪ್ಪಂದದಲ್ಲಿಯೂ ಖ್ಯಾತೆ ತೆಗೆಯುತ್ತಿರುವ ಎಡಪಕ್ಷಗಳು ಯಾವ, ಸಿದ್ದಾಂತ, ತಾತ್ವಿಕ ನೆಲೆಗಟ್ಟಿನ ಮೇಲೆ ಹೋರಾಟ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದೇ ಜನರಲ್ಲಿ ಗೊಂದಲ ಹುಟ್ಟಿಸುತ್ತಿದ್ದರೆ, ಮತ್ತೊಂದೆಡೆ ಎಡಪಕ್ಷಗಳ ಧೋರಣೆ ಕಾರ್ಮಿಕ ವರ್ಗ ಸೇರಿದಂತೆ ಜನಸಾಮಾನ್ಯರಲ್ಲೂ ರೇಜಿಗೆ ಹುಟ್ಟಿಸಿದೆ. ಎಡಪಕ್ಷಗಳು ಎತ್ತ ಸಾಗುತ್ತಿವೆ.....