Sunday, August 17, 2008

ಕೆಂಪುಕೋಟೆ ಚೀನಾದ ಮುಖವಾಡ....

ನಾ ಬೀಜಿಂಗ್‌ನಲ್ಲಿ ಆರಂಭಿಸಿದ ಒಲಿಂಪಿಕ್ ಗೇಮ್ಸ್‌‌ನ ತಯಾರಿ,ಉದ್ಘಾಟನಾ ಸಮಾರಂಭದ ಅದ್ದೂರಿ ಜಗತ್ತನ್ನೇ ನಿಬ್ಬೆರಗಾಗಿಸಿ ದ್ದಂತೂ ಸುಳ್ಳಲ್ಲ. ಉದ್ಘಾಟನಾ ಸಮಾರಂಭದ ಕಾರ್ಯಕ್ರಮವಂತೂ ಮೈನವಿರೇಳಿಸಿದ್ದವು,ಜಾಗತಿಕವಾಗಿ ಶಕ್ತಿ ಪ್ರದರ್ಶನ ಮಾಡಲು ಹೊರಟ ಕಮ್ಯೂನಿಷ್ಟ್ ದೇಶ ತನ್ನ ಮೇಲಿನ ಅಪವಾದದ ಕೊಳೆಯನ್ನು ತೆಗೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಂತೂ ಸತ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೂ 'ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ' ಎಂಬ ಗಾದೆಯಂತೆ ಒಲಿಂಪಿಕ್ ಉದ್ಘಾಟನಾ ಸಮಾರಂಭದಲ್ಲಿಯೂ ಅದರ ಮುಖವಾಡ ಕಳಚಿಬಿದ್ದಿದೆ.ಒಲಿಂಪಿಕ್ ಉದ್ಘಾಟನೆ ದಿನದಂದು ಪುಟ್ಟ ಬಾಲಕಿಯೊಬ್ಬಳು ಹಾಡೊಂದನ್ನು ಹಾಡಿದ್ದಳು, ಅದನ್ನು ಟಿವಿಗಳಲ್ಲಿ ಕೋಟ್ಯಂತರ ಜನರು ವೀಕ್ಷಿಸಿದ್ದರು.

ಬಳಿಕ ಬೀಜಿಂಗ್ ರೇಡಿಯೋಗೆ ಸಂದರ್ಶನ ನೀಡಿದ್ದ ಚೀನಾದ ಸಂಗೀತ ನಿರ್ದೇಶಕ ಜಾಂಗ್ ಯಿಮೂವ್,ಆಘಾತಕಾರಿ ಸುದ್ದಿಯೊಂದನ್ನು ಹೊರಗೆಡಹಿದ್ದರು. ನಿಜಕ್ಕೂ ಆ ದಿನ ಸಂಗೀತ ಹಾಡಿದಾಕೆ ಮಿಯೋಕೆ ಎಂಬಾಕೆ,ಆದರೆ ಆಕೆಯ ಹಲ್ಲು ಸ್ವಲ್ಪ ಉಬ್ಬಾಗಿದ್ದರಿಂದ ಕೊನೆಯ ಕ್ಷಣದ ಬದಲಾವಣೆ ಎಂಬಂತೆ,ಹಾಡು ಮಾತ್ರ ಮಿಯೋಕೆಯದ್ದು,ಎದುರುಗಡೆ ನಿಂತಿದ್ದು ಯಾಂಗ್ ಪೇಯಿ ಎಂಬ ಚೆಂದದ ಬಾಲಕಿ.

ಆದರೆ ಇದನ್ನು ಕಮ್ಯೂನಿಷ್ಟ್ ಸರ್ಕಾರ ತಾನು ಮಾಡಿದ್ದೇ ಸರಿ ಎಂಬುದಾಗಿ ಸಮರ್ಥಿಸಿಕೊಂಡಿದೆ. ಮಿಯೋಕೆ ತಂದೆ ಮಾತ್ರ ಕಣ್ಣೀರು ಸುರಿಸಿದ್ದರು,ತನ್ನ ಮಗಳ ಹಾಡನ್ನು ಕೋಟ್ಯಂತರ ಜನ ಆಲಿಸಿದ್ದಾರೆ,ಆದರೆ ಆಕೆ ಅಂದ ಇಲ್ಲ ಎಂಬ ಒಂದೇ ಕಾರಣಕ್ಕೆ ಷೋಕಿಗಾಗಿ ಹೊರಪ್ರಪಂಚದ ಕಣ್ಣಿಗೆ ಕಾಣಲು ಮತ್ತೊಬ್ಬಾಕೆಯನ್ನು ಉತ್ಸವ ಮೂರ್ತಿಯಾಗಿ ನಿಲ್ಲಿಸಿದ್ದರು ಎಂದು !!

ಹೊರ ಪ್ರಪಂಚಕ್ಕೆ ತಾನೊಂದು ಸುಭಗ ದೇಶ ಎಂದು ತೋರಿಸಿಕೊಳ್ಳಲು ಹೊರಟ ಚೀನಾದ ಕೀಳುಮಟ್ಟದ ಆಲೋಚನೆ ಮತ್ತು ಕ್ರಮದ ಚಿಕ್ಕ ಉದಾಹರಣೆ ಇದಾಗಿದೆ. ಚೀನಾ ಮತ್ತು ಅಮೆರಿಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಮೆರಿಕ ಕೂಡ ಅಷ್ಟೇ ಭಯೋತ್ಪಾದನೆ ವಿರುದ್ಧ ,ನ್ಯೂಕ್ಲಿಯರ್ ವಿರುದ್ಧ,ಮಾನವಹಕ್ಕುಗಳ ಉಲ್ಲಂಘನೆ ವಿರುದ್ಧ ಗುಟುರು ಹಾಕುವ ದೊಡ್ಡಣ್ಣನ ಸಣ್ಣತನ ಮಾತ್ರ ಜಗಜ್ಜಾಹೀರು.

ನಮ್ಮ ದೇಶದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಮಗಳು ಇತ್ತೀಚೆಗಷ್ಟೇ ಅಧಿಕೃತವಾಗಿ ಅಮೆರಿಕ ನಡೆಸಿರುವ ಮಾನವಹಕ್ಕು ಉಲ್ಲಂಘನೆಯ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿರುವ ಬಗ್ಗೆ ವರದಿಯಾಗಿತ್ತು. ಅಲ್ಲದಿದ್ದರೂ ಸಾಮ್ರಾಜ್ಯಶಾಹಿ ಯಾಗಿರುವ ಅಮೆರಿಕ ಉಳಿದೆಲ್ಲ ದೇಶಗಳಿಗೂ ಹಿತೋಪದೇಶ ನೀಡುತ್ತೇ, ಆದರೆ ತಾನು ಮಾತ್ರ ಮಾಡುವ ಲುಚ್ಚಾ ಕೆಲಸ ಗಳಿಂದಾಗಿ ಲಕ್ಷಾಂತರ ಅಮಾಯಕರ ಬಲಿ ತೆಗೆದುಕೊಂಡಿದೆ, ಅದೆಷ್ಟೋ ದೇಶಗಳಲ್ಲಿ ಭಯೋತ್ಪಾದನೆ, ಗೂಂಡಾಗಿರಿ ಸೃಷ್ಟಿಸಿದೆ(ಒಸಾಮ ಬಿನ್ ಲಾಡೆನ್ ಕೂಡ ಅಮೆರಿಕ ಸಾಕಿ-ಸಲುಹಿತ ಕೂಸು ಎಂಬುದನ್ನು ಮರೆಯಬೇಡಿ).

ಆರ್ಥಿಕ ಅಲ್ಲೋಲ - ಕಲ್ಲೋಲ ಮಾಡುವ ಮೂಲಕ ತನ್ನ ಅಂಗೈಯಲ್ಲಿಟ್ಟುಕೊಂಡಿದೆ. ತನ್ನೆಲ್ಲಾ ತಪ್ಪುಗಳನ್ನು ಮುಚ್ಚಿ,ಬೇರೆಯವರತ್ತ ಕೈ ತೋರಿಸುವ ಅಮೆರಿಕದ ಚಾಳಿ ಎಗ್ಗಿಲ್ಲದೆ ಮುಂದುವರಿದಿದೆ. ಆದೇ ತೆರನಾದ ಮುಖವಾಡ ಹೊಂದಿರುವ ಚೀನಾ ಕೂಡ ಕಡಿಮೆಯಿಲ್ಲ,1999ರಲ್ಲಿ ಲೀ ಹೊಂಗ್‌‌ಚೀ ಎಂಬಾತ ಫಾಲುನ್ ಗೊಂಗ್ ಎಂಬ ಧಾರ್ಮಿಕ ಪಂಥವನ್ನು ಹುಟ್ಟು ಹಾಕುತ್ತಾನೆ. ಅದು ನೋಡ,ನೋಡುತ್ತಿದ್ದಂತೆಯೇ ಚೀನಾದಾದ್ಯಂತ ಹೊಸ ಅಲೆಯನ್ನೇ ಎಬ್ಬಿಸುತ್ತೆ,ಆತನದ್ದು ಕೇವಲ ಐದು ವಿಧಗಳ ಧ್ಯಾನ ಪದ್ಧತಿ(ಬೌದ್ಧಿಸಂ ಮಾದರಿ)ಯಾಗಿತ್ತು.

ಇದರಲ್ಲಿ ಚೀನಾ ಕಮ್ಯೂನಿಷ್ಟ್ ಪಾರ್ಟಿಯ(ಸಿಸಿಪಿ)ಸದಸ್ಯರೇ ಲಕ್ಷಾಂತರ ಸಂಖ್ಯೆಯಲ್ಲಿ ಅವನ ಅನುಯಾಯಿಗಳಾಗ ತೊಡಗಿದರು. ಇದರಿಂದ ಬೆಚ್ಚಿ ಬಿದ್ದ ಚೀನಾ,ಓಹ್ ಇದು ತನ್ನ ಬುಡಕ್ಕೆ ಬರುತ್ತದೆ ಎಂಬು ಅಸೂಯೆಯಿಂದ,ಪಾಲುನ್ ಅನುಯಾಯಿಗಳನ್ನು ಕಂಡ,ಕಂಡಲ್ಲಿ ಮಕ್ಕಳು,ಮಹಿಳೆಯರು,ಪುರುಷರು ಎಂಬ ಭೇದಭಾವ ಇಲ್ಲದೆ,ಬೆತ್ತಲಾಗಿಸಿ ಚಿತ್ರ ಹಿಂಸೆ ನೀಡತೊಡಗಿತ್ತು.

ದಿನದಿಂದ ದಿನಕ್ಕೆ ಆತನ ಅನುಯಾಯಿಗಳ ಸಂಖ್ಯೆ ಏರುತ್ತಿದ್ದಂತೆಯೇ,ಚೀನಾ ನಾಗರಿಕ ವ್ಯವಹಾರಗಳ ಸಚಿವಾಲಯ ಅಧಿಕೃತ ಆದೇಶ ವೊಂದನ್ನು ಹೊರಡಿಸುತ್ತದೆ, ಪಾಲುನ್ ಒಂದು ಅಧಿಕೃತವಾದ ಸಂಸ್ಥೆಯಲ್ಲ,ಅದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು,ಜನರಲ್ಲಿ ಮೂಢನಂಬಿಕೆಗಳನ್ನು ಬೆಳೆಸುತ್ತಿದ್ದು,ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ ಎಂದು ಹೇಳಿ,ಫಾಲುನ್ ಅನ್ನು ನಿಷೇಧಿಸುತ್ತದೆ.

ಅಲ್ಲದೇ ಅದರ ಸ್ಥಾಪಕ ಲೀ ಅವರ ಬಂಧನಕ್ಕೆ ವಾರೆಂಟ್ ಹೊರಡಿಸಿದೆ.ಇದೀಗ ಲೀ ಅಮೆರಿಕದಲ್ಲಿದ್ದಾರೆ. ಚೀನಾ ಎಷ್ಟೇ ಚಿತ್ರಹಿಂಸೆ, ನಿಷೇಧ ಹೇರಿದರೂ ಕೂಡ ಇದೀಗ ಚೀನಾದ್ಯಂತ ಸುಮಾರು 70ಮಿಲಿಯನ್ ಮಂದಿ ಲೀ ಅನುಯಾಯಿಗಳಿದ್ದಾರೆ. ಆದರೆ ಪಾಲುನ್ ವರದಿ ಪ್ರಕಾರ ಪ್ರಪಂಚದ 80ದೇಶಗಳಲ್ಲಿ ಒಟ್ಟು 100ಮಿಲಿಯನ್ ಬೆಂಬಲಿಗರನ್ನು ಹೊಂದಿರುವುದಾಗಿ ಹೇಳಿದೆ.

ಲೀ ವಿರುದ್ಧ ಬಂಧನದ ಆದೇಶ ಹೊರಡಿಸಿದ ನಂತರವೂ ಆತ ಯುಎಸ್‌ನಿಂದ ಪ್ರಕಟಣೆಯೊಂದನ್ನು ನೀಡಿದರು,ನಮ್ಮದು ಧ್ಯಾನ ಸಂಸ್ಥೆ ಯಾಗಿದೆ, ಜನರಿಗೆ ನೈತಿಕ ಸ್ಥೈರ್ಯ ಮತ್ತು ಮಾನಸಿಕ ಉನ್ನತಿ ಬಗ್ಗೆ ಹೇಳಲಾಗುತ್ತಿಯೇ ಹೊರತು ನಾವು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಲ್ಲ, ಅಲ್ಲದೇ ನಾನು ಯಾವುದೇ ರಾಜಕೀಯ ಸಂಘಟನೆಯನ್ನೂ ಕಟ್ಟುತ್ತಿಲ್ಲ ಎಂದು ತಿಳಿಸಿದರು.

ಆದರೂ ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಚೀನಾ ಮಾತ್ರ ಲೀ ಬೆಂಬಲಿಗರನ್ನು ಹುಡುಕಿ,ಹುಡುಕಿ ಚಿತ್ರ ಹಿಂಸೆ ನೀಡುತ್ತಿದೆ, ಮಾನವಹಕ್ಕುಗಳ ಕೂಗಿಗೂ ಬೆಲೆ ಇಲ್ಲದಂತಾಗಿದೆ. ಒಂದು ವರದಿ ಪ್ರಕಾರ 2002ರಲ್ಲಿ ಚೀನಾ ಸರ್ಕಾರ ಪಾಲುನ್‌ನ ಸುಮಾರು 1600 ಅನುಯಾಯಿಗಳನ್ನು ಚಿತ್ರ ಹಿಂಸೆ ನೀಡಿ ಹತ್ಯೆಗೈದಿದೆ.

ಕೆಲವರು ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೆಲ್ಲವೂ ಪೊಲೀಸ್ ಕಸ್ಟಡಿಯಲ್ಲೇ ನಡೆದ ಘಟನೆ ಯಾಗಿದೆ. (ಅಮೆರಿಕ ಕೂಡ ಓಶೋ ರಜನೀಶ್ ಬಗ್ಗೆ ಇದೇ ರೀತಿ ಮಾಡಿತ್ತು,ಅವರು ಹೋದಲ್ಲೆಲ್ಲಾ ಅನುಯಾಯಿಗಳದ್ದೇ ಹಿಂಡು, ಅಮೆರಿಕದಲ್ಲಿ ಅವರ ಪ್ರಭಾವ ಹೆಚ್ಚಾಗುತ್ತಿದ್ದುದನ್ನು ನೋಡಿಯೇ ಅವರಿಗೆ ಥೇಲಿಯಂ ಎಂಬ ವಿಷಯುಕ್ತ ಚುಚ್ಚು ಮದ್ದು ನೀಡಿ ವ್ಯವಸ್ಥಿತವಾಗಿ ಸಾವಿನ ದವಡೆಗೆ ನೂಕಿತ್ತು!)

ಇದೀಗ ತನ್ನೆಲ್ಲಾ ಹುಳುಕುಗಳನ್ನು ಮುಚ್ಚಿ ಹಾಕಲು,ಜಗತ್ತಿಗೆ ತಾನೊಬ್ಬ ಬಲಿಷ್ಠ,ಸಜ್ಜನ ಎಂಬ ಫೋಸು ನೀಡಲು ಒಲಿಂಪಿಕ್ ಗೇಮ್ಸ್‌ನ ಅಬ್ಬರದಲ್ಲಿದೆ. ಆದರೆ ಕೆಂಪುಕೋಟೆಯೊಳಗೆ ನಡೆಯುತ್ತಿರುವ ಮಾರಣಹೋಮದ ಬಗ್ಗೆ ಧ್ವನಿ ಎತ್ತುವವರಾರು....

'ಚಿರಮೌನ'ಕ್ಕೆ ಜಾರಿದ ವ್ಯಾಸ

ಇತ್ತೀಚೆಗಷ್ಟೇ ವ್ಯಾಸರು ನನ್ನ ಮೊಬೈಲ್‌ಗೆ ಕರೆ ಮಾಡಿ, ಏನು ಊರಿಗೆ ಬರುವ ವಿಚಾರ ಏನಾದರು ಇದೆಯಾ ಅಂತ ಕ್ಷೇಮವನ್ನು ವಿಚಾರಿಸಿ, ಈ ಬಾರಿಯ ಮಯೂರದಲ್ಲಿ ಕಥೆ ಬರುತ್ತದೆ ಓದಿ ಎಂದಿದ್ದರು. ಪ್ರತಿ ಬಾರಿ ಊರಿಗೆ ಹೋದಾಗ ಕಾಸರಗೋಡಿನ ಮನ್ನಿಪ್ಪಾಡಿಗೆ ಹೋಗಿ ಅವರೊಂದಿಗೆ ಇದ್ದು ಹರಟಿ ಬರುವುದು ವಾಡಿಕೆ, ಆದರೆ ಈ ಬಾರಿ ಕೆಲಸದ ಒತ್ತಡದಿಂದ ಅವರನ್ನು ಮಾತನಾಡಿಸದೆ ಬಂದಿದ್ದೆ, ಹಿರಿಯ ಪತ್ರಕರ್ತ ಮಿತ್ರರಾದ ಕೆ.ತಿಮ್ಮಪ್ಪ ಅವರು ವ್ಯಾಸ ಇನ್ನಿಲ್ಲ ಎಂತ ಮೆಸೇಜ್ ಕಳುಹಿಸಿದ್ದರು. ಅದನ್ನು ನೋಡಿದವನಿಗೆ ನನ್ನಲ್ಲಿ ಅಪರಾಧಿ ಪ್ರಜ್ಞೆ ಮೂಡಿತ್ತು.

ಊರಿಗೆ ಹೋದವನು ಮಾತನಾಡಿ ಬಾರದಿದ್ದಕ್ಕೆ ಆಘಾತಗೊಂಡಿದ್ದೆ. ಚಿಕೂನ್ ಗುನ್ಯಾಕ್ಕೆ ಅವರು ಬಲಿಯಾಗಿರುವುದು ನನ್ನಿಂದ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ಪ್ರತಿಯೊಂದು ಪತ್ರಿಕೆಯ ಮೇಲೆ ಕಣ್ಣಾಡಿಸುವ ವ್ಯಾಸರು, ತನಗಿಂತ ಚಿಕ್ಕವರ ಕಥೆ, ಕವನ, ಲೇಖನಗಳನ್ನು ಓದಿ ಸಂತಸ ಪಡುತ್ತಿದ್ದರು ಮತ್ತು ಅಂತಹವರ ಹೆಸರನ್ನು ನೆನಪಿಟ್ಟುಕೊಂಡು, ನಮ್ಮಲ್ಲಿ ಮಾತನಾಡುವಾಗ, ಒಳ್ಳೇ ಬರೆಯುತ್ತಾರೆ ಮರಾಯ್ರೆ ಎನ್ನುತ್ತಿದ್ದರು.

ಸಹೃದಯಿಯಾಗಿದ್ದ ವ್ಯಾಸರು, ಎಲ್ಲರನ್ನೂ ತುಂಬಾ ಗೌರವದಿಂದ ಕಾಣುತ್ತಿದ್ದರು. ಅವರ ಕಥೆಗಳನ್ನು ಓದಿಕೊಂಡಿದ್ದವರು ಅವರ ಮನೆಗೆ ಆಗಾಗ ಬಂದು ಮಾತನಾಡಿಸಿ ಹೋಗುತ್ತಿದ್ದರು. ನಾವು ಅವರ ಮನೆಗೆ ಹೋದಾಗಲೆಲ್ಲ, ನೋಡಿ ತ್ರಾಸಿ ಇಂತವರು ಬಂದು ಮಾತನಾಡಿಸಿ ಹೋಗಿದ್ದಾರೆ, ಪತ್ರ ಕೂಡ ಬರೆದಿದ್ದಾರೆ ಎಂದೆಲ್ಲಾ ಹೇಳುತ್ತಿದ್ದರು. ವ್ಯಾಸರ ಎದುರು ಕುಳಿತಾಗ ನಾನು ಸುಮ್ಮನೆ ಕುಳಿತಿರುತ್ತಿದ್ದೆ, ಯಾಕೆಂದರೆ ಅವರು ಮಾತನಾಡುವುದೇ ಅಪರೂಪ, ಅದಕ್ಕೆ ಅವರು ಮಾತನಾಡುತ್ತಾರೆಂದರೆ ನಾನು ಬೆಪ್ಪನಂತೆ ಕೇಳಿಸಿಕೊಳ್ಳುತ್ತಿದ್ದೆ.

ಅವರಿಗೆ ಮೊಮ್ಮಕ್ಕಳ ಮೇಲೆ ಅಗಾಧವಾದ ಪ್ರೀತಿ, ಅದರಲ್ಲೂ ಅವರ ಚಿಕ್ಕ ಮೊಮ್ಮಗನ ಮೇಲೆ ಪ್ರಾಣವೇ ಇಟ್ಟುಕೊಂಡಿದ್ದರು. ಒಮ್ಮೆ ಮಿತ್ರ ಮುರಳಿ ಹತ್ತಿರ ವ್ಯಾಸರಿಗೆ ಸಣ್ಣ ಮೊಮ್ಮಗನ ಮೇಲೆ ಅಷ್ಟೊಂದು ವ್ಯಾಮೋಹ ಯಾಕೆ ಎಂದು ಕೇಳಿದ್ದಕ್ಕೆ, ಆತನ ಮುಖ ಅವರ ತಂದೆಯನ್ನು ಹೋಲುವ ಕಾರಣ ಎಂದು ತಿಳಿಸಿದ್ದ. ವ್ಯಾಸರ ತಂದೆಯನ್ನು ರಾಜಕೀಯ ದ್ವೇಷದಿಂದಾಗಿ ನಟ್ಟನಡು ರಸ್ತೆಯಲ್ಲಿ ಕೊಚ್ಚಿ ಕೊಂದಿದ್ದರು. ವ್ಯಾಸರು ಅದನ್ನು ಕಣ್ಣಾರೆ ಕಂಡವರು.

ವ್ಯಾಸರು ಯಾವುದೇ ರಾಜಕೀಯ, ಪಕ್ಷ, ಸಿದ್ದಾಂತಗಳ ಬಗ್ಗೆ ಅಂಟಿಕೊಂಡಿರಲಿಲ್ಲವಾಗಿತ್ತು. ಒಂಟಿತನವನ್ನು,ಮೌನವನ್ನು ಪ್ರೀತಿಸುತ್ತಿದ್ದ ವ್ಯಾಸರಿಗೆ ಸಿಟ್ಟು ಮಾತ್ರ ತುಂಬಾನೇ ಇತ್ತು, ಆದರೆ ಅದನ್ನು ಯಾರ ಎದುರು ತೋರ್ಪಡಿಸುತ್ತಿರಲಿಲ್ಲ, ನಾನು ಆಗಾಗ ಮನೆಗೆ ಹೋಗುತ್ತಿದ್ದಾಗ, ಮನೆಯಲ್ಲಿ ಇವರು ಏನಾದರು ಹೇಳುತ್ತಿರುವಾಗ ಪತ್ನಿ ಅಡ್ಡ ಮಾತನಾಡಿದ ಸಂದರ್ಭ ಅವರ ಮುಖದಲ್ಲಿ ತುಂಬಾ ಕೋಪವನ್ನು ಕಂಡಿದ್ದೆ.

ಅವರಲ್ಲಿ ದುರಂತ ಘಟನೆಗಳನ್ನು ಹೇಳಿದಾಗ ತುಂಬಾ ನೊಂದುಕೊಳ್ಳುತ್ತಿದ್ದರು, ಮತ್ತು ಆ ಘಟನೆಯ ಸುತ್ತ ಕಥಾಹಂದರವನ್ನು ಕಟ್ಟುತ್ತಿದ್ದರು. ರಾತ್ರಿ, ಮಧ್ಯರಾತ್ರಿ ಅವರ ಮನಸ್ಸಿನಲ್ಲಿ ಯಾವಾಗ ಕಥೆ ರೂಪು ತಾಳುತ್ತೊ ಆವಾಗೆಲ್ಲ ಎದ್ದು ಬರೆಯಲು ಕುಳಿತುಕೊಳ್ಳುತ್ತಿದ್ದರು, ಹೆಂಡತಿ ಆಗಾಗ ಟೀ ಪೂರೈಸುತ್ತಿದ್ದರು. ಅವರ ಶಬ್ದ ಜೋಡಣೆ ತುಂಬಾ ವಿಶೇಷವಾದದ್ದು, ಅವರ, ಕಥೆ, ಕವನದ ಹಾಗೆ, ಅವರು ಮಿತ್ರರಿಗೆ ಬರೆಯುತ್ತಿದ್ದ ಪತ್ರಗಳೂ ಕಥೆಯಂತೆ ಇರುತ್ತಿದ್ದವು.

ಕಳೆದ ನಲ್ವತ್ತು ವರ್ಷಗಳಿಂದ ಸಣ್ಣ ಕಥಾ ಪ್ರಪಂಚದಲ್ಲಿ ತಮ್ಮದೆ ಛಾಪನ್ನು ಮೂಡಿಸಿದ್ದ ವ್ಯಾಸರನ್ನು ಕನ್ನಡ ಸಾರಸ್ವತ ಲೋಕ ಅವರನ್ನು ಗುರುತಿಸದೆ ಜಾಣ ಕುರುಡತನ ತೋರಿಸಿತ್ತು! ಮನುಷ್ಯನ ಸ್ವಾರ್ಥ, ದ್ವೇಷಗಳ ಬಗ್ಗೆ ತುಂಬಾ ಮಾತನಾಡುತ್ತಿದ್ದರು, ಆಗಾಗ ಪತ್ರ ಬರೆಯುತ್ತಿದ್ದ ವ್ಯಾಸರು ತುಂಬಾ ಆಪ್ತರಾಗಿದ್ದರು, ನನ್ನಂತಹ ನೂರಾರು ಆಪ್ತವಲಯಗಳನ್ನು ಸೃಷ್ಟಿಕೊಂಡಿದ್ದ ವ್ಯಾಸರು ಸದ್ದಿಲ್ಲದೆ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದ್ದಾರೆ. ಇದೀಗ ಅವರೇ ಸೃಷ್ಟಿಸಿದ ಶಂಕರಿಗುಡ್ಡ, ಶಂಕರಿನದಿಗಳು ಕಥೆಯಾದ ಹಾಗೇ ವ್ಯಾಸರ ಕಥೆಗಳು ಸಾಹಿತ್ಯಲೋಕದಲ್ಲಿ 'ಜೀವ'ಪಡೆಯಬೇಕಾಗಿದೆ....