Thursday, June 4, 2009

ತಮಿಳುನಾಡಿನಲ್ಲಿ ರಕ್ತಪಾತ ಆಗಲೇ ಇಲ್ಲಾ...!!

ರಾಜಪಕ್ಷೀಯಗಳು ಚುನಾವಣೆ ಸಂದರ್ಭದಲ್ಲಿ ತಮ್ಮ ಅನುಕೂಲ ಶಾಸ್ತ್ರಕ್ಕೆ ತಕ್ಕಂತೆ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆಂಬುದಕ್ಕೆ ತಮಿಳುನಾಡಿನಲ್ಲಿ ನಡೆದ ರಾಜಕೀಯ ಪ್ರಹಸನವೇ ಸಾಕ್ಷಿ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಅಂಡು ಸುಟ್ಟ ಬೆಕ್ಕಿನಂತಿದ್ದ ತಮಿಳುನಾಡಿನ ಪಕ್ಷಗಳು ನಂತರ ಮಾತ್ರ ಎಲ್‌ಟಿಟಿಇ ವಿಷಯದಲ್ಲಿ ಅವುಗಳು ನಡೆದುಕೊಂಡು ರೀತಿ ಮಾತ್ರ ಅಚ್ಚರಿ ಹುಟ್ಟಿಸುವಂಥದ್ದು. ಕಟ್ಟರ್ ಎಲ್‌ಟಿಟಿಇ ವಿರೋಧಿಯಾಗಿದ್ದ ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಕೂಡ, ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ರಾಜ್ಯ ಮಾತ್ರ ಏಕೈಕ ಪರಿಹಾರ ಮಾರ್ಗ ಎಂದು ಹೇಳಿಕೆ ನೀಡಿದರು. ಅದರ ಬೆನ್ನಲ್ಲೇ ಮತ್ತೊಂದು ಪ್ರಾದೇಶಿಕ ಪಕ್ಷವಾದ ಪಾಟಾಳ್ ಮಕ್ಕಳ್ ಕಚ್ಚಿ (ಪಿಎಂಕೆ)  ಸಹ ಪ್ರತ್ಯೇಕ ರಾಜ್ಯ ಹೇಳಿಕೆಗೆ ಬೆಂಬಲ ಸೂಚಿಸಿತು.

ಆದರೆ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಆಡಳಿತಾರೂಢ ಡಿಎಂಕೆಯ 'ಪೆರಿಯಾರ್' ಎಂ.ಕರುಣಾನಿಧಿಯವರು ಶ್ರೀಲಂಕಾದಲ್ಲಿ ಕದನ ವಿರಾಮ ಘೋಷಿಸುವಂತೆ ಲಂಕಾ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ತಮಿಳುನಾಡು ಬಂದ್‌ಗೆ ಕರೆ ನೀಡಿದರು. ನಂತರ ತರಾತುರಿಯಲ್ಲಿ ಗೋಪಾಲಪುರಂನ ಮನೆಯಲ್ಲಿ ಬೆಳ್ಳಂಬೆಳಗ್ಗೆ ನಾಲ್ಕಾರು ಎಸಿಯ ತಣ್ಣನೆಯ ಗಾಳಿಯ ನಡುವೆ ಉಪವಾಸ ಸತ್ಯಾಗ್ರಹಕ್ಕೆ ಕೂತರು. ಅದು ಕಾಕತಾಳಿಯ ಎಂಬಂತೆ ಲಂಕಾ ಸರ್ಕಾರ ಕದನವಿರಾಮ ಘೋಷಿಸಿರುವುದಾಗಿ ಹೇಳಿಕೆ ನೀಡಿರುವುದರಿಂದ 1 ಗಂಟೆಗೆ ಉಪವಾಸ ಮುಗಿಸಿ, ತನ್ನ ಸತ್ಯಾಗ್ರಹಕ್ಕೆ ಸಂದ ಜಯ ಅಂತ ಬೀಗಿದರು.

ಅವೆಲ್ಲಕ್ಕಿಂತ ಹೆಚ್ಚಾಗಿ ಫಯರ್ ಬ್ರ್ಯಾಂಡ್ ಎಂದೇ ಬಿರುದಾಂಕಿತರಾಗಿರುವ ಎಂಡಿಎಂಕೆಯ ಮುಖ್ಯಸ್ಥ ವೈಕೋ, ಬಹಿರಂಗಸಭೆಯಲ್ಲಿ ಮಾತನಾಡುತ್ತ, ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್‌ಗೆ ಏನೇ ಅಪಾಯವಾದರು ಕೂಡ ತಮಿಳುನಾಡು ಹೊತ್ತಿ ಉರಿಯುತ್ತೆ ಎಂದು ಎಚ್ಚರಿಕೆ ನೀಡಿದ್ದರು. ಅದಕ್ಕೆ ತಮಿಳುರಾಷ್ಟ್ರೀಯ ಚಳವಳಿ ಹೋರಾಟಗಾರ ಪಿ.ನೆಡುಮಾರನ್ ಕೂಡ ಸಾಥ್ ನೀಡಿದ್ದರು. 

ಆದರೆ ಪ್ರಭಾಕರನ್ ಸಾವಿನ ಸುದ್ದಿ ಟಿವಿ ಚಾನೆಲ್‌ಗಳಲ್ಲಿ ಬಿತ್ತರವಾಗುತ್ತಿದ್ದರೆ. ಚೆನ್ನೈನಲ್ಲಿದ್ದ ನಾವು ಮಧ್ನಾಹ್ನದ ಊಟಕ್ಕೂ ತತ್ವಾರ ಆಗಬಹುದು ಅಂತ ಹೆದರಿ ಕಂಗಾಲಾಗಿ ಅಂದು ಬೇಗ ಊಟಕ್ಕೆ ಹೋಗಿದ್ದೇವು. ಆದರೆ ಸಮೀಪದ ಐಸ್‌ಹೌಸ್ ಬಳಿ ಸ್ವಲ್ಪ ಗಲಾಟೆ ಆಗಿತ್ತು ಬಿಟ್ಟರೆ ಬೇರೇನೂ ಆಗಿರಲಿಲ್ಲವಾಗಿತ್ತು. ನಂತರ ಪ್ರಭಾಕರನ್ ಸಾವಿನ ಸುದ್ದಿಯನ್ನು ಶ್ರೀಲಂಕಾ ಸರ್ಕಾರ ಅಧಿಕೃತವಾಗಿ ಘೋಷಿದಾಗಲಂತೂ ನಾವೆಲ್ಲ ಗಾಬರಿಯಾಗಿ ಹೋಗಿದ್ದೇವು. ಆದರೆ ವೈಕೋ ಹೇಳಿಕೆಯ ರಕ್ತಪಾತವಾಗಲಿ, ಪುಟ್ಟ ಗಲಭೆಯೂ ನಡೆದಿರಲಿಲ್ಲ. ಆದರೆ ಕೆಲವು ಚಾನೆಲ್‌ಗಳಲ್ಲಿ ತಮಿಳುನಾಡು ಉದ್ವಿಗ್ನ ಅಂತ ಬ್ರೇಕಿಂಗ್ ನ್ಯೂಸ್ ಕೊಡುತ್ತಿದ್ದರೆ ಚೆನ್ನೈನಲ್ಲಿ ಸುದ್ದಿ ನೋಡುತ್ತಿದ್ದ ನಮಗೆ ನಗು ಬರುತ್ತಿತ್ತು. ಆದರೆ ಕಡಲೂರು ಸೇರಿದಂತೆ ಕೆಲವು ಕಡೆ ಸ್ವಲ್ಪ ಮಟ್ಟಿನ ಹಿಂಸಾಚಾರ ನಡೆದಿತ್ತು. ಅದನ್ನು ಹೊರತುಪಡಿಸಿದರೆ. ಎಲ್‌ಟಿಟಿಇ ಪ್ರಭಾಕರನ್ ಸಾವನ್ನಪ್ಪಿದರೆ ತಮಿಳುನಾಡು ಹೊತ್ತು ಉರಿಯುತ್ತೆ ಎಂಬ ರಾಜಕೀಯ ನಾಯಕರ ಹೇಳಿಕೆಯ ಹಿಂದಿನ ಸಂಚನ್ನು ಗಮನಿಸಬೇಕಾಗಿದೆ. 

ಯಾಕೆಂದರೆ ಚುನಾವಣೆ ನಡೆಯುವ ಮೊದಲು ಏನಾದ್ರು ಎಲ್‌ಟಿಟಿಇ ನಾಯಕ ಪ್ರಭಾಕರನ್ ಹತ್ಯೆಯಾಗಿದ್ದರೆ, ನಿಜಕ್ಕೂ ತಮಿಳುನಾಡು ಹೊತ್ತಿ ಉರಿಯುತ್ತಿತ್ತು ಎಂಬುದರಲ್ಲಿ ಯಾವುದೇ ಸಂಶಯವಿರಲಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾವುದಾದರೊಂದು ಇಶ್ಯೂ ಬೇಕಾಗುವುದು ಖದೀಮ ರಾಜಕಾರಣಿಗಳಿಗೆ ಮಾತ್ರ. ಲಂಕಾದಲ್ಲಿ ಕದನ ವಿರಾಮ ನಿಲ್ಲಿಸುವಂತೆ ಬಂದ್‌ಗೆ ಕರೆ ನೀಡಿದ ಡಿಎಂಕೆ ಆಗಲಿ, ಪ್ರತ್ಯೇಕ ರಾಜ್ಯಬೇಕು ತಮಿಳರಿಗೆ ಅಂತ ಬೊಬ್ಬಿರಿದ ಎಐಎಡಿಎಂಕೆ ಆಗಲಿ, ವೈಕೋ, ನೆಡುಮಾರನ್ ಯಾರೂ ಕೂಡ ಸೊಲ್ಲೆ ಎತ್ತಿಲ್ಲ. ವೈಕೋ, ನೆಡುಮಾರನ್ ಮಾತ್ರ ಈಗಲೂ ಪ್ರಭಾಕರನ್ ಬದುಕಿಯೇ ಇದ್ದಾನೆ ಅಂತ ಲಬೋ, ಲಬೋ ಅಂತಿದ್ದಾರೆ. 

ಕಳೆದ ಶನಿವಾರದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಕಾರ್ಯನಿರ್ವಾಹಕ ಸಂಪಾದಕ ಸುದರ್ಶನ್ ಅವರೊಂದಿಗೆ ಕಿಲ್ಲಿ ಎಂಬಾತನೊಂದಿಗೆ ನಡೆಸಿದ ಸಂದರ್ಶನದಲ್ಲಿ, ಎಲ್‌ಟಿಟಿಇಯ ವರಿಷ್ಠ ಪ್ರಭಾಕರನ್‌ಗೆ ವೈಕೋ ಮತ್ತು ನೆಡುಮಾರನ್‌ಗಿಂತ ದೊಡ್ಡ ಶತ್ರುವಿನ ಅಗತ್ಯವಿರಲಿಲ್ಲ ಅಂತ ಹೇಳಿದ್ದರು. ಅಲ್ಲದೇ ಎಲ್‌ಟಿಟಿಇಗೆ ಏನಾದ್ರೂ ಆದರೆ ತಮಿಳುನಾಡು ಹೊತ್ತಿ ಉರಿಯುತ್ತೆ, ಡಿಎಂಕೆ ನೆಲಕಚ್ಚುತ್ತೆ ಅಂತೆಲ್ಲಾ ಪ್ರಭಾಕರನ್ ಹಾಗೂ ನಟೇಶನ್‌ಗೆ ಸುಳ್ಳು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದ ಪ್ರಮುಖ ರೂವಾರಿಗಳೇ ಅವರಿಬ್ಬರು ಅಂತ ಆರೋಪಿಸಿದ್ದರು. 

ನಿಜಕ್ಕೂ ತಮಿಳುನಾಡಿನ ರಾಜಕೀಯ ಪಕ್ಷಗಳು ಶ್ರೀಲಂಕಾದಲ್ಲಿನ ತಮಿಳರ ರಕ್ಷಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂಬುದು ಅಕ್ಷರಶ ಸತ್ಯ. ಶ್ರೀಲಂಕಾದಲ್ಲಿನ ತಮಿಳರು ಅತ್ತ ಎಲ್‌ಟಿಟಿಇ ಹಾಗೂ ಲಂಕಾ ಸರ್ಕಾರ ಎರಡರಿಂದಲೂ ಅನ್ಯಾಯಕ್ಕೊಳಗಿದ್ದರು. ಅವರ ಬಗ್ಗೆ ಧ್ವನಿ ಎತ್ತಬೇಕಾಗಿದ್ದ ತಮಿಳುನಾಡಿನ ರಾಜಕೀಯ ಪಕ್ಷಗಳು ಮಾತ್ರ ರಾಜಕೀಯ ಬೇಳೆ ಬೇಯಿಸಿಕೊಂಡು, ಪ್ರಭಾಕರನ್‌ನನ್ನು ಹೀರೋವನ್ನಾಗಿ ಬಿಂಬಿಸಲು ಹೊರಟರೆ ವಿನಃ ಬೇರೇನೂ ಮಾಡಿಲ್ಲ ಎಂಬುದಕ್ಕೆ ಲಂಕಾದಲ್ಲಿನ ತಮಿಳರ ಸ್ಥಿತಿಗತಿಯೇ ಅದಕ್ಕೆ ಸಾಕ್ಷಿ. 

ರಾಜಕೀಯ ಮುಖಂಡರು,ಪಕ್ಷಗಳು ಸಂದರ್ಭಕ್ಕೆ ತಕ್ಕಂತೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದಕ್ಕೆ ತಮಿಳುನಾಡಿನ ರಾಜಕೀಯ ಪಕ್ಷ, ಮುಖಂಡರು ಇತ್ತೀಚಿಗಿನ ಜ್ವಲಂತ ಸಾಕ್ಷಿ. ಇದು ರಾಮಜನ್ಮಭೂಮಿ, ಸಿಖ್ ಹತ್ಯಾಕಾಂಡ, ಗೋದ್ರಾ ಹತ್ಯಾಕಾಂಡ, ನಂದಿಗ್ರಾಮ ಹಿಂಸಾರ, ಕೋಮುಗಲಭೆ ಇವೆಲ್ಲದರ ಹಿಂದೆ ಸೂಕ್ಷ್ಮವಾಗಿ ಗಮನಿಸಿ ರಾಜಕೀಯ ಢಾಳಾಗಿ ಕಾಣಿಸುತ್ತೆ....