Sunday, November 30, 2008

ಉಗ್ರರ ದಾಳಿ ಮತ್ತು ಲಜ್ಜೆಗೆಟ್ಟ ರಾಜಕಾರಣಿಗಳು....

ಆರ್ಥಿಕ ವಹಿವಾಟಿನ ಬೆನ್ನಲುಬಾಗಿರುವ ವಾಣಿಜ್ಯ ನಗರಿ ಮುಂಬೈಯಲ್ಲಿ 1993ರಲ್ಲಿ ಖತರ್‌ನಾಕ್ ಉಗ್ರರು ಸರಣಿ ಬಾಂಬ್ ಸ್ಫೋಟದ ದಾಳಿ ನಡೆಸಿದ್ದರು. ಈ ಸ್ಫೋಟ ಸಂಭವಿಸಿ 15ವರ್ಷಗಳಾಗುತ್ತ ಬಂತು. ಆ ಘಟನೆಯಿಂದ ಆರಂಭಿಸಿ ಈವರೆಗೂ ದೇಶಾದ್ಯಂತ ಉಗ್ರರು ಅಮಾಯಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಲೇ ತಮ್ಮ ದುಷ್ಕೃತ್ಯದ ಅಟ್ಟಹಾಸವನ್ನು ಮುಂದುವರಿಸಿದ್ದಾರೆ. ಪ್ರತಿ ಸಂದರ್ಭದಲ್ಲೂ ನಮ್ಮ ಲಜ್ಜೆಗೆಟ್ಟ ರಾಜಕಾರಣಿಗಳು ಇಂತಹದ್ದೊಂದು ಘಟನೆ ನಡೆಯಬಾರದಿತ್ತು, ಕೆಲವು ತಿಂಗಳ ಹಿಂದೆಯೇ ಗುಪ್ತಚರ ಇಲಾಖೆಗೆ ಮಾಹಿತಿ ದೊರಕಿತ್ತು, ಇನ್ನು ಮುಂದೆ ಇಂತಹ ಘಟನೆ ಸಂಭವಿಸಿದಂತೆ ಎಚ್ಚರ ವಹಿಸುತ್ತೇವೆ ಎಂಬಂತಹ ಎಡಬಿಡಂಗಿತನದ ಹೇಳಿಕೆ ನೀಡುತ್ತಲೇ ನಪುಂಸಕ ರಾಜಕಾರಣಿಗಳು ಐಷಾರಾಮವಾಗಿ ಕಾಲ ಕಳೆಯುತ್ತಿರುವುದನ್ನು ನೋಡಿದರೆ ಅಹಸ್ಯ ಮೂಡಿಸುತ್ತೆ.

ಅಮೆರಿಕದ ಪ್ರಮುಖ ವಾಣಿಜ್ಯ ಕೇಂದ್ರವಾದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 2001 ಸೆಪ್ಟೆಂಬರ್ 11ರಂದು ಉಗ್ರರು ದಾಳಿ ನಡೆಸುವ ಮೂಲಕ ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡ ದೇಶವೇ ಬೆಚ್ಚಿ ಬಿದ್ದಿತ್ತು. ಹಾಗಂತ ಆ ದೇಶದ ರಾಜಕಾರಣಿಗಳು, ಅಧ್ಯಕ್ಷರು ಪಡಪೋಷಿತನ ತೋರಿಸಿಲ್ಲ, ಆ ಘಟನೆಯ ಬಳಿಕ ಅಲ್ ಕೈದಾ, ತಾಲಿಬಾನ್ ಎಷ್ಟೇ ಗಂಟಲು ಹರಿದುಕೊಂಡರು ಕೂಡ ಅಮೆರಿಕದ ಕೂದಲನ್ನು ಎರಡನೇ ಬಾರಿ ಕೊಂಕಿಸಲು ಸಾಧ್ಯವಾಗಿಲ್ಲ.

ಅವೆಲ್ಲಕ್ಕಿಂತ ಚಿಂತಿಗೀಡು ಮಾಡುವ ವಿಷಯ ಏನೆಂದರೆ, ಕಳೆದ ಎರಡು-ಮೂರು ವರ್ಷಗಳಿಂದ ಉಗ್ರರು ಲೀಲಾಜಾಲವಾಗಿ ಸ್ಫೋಟ ಕೃತ್ಯವನ್ನು ಎಸಗುತ್ತಲೇ ಇದ್ದರೂ ಕೂಡ, ಜನಸಾಮಾನ್ಯರಿಗೆ ವ್ಯವಸ್ಥಿತ ರಕ್ಷಣೆ ನೀಡಲು ಇನ್ನೂ ಸಾಧ್ಯವಾಗಿಲ್ಲ. ತಾಜ್, ಒಬೆರಾಯ್ ಹಾಗೂ ನಾರಿಮನ್ ಹೌಸ್‌ಗಳೊಳಗೆ ನುಗ್ಗಿದ ಉಗ್ರರು ಮನಬಂದಂತೆ ಗುಂಡಿನ ಸುರಿಮಳೆಗೆರೆದಿದ್ದಾರೆ. ಈ ಘಟನೆ ನ.27ರ ರಾತ್ರಿ 9.30ಕ್ಕೆ, ಘಟನೆ ನಡೆದಾಗ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಅವರು ಕೇರಳದಲ್ಲಿದ್ದರು. ವಿಷಯ ತಿಳಿದ ಮುಂಬೈಗೆ ವಾಪಸಾಗಿ, ರಾತ್ರಿ 11ಗಂಟೆಗೆ ನರಸತ್ತ ಗೃಹಸಚಿವ ಶಿವರಾಜ್ ಪಾಟೀಲ್ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಸುಮಾರು 200ಎನ್‌ಎಸ್‌ಜಿ ಕಮಾಂಡೋಗಳನ್ನು ಕಳುಹಿಸುವಂತೆ ಮನವಿ ಮಾಡಿದ್ದರು.

ಅಷ್ಟರಲ್ಲಿ ಹಲವಾರು ಮಂದಿ ಎನ್ಎಸ್‌ಜಿ ಕಮಾಂಡೋಗಳು ನಿದ್ರೆಗೆ ಶರಣಾಗಿದ್ದರು, ಎನ್ಎಸ್‌ಜಿಗೆ ವಿಷಯ ತಿಳಿಯುತ್ತಿದ್ದಂತೆಯೇ ಎಲ್ಲೂ ಪೂರ್ವ ತಯಾರಿಯೊಂದಿಗೆ ತಯಾರಾಗುವಾಗ, ಐಎಲ್-76ವಿಮಾನ ಇಂಧನ ತುಂಬಿಸಿಕೊಂಡು ಬರುವಾಗ ರಾತ್ರಿ 2ಗಂಟೆ ಕಳೆದಿತ್ತು! ಆ ಬಳಿಕ ದೆಹಲಿಗೆ ಆಗಮಿಸಿ, ಬಸ್ ಏರುವ ಹೊತ್ತಿಗೆ ಬೆಳಗಿನ ಜಾವ 5.25, ನಂತರ ಎರಡು ತಂಡಗಳಾಗಿ ತಾಜ್, ಒಬೆರಾಯ್‌ನಲ್ಲಿ ಕಾರ್ಯಾಚರಣೆಗೆ ತೊಡಗಿದಾಗ ಸಮಯ 7 ಗಂಟೆ. ಅಂದರೆ ಘಟನೆ ನಡೆದು 10ಗಂಟೆಯ ಬಳಿಕ ಕಾರ್ಯಾಚರಣೆ ಆರಂಭವಾಗಿತ್ತು. ನಮ್ಮ ರಕ್ಷಣಾ ವ್ಯವಸ್ಥೆಯ ಕಥೆ ಯುದ್ದ ಕಾಲೇ ಶಸ್ತ್ರಾಸ್ತ್ರಭ್ಯಾಸ ಎಂಬಂತಾಗಿದೆ. ಇಲ್ಲಿ ನಾನು ಎನ್‌ಎಸ್‌ಜಿಯನ್ನು ತೆಗಳುತ್ತಿಲ್ಲ. ಏನೇ ಆದರು ಶಂಖದಿಂದ ತೀರ್ಥ ಎಂಬಂತೆ, ದೆಹಲಿಯಿಂದ ಕಮಾಂಡೋ ಪಡೆ ಆಗಮಿಸಿ ಉಗ್ರರನ್ನು ಸದೆಬಡಿಯುವುದರೊಳಗೆ ಅವರೇನು ಕಡಲೆ ತಿನ್ನುತ್ತ ಕೂತಿರುತ್ತಾರಾ? ಅದೇ ರೀತಿ ಇತ್ತೀಚೆಗಷ್ಟೇ ಹುಬ್ಬಳ್ಳಿ ಸಮೀಪದ ಕಿರು ಸೇತುವೆಯೊಂದರ ಬಳಿ ಬಾಂಬ್ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂದೇಶ ರವಾನಿಸಲಾಗಿತ್ತು, ಆದರೆ ಬಾಂಬ್ ನಿಷ್ಕ್ರಿಯ ದಳ ಇರುವುದು ಬೆಂಗಳೂರಿನಲ್ಲಿ. ಅವರು ತಯಾರಿ ನಡೆಸಿ ಆ ಸ್ಥಳ ತಲುಪುವಾಗ ರಾತ್ರಿ 8ಗಂಟೆ ಕಳೆದಿತ್ತು!!...

ಇಷ್ಟೆಲ್ಲಾ ಸ್ಫೋಟ, ದಾಳಿ ನಡೆಯುತ್ತಿದ್ದರೂ ಕೂಡ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ, ಮಾಧ್ಯಮಗಳ ಮೂಲಕ ಹೇಳಿಕೆ ನೀಡುವುದು ಮತ್ತೆ ಸುಮ್ಮನಾಗುವುದು. ಮತ್ತೊಂದು ಅಂತಹುದೇ ದಾಳಿ ನಡೆದಾಗ ಮತ್ತೆ ಎಚ್ಚೆತ್ತುಕೊಳ್ಳುವುದು. ಹೀಗೆ ನಡೆದರೆ ಇನ್ನು ಮುಂದೆ ಎಲ್ಲಿಯೂ ನೆಮ್ಮದಿಯಿಂದ ತಿರುಗಾಡಲು ಸಾಧ್ಯವಿಲ್ಲದಂತಾಗುವ ಪರಿಸ್ಥಿತಿ ದೂರವಿಲ್ಲ ಎಂದೇ ಹೇಳಬೇಕಾಗುತ್ತದೆ. ಆಹಾ ಸೆಕ್ಯುಲರ್ ಇಂಡಿಯಾ, ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ದೈನೇಸಿ ಸ್ಥಿತಿ ನೋಡಿ, ಭಯೋತ್ಪಾದನೆ, ದೇಶದ್ರೋಹದಂತಹ ಬೀಭತ್ಸ ಘಟನೆ ಎಲ್ಲೆಂದರಲ್ಲಿ ರಣಕೇಕೆ ಹಾಕುತ್ತಿದ್ದರೆ, ದರಿದ್ರ ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಲೇ ಅಮಾಯಕರ ರಕ್ತಹೀರುವ ಉಗ್ರರ ಕೃತ್ಯಕ್ಕೆ ಇವರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದೇ ಹೇಳಬೇಕು. ಅದಿಲ್ಲದಿದ್ದರೆ ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾಯ್ದೆಯೊಂದನ್ನು ಜಾರಿಗೆ ತರಬೇಕು ಎಂಬ ಕೂಗಿಗೆ ಕಿವುಡರಂತೆ, ಈಗ ಇರುವ ನಮ್ಮ ಕಾನೂನೇ ಉಗ್ರರನ್ನು ಸದೆಬಡಿಯಲು ಬಲಿಷ್ಠವಾಗಿದೆ ಎಂಬ ಪೌರುಷದ ಮಾತುಗಳನ್ನಾಡುತ್ತಿದ್ದಾರೆ.
ಪೋಟಾ ಬೇಡ, ಟಾಡಾ ಬೇಡ, ಫೆಡರಲ್ ಏಜೆನ್ಸಿ ಬೇಡ ಎಂದೆನ್ನುವ ಈ ಕಚ್ಚೆಹರುಕ ರಾಜಕಾರಣಿಗಳಿಗೆ ಮಾತ್ರ ಎನ್ಎಸ್‌ಜಿ ಬ್ಲಾಕ್ ಕಮಾಂಡೋಗಳ ಭದ್ರಕೋಟೆಯ ರಕ್ಷಣೆ ಬೇಕು. ಅಲ್ಲದೇ ಈ ಮೊದಲು ಉಗ್ರರು ನಡೆಸುತ್ತಿರುವ ದಾಳಿಯ ವೈಖರಿಯೇ ಬದಲಾಗಿದೆ ಎಂದ ಮೇಲೆ ನಮ್ಮ ಒಬಿರಾಯನ ಕಾಲದ ರಕ್ಷಣಾ ವ್ಯವಸ್ಥೆ ಹಾಗೂ ಎಡಬಿಡಂಗಿ ಹೇಳಿಕೆ ನೀಡುತ್ತಲೇ ಕಾಲ ಕಳೆಯುತ್ತಿದ್ದರೆ ಜನಸಾಮಾನ್ಯರ ಗತಿ ಏನು? ಹಾಗೇ ಸ್ಫೋಟ ಕೃತ್ಯದ ಪ್ರಾಯಶ್ಚಿತ್ತ ಎಂಬಂತೆ ಗೃಹಸಚಿವ, ಮುಖ್ಯಮಂತ್ರಿ ತಲೆದಂಡದಿಂದ ಅದ್ಯಾವ ಪುರುಷಾರ್ಥ ಸಾಧ್ಯ.....

Wednesday, October 8, 2008

ಅಸ್ಪ್ರಶ್ಯ ಬುದ್ಧ ...!!


ಮನುಷ್ಯ, ಮನುಷ್ಯರ ನಡುವಿನ ಕ್ರೌರ್ಯ, ಅಸಮಾನತೆ, ಘರ್ಷಣೆಗಳಿಂದ ಸಮಾಜದ ಜನರು ತೊಳಲಾಡುತ್ತಿದ್ದ ಸಂದರ್ಭದಲ್ಲಿಯೇ ಗೌತಮ ಬುದ್ಧ, ಮಹಾವೀರ, ಯೇಸು, ಬಸವಣ್ಣ, ಗಾಂಧಿಯಂತಹ ವ್ಯಕ್ತಿಗಳು ಜನಸಮುದಾಯದ ನಡುವೆ ಹೊಗೆಯಾಡುತ್ತಿದ್ದ ವೈರುಧ್ಯಗಳ ವಿರುದ್ಧ ಸಮರ ಸಾರಿದ್ದರು. ಬುದ್ಧನ ಕಾಲದ ಸಂದರ್ಭದಲ್ಲಿ ಭಾರತ ಜಾತಿ, ಅಸಮಾನತೆ, ಅಸ್ಪ್ರಶ್ಯತೆಗಳಿಂದ ನರಳುತ್ತಿತ್ತು. ಅದೂ ಅಲ್ಲದೇ ಹಿಂದೂ ಎನಿಸಿಕೊಂಡು,ಶೂದ್ರ ಜನಾಂಗದವರು ಅಕ್ಷರಶಃ ಪ್ರಾಣಿಗಳಂತೆ ಸಮಾಜದಲ್ಲಿ ಬದುಕುತ್ತಿದ್ದ ಸ್ಥಿತಿ. ಸಂಸ್ಕೃತ ಶ್ಲೋಕಗಳನ್ನು ಶೂದ್ರನಾದವ ಕೇಳಿಸಿಕೊಳ್ಳಲೇ ಬಾರದು ಎಂಬಂತಹ ಫರ್ಮಾನು ಇತ್ತು.


ಇಂತಹ ಅಮಾನವೀಯ ಕಟ್ಟು-ಕಟ್ಟಳೆಗಳಿಂದ ಹಿಂದೂ ಸಮಾಜ ರೋಗಗ್ರಸ್ಥವಾಗಿತ್ತು.ಆ ಸಂದರ್ಭದಲ್ಲಿ ಅದೊಂದು ಬದಲಾವಣೆಗಾಗಿ ಹಿಂದುಳಿದ ಸಮುದಾಯ ಹಾತೊರೆಯುತ್ತಿತ್ತು. ಅಸಮಾನತೆ, ಜಾತಿ, ದೇವರು, ದಿಂಡರು, ಮೂಢನಂಬಿಕೆಗಳಿಂದ ನರಳುತ್ತಿದ್ದ ಜನಸಾಮಾನ್ಯರ ಬದುಕಿಗೆ ಜ್ಞಾನದ ಬೆಳಕಾಗಿ ಆವಿರ್ಭವಿಸಿದಾತ ಗೌತಮ ಬುದ್ಧ. ಅ.9 ಆತನ ಜನ್ಮ ಜಯಂತಿಯಾಗಿದ್ದು, ಅಹಿಂಸೆ ಎಂಬ ಮಹಾನ್ ಮಂತ್ರದ ಮೂಲಕ ಸಮಾಜದಲ್ಲಿನ ಕ್ರೌರ್ಯ, ಮೌಢ್ಯಗಳ ವಿರುದ್ಧ ಹೋರಾಡಿದ ದಿವ್ಯ ಚೇತನ ಬುದ್ಧ.


ದ್ವೇಷದ ದಳ್ಳುರಿ, ಜಿಹಾದ್, ಧರ್ಮ, ಜಾತಿಯ ಅಮಲಿನಲ್ಲಿ ರಕ್ತದ ಕೋಡಿ ಹರಿಸುತ್ತಿರುವ ಈ ಸಂದರ್ಭದಲ್ಲಿ ಬುದ್ಧ ಮತ್ತೆ, ಮತ್ತೆ ನೆನಪಾಗುತ್ತಾನೆ. ಬುದ್ಧ ಸಂದೇಶ ಈಗಲೂ ಪ್ರಸ್ತುತ ಎಂಬ ಆಶಯದೊಂದಿಗೆ ಈ ಲೇಖನ.


ಲುಂಬಿನಿಯಲ್ಲಿ ಜನ್ಮತಳೆದ ಸಿದ್ದಾರ್ಥ (ಗೌತಮ)ಅರಮನೆಯಿಂದ ಹೊರಬಂದು ರಥ ಪ್ರಯಾಣದ ಸಂದರ್ಭದಲ್ಲಿ ವೃದ್ದರನ್ನು,ಶವ ಯಾತ್ರೆಯಂತಹ ಘಟನೆಗಳನ್ನು ನೋಡಿದ ಬಳಿಕ ಚಂಚಲ ಚಿತ್ತನಾದ ಆತನಿಗೆ ಈ ಎಲ್ಲಾ ಬೆಳವಣಿಗಳು ಆತನನ್ನು ಅಂತರ್ಮುಖಿಯನ್ನಾಗಿಸಿ, ಅರಮನೆ ತ್ಯಜಿಸುವಂತೆ ಮಾಡಿತ್ತು ಎಂಬುದು ಪ್ರಚಲಿತ ಇತಿಹಾಸ. ಆದರೆ ಗೌತಮ ನಿಜಕ್ಕೂ ಅಂತಹ ಸನ್ನಿವೇಶಗಳನ್ನು ಕಂಡು ಮಧ್ಯರಾತ್ರಿಯಲ್ಲಿ ಅರಮನೆ ತೊರೆದು ಸಮಾಜೋದ್ಧಾರಕ್ಕೆ ಹೊರಟಿದ್ದನೇ ಎಂಬುದು ಪ್ರಶ್ನೆ.


ಇತಿಹಾಸದ ಪುರಾವೆಗಳು ಇಂದಿಗೂ ನೈಜ ಸತ್ಯವನ್ನು ಬಿಚ್ಚಿಟ್ಟಿಲ್ಲ ಎಂಬುದಕ್ಕೆ ಇಂದಿಗೂ ಜನಮಾನಸದ ಮನಸ್ಸುಗಳನ್ನು ಆಕ್ರಮಿಸಿ ನಡೆಸುತ್ತಿರುವ ಘಟನೆಗಳೇ ಸಾಕ್ಷಿ. ಅದಕ್ಕೆ ಪೂರಕವೆಂಬಂತೆ ಸತ್ಯವನ್ನು ತಿರುಚಿ ಬರೆದಿರುವ ಇತಿಹಾಸಗಳೇ ಇಂದು ನಮ್ಮನ್ನ ಅಧಃಪತನದತ್ತ ತಳ್ಳುತ್ತಿದೆ ಎಂಬುದನ್ನು ಮನಗಾಣಬೇಕಾಗಿದೆ. ಸಿದ್ದಾರ್ಥ ಅಂದು ಅರಮನೆ ತೊರೆದದ್ದು ಶಾಕ್ಯ ಮತ್ತು ಕೋಲಿ ರಾಜ್ಯಗಳ ನಡುವೆ ಉದ್ಭವಿಸಿದ ರೋಹಿಣಿ ನದಿ ನೀರಿನ ಹಂಚಿಕೆ ವಿಷಯವೇ ಪ್ರಮುಖವಾಗಿತ್ತು.


ನಿಸರ್ಗದ ಸಂಪತ್ತನ್ನು ಸಕಲ ಜೀವಿಗಳು ಸಮಾನವಾಗಿ ಪಡೆಯಬೇಕು,ಅದು ರಕ್ತಪಾತದಿಂದ ಅಲ್ಲ,ಯುದ್ಧವಿಲ್ಲದೆ ಅಹಿಂಸೆಯ ಮೂಲಕ ನದಿ ನೀರನ್ನು ಪಡೆಯಬೇಕು ಎಂಬ ನಿಲುವು ತಳೆದಿದ್ದ. ಈ ಧೋರಣೆ ಆತನನ್ನು ಶಾಕ್ಯ ರಾಜ್ಯದಿಂದ ಬಹಿಷ್ಕಾರಕ್ಕೆ ಒಳಗಾಗುವ ಮೂಲಕ ಅರಮನೆ ತ್ಯಜಿಸಿ ಮನುಕುಲದ ಕಲ್ಯಾಣಕ್ಕಾಗಿ ಹೋರಾಟ ನಡೆಸಿ ಬುದ್ಧನಾಗಿದ್ದ.


ಆ ಕಾರಣಕ್ಕಾಗಿಯೇ ಬುದ್ಧ ಯಾವತ್ತೂ ದೇವರ-ದಿಂಡಿರು,ಮೌಢ್ಯತೆಗಳಿಂದ ಜನರನ್ನು ಸೆಳೆಯಲಿಲ್ಲ. ಅಸಮಾನತೆಯನ್ನು ತೊಡೆದು, ಜಾತಿಯನ್ನು ಧಿಕ್ಕರಿಸಿ ಮುಂದುವರಿಯುವ ಮೂಲಕ ಜನಮಾನಸದಲ್ಲಿ ಭದ್ರ ನೆಲೆ ಕಂಡುಕೊಂಡಿದ್ದ. ಆವಾಗಲೂ ಬುದ್ಧ ತಾನೊಬ್ಬ ಚಿಕಿತ್ಸಕ ಎಂದೇ ಹೇಳುತ್ತಿದ್ದ. ಹಾಗಂತ ಗೌತಮ ಯಾವುದೇ ಔಷಧವನ್ನು ನೀಡುವ ವೈದ್ಯನಾಗಿರಲಿಲ್ಲ, ಆತ ಜಾಗೃತಿ ಬಗ್ಗೆ ಹೇಳುತ್ತಿದ್ದ ಚಿಕಿತ್ಸಕನಾಗಿದ್ದ. ಮೊದಲು ನೀವು ಜಾಗೃತರಾಗಿ, ಬೋಧಪೂರ್ಣರಾಗಿ ಎಂದೇ ಹೇಳುತ್ತಿದ್ದ.


ತಪ್ಪುಗಳೆಲ್ಲವನ್ನೂ ಸರಿಪಡಿಸಲಿರುವ ವಿಧಾನ ಒಂದೇ ಅದ್ಯಾವುದೆಂದರೆ, ಬೋಧಪೂರ್ಣರಾಗುವುದು, ಜಾಗೃತಿಯಿಂದ ಇರುವುದು ಎಂದರ್ಥ. ಹಾಗಂತ ಬುದ್ಧ ಯಾರನ್ನೂ ಬಲವಂತದಿಂದ ಯಾರನ್ನೂ ತನ್ನೆಡೆಗೆ ಸೆಳೆದಿರಲಿಲ್ಲ . ಆ ಕಾರಣದಿಂದಾಗಿ ಭಾರತದಲ್ಲಿ ಬೌದ್ಧ ಧರ್ಮ ಉಚ್ರಾಯ ಸ್ಥಿತಿ ಕಂಡಿತ್ತು. (ಹಾಗಾದರೆ ಇಂದು ಭಾರತದಿಂದಲೇ ಬೌದ್ಧ ಧರ್ಮ ಕಣ್ಮರೆಯಾದದ್ದು ಹ್ಯಾಗೆ ಎಂಬುದು ಮತ್ತೊಂದು ದುರಂತ ಇತಿಹಾಸ.)


ಆ ನಿಟ್ಟಿನಲ್ಲಿ ಧರ್ಮಾಂಧತೆ, ಮತಾಂಧತೆ, ಜೆಹಾದ್‌ನ ಕಬಂಧಬಾಹುಗಳು ಸಮಾಜದಲ್ಲಿ ರುದ್ರನರ್ತನಗೈಯುವ ಮೂಲಕ ಅಮಾಯಕರ ಆಪೋಶನ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ,ದುಷ್ಟ ಬುದ್ಧಿಯ ಜನರೇ ಹೆಚ್ಚುತ್ತಿರುವ ಸಮಯದಲ್ಲಿ, ದ್ವೇಷಾಗ್ನಿಯ ಕಿಚ್ಚು ಹಚ್ಚಿ ಮುಗ್ದ ಜನರ ಶೋಷಣೆ ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ಬುದ್ಧನ ಅಹಿಂಸೆಯ ತತ್ವ,ಸಾಂಗತ್ಯ ಹೆಚ್ಚು ಪ್ರಸ್ತುತವಾಗಿದೆ.


ಆದರೆ ದ್ವೇಷದಿಂದ, ಕೋವಿಯಿಂದ, ಬಾಂಬ್‌ನಿಂದ, ಜೆಹಾದ್‌ನಿಂದಲೇ ನಾವು ನಮ್ಮ ಹೋರಾಟವನ್ನು ಜಯಗಳಿಸುತ್ತೇವೆ ಎಂಬ ಹುಂಬ ಮನಸ್ಸುಗಳೇ ಹೆಚ್ಚುತ್ತಿರುವ ಸಮಯದಲ್ಲಿ ಬುದ್ಧ ಎಷ್ಟು ಪ್ರಸ್ತುತನಾಗಬಲ್ಲ....?!

ಎಲ್ಲಿ ಹೋಯಿತು ವಿಶ್ವಮಾನವತವಾದ

ಎಲ್ಲೆಂದರಲ್ಲಿ ಬಾಂಬು ಸ್ಫೋಟ
ಅಮಾಯಕರ ನೋವು, ಕಿರುಚಾಟ
ಸಾಲು, ಸಾಲು ಶವಗಳ ಯಾತ್ರೆ
ಎಲ್ಲಿ ಹೋಯಿತು ಬುದ್ಧನ ಅಹಿಂಸೆ

ಜಾತಿ-ಧರ್ಮ-ಜೆಹಾದ್ ಹೆಸರಲ್ಲಿ
ನಡೆದಿದೆ ಮುಗ್ದ ಜನರ ಮಾರಣಹೋಮ
ದಗದಹಿಸುತ್ತಿದೆ ದ್ವೇಷದ ಅಗ್ನಿಕುಂಡು
ಎಲ್ಲಿ ಹೋಯಿತು ಗಾಂಧಿಯ ಶಾಂತಿಮಂತ್ರ

ಮತ-ಮತಾಂತರಗಳ ಕಿತ್ತಾಟ
ಮಸೀದಿ, ಮಂದಿರ, ಚರ್ಚ್ ಧ್ವಂಸ
ನಲುಗಿದೆ ಹೋಗಿದೆ ಕೋಮುಸೌಹಾರ್ದ
ಎಲ್ಲಿ ಹೋಯಿತು ವಿಶ್ವಮಾನವತವಾದ

ಬಾಂಬು, ತ್ರಿಶೂಲಗಳ ಅಟ್ಟಹಾಸ
ಹರಡಿದೆ ಎಲ್ಲೆಡೆ ಕೋಮುದ್ವೇಷ
ಮರೆಯಾಗಿದೆ ಬುದ್ಧ-ಗಾಂಧಿ ಸಂದೇಶ
ಎಲ್ಲಿ ಹೋಯಿತು ಪ್ರೀತಿ-ವಿಶ್ವಾಸ

ಫ್ಯಾಸಿಸಮ್ V/s ಹಿಂದೂಯಿಸಂ

ರಾಜ್ಯದಲ್ಲಿ ಪ್ರಾರ್ಥನಾ ಮಂದಿರ, ಚರ್ಚ್‌ಗಳ ಮೇಲೆ ದಾಳಿ ನಡೆದ ಬಳಿಕ ಗುಲ್ಬರ್ಗಾದ ಸ್ವಾಮಿಯೊಬ್ಬರು ಈ ದೇಶದಲ್ಲಿರುವ ಮುಸ್ಲಿಂ, ಕ್ರೈಸ್ತರನ್ನು ನಾಶಮಾಡಲು ಹಿಂದೂಗಳ ಕೈ ಬಲಪಡಿಸಬೇಕಾಗಿದೆ ಎಂಬುದಾಗಿ ಬಹಿರಂಗವಾಗಿ ಫರ್ಮಾನು ಹೊರಡಿಸಿದ್ದರು. ಅದ್ಯಾವ ಘನಂದಾರಿಯಾಗಿ (ಅವರು ಉಪ್ಪು-ಖಾರ ತಿಂದವರು, ಈ ರೀತಿ ಮತಾಂತರ ಮಾಡುತ್ತಿದ್ದರೇ ಮತ್ತೇನು ಶೋಭಾನೆ ಹಾಡಬೇಕಾ ಅಂತ ನೀವು ಕೇಳಬಹುದು) ಮೈಮೇಲೆ ಖಾವಿ ಬಟ್ಟೆ ಧರಿಸಿದರೋ, ಧರ್ಮಗುರುಗಳಲ್ಲಿ ದ್ವೇಷ, ಸಿಟ್ಟು, ಕೆಡಕು ಇರಬಾರದು ಎಂದು ಹೇಳುತ್ತಾರೆ. ಅದರೆ ಈ ಸ್ವಾಮಿಗಳು ಆಕ್ರೋಶದಿಂದ ನುಡಿಯುವ ಮಾತು ಕೇಳಿದರೆ ಆಶ್ಚರ್ಯವಾಗುತ್ತದೆ.

ಯಾವುದೇ ಧರ್ಮದ ಮುಲ್ಲಾಗಳಿರಲಿ, ಪಾದ್ರಿ, ಪುರೋಹಿತ, ಸ್ವಾಮಿ ಎಲ್ಲಾ ಧರ್ಮಗಳು ಸಾರುವುದು ಒಂದೇ, ದೇವನೊಬ್ಬ ನಾಮ ಹಲವು ಎಂದೆಲ್ಲಾ ಅಣಿಮುತ್ತು ಉದುರಿಸಿ, ಈ ರೀತಿ ಬೆಂಕಿ ಹಚ್ಚಲು ಕೈ ಬಲಪಡಿಸಿ ಎಂದರೆ, ಜೀವ ತೆಗೆಯುವವರನ್ನು ಯಾರಾದರೂ ದೈವತ್ವಕ್ಕೆ, ಸ್ವಾಮಿ ಎಂದೆಲ್ಲಾ ಕರೆಯಿಸಿಕೊಳ್ಳಲು ಅರ್ಹರಾಗುತ್ತಾರಾ ಎಂಬುದು ಪ್ರಶ್ನೆ.

ಅಷ್ಡೇ ಅಲ್ಲ ಹಿಂದುಳಿದ ಜಾತಿಯ ಜನರನ್ನು ಆಮಿಷ ಒಡ್ಡಿ ಮತಾಂತರ ಮಾಡುತ್ತಿರುವುದು ಸತ್ಯ. ನ್ಯೂಲೈಫ್‌ನಂತಹ ಸಂಘಟನೆಗಳ ಕೆಲವು ಉದ್ದೇಶಗಳಲ್ಲಿ ಅದು ಒಂದಾಗಿದೆ. ಅದಕ್ಕೆ ಆಡಳಿತರೂಢ ಪಕ್ಷಗಳು ಕಠಿಣವಾದ ಕಾನೂನನ್ನು ಜಾರಿಗೆ ತರಬೇಕು. ಅವೆಲ್ಲಕ್ಕಿಂತ ಮುಖ್ಯವಾದ ಪ್ರಶ್ನೆಯೆಂದರೆ. ಹಿಂದೂ ನಾವೆಲ್ಲ ಒಂದು, ನಮಗಿರುವುದು ಒಂದೇ ಹಿಂದು ದೇಶ ಎಂದೆಲ್ಲ ಹಿಂದು ಧರ್ಮವನ್ನು ಗುತ್ತಿಗೆ ಹಿಡಿದವರಂತೆ ಮಾತನಾಡುವವರು ಕೂಡ ಮತಾಂಧರಂತೆ ವರ್ತಿಸುತ್ತಿದ್ದಾರೆ.

ಅದಕ್ಕೊಂದು ಸಣ್ಣ ಉದಾಹರಣೆ ನೀಡುತ್ತೇನೆ, ಕಳೆದ ಎರಡು ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಪ್ರಸಿದ್ಧ ಮಂದಾರ್ತಿ ದೇವಾಲಯದಲ್ಲಿ ಒಂದು ಪ್ರಕರಣ ನಡೆಯಿತು. ಅಲ್ಲಿನ ಯಕ್ಷಗಾನ ಮೇಳದಲ್ಲಿ ಬಿಲ್ಲವ ಜಾತಿಯವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ, ಹಾಗೇನಾದರು ಅವರು ಗೆಜ್ಜೆ ಕಟ್ಟಿ ಕುಣಿದರೆ ದೇವಿ ಮುನಿದುಕೊಳ್ಳುತ್ತಾಳೆ, ಅಷ್ಟೇ ಅಲ್ಲ ಅವರು ಸಾಯುತ್ತಾರೆ ಎಂದೆಲ್ಲಾ ಬೊಬ್ಬೆ ಹೊಡೆದರು. ಸಾಕಷ್ಟು ಹೋರಾಟ, ಪ್ರತಿಭಟನೆ ನಡೆಯಿತು. ಅಲ್ಲಿನ ಇತಿಹಾಸವನ್ನು ಕೂಡ ವ್ಯವಸ್ಥಿತವಾಗಿ ತಿರುಚುವ ಕೆಲಸವನ್ನೂ ಮಾಡಲಾಗಿತ್ತು.

ಆದರೆ ಮಂದಾರ್ತಿ ದೇವಸ್ಥಾನಕ್ಕೆ ಅತಿ ಹೆಚ್ಚಿನ ಭಕ್ತರು, ಹರಕೆ ನೀಡುವುದು ಬಿಲ್ಲವ(ಬಂಟ,ಮೊಗವೀರ ಸೇರಿದಂತೆ) ಜನಾಂಗದವರೇ, ಹೆಚ್ಚಿನ ಯಕ್ಷಗಾನ ಆಡಿಸುವುದೂ ಕೂಡ ಬಿಲ್ಲವರೇ, ಆದರೆ ಗೆಜ್ಜೆ ಕಟ್ಟಿ ಕುಣಿಯಲು ಮಾತ್ರ ಸಾಧ್ಯವಿಲ್ಲವಂತೆ !ದೇವರಿಗೆ ಬಿಲ್ಲವರ ಹರಕೆ, ಹಣ ಆಗುತ್ತದೆ ಎಂದಾದ ಮೇಲೆ, ಅದೇ ದೇವರಿಗೆ ಯಕ್ಷಗಾನದಲ್ಲಿ ಬಿಲ್ಲವ ಜಾತಿಯವನೊಬ್ಬ ಗೆಜ್ಜೆಕಟ್ಟಿ ಕುಣಿದರೆ ಆಗುವ ನಷ್ಟವಾದರೂ ಏನಿತ್ತು.

ಅದಕ್ಕಾಗಿಯೇ ಹಗಲಿರುಳು ವಿರೋಧ ವ್ಯಕ್ತಪಡಿಸಿದವರೂ ಕೂಡ ಹಿಂದೂಗಳೇ...ಕೊನೆಗೂ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಇಬ್ಬರು ಬಿಲ್ಲವರು ಗೆಜ್ಜೆಕಟ್ಟಿ ಮಂದಾರ್ತಿ ದೇವಾಲಯದ ಎದುರು ಯಕ್ಷಗಾನದಲ್ಲಿ ಹೆಜ್ಜೆ ಹಾಕಿದರು. ಯಾವ ದೇವಿಯೂ ಮುನಿಸಿಕೊಳ್ಳಲಿಲ್ಲ, ಅವರು ಸಾಯಲೂ ಇಲ್ಲ. ಈ ಕುತ್ಸಿತ ಮನೋಭಾವದ ಮನುವಾದಿಗಳು ಮಾತ್ರ ಕೆಳಗೆ ಬಿದ್ದರೂ ಮೂಗು ಮೇಲೆ ಎಂಬಂತೆ, ಗೆಜ್ಜೆ ಕಟ್ಟಿ ಕುಣಿದ ಬಿಲ್ಲವರ ಮನೆಯಲ್ಲಿ ಸಾವು ಸಂಭವಿಸಿದೆ ಎಂಬಂತಹ ಕಪೋಲಕಲ್ಪಿತ ಸುದ್ದಿಗಳನ್ನು ಹಬ್ಬಿಸತೊಡಗಿದ್ದರು.

ಅದೇ ರೀತಿ ಮತಾಂತರ, ದಾಳಿ ನಡೆದಾಗ ಬೊಬ್ಬೆ ಹೊಡೆಯುವ ಉಡುಪಿ ಪೇಜಾವರಶ್ರೀಗಳು ಕೂಡ ಮೊದಲು ಉಡುಪಿ ಮಠದಲ್ಲಿ ಬ್ರಾಹ್ಮಣೇತರರನ್ನು ನೋಡುವ ದೃಷ್ಟಿಕೋನ ಹೇಗಿದೆ, ಇಲ್ಲಿ ಒಳಗೆ ಪ್ರವೇಶವಿಲ್ಲ,ಬಾವಿಯನ್ನು ಮುಟ್ಟಬೇಡಿ ಎಂಬಂತಹ ನಾಮಫಲಕಗಳು ಇಂದಿಗೂ ದೇವಾಲಯಗಳಲ್ಲಿ ರಾರಾಜಿಸುತ್ತಿದೆ.

ನಾಗಮಂಡಲಗಳಲ್ಲಿ ನಡೆಯುವ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲೂ ಪ್ರತ್ಯೇಕ ಊಟದ ವ್ಯವಸ್ಥೆ,ಇಂದಿಗೂ ಉಳಿದು ಬಂದಿರುವ ಮನು ಸಿದ್ದಾಂತದ ಮಡಿ-ಮೈಲಿಗೆ ದಲಿತರು ಸೇರಿದಂತೆ ಇನ್ನುಳಿದ ಕೆಳಜಾತಿಗಳನ್ನು ನಮ್ಮ ಹಿಂದು ಧರ್ಮ ನೋಡುವ ದೃಷ್ಟಿಕೋನದ ಬಗ್ಗೆ ನೀವೇ ಯಾಕೆ ಧ್ವನಿ ಎತ್ತುತ್ತಿಲ್ಲ. ಕೇವಲ ತ್ರಿಶೂಲ, ಲಾಠಿ ಹಿಡಿದು ಜೈ ಭಾರತ್ ಮಾತಾ ಕೀ ಅಂತ ರಕ್ತದೋಕುಳಿ ಹರಿಸಲು ಮಾತ್ರ ಹಿಂದೂ-ನಾವೆಲ್ಲ ಒಂದು ಅಂತ ಬೊಬ್ಬೆ ಹೊಡೆಯುವುದರಲ್ಲಿ ಅದ್ಯಾವ ಪುರುಷಾರ್ಥ ಅಡಗಿದೆ.

ಬಲವಂತದ ಮತಾಂತರ, ದಾಳಿ, ಭಯೋತ್ಪಾದನೆಯನ್ನು ನಾವೆಲ್ಲ ಖಂಡಿಸೋಣ, ಹಾಗೇ ಹಿಂದು ಧರ್ಮದೊಳಗಿನ ಅಸಮಾನತೆ, ಜಾತಿ, ಅಸ್ಪಶ್ರ್ಯತೆ ಬಗ್ಗೆಯೂ ತಿಳಿದು ಮಾತನಾಡಿದರೆ ವಾಸ್ತವದ ಅರಿವಾಗುತ್ತದೆ. ಹಿಂದುಳಿದ ವರ್ಗದ ಜನಗಳು ಯಾಕೆ ಅಮಿಷಕ್ಕೆ ಒಳಗಾಗಿ ಮತಾಂತರವಾಗುತ್ತಿದ್ದಾರೆ ಎಂಬ ಕುರಿತು ಮೊದಲು ಅರಿತುಕೊಳ್ಳಬೇಕು...

ಮಹಾತ್ಮನೆಂದರೆ ಅದ್ಯಾಕೆ ಮುನಿಸು...

ಬಾಪೂಜಿ ನಿಮ್ಮ ಬಗ್ಗೆ ಏನೆಂದು ಮಾತನಾಡಿಕೊಳ್ಳಲಿ,ನಿಮ್ಮ ಬಗ್ಗೆ ಮಾತನಾಡುವುದಾಗಲಿ,ಹೆಸರು ಹೇಳುವುದಾಗಲಿ ಎಲ್ಲವೂ ಅಪರಾಧ ಎಂಬಂತೆ ಆಗಬಿಟ್ಟಿದೆ.ಅದ್ಯಾಕೋ ಯುವಪೀಳಿಗೆಗಂತೂ ಗಾಂಧಿ ಎಂಬ ಶಬ್ದ ಕೇಳಿದರೆ ಸಾಕು,ಯಾವ ಜನ್ಮಾಂತರದ ದ್ವೇಷವೇನೋ ಎಂಬ ತೆರನಾಗಿ ಉರಿದು ಬೀಳುತ್ತಾರೆ. ಪಾಪ ಅವರಿಗೇನು ಗೊತ್ತು ನೀವು ಬದುಕಿರುವಾಗಲೇ ಎಲ್ಲ ಒಳಿತು-ಕೆಡುಕುಗಳ ಮಾತುಗಳನ್ನು ಕೇಳಿ ಸೌಹಾರ್ದತೆಗಾಗಿ ಹೋರಾಡಿಯೇ ಹಿಂದು ಬಾಂಧವನಿಂದಲೇ ಹತ್ಯೆಗೊಳಗಾಗಬೇಕಾಯಿತೆಂದು.

ನಿಮ್ಮ ಹೆಸರೀಗ ಕೇವಲ ಸಿನಿಮಾ ಟಾಕೀಸಿನ ಮುಂಭಾಗದಲ್ಲಿ,ರಂಗಸ್ಥಳದ ಎದುರಿನ ನೆಲದ ಮೇಲೆ ಕುಳಿತುಕೊಳ್ಳುವವರು, ಕ್ಲಾಸಿಗೆ ಚಕ್ಕರ್ ಹೊಡೆಯದೇ ಇರುವವರು ಹೀಗೆ ಅಲ್ಲೆಲ್ಲಾ ನಿನ್ನ ಹೆಸರು ಬಳಕೆಯಾಗುತ್ತದೆ. ಇಂವ ದೊಡ್ಡ ಗಾಂಧಿ ಮೊಮ್ಮಗ,ಗಾಂಧಿ ಕ್ಲಾಸ್ ಹೀಗೆ ನಾಮವಿಶೇಷಣಗಳ ಹಣೆಪಟ್ಟಿ ಹಚ್ಚಲಾಗುತ್ತದೆ.

ಈ ದೇಶ ಇಬ್ಭಾಗವಾಗಲು,ಮುಸ್ಲಿಂರನ್ನು ಹೆಗಲ ಮೇಲೆ ಹೊತ್ತುಕೊಂಡು ಓಲೈಕೆ ಮಾಡಿಕೊಂಡು, ಅವರ ಉಳಿವಿಗಾಗಿಯೇ ಉಪವಾಸ, ಅಹಿಂಸೆ ಮಣ್ಣು ಬೂದಿ ಅಂತ ಬ್ಲ್ಯಾಕ್ ಮೇಲ್ ಮಾಡಿಯೇ ಭಾರತೀಯ ಹಿಂದೂಗಳ ಮೇಲೆ ಚಪ್ಪಡಿ ಎಳೆದ ಗಾಂಧಿಯ ಹೆಸರು ಹೇಳಬೇಡಿ.

ಆತ ದೊಡ್ಡ ಖದೀಮ ಭಗತ್ ನೇಣಿಗೆ ಏರುವ ಸಂದರ್ಭದಲ್ಲಿಯೂ ದುಂಡು ಮೇಜಿನ ಮಾತುಕತೆಯಲ್ಲಿ ತುಟಿ ಪಿಟಕ್ ಎನ್ನದೇ ಇದ್ದ ಪರಿಣಾಮ ಗಲ್ಲಿಗೇರುವಂತಾಯಿತು, ಭಾರತದ ಪ್ರಥಮ ಪ್ರಧಾನಿ ಸರ್ದಾರ ವಲ್ಲಭಬಾಯಿ ಪಟೇಲ್ ಆಗಬೇಕಾಗಿದ್ದು, ಅದನ್ನು ತಮ್ಮ ಆಪ್ತ ನೆಹರೂಗೆ ಒಪ್ಪಿಸಿದ್ದು ಹೀಗೆ ತಾತಾನ ಮೇಲೆ ಅನೇಕ ಗುರುತರವಾದ ಆಪಾದನೆಗಳಿವೆ.

ಅವೆಲ್ಲಕ್ಕಿಂತ ಹೆಚ್ಚಾಗಿ ತಾತಾ ನೀನೊಬ್ಬ ಕಟ್ಟಾ ಹಿಂದೂ,ಸಂಪ್ರದಾಯವಾದಿ,ಹೇ ರಾಮ್ ಮಂತ್ರ ಜಪಿಸುತ್ತಲೇ ಸರ್ವ ಧರ್ಮ ಸಮನ್ವಯಕ್ಕಾಗಿ ಹೋರಾಡಿದ ಅರೆ ಬೆತ್ತಲೆ ಫಕೀರ ಎಂಬುದು ಪೂರ್ವಾಗ್ರಹ ಪೀಡಿತ ಮನಸ್ಸಿನ ಆಳಕ್ಕೆ ಇಳಿಯುವುದೇ ಇಲ್ಲ. 1948ರ ಆಗೋಸ್ಟ್ 15ರಂದು ಅಮೃತಸರದಲ್ಲಿ ಸಿಖ್ ಸಮುದಾಯ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ 30 ಮುಸ್ಲಿಂ ಮಹಿಳೆಯರನ್ನು ಬಲವಂತದಿಂದ ಸುತ್ತುಗಟ್ಟಿ ನಗ್ನಗೊಳಿಸಿ ನೃತ್ಯಮಾಡುವಂತೆ ಮಾಡಿದ್ದರು.

ಅಷ್ಟೇ ಅಲ್ಲ ಆ ಗುಂಪಿನಲ್ಲಿದ್ದ ಒಬ್ಬಾಕೆಯನ್ನು ಎಲ್ಲರೆದುರೇ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಈ ಸುದ್ದಿ ಪಾಕಿಸ್ತಾನದ ಲಾಹೋರ್‌ಗೆ ತಲುಪಿದಾಗ ಅಲ್ಲಿನ ಗುರುದ್ವಾರದಲ್ಲಿ ಆಶ್ರಯಪಡೆದಿದ್ದ ಸಿಖ್‌ರ ಮೇಲೆ ದಾಳಿ ಮಾಡಿ ಹತ್ಯೆಗೈದರು, ಗುರುದ್ವಾರಕ್ಕೆ ಬೆಂಕಿ ಹಚ್ಚಿ ಎಲ್ಲರನ್ನು ಸುಟ್ಟು ಬೂದಿ ಮಾಡಿದರು. ಹೀಗೆ ಹೊತ್ತಿಕೊಂಡ ಬೆಂಕಿ ಕಿಡಿ ಪಾಣಿಪತ್‌ನಲ್ಲಿ ರಕ್ತದೊಕುಳಿ ಹರಿದಿತ್ತು.

ಆ ಸಂದರ್ಭದಲ್ಲಿಯೇ ಅಲ್ಲವೇ ತಾತ ನೀವು ಯಾವ ಅಂಗರಕ್ಷಕರ ಸಹಾಯವಿಲ್ಲದೇ ಬುಡ್ಡಿದೀಪ ಹಿಡಿದು ಮನೆ,ಮನೆಗೆ ಹೋಗಿ ಅಂಗಲಾಚಿ ಬೇಡಿಕೊಂಡಿರಿ,ದಯವಿಟ್ಟಿ ಹಿಂಸೆ ನಿಲ್ಲಿಸಿ,ಹೋಗಿ ಮುಸ್ಲಿಂರನ್ನು ತಬ್ಬಿಕೊಳ್ಳಿ,ಸೌಹಾರ್ದ ಕಾಪಾಡಿಕೊಳ್ಳಿ ಎಂದಾಗ. ಅವರೇನು ಸುಮ್ಮನಿದ್ದರೇ..ಏಯ್ ಅವರು ನಿನ್ನ ಹೆಂಡತಿಯನ್ನು ಕೆಡಿಸಿದ್ದಾರಾ?ನಿನ್ನ ಮಕ್ಕಳನ್ನು ಕೊಂದಿದ್ದಾರಾ ಅಂತ ಮುಖಕ್ಕೆ ಹೊಡೆದ ಪ್ರಶ್ನೆಗಳನ್ನು ಎಸೆದಿದ್ದರು. ಅದಕ್ಕೂ ಕೋಪ ಮಾಡಿಕೊಳ್ಳದ ತಾವು ಹೌದು ನನ್ನ ಹೆಂಡತಿಯನ್ನೇ ಕೆಡಿಸಿದ್ದು,ಇಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಂಗಸರು, ಸತ್ತ ಮಕ್ಕಳು ಎಲ್ಲಾ ನನ್ನವರೇ ಎಂದು ಹೇಳಿದ್ದೀರಿ.

ಬಳಿಕ ಒಬ್ಬೊರ ರುಂಡವನ್ನು ಮತ್ತೊಬ್ಬರು ಚೆಂಡಾಡುತ್ತಿದ್ದ ಜನರು ಶಾಂತ ಸ್ಥಿತಿಗೆ ಬಂದಿದ್ದು, ಹಾಗಾದರೆ ಇದು ನೀವು ಮಾಡಿದ ತಪ್ಪೇ? ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಮನಸ್ಥಿತಿಗೆ ನಿಮ್ಮ ಅಹಿಂಸೆ, ಕೋಮು ಸೌಹಾರ್ದತೆ ಬೇಡವಾಯಿತೇ? ಸ್ವತಃ ನಿಮ್ಮ ಮಗ ಹರಿಲಾಲ್ ಗಾಂಧಿಯೇ ಮುಸ್ಲಿಂ ಧರ್ಮಕ್ಕೆ ಮತಾಂತರನಾಗಿ ಮದುವೆಯಾದಾಗಲು ತಾವು ಸುಮ್ಮನಿದ್ದೀರಾ, ಆತನಿಗೆ ಹಿಂದೂ ಧರ್ಮಕ್ಕೆ ಮರು ಮತಾಂತರಗೊಳ್ಳುಂತೆ ಪಕ್ಕಾ ಹಿಂದೂವಿನಂತೆ ವರ್ತಿಸಿದ್ದೀರಲ್ಲವೇ ?ಜೀವಮಾನವ ಪೂರ್ತಿ ಅಹಿಂಸೆಯಲ್ಲಿ ಹೋರಾಟ ನಡೆಸಿದ ನಿಮ್ಮ ತತ್ವ,ಮಾತುಗಳು ಯಾರಿಗೂ ಪಥ್ಯವಾದಂತಿಲ್ಲ.

ಅಷ್ಟಾದರೂ ನಿಮ್ಮ ತ್ಯಾಗವೇ ಬೂಟಾಟಿಕೆ ಎಂಬಷ್ಟರ ಮಟ್ಟಿಗೆ ದೂರಲಾಗುತ್ತದೆ.ಅದಕ್ಕಾಗಿಯೇ ಅಲ್ಲವೇ ನಿಮಗೆ ನೊಬೆಲ್ ನೀಡಿಲ್ಲ,ಹೋಗಲಿ ಕನಿಷ್ಠ ಪಕ್ಷ ವಸಾಹತುಶಾಹಿಗಳ ಬೂಟುನೆಕ್ಕುವವರಿಗಾಗಿಯೇ ನೀಡುತ್ತಿದ್ದ 'ಸರ್' ಪದವಿಗೂ ನಿಮ್ಮನ್ನು ಉದ್ದೇಶಪೂರ್ವಕವಾಗಿ ಕೈ ಬಿಡಲಾಯಿತು. ಹೋಗಲಿ ನಿಮ್ಮ ಯೋಗ್ಯತೆ ಅದ್ಯಾವ ಜುಜುಬಿ ಪದವಿಗಳು. ನಿಮ್ಮಂತೆಯೇ ಅರಮನೆ, ಹಣ, ಅಂತಸ್ತು ಎಲ್ಲವನ್ನೂ ತ್ಯಾಗ ಮಾಡಿ ಬೀದಿಗೆ ಬಂದ ಗೌತಮ ಬುದ್ಧನನ್ನೇ ನಾವು ಇಲ್ಲಿಂದ ಓಡಿಸಿದವರಲ್ಲವೇ?ನಿಮ್ಮ ಗತಿಯೂ ಅದಕ್ಕಿಂತ ಭಿನ್ನವಾಗಲಾರದು ಎಂಬ ಸಂಶಯ ಕಾಡುತ್ತಿದೆ.

ಬೌದ್ಧಧರ್ಮ ಭಾರತದಿಂದ ಕಣ್ಮರೆಯಾದರೂ,ಬೇರೆಡೆ ಅಷ್ಟೇ ಪ್ರಭಾವಶಾಲಿಯಾಗಿ ತಳವೂರಿದೆ, ನೀವು ಹಾಗೇ ತಾತ ನಿಮ್ಮ ಅಹಿಂಸೆ, ಗ್ರಾಮಸ್ವರಾಜ್ಯ, ಸ್ವದೇಶಿ ಯಾರಿಗೂ ಬೇಡ, ನಿಮ್ಮ ಚಿಂತನೆ , ಆದರ್ಶಗಳತ್ತ ವಿದೇಶಿಗರು ಬೆರಗುಗಣ್ಣಿನಿಂದ ನೋಡಿ, ಅಪ್ಪಿಕೊಳ್ಳಲಾರಂಭಿಸಿದ್ದಾರೆ. ಇತಿಹಾಸದ ಪುಟಗಳಲ್ಲಿ ಏನೇನೂ ದಾಖಲಾಗುತ್ತವೆ. ಹಾಗೇ ತಾತಾ ನಿಮ್ಮ ಹೆಸರು ಕೂಡ ಬುದ್ಧನಂತೆ ಭಾರತದಿಂದ ಕಣ್ಣರೆಯಾದ ಗಾಂಧಿ, ಗಾಂಧಿ ತತ್ವ ಹೀಗೆ ದಾಖಲಾಗುತ್ತ ಹೋಗಬಹುದು.....!

Wednesday, September 3, 2008

ವಂಡಾರು ಕಂಬಳ ಮತ್ತು ನರಬಲಿ...

ನಮ್ಮ ಊರಿನ ಹಿರಿಯರು ಆಗಾಗ ಗಾದೆ ಮಾತೊಂದನ್ನು ಹೇಳುತ್ತಿರುತ್ತಾರೆ, ಅದೇನೆಂದರೆ ' ಹಿಂದಿನ ಕಾಲವಲ್ಲ-ವಂಡಾರು ಕಂಬಳವಲ್ಲ' ಅಂತ. ಈಗಿನ ಕೆಟ್ಟು ಹೋದ ಪರಿಸ್ಥಿತಿಗೆ ರೋಸಿಹೋದ ಹಿರಿಯ ತಲೆಗಳು ಆಗಾಗ ಈ ಗಾದೆಯನ್ನು ಹೇಳುತ್ತಿ ರುತ್ತಾರೆ. ಆದರೆ ಆ ಗಾದೆ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ.

ಮಂಗಳೂರು, ಉಡುಪಿ, ಕುಂದಾಪುರ, ಮೂಡಲಕಟ್ಟೆ, ಪುತ್ತೂರುಗಳಲ್ಲಿ ಕಂಬಳ ಒಂದು ವಿಶೇಷವಾದ ಸಾಂಪ್ರದಾಯಿಕ ಕ್ರೀಡೆ ಯಾಗಿದೆ. ಈ ಭಾಗಗಳಲ್ಲಿ ಹಬ್ಬ ಹರಿದಿನಗಳು ಹೇಗೋ, ಹಾಗೇ ಕಂಬಳ ಕೂಡ ಪ್ರಮುಖವಾದದ್ದು. ನಾನೀಗ ಹೇಳ ಹೊರಟಿ ರುವುದು ಕುಂದಾಪುರದಿಂದ ಸುಮಾರು 15ಕಿ.ಮೀ.ದೂರದಲ್ಲಿರುವ ವಂಡಾರು ಎಂಬ ಊರಿನ ಕಂಬಳದ ಬಗ್ಗೆ. ಇದಕ್ಕೆ ಕ್ರಿ.ಶ. 1200ರ ಆಳುಪರ ಜರ್ಕೆಯ ಶಾಸನದಲ್ಲಿ ಕೆಲವು ವಿವರಗಳು ಲಭ್ಯವಾಗುತ್ತದೆ.

ಇದು ಉಡುಪಿ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಕಂಬಳಗದ್ದೆಯಾಗಿದೆ. ಇದು ಅಂದಾಜು 10 ಎಕರೆ ವಿಸ್ತಿರ್ಣ ಹೊಂದಿದೆ. ಈ ಕಂಬಳಗದ್ದೆ ಬಗ್ಗೆ ಬಹಳಷ್ಟು ಐತಿಹ್ಯಗಳಿವೆ. ಆ ಕಾಲದಲ್ಲಿ ಇದನ್ನು ಮನುಷ್ಯರು ಬೀಜ ಬಿತ್ತಿ ಬೆಳೆ ತೆಗೆಯುತ್ತಿರಲಿಲ್ಲವಂತೆ, ದೇವತೆ ಗಳು ರಾತ್ರಿ-ಬೆಳಗಾಗುವುದರೊಳಗೆ ನೇಜಿ ಮಾಡಿ ಮುಗಿಸುತ್ತಿದ್ದರಂತೆ !.

ವಂಡಾರಿನ ಈ ಕಂಬಳ ಗದ್ದೆ ಹೆಗ್ಗಡೆ ಮನೆತನದ್ದು, ಅವರ ಮನೆಯ ಪಕ್ಕ ನಿಗಳೇಶ್ವರನ (ಮೊಸಳೆ) ಗುಡಿ ಇದೆ. ಈ ಗುಡಿಯಲ್ಲಿ ಲಿಂಗಾರಾಧನೆ ನಡೆಯುತ್ತದೆ, ಇಲ್ಲಿ ಬಂಟರೇ ಅರ್ಚಕರಾಗಿದ್ದು, ಕಂಬಳದ ದಿನ ಮಾತ್ರ ಪೂಜೆ-ಪುನಸ್ಕಾರ ನಡೆಯುತ್ತದೆ. ವಂಡಾ ರಿನಲ್ಲಿರುವ ನಿಗಳನ ಗುಡಿಯ ಗರ್ಭಗುಡಿಯ ಕೆಳಗೆ ನಿಗಳನ ಬಾವಿ ಇದ್ದು, ಇದನ್ನು ನೂರಾರು ವರ್ಷಗಳ ಹಿಂದೆಯೇ ಮುಚ್ಚಿದ್ದರು. ಆ ಬಾವಿಯನ್ನು ಯಾಕೆ ಮುಚ್ಚಿದರು ಎಂಬುದು ಈಗಲೂ ಜನಜನಿತವಾಗಿರುವ ಐತಿಹ್ಯ ಹೀಗಿದೆ...

ವಂಡಾರು ಕಂಬಳಕ್ಕೆ ಜಿಲ್ಲೆಯ ಸುತ್ತಮುತ್ತಲಿನಿಂದ ಕೋಣಗಳನ್ನು ಶೃಂಗರಿಸಿ ಡೋಲು, ಬಾಜಭಜಂತ್ರಿ ಮೂಲಕ ಕರೆ ತರುತ್ತಿದ್ದರು, ಅಲ್ಲಿಯೇ ದೊಡ್ಡ ಜಾತ್ರೆಯೇ ನೆರೆದಿರುತ್ತಿದ್ದು, ಕಂಬಳ ನಡೆಯುವ ಹಿಂದಿನ ದಿನ ಎಲ್ಲೆಡೆಯಿಂದ ಕೋಣಗಳನ್ನು ತಂದು ಕಟ್ಟಿಹಾಕಿ, ದಿನಬೆಳಗು ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ರಾತ್ರಿ ನಿದ್ದೆಹೋದ ಸಂದರ್ಭ ಹೆಗ್ಗಡೆಯವರ ಮನೆಯಲ್ಲಿ ನಿದ್ದೆ ಹೋದವರೊಬ್ಬರ ಕಾಲಿಗೆ ಬಳ್ಳಿ ಹಾಕಲಾಗುತ್ತದೆ. ಹಾಗೇ ಯಾರ ಕಾಲಿಗೆ ಬಳ್ಳಿ ಬೀಳುತ್ತಿತ್ತೋ ಅವರನ್ನು ನಸುಕಿನಲ್ಲಿಯೇ ಎತ್ತಿ ನಿಗಳನ (ಮೊಸಳೆ) ಬಾವಿಗೆ ಹಾಕಲಾಗುತ್ತಿತ್ತು. ಅಂದರೆ ನರಬಲಿ ಕೊಡಲಾಗುತ್ತಿತ್ತು !!

ಹೀಗೆ ಇದು ನಿರಂತರ ಪ್ರತಿ ಬಾರಿಯ ಕಂಬಳದ ಮುನ್ನ ನಿಗಳನಿಗೆ ನರಬಲಿ ನಡೆಯುತ್ತಿತ್ತು. ಏತನ್ಮಧ್ಯೆ ಒಮ್ಮೆ ಹಾಗೆ ಕಾಲಿಗೆ ಬಳ್ಳಿ ಹಾಕಿದ ವ್ಯಕ್ತಿಯನ್ನು ನಿಗಳನಿಗೆ ಬಲಿ ಕೊಡಲಾಯಿತಂತೆ, ಆದರೆ ನಿಗಳನಿಗೆ ಬಲಿಯಾದ ವ್ಯಕ್ತಿ ಹೆಗ್ಗಡೆ ಮನೆಯ ಆಳು ಎಂಬುದು ನಂತರ ತಿಳಿಯಿತಂತೆ. ಆ ದಿನದಿಂದ ನಿಗಳನಿಗೆ ನರಬಲಿ ಕೊಡುವ ಸಂಪ್ರದಾಯವನ್ನು ನಿಲ್ಲಿಸಲಾಯಿತಂತೆ.

ಹೀಗೆ ಬಹಳಷ್ಟು ಇತಿಹಾಸವನ್ನು ಹೊಂದಿರುವ ವಂಡಾರು ಕಂಬಳ ಗದ್ದೆಯನ್ನು ನೀವೊಮ್ಮೆ ನೋಡಬೇಕು(ಜನವರಿಯಿಂದ ಮಾ ರ್ಚ್ ತಿಂಗಳ ನಡುವೆ ನಡೆಯುತ್ತದೆ), ಅದೇ ರೀತಿ ಡೈನೋಸಾರಸ್ಸ್ ರೂಪದ ನಿಗಳನ ಗುಡಿಯನ್ನು ಕಾಣಬೇಕು. ಅಲ್ಲದೇ ಇಲ್ಲಿ ಪ್ರತಿ 12ವರ್ಷಗಳಿಗೊಮ್ಮೆ ಪಟ್ಟದ ಹೆಗ್ಗಡೆವರಿಗೆ ಆಗುವ ಉತ್ಸವ ಪಟ್ಟೋತ್ಸವ ನಡೆಯುತ್ತಿತ್ತು.

ಅದು ಕಳೆದ ಒಂದು ಶತಮಾನದಿಂದ ನಿಂತು ಹೋಗಿದೆ,ಈಗ ಕಾಶಿಯಿಂದ ತಂದ ಮೂರ್ತಿಗೆ ಸಾಂಕೇತಿಕವಾಗಿ ಪಟ್ಟದ ಉತ್ಸವ ನಡೆಯುತ್ತದೆ. ಹೀಗೆ ವಂಡಾರು ಕಂಬಳದ ಗದ್ದೆಗೆ ಅಣ್ಣ-ತಮ್ಮ ಒಟ್ಟಿಗೆ ಇಳಿಯುವಂತಿಲ್ಲ,ಪಟ್ಟದ ಹೆಗ್ಗಡೆಯವರು ಗದ್ದೆಗೆ ಪೂರ್ಣ ಸುತ್ತು ಬರುವಂತಿಲ್ಲ,

ವಂಡಾರು ಕಂಬಳದ ದಿನ ಕೋಟೇಶ್ವರದ ಕೆರೆ ನೀರು ಕೆಸರಾಗುವುದು, ಕಂಬಳದ ಗದ್ದೆ ಪಾಲಾಗುವಂತಿಲ್ಲ, ಇಲ್ಲಿ ಒಬ್ಬಳೇ ಹೆಣ್ಣು ಮಗಳು ಹುಟ್ಟುವುದು, ಆ ಹೆಣ್ಣಿನ ಮಗನೇ ಪಟ್ಟದ ಹೆಗ್ಗಡೆಯವರಾಗಿ ಕಂಬಳವನ್ನು ನಡೆಸುತ್ತಾರೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ವಂಡಾರು ಕಂಬಳ ಮತ್ತು ಅಲ್ಲಿನ ವೈಭವವನ್ನು ನೀವೂ ಒಮ್ಮೆ ಕಣ್ಣಾರೆ ನೋಡಬೇಕು...ಇದು ಜೂಜಿಗಾಗಿ ನಡೆಯುವ ಕಂಬಳವಲ್ಲ...

'ವಲಸೆ ರಾಜಕಾರಣ'ದ ದೊಂಬರಾಟ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟವನ್ನು ಗಮನಿಸಿದರೆ ನೈತಿಕತೆ, ಮೌಲ್ಯ, ತತ್ವ ಸಿದ್ಧಾಂತದ ಪದಗಳೆಲ್ಲ ಸವಕಲಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಬಹುಶಃ ನೈತಿಕತೆ ಮತ್ತು ತತ್ವದ ಪ್ರಶ್ನೆಗೆ ಬಂದಾಗ ಆ ಪರಿಧಿಯೊಳಗೆ ಎಲ್ಲರೂ ತಾನೇ ತಾನಾಗಿ ಸೇರಿಕೊಳ್ಳುತ್ತೇವೆ. ಹೇಳುವುದು ಒಂದು ಮಾಡುವುದು ಇನ್ನೊಂದು ಅಂತ ಆದ ಮೇಲೆ ಅಲ್ಲಿ ನೈತಿಕತೆಗೆ ಯಾವ ಅರ್ಥ ಉಳಿಯಿತು.

ಇದೀಗ ಕರ್ನಾಟಕ ರಾಜ್ಯಕಾರಣದಲ್ಲಿ ಇತ್ತೀಚೆಗೆ ಆಡಳಿತರೂಢ ಭಾರತೀಯ ಜನತಾ ಪಕ್ಷ ನಡೆಸುತ್ತಿರುವ ಆಪರೇಶನ್ ಕಮಲ ನಿಜಕ್ಕೂ ರಾಜಕೀಯ ಅಧಃಪತನದ ಸಂಕೇತ. ಈ ಹಿಂದೆಂದೂ ಇಂತಹ ಕೀಳು ಮಟ್ಟದ ರಾಜಕೀಯ ನಡೆದಿಲ್ಲ ಎಂಬುದನ್ನು ಮನಗಾಣುವ ಮೂಲಕ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬ ಏಕಾಏಕಿ ಅಧಿಕಾರದ ಬೆನ್ನತ್ತಿ, ರಾಜೀನಾಮೆ ಎಸೆದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾನೆಂದರೆ ಅದು ಎಷ್ಟರ ಮಟ್ಟಿಗೆ ಸಂವಿಧಾನ ಬದ್ಧವಾದದ್ದು ಎಂದು ಪ್ರಶ್ನಿಸಿಕೊಳ್ಳ ಬೇಕಾ ಗಿದೆ.

ಅವೆಲ್ಲಕ್ಕಿಂತ ಮುಖ್ಯವಾಗಿ ಒಂದು ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಯನ್ನು ಕ್ಷೇತ್ರದ ಲಕ್ಷಾಂತರ ಮಂದಿ ಮತದಾರರು ತಮ್ಮ ಒಮ್ಮತಾಭಿಪ್ರಾಯದ ಮತ ಚಲಾಯಿಸಿ ಆಯ್ಕೆ ಮಾಡುತ್ತಾರೆ. ಹಾಗಾದರೆ ಮತದಾರರ ನೀಡಿದ ತೀರ್ಪನ್ನು ಧಿಕ್ಕರಿಸಿ, ನೀವು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೀರಿ ಎಂದಾದರೆ ಅದು ಮತದಾರರಿಗೆ ಮಾಡಿದ ಮಹಾದ್ರೋಹವಲ್ಲದೆ ಇನ್ನೇನು !

ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ, ಕಾನೂನಿನ ಕಣ್ಣಿಗೆ ಮಣ್ಣೆರೆಚುವುದರಲ್ಲಿ ನಾವು ಸಿದ್ಧಹಸ್ತರಲ್ಲವೆ, ಆ ನಿಟ್ಟಿನಲ್ಲಿ ಕಾನೂನಿನ ಸುಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ,ಮತ್ತೊಂದು ಪಕ್ಷಕ್ಕೆ ಸೇರ್ಪಡೆ ಗೊಂಡು, ಅಧಿಕಾರ, ಸ್ಥಾನವನ್ನು ಅಲಂಕರಿಸುವುದು. ಮತ್ತೆ ಆ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ರಾಜಕಾರಣಿಗಳ ಲೆಕ್ಕಚಾರ.

ಇಲ್ಲಿ ಕ್ಷೇತ್ರದ ಮತದಾರರನಿಗೆ ಯಾವ ಬೆಲೆಯೂ ಇಲ್ಲ,ನೈತಿಕತೆ ಅಂತೂ ಕೇಳುವುದೇ ಬೇಡ. ಇಂತಹದ್ದೊಂದು ವಲಸೆ ರಾಜಕಾರ ಣಕ್ಕೆ ಬಿಜೆಪಿ ಚಾಲನೆ ನೀಡಿದೆ. ಆ ಮೂಲಕ ತನ್ನ ಸರ್ಕಾರವನ್ನು ಭದ್ರಪಡಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವರು ಕೂಡ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಆದರೆ ರಾಜ್ಯದಲ್ಲಿ ಬಿಜೆಪಿಯ ಆಪರೇಶನ್ ಕಮಲದ ಬಗ್ಗೆ ಆಕ್ಷೇಪಿಸುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ, ಇತ್ತೀಚೆಗಷ್ಟೇ ಕೇಂದ್ರ ದ ಆಡಳಿತರೂಢ ಯುಪಿಎ ಅಣುಒಪ್ಪಂದದ ವಿಚಾರದಲ್ಲಿ ಶಾಸಕರನ್ನು ಖರೀಸಿತ್ತಲ್ಲ ಎಂದು ಬಾಯಿ ಮುಚ್ಚಿಸಬಹುದು. ಇಲ್ಲವೇ ಅಂದು ಪ್ರಧಾನಿ ಹುದ್ದೆ ಅಲಂಕರಿಸಲು ಪಿ.ವಿ.ನರಸಿಂಹರಾವ್‌ಗೂ ಕೂಡ ಜೆಎಂಎಂ ಇದೇ ತೆರನಾಗಿ ಲಂಚ ಸ್ವೀಕರಿಸಿಯೇ ಬೆಂಬಲ ನೀಡಿತ್ತು ಎಂಬ ಸಮಜಾಯಿಷಿ ನೀಡಬಹುದು.

ರಾಜಕಾರಣದಲ್ಲಿ ಇಂತಹ ಅಪಸವ್ಯ ನಡೆಯುತ್ತಿದ್ದಾದರು ಕೂಡ, ರಾಜ್ಯರಾಜಕಾರಣದ ಮಟ್ಟಿಗೆ ಸಾರಸಗಟಾಗಿ ಜನರಿಂದ ಆಯ್ಕೆ ಯಾದ ಶಾಸಕರು ಜನರ ಆಶಯಕ್ಕೆ ವಿರುದ್ಧವಾಗಿ ರಾಜೀನಾಮೆ ನೀಡಿ ವಿರೋಧ ಪಕ್ಷವನ್ನು ಸೇರಿ ಅಲ್ಲಿ ಅಧಿಕಾರ,ಹುದ್ದೆಯನ್ನು ಅಲಂಕರಿಸುತ್ತಿರುವುದು ಕೀಳು ರಾಜಕೀಯದ ಪರಮಾವಧಿಯಾಗಿದೆ. ರಾಜಕಾರಣಿಗಳ ಇಂತಹ ಎಡಬಿಡಂಗಿತನಗಳಿಗೆ ಕ್ಷೇತ್ರದ ಪ್ರಜ್ಞಾವಂತ ಮತದಾರರೇ ತಕ್ಕ ಬುದ್ಧಿ ಕಲಿಸಬೇಕಾಗಿದೆ.

Sunday, August 17, 2008

ಕೆಂಪುಕೋಟೆ ಚೀನಾದ ಮುಖವಾಡ....

ನಾ ಬೀಜಿಂಗ್‌ನಲ್ಲಿ ಆರಂಭಿಸಿದ ಒಲಿಂಪಿಕ್ ಗೇಮ್ಸ್‌‌ನ ತಯಾರಿ,ಉದ್ಘಾಟನಾ ಸಮಾರಂಭದ ಅದ್ದೂರಿ ಜಗತ್ತನ್ನೇ ನಿಬ್ಬೆರಗಾಗಿಸಿ ದ್ದಂತೂ ಸುಳ್ಳಲ್ಲ. ಉದ್ಘಾಟನಾ ಸಮಾರಂಭದ ಕಾರ್ಯಕ್ರಮವಂತೂ ಮೈನವಿರೇಳಿಸಿದ್ದವು,ಜಾಗತಿಕವಾಗಿ ಶಕ್ತಿ ಪ್ರದರ್ಶನ ಮಾಡಲು ಹೊರಟ ಕಮ್ಯೂನಿಷ್ಟ್ ದೇಶ ತನ್ನ ಮೇಲಿನ ಅಪವಾದದ ಕೊಳೆಯನ್ನು ತೆಗೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಂತೂ ಸತ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೂ 'ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ' ಎಂಬ ಗಾದೆಯಂತೆ ಒಲಿಂಪಿಕ್ ಉದ್ಘಾಟನಾ ಸಮಾರಂಭದಲ್ಲಿಯೂ ಅದರ ಮುಖವಾಡ ಕಳಚಿಬಿದ್ದಿದೆ.ಒಲಿಂಪಿಕ್ ಉದ್ಘಾಟನೆ ದಿನದಂದು ಪುಟ್ಟ ಬಾಲಕಿಯೊಬ್ಬಳು ಹಾಡೊಂದನ್ನು ಹಾಡಿದ್ದಳು, ಅದನ್ನು ಟಿವಿಗಳಲ್ಲಿ ಕೋಟ್ಯಂತರ ಜನರು ವೀಕ್ಷಿಸಿದ್ದರು.

ಬಳಿಕ ಬೀಜಿಂಗ್ ರೇಡಿಯೋಗೆ ಸಂದರ್ಶನ ನೀಡಿದ್ದ ಚೀನಾದ ಸಂಗೀತ ನಿರ್ದೇಶಕ ಜಾಂಗ್ ಯಿಮೂವ್,ಆಘಾತಕಾರಿ ಸುದ್ದಿಯೊಂದನ್ನು ಹೊರಗೆಡಹಿದ್ದರು. ನಿಜಕ್ಕೂ ಆ ದಿನ ಸಂಗೀತ ಹಾಡಿದಾಕೆ ಮಿಯೋಕೆ ಎಂಬಾಕೆ,ಆದರೆ ಆಕೆಯ ಹಲ್ಲು ಸ್ವಲ್ಪ ಉಬ್ಬಾಗಿದ್ದರಿಂದ ಕೊನೆಯ ಕ್ಷಣದ ಬದಲಾವಣೆ ಎಂಬಂತೆ,ಹಾಡು ಮಾತ್ರ ಮಿಯೋಕೆಯದ್ದು,ಎದುರುಗಡೆ ನಿಂತಿದ್ದು ಯಾಂಗ್ ಪೇಯಿ ಎಂಬ ಚೆಂದದ ಬಾಲಕಿ.

ಆದರೆ ಇದನ್ನು ಕಮ್ಯೂನಿಷ್ಟ್ ಸರ್ಕಾರ ತಾನು ಮಾಡಿದ್ದೇ ಸರಿ ಎಂಬುದಾಗಿ ಸಮರ್ಥಿಸಿಕೊಂಡಿದೆ. ಮಿಯೋಕೆ ತಂದೆ ಮಾತ್ರ ಕಣ್ಣೀರು ಸುರಿಸಿದ್ದರು,ತನ್ನ ಮಗಳ ಹಾಡನ್ನು ಕೋಟ್ಯಂತರ ಜನ ಆಲಿಸಿದ್ದಾರೆ,ಆದರೆ ಆಕೆ ಅಂದ ಇಲ್ಲ ಎಂಬ ಒಂದೇ ಕಾರಣಕ್ಕೆ ಷೋಕಿಗಾಗಿ ಹೊರಪ್ರಪಂಚದ ಕಣ್ಣಿಗೆ ಕಾಣಲು ಮತ್ತೊಬ್ಬಾಕೆಯನ್ನು ಉತ್ಸವ ಮೂರ್ತಿಯಾಗಿ ನಿಲ್ಲಿಸಿದ್ದರು ಎಂದು !!

ಹೊರ ಪ್ರಪಂಚಕ್ಕೆ ತಾನೊಂದು ಸುಭಗ ದೇಶ ಎಂದು ತೋರಿಸಿಕೊಳ್ಳಲು ಹೊರಟ ಚೀನಾದ ಕೀಳುಮಟ್ಟದ ಆಲೋಚನೆ ಮತ್ತು ಕ್ರಮದ ಚಿಕ್ಕ ಉದಾಹರಣೆ ಇದಾಗಿದೆ. ಚೀನಾ ಮತ್ತು ಅಮೆರಿಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಮೆರಿಕ ಕೂಡ ಅಷ್ಟೇ ಭಯೋತ್ಪಾದನೆ ವಿರುದ್ಧ ,ನ್ಯೂಕ್ಲಿಯರ್ ವಿರುದ್ಧ,ಮಾನವಹಕ್ಕುಗಳ ಉಲ್ಲಂಘನೆ ವಿರುದ್ಧ ಗುಟುರು ಹಾಕುವ ದೊಡ್ಡಣ್ಣನ ಸಣ್ಣತನ ಮಾತ್ರ ಜಗಜ್ಜಾಹೀರು.

ನಮ್ಮ ದೇಶದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಮಗಳು ಇತ್ತೀಚೆಗಷ್ಟೇ ಅಧಿಕೃತವಾಗಿ ಅಮೆರಿಕ ನಡೆಸಿರುವ ಮಾನವಹಕ್ಕು ಉಲ್ಲಂಘನೆಯ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿರುವ ಬಗ್ಗೆ ವರದಿಯಾಗಿತ್ತು. ಅಲ್ಲದಿದ್ದರೂ ಸಾಮ್ರಾಜ್ಯಶಾಹಿ ಯಾಗಿರುವ ಅಮೆರಿಕ ಉಳಿದೆಲ್ಲ ದೇಶಗಳಿಗೂ ಹಿತೋಪದೇಶ ನೀಡುತ್ತೇ, ಆದರೆ ತಾನು ಮಾತ್ರ ಮಾಡುವ ಲುಚ್ಚಾ ಕೆಲಸ ಗಳಿಂದಾಗಿ ಲಕ್ಷಾಂತರ ಅಮಾಯಕರ ಬಲಿ ತೆಗೆದುಕೊಂಡಿದೆ, ಅದೆಷ್ಟೋ ದೇಶಗಳಲ್ಲಿ ಭಯೋತ್ಪಾದನೆ, ಗೂಂಡಾಗಿರಿ ಸೃಷ್ಟಿಸಿದೆ(ಒಸಾಮ ಬಿನ್ ಲಾಡೆನ್ ಕೂಡ ಅಮೆರಿಕ ಸಾಕಿ-ಸಲುಹಿತ ಕೂಸು ಎಂಬುದನ್ನು ಮರೆಯಬೇಡಿ).

ಆರ್ಥಿಕ ಅಲ್ಲೋಲ - ಕಲ್ಲೋಲ ಮಾಡುವ ಮೂಲಕ ತನ್ನ ಅಂಗೈಯಲ್ಲಿಟ್ಟುಕೊಂಡಿದೆ. ತನ್ನೆಲ್ಲಾ ತಪ್ಪುಗಳನ್ನು ಮುಚ್ಚಿ,ಬೇರೆಯವರತ್ತ ಕೈ ತೋರಿಸುವ ಅಮೆರಿಕದ ಚಾಳಿ ಎಗ್ಗಿಲ್ಲದೆ ಮುಂದುವರಿದಿದೆ. ಆದೇ ತೆರನಾದ ಮುಖವಾಡ ಹೊಂದಿರುವ ಚೀನಾ ಕೂಡ ಕಡಿಮೆಯಿಲ್ಲ,1999ರಲ್ಲಿ ಲೀ ಹೊಂಗ್‌‌ಚೀ ಎಂಬಾತ ಫಾಲುನ್ ಗೊಂಗ್ ಎಂಬ ಧಾರ್ಮಿಕ ಪಂಥವನ್ನು ಹುಟ್ಟು ಹಾಕುತ್ತಾನೆ. ಅದು ನೋಡ,ನೋಡುತ್ತಿದ್ದಂತೆಯೇ ಚೀನಾದಾದ್ಯಂತ ಹೊಸ ಅಲೆಯನ್ನೇ ಎಬ್ಬಿಸುತ್ತೆ,ಆತನದ್ದು ಕೇವಲ ಐದು ವಿಧಗಳ ಧ್ಯಾನ ಪದ್ಧತಿ(ಬೌದ್ಧಿಸಂ ಮಾದರಿ)ಯಾಗಿತ್ತು.

ಇದರಲ್ಲಿ ಚೀನಾ ಕಮ್ಯೂನಿಷ್ಟ್ ಪಾರ್ಟಿಯ(ಸಿಸಿಪಿ)ಸದಸ್ಯರೇ ಲಕ್ಷಾಂತರ ಸಂಖ್ಯೆಯಲ್ಲಿ ಅವನ ಅನುಯಾಯಿಗಳಾಗ ತೊಡಗಿದರು. ಇದರಿಂದ ಬೆಚ್ಚಿ ಬಿದ್ದ ಚೀನಾ,ಓಹ್ ಇದು ತನ್ನ ಬುಡಕ್ಕೆ ಬರುತ್ತದೆ ಎಂಬು ಅಸೂಯೆಯಿಂದ,ಪಾಲುನ್ ಅನುಯಾಯಿಗಳನ್ನು ಕಂಡ,ಕಂಡಲ್ಲಿ ಮಕ್ಕಳು,ಮಹಿಳೆಯರು,ಪುರುಷರು ಎಂಬ ಭೇದಭಾವ ಇಲ್ಲದೆ,ಬೆತ್ತಲಾಗಿಸಿ ಚಿತ್ರ ಹಿಂಸೆ ನೀಡತೊಡಗಿತ್ತು.

ದಿನದಿಂದ ದಿನಕ್ಕೆ ಆತನ ಅನುಯಾಯಿಗಳ ಸಂಖ್ಯೆ ಏರುತ್ತಿದ್ದಂತೆಯೇ,ಚೀನಾ ನಾಗರಿಕ ವ್ಯವಹಾರಗಳ ಸಚಿವಾಲಯ ಅಧಿಕೃತ ಆದೇಶ ವೊಂದನ್ನು ಹೊರಡಿಸುತ್ತದೆ, ಪಾಲುನ್ ಒಂದು ಅಧಿಕೃತವಾದ ಸಂಸ್ಥೆಯಲ್ಲ,ಅದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು,ಜನರಲ್ಲಿ ಮೂಢನಂಬಿಕೆಗಳನ್ನು ಬೆಳೆಸುತ್ತಿದ್ದು,ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ ಎಂದು ಹೇಳಿ,ಫಾಲುನ್ ಅನ್ನು ನಿಷೇಧಿಸುತ್ತದೆ.

ಅಲ್ಲದೇ ಅದರ ಸ್ಥಾಪಕ ಲೀ ಅವರ ಬಂಧನಕ್ಕೆ ವಾರೆಂಟ್ ಹೊರಡಿಸಿದೆ.ಇದೀಗ ಲೀ ಅಮೆರಿಕದಲ್ಲಿದ್ದಾರೆ. ಚೀನಾ ಎಷ್ಟೇ ಚಿತ್ರಹಿಂಸೆ, ನಿಷೇಧ ಹೇರಿದರೂ ಕೂಡ ಇದೀಗ ಚೀನಾದ್ಯಂತ ಸುಮಾರು 70ಮಿಲಿಯನ್ ಮಂದಿ ಲೀ ಅನುಯಾಯಿಗಳಿದ್ದಾರೆ. ಆದರೆ ಪಾಲುನ್ ವರದಿ ಪ್ರಕಾರ ಪ್ರಪಂಚದ 80ದೇಶಗಳಲ್ಲಿ ಒಟ್ಟು 100ಮಿಲಿಯನ್ ಬೆಂಬಲಿಗರನ್ನು ಹೊಂದಿರುವುದಾಗಿ ಹೇಳಿದೆ.

ಲೀ ವಿರುದ್ಧ ಬಂಧನದ ಆದೇಶ ಹೊರಡಿಸಿದ ನಂತರವೂ ಆತ ಯುಎಸ್‌ನಿಂದ ಪ್ರಕಟಣೆಯೊಂದನ್ನು ನೀಡಿದರು,ನಮ್ಮದು ಧ್ಯಾನ ಸಂಸ್ಥೆ ಯಾಗಿದೆ, ಜನರಿಗೆ ನೈತಿಕ ಸ್ಥೈರ್ಯ ಮತ್ತು ಮಾನಸಿಕ ಉನ್ನತಿ ಬಗ್ಗೆ ಹೇಳಲಾಗುತ್ತಿಯೇ ಹೊರತು ನಾವು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಲ್ಲ, ಅಲ್ಲದೇ ನಾನು ಯಾವುದೇ ರಾಜಕೀಯ ಸಂಘಟನೆಯನ್ನೂ ಕಟ್ಟುತ್ತಿಲ್ಲ ಎಂದು ತಿಳಿಸಿದರು.

ಆದರೂ ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಚೀನಾ ಮಾತ್ರ ಲೀ ಬೆಂಬಲಿಗರನ್ನು ಹುಡುಕಿ,ಹುಡುಕಿ ಚಿತ್ರ ಹಿಂಸೆ ನೀಡುತ್ತಿದೆ, ಮಾನವಹಕ್ಕುಗಳ ಕೂಗಿಗೂ ಬೆಲೆ ಇಲ್ಲದಂತಾಗಿದೆ. ಒಂದು ವರದಿ ಪ್ರಕಾರ 2002ರಲ್ಲಿ ಚೀನಾ ಸರ್ಕಾರ ಪಾಲುನ್‌ನ ಸುಮಾರು 1600 ಅನುಯಾಯಿಗಳನ್ನು ಚಿತ್ರ ಹಿಂಸೆ ನೀಡಿ ಹತ್ಯೆಗೈದಿದೆ.

ಕೆಲವರು ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೆಲ್ಲವೂ ಪೊಲೀಸ್ ಕಸ್ಟಡಿಯಲ್ಲೇ ನಡೆದ ಘಟನೆ ಯಾಗಿದೆ. (ಅಮೆರಿಕ ಕೂಡ ಓಶೋ ರಜನೀಶ್ ಬಗ್ಗೆ ಇದೇ ರೀತಿ ಮಾಡಿತ್ತು,ಅವರು ಹೋದಲ್ಲೆಲ್ಲಾ ಅನುಯಾಯಿಗಳದ್ದೇ ಹಿಂಡು, ಅಮೆರಿಕದಲ್ಲಿ ಅವರ ಪ್ರಭಾವ ಹೆಚ್ಚಾಗುತ್ತಿದ್ದುದನ್ನು ನೋಡಿಯೇ ಅವರಿಗೆ ಥೇಲಿಯಂ ಎಂಬ ವಿಷಯುಕ್ತ ಚುಚ್ಚು ಮದ್ದು ನೀಡಿ ವ್ಯವಸ್ಥಿತವಾಗಿ ಸಾವಿನ ದವಡೆಗೆ ನೂಕಿತ್ತು!)

ಇದೀಗ ತನ್ನೆಲ್ಲಾ ಹುಳುಕುಗಳನ್ನು ಮುಚ್ಚಿ ಹಾಕಲು,ಜಗತ್ತಿಗೆ ತಾನೊಬ್ಬ ಬಲಿಷ್ಠ,ಸಜ್ಜನ ಎಂಬ ಫೋಸು ನೀಡಲು ಒಲಿಂಪಿಕ್ ಗೇಮ್ಸ್‌ನ ಅಬ್ಬರದಲ್ಲಿದೆ. ಆದರೆ ಕೆಂಪುಕೋಟೆಯೊಳಗೆ ನಡೆಯುತ್ತಿರುವ ಮಾರಣಹೋಮದ ಬಗ್ಗೆ ಧ್ವನಿ ಎತ್ತುವವರಾರು....

'ಚಿರಮೌನ'ಕ್ಕೆ ಜಾರಿದ ವ್ಯಾಸ

ಇತ್ತೀಚೆಗಷ್ಟೇ ವ್ಯಾಸರು ನನ್ನ ಮೊಬೈಲ್‌ಗೆ ಕರೆ ಮಾಡಿ, ಏನು ಊರಿಗೆ ಬರುವ ವಿಚಾರ ಏನಾದರು ಇದೆಯಾ ಅಂತ ಕ್ಷೇಮವನ್ನು ವಿಚಾರಿಸಿ, ಈ ಬಾರಿಯ ಮಯೂರದಲ್ಲಿ ಕಥೆ ಬರುತ್ತದೆ ಓದಿ ಎಂದಿದ್ದರು. ಪ್ರತಿ ಬಾರಿ ಊರಿಗೆ ಹೋದಾಗ ಕಾಸರಗೋಡಿನ ಮನ್ನಿಪ್ಪಾಡಿಗೆ ಹೋಗಿ ಅವರೊಂದಿಗೆ ಇದ್ದು ಹರಟಿ ಬರುವುದು ವಾಡಿಕೆ, ಆದರೆ ಈ ಬಾರಿ ಕೆಲಸದ ಒತ್ತಡದಿಂದ ಅವರನ್ನು ಮಾತನಾಡಿಸದೆ ಬಂದಿದ್ದೆ, ಹಿರಿಯ ಪತ್ರಕರ್ತ ಮಿತ್ರರಾದ ಕೆ.ತಿಮ್ಮಪ್ಪ ಅವರು ವ್ಯಾಸ ಇನ್ನಿಲ್ಲ ಎಂತ ಮೆಸೇಜ್ ಕಳುಹಿಸಿದ್ದರು. ಅದನ್ನು ನೋಡಿದವನಿಗೆ ನನ್ನಲ್ಲಿ ಅಪರಾಧಿ ಪ್ರಜ್ಞೆ ಮೂಡಿತ್ತು.

ಊರಿಗೆ ಹೋದವನು ಮಾತನಾಡಿ ಬಾರದಿದ್ದಕ್ಕೆ ಆಘಾತಗೊಂಡಿದ್ದೆ. ಚಿಕೂನ್ ಗುನ್ಯಾಕ್ಕೆ ಅವರು ಬಲಿಯಾಗಿರುವುದು ನನ್ನಿಂದ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ಪ್ರತಿಯೊಂದು ಪತ್ರಿಕೆಯ ಮೇಲೆ ಕಣ್ಣಾಡಿಸುವ ವ್ಯಾಸರು, ತನಗಿಂತ ಚಿಕ್ಕವರ ಕಥೆ, ಕವನ, ಲೇಖನಗಳನ್ನು ಓದಿ ಸಂತಸ ಪಡುತ್ತಿದ್ದರು ಮತ್ತು ಅಂತಹವರ ಹೆಸರನ್ನು ನೆನಪಿಟ್ಟುಕೊಂಡು, ನಮ್ಮಲ್ಲಿ ಮಾತನಾಡುವಾಗ, ಒಳ್ಳೇ ಬರೆಯುತ್ತಾರೆ ಮರಾಯ್ರೆ ಎನ್ನುತ್ತಿದ್ದರು.

ಸಹೃದಯಿಯಾಗಿದ್ದ ವ್ಯಾಸರು, ಎಲ್ಲರನ್ನೂ ತುಂಬಾ ಗೌರವದಿಂದ ಕಾಣುತ್ತಿದ್ದರು. ಅವರ ಕಥೆಗಳನ್ನು ಓದಿಕೊಂಡಿದ್ದವರು ಅವರ ಮನೆಗೆ ಆಗಾಗ ಬಂದು ಮಾತನಾಡಿಸಿ ಹೋಗುತ್ತಿದ್ದರು. ನಾವು ಅವರ ಮನೆಗೆ ಹೋದಾಗಲೆಲ್ಲ, ನೋಡಿ ತ್ರಾಸಿ ಇಂತವರು ಬಂದು ಮಾತನಾಡಿಸಿ ಹೋಗಿದ್ದಾರೆ, ಪತ್ರ ಕೂಡ ಬರೆದಿದ್ದಾರೆ ಎಂದೆಲ್ಲಾ ಹೇಳುತ್ತಿದ್ದರು. ವ್ಯಾಸರ ಎದುರು ಕುಳಿತಾಗ ನಾನು ಸುಮ್ಮನೆ ಕುಳಿತಿರುತ್ತಿದ್ದೆ, ಯಾಕೆಂದರೆ ಅವರು ಮಾತನಾಡುವುದೇ ಅಪರೂಪ, ಅದಕ್ಕೆ ಅವರು ಮಾತನಾಡುತ್ತಾರೆಂದರೆ ನಾನು ಬೆಪ್ಪನಂತೆ ಕೇಳಿಸಿಕೊಳ್ಳುತ್ತಿದ್ದೆ.

ಅವರಿಗೆ ಮೊಮ್ಮಕ್ಕಳ ಮೇಲೆ ಅಗಾಧವಾದ ಪ್ರೀತಿ, ಅದರಲ್ಲೂ ಅವರ ಚಿಕ್ಕ ಮೊಮ್ಮಗನ ಮೇಲೆ ಪ್ರಾಣವೇ ಇಟ್ಟುಕೊಂಡಿದ್ದರು. ಒಮ್ಮೆ ಮಿತ್ರ ಮುರಳಿ ಹತ್ತಿರ ವ್ಯಾಸರಿಗೆ ಸಣ್ಣ ಮೊಮ್ಮಗನ ಮೇಲೆ ಅಷ್ಟೊಂದು ವ್ಯಾಮೋಹ ಯಾಕೆ ಎಂದು ಕೇಳಿದ್ದಕ್ಕೆ, ಆತನ ಮುಖ ಅವರ ತಂದೆಯನ್ನು ಹೋಲುವ ಕಾರಣ ಎಂದು ತಿಳಿಸಿದ್ದ. ವ್ಯಾಸರ ತಂದೆಯನ್ನು ರಾಜಕೀಯ ದ್ವೇಷದಿಂದಾಗಿ ನಟ್ಟನಡು ರಸ್ತೆಯಲ್ಲಿ ಕೊಚ್ಚಿ ಕೊಂದಿದ್ದರು. ವ್ಯಾಸರು ಅದನ್ನು ಕಣ್ಣಾರೆ ಕಂಡವರು.

ವ್ಯಾಸರು ಯಾವುದೇ ರಾಜಕೀಯ, ಪಕ್ಷ, ಸಿದ್ದಾಂತಗಳ ಬಗ್ಗೆ ಅಂಟಿಕೊಂಡಿರಲಿಲ್ಲವಾಗಿತ್ತು. ಒಂಟಿತನವನ್ನು,ಮೌನವನ್ನು ಪ್ರೀತಿಸುತ್ತಿದ್ದ ವ್ಯಾಸರಿಗೆ ಸಿಟ್ಟು ಮಾತ್ರ ತುಂಬಾನೇ ಇತ್ತು, ಆದರೆ ಅದನ್ನು ಯಾರ ಎದುರು ತೋರ್ಪಡಿಸುತ್ತಿರಲಿಲ್ಲ, ನಾನು ಆಗಾಗ ಮನೆಗೆ ಹೋಗುತ್ತಿದ್ದಾಗ, ಮನೆಯಲ್ಲಿ ಇವರು ಏನಾದರು ಹೇಳುತ್ತಿರುವಾಗ ಪತ್ನಿ ಅಡ್ಡ ಮಾತನಾಡಿದ ಸಂದರ್ಭ ಅವರ ಮುಖದಲ್ಲಿ ತುಂಬಾ ಕೋಪವನ್ನು ಕಂಡಿದ್ದೆ.

ಅವರಲ್ಲಿ ದುರಂತ ಘಟನೆಗಳನ್ನು ಹೇಳಿದಾಗ ತುಂಬಾ ನೊಂದುಕೊಳ್ಳುತ್ತಿದ್ದರು, ಮತ್ತು ಆ ಘಟನೆಯ ಸುತ್ತ ಕಥಾಹಂದರವನ್ನು ಕಟ್ಟುತ್ತಿದ್ದರು. ರಾತ್ರಿ, ಮಧ್ಯರಾತ್ರಿ ಅವರ ಮನಸ್ಸಿನಲ್ಲಿ ಯಾವಾಗ ಕಥೆ ರೂಪು ತಾಳುತ್ತೊ ಆವಾಗೆಲ್ಲ ಎದ್ದು ಬರೆಯಲು ಕುಳಿತುಕೊಳ್ಳುತ್ತಿದ್ದರು, ಹೆಂಡತಿ ಆಗಾಗ ಟೀ ಪೂರೈಸುತ್ತಿದ್ದರು. ಅವರ ಶಬ್ದ ಜೋಡಣೆ ತುಂಬಾ ವಿಶೇಷವಾದದ್ದು, ಅವರ, ಕಥೆ, ಕವನದ ಹಾಗೆ, ಅವರು ಮಿತ್ರರಿಗೆ ಬರೆಯುತ್ತಿದ್ದ ಪತ್ರಗಳೂ ಕಥೆಯಂತೆ ಇರುತ್ತಿದ್ದವು.

ಕಳೆದ ನಲ್ವತ್ತು ವರ್ಷಗಳಿಂದ ಸಣ್ಣ ಕಥಾ ಪ್ರಪಂಚದಲ್ಲಿ ತಮ್ಮದೆ ಛಾಪನ್ನು ಮೂಡಿಸಿದ್ದ ವ್ಯಾಸರನ್ನು ಕನ್ನಡ ಸಾರಸ್ವತ ಲೋಕ ಅವರನ್ನು ಗುರುತಿಸದೆ ಜಾಣ ಕುರುಡತನ ತೋರಿಸಿತ್ತು! ಮನುಷ್ಯನ ಸ್ವಾರ್ಥ, ದ್ವೇಷಗಳ ಬಗ್ಗೆ ತುಂಬಾ ಮಾತನಾಡುತ್ತಿದ್ದರು, ಆಗಾಗ ಪತ್ರ ಬರೆಯುತ್ತಿದ್ದ ವ್ಯಾಸರು ತುಂಬಾ ಆಪ್ತರಾಗಿದ್ದರು, ನನ್ನಂತಹ ನೂರಾರು ಆಪ್ತವಲಯಗಳನ್ನು ಸೃಷ್ಟಿಕೊಂಡಿದ್ದ ವ್ಯಾಸರು ಸದ್ದಿಲ್ಲದೆ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದ್ದಾರೆ. ಇದೀಗ ಅವರೇ ಸೃಷ್ಟಿಸಿದ ಶಂಕರಿಗುಡ್ಡ, ಶಂಕರಿನದಿಗಳು ಕಥೆಯಾದ ಹಾಗೇ ವ್ಯಾಸರ ಕಥೆಗಳು ಸಾಹಿತ್ಯಲೋಕದಲ್ಲಿ 'ಜೀವ'ಪಡೆಯಬೇಕಾಗಿದೆ....

Sunday, June 29, 2008

ರಜನೀಶ್‌‌ರ ಶೂನ್ಯ ನಾವೆ.....

ಓಶೋ ರಜನೀಶ್ ಮಾತು ಎಷ್ಟು ಸುಂದರವೋ, ಅವರ ತರ್ಕಬದ್ದವಾದ ಬರಹವೂ ಅಷ್ಟೇ ಆಪ್ತವಾಗುತ್ತವೆ. ಆದರೆ ರಜನೀಶ್ ಬಗ್ಗೆ ಒಂದು ವರ್ಗ ತೀವ್ರವಾಗಿ ವಿರೋಧಿಸುತ್ತದೆ, ಆತ ಸೆಕ್ಸ್ ಗುರು, ಲೈಂಗಿಕತೆ ಬಗ್ಗೆ ಮಾತನಾಡುತ್ತಾನೆ ಹೀಗೆ ಆರೋಪಗಳು ಪುಂಖಾನುಪುಂಖವಾಗಿ ಹೊರಬೀಳುತ್ತವೆ. ಆದರೆ ರಜನೀಶ್ ರಾಜಕಾರಣಿ, ಪಂಡಿತ, ಪುರೋಹಿತ, ಮುಲ್ಲಾ, ಪಾದ್ರಿ ಹೀಗೆ ಎಲ್ಲದರ ಬಗ್ಗೆಯೂ ಟೀಕಿಸಿ ಮಾತನಾಡಿದ್ದಾರೆ.

ಯಾವುದೇ ಕಟ್ಟುಪಾಡಿಗೆ ಒಳಗಾಗಿ ಮತಾಂಧರಂತೆ, ಒಂದು ವರ್ಗದ ವಕ್ತಾರರಂತೆ ಅವರು ಮಾತನಾಡಿಲ್ಲ ಆ ಕಾರಣಕ್ಕಾಗಿಯೇ ಅವರು ಇಷ್ಟವಾಗುತ್ತಾರೆ. ರಜನೀಶ್ ಚಾಂಗ್ ತ್ಸು ಅವರ ಹಿನ್ನೆಲೆಯನ್ನಿಟ್ಟುಕೊಂಡು ಮಾತನಾಡಿದ ಶೂನ್ಯ ನಾವೆಯಲ್ಲಿನ ಒಂದು ಅಂಶವನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಯಾಕೆಂದರೆ ರಜನೀಶ್ ಯಾವುದರ ಬಗ್ಗೆಯೇ ಮಾತನಾಡಲಿ, ಅದು ನಮ್ಮನ್ನು ಅಷ್ಟು ಆಕರ್ಷಿಸುತ್ತದೆ. ಇವತ್ತಿನ ಸ್ಥಿತಿಗತಿ, ನಮ್ಮ ಕಾರ್ಯದ ಒತ್ತಡ, ನಾವು ಆ ಸನ್ನಿವೇಶದ ನಡುವೆ ಸಿಕ್ಕಿಬೀಳುತ್ತಿರುವುದನ್ನು ನೋಡಿದರೆ, ರಜನೀಶ್ ಅವರು ಈ ಮಾತು ಸತ್ಯ ಎನ್ನಿಸುತ್ತದೆ....

ಅವರ ಪ್ರಕಾರ ಮನುಷ್ಯ ಅನುಪಯುಕ್ತನಾಗಿರಬೇಕು, ಅರೇ ಇದೇನಪ್ಪಾ, ಎಲ್ಲರೂ ಕ್ರಿಯಾಶೀಲರಾಗಿ ಅಂದರೆ ಈತ ರಜನೀಶರ ಅನುಪಯುಕ್ತರಾಗಿರಿಯನ್ನೇ ಬಹಳ ಖುಷಿಕೊಡುವ ವಿಚಾರ ಎಂದು ಬರೆಯುತ್ತಿದ್ದಾರಲ್ಲಪ್ಪ ಅಂತ ಹುಬ್ಬುಗಟ್ಟಿಕ್ಕಬೇಡಿ. ಅದನ್ನು ಅವರು ಒಂದು ಕಥೆಯ ಮೂಲಕ ವಿವರಿಸುತ್ತಾರೆ. ಒಂದು ನಗರದಲ್ಲಿನ ಯುವಕರನ್ನು ಬಲಾತ್ಕಾರವಾಗಿ ಸೇನೆಗೆ ಸೇರಿಸಲ್ಪಟ್ಟಿದ್ದರಂತೆ. ಏಕೆಂದರೆ ಅವರೆಲ್ಲರೂ ಉಪಯುಕ್ತರು. ಆದರೆ ಒಬ್ಬ ಗೂನು ಬೆನ್ನಿನವನನ್ನು ಮಾತ್ರ ಸೇರಿಸಿಕೊಂಡಿಲ್ಲ.

ಈತ ಅನುಪಯುಕ್ತ ಎಂದು ಬಿಟ್ಟುಬಿಟ್ಟಿದ್ದರು. ನೀವು ಗೂನು ಬೆನ್ನಿನವನಂತಿರಿ, ಏಕೆಂದರೆ ಇವರ ದೃಷ್ಟಿಯಲ್ಲಿ ಉಪಯುಕ್ತರು ಸದಾ ಗೊಂದಲಕ್ಕೆ ಒಳಗಾಗುವವರು. ಜಗತ್ತು ನಿಮ್ಮನ್ನು ಬಳಸಿಕೊಳ್ಳುವುದು, ಪ್ರತಿಯೊಬ್ಬರು ನಿಮ್ಮನ್ನು ಉಪಯೋಗಿಸಲು ಸಿದ್ದರಾಗಿರುವರು, ಹಸ್ತಕ್ಷೇಪ ಮಾಡುತ್ತಲೇ ಇರುತ್ತಾರೆ, ನಿಮ್ಮನ್ನಾಳಲು ಸದಾ ಸಿದ್ದರಾಗಿರುತ್ತಾರೆ. ನೀವು ಅಪ್ರಯೋಜಕರಾಗಿದ್ದಾಗ ನಿಮ್ಮನ್ನು ಜನ ಮರೆತೇ ಬಿಡುತ್ತಾರೆ.

ನಿಮ್ಮನ್ನು ನಿಮ್ಮ ಮೌನದಲ್ಲಿರಲು ಬಿಡುವರು. ಅವರು ನಿಮ್ಮ ಬಗ್ಗೆ ಚಿಂತೆ ಮಾಡುವುದಿಲ್ಲ. ಆ ಕಾರಣಕ್ಕಾಗಿಯೇ ರಜನೀಶ್ ಆ ಮಾತನ್ನು ಬಹಳ ಒತ್ತಿ ಹೇಳಿದ್ದಾರೆ. ಎಚ್ಚರಿಕೆಯಿಂದಿರಿ ಮತ್ತು ಬಲು ಉಪಯುಕ್ತರಾಗದಿರಿ. ಹೀಗಿರದಿದ್ದರೆ ಎಲ್ಲರೂ ನಿಮ್ಮನ್ನು ಶೋಷಣೆ ಮಾಡುವರು. ನಂತರ ಇವರು ನಿಮ್ಮನ್ನು ನಿರ್ವಹಿಸುವರು, ನಿಯಂತ್ರಿಸುವರು, ಮತ್ತಾಗ ನೀವು ಗೊಂದಲಕ್ಕೆ ಒಳಗಾಗುವಿರಿ.

ಯಾಕೆಂದರೆ ನೀವೀಗ ರಾಜಕೀಯದಲ್ಲಿನ ದೊಂಬರಾಟವನ್ನು ಗಮನಿಸಿ ರಜನೀಶ್ ಮಾತುಗಳು ಸತ್ಯ ಎನಿಸುತ್ತದೆ. ಅಲ್ಲಿ 20-30ವರ್ಷ ಕತ್ತೆ (? ) ದುಡಿದ ಹಾಗೇ ದುಡಿದು ತಮಗೆ ಉನ್ನತ ಹುದ್ದೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತಾರೆ, ಆದರೆ ಕೊನೆಗೆ ಅವರನ್ನು ಹೇಳದೇ ಕೇಳದೆ ಒಂದೋ (ಸಿಂಧ್ಯಾ ತರ, ಅವರೇನೂ ಬಿಎಸ್ಪಿಗಾಗಿ ಹೆಚ್ಚು ದುಡಿಯಲಿಲ್ಲ ಬಿಡಿ) ಮೂಲೆಗುಂಪು ಮಾಡುತ್ತಾರೆ, ಇಲ್ಲ ಕಿತ್ತೊಗೆಯುತ್ತಾರೆ.

ಜೆಡಿಎಸ್‌, ಕಾಂಗ್ರೆಸ್, ಬಿಜೆಪಿ ಹೀಗೆ ಮೂಲೆಗುಂಪು ಮಾಡಿದ ಉದಾಹರಣೆ ಬಹಳಷ್ಟಿದೆ. ಆದರೆ ನಿರುಪಯುಕ್ತತೆಯಲ್ಲಿ ಅದರದ್ದೇ ಆದ ಉಪಯುಕ್ತತತೆ ಇದೆ ಎಂಬುದು ರಜನೀಶ್ ಅಭಿಮತ. ಇದೊಂದು ಜೀವಂತ ಅಂಶ ನೀವಿದನ್ನು ಪೂರ್ಣವಾಗಿ ಬಿಟ್ಟು ಬಿಟ್ಟರೆ ಆಗ ಯಾವುದೂ ಸಹ ಉಪಯುಕ್ತವಲ್ಲ, ನಿಷ್ಪ್ರಯೋಜಕ ವಸ್ತುಗಳು ಇರುವುದರಿಂದಲೇ ಉಪಯುಕ್ತ ವಸ್ತುಗಳು ಇರುವುದು.ಆದರೆ ಜಗತ್ತಿನಲ್ಲಿ ಏನಾಗುತ್ತಿದೆ ನೋಡಿ, ವಿನೋದದ ಎಲ್ಲಾ ಚಟುವಟಿಕೆಗಳನ್ನೂ ನಾವು ಇಲ್ಲವಾಗಿಸಿದ್ದೇವೆ.

ಏಕೆಂದರೆ ನಮ್ಮ ಅನಿಸಿಕೆ, ಆಗ ನಮ್ಮಲ್ಲಿಯ ಶಕ್ತಿಯನ್ನು ಪೂರ್ತಿ ಉಪಯೋಗಕರವಾದುದಕ್ಕೆ ವಿನಿಯೋಗಿಸಬಹುದು ಎಂದು. ಆದರೆ ಕೆಲಸವಿಂದು ಬೇಸರ ತರುವಂತಾಗಿದೆ, ನಾವಿಂದು ವಿರುದ್ಧ ಧ್ರುವದೆಡೆಗೆ ಸಾಗಲೇಬೇಕಾಗಿದೆ...ನಿಮ್ಮ ಸುತ್ತಲಿನ ಯಶಸ್ವಿ ವ್ಯಕ್ತಿಗಳನ್ನು ನೋಡಿ, ರಾಜಕಾರಣಿಗಳು, ಧನವಂತರು, ಬೃಹತ್ ಕೈಗಾರಿಕೋದ್ಯಮಿಗಳನ್ನು ಏನಾಗುತ್ತಿದೆ ಅವರಿಗೆ? ಅವರು ಸಂಗ್ರಹಿಸಿರುವ ವಸ್ತುಗಳನ್ನು ನೋಡಬೇಡಿ, ನೇರವಾಗಿ ಅವರನ್ನು ನೋಡಿ.

ನೀವೇನಾದರು ಅವರ ಬಳಿ ಇರುವ ವಸ್ತುಗಳನ್ನು ನೋಡಿದರೆ ಮೋಸ ಹೋಗುವಿರಿ, ವಸ್ತುಗಳಿಗೆ ಅಲ್ಸರ್ ಬರುವುದಿಲ್ಲ, ಕಾರುಗ ಳಿಗೆ ಹೃದಯಾಘಾತವಾಗುವುದಿಲ್ಲ, ಮನೆಗಳನ್ನು ಆಸ್ಪತ್ರೆಗೆ ಸೇರಿಸುವುದಿಲ್ಲ. ಅದಕ್ಕೆ ನೀವು ವಸ್ತುಗಳನ್ನು ನೋಡಬೇಡಿ ಎನ್ನುವ ರಜನೀಶ್, ಈ ವಸ್ತುಗಳ ಮಧ್ಯೆ ಇರುವ ಮನುಷ್ಯನನ್ನು ನೋಡಿ ಎಂದೆನ್ನುತ್ತಾರೆ, ಯಾಕೆಂದರೆ ಆಗ ನಿಮಗೆ ಕಾಣುವುದು ಆತನ ಮತ್ಸರ, ಬಡತನ, ಮುಖವಾಡದ ಬದುಕು, ಆಗ ಭಿಕ್ಷುಕ ಕೂಡ ಈತನಿಗಿಂತ ಮೇಲಾಗಿ ಕಾಣಿಸುತ್ತಾನೆ. ಈತನಿಗಿಂತ ಶ್ರೀಮಂತ ಆತನಾಗುತ್ತಾನೆ. ಬಡವನ ಜೀವನ ಶ್ರೀಮಂತನ ಜೀವನಕ್ಕಿಂತ ಶ್ರೀಮಂತವಾಗಿರುತ್ತದೆ.... ಈಗ ಹೇಳಿ ರಜನೀಶ್ ಮಾತು ಎಲ್ಲೋ ಒಂದೆಡೆ ನಿಜವೆನಿಸುವುದಿಲ್ಲವೇ......

ಎಡಪಕ್ಷಗಳ ''ಎಡ''ಬಿಡಂಗಿತನ....


ಕಾರ್ಮಿಕರ, ರೈತರ, ಶೋಷಿತರ ಧ್ವನಿಯಾಗಿದ್ದ ಕಮ್ಯೂನಿಷ್ಟ್ ಪಕ್ಷ ಯಾವ ಹಾದಿ ಹಿಡಿದಿದೆ. ಅಧಿಕಾರದ ಗದ್ದುಗೆ ಏರಲು ಎಲ್ಲಾ ಪಕ್ಷಗಳಿಗೂ ಒಂದೊಂದು ಅಜೆಂಡಾ ಇದ್ದಂತೆ, ಎಡಪಕ್ಷಗಳು ಕಾರ್ಮಿಕ, ರೈತ ಸಮಸ್ಯೆಗಳ ಅಜೆಂಡಾ ಮುಂದಿಟ್ಟು ಅಧಿಕಾರ ಪಡೆದು ಅದು ಸಾಧಿಸಿದ್ದಾದರು ಏನನ್ನು?. ಸತತವಾಗಿ ಕೆಂಪುಕೋಟೆಯನ್ನು ಭದ್ರಪಡಿಸಿ ಕೊಂಡಿರುವ ಪಶ್ಚಿಮಬಂಗಾಲದಲ್ಲಿ ರೈತರ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಗಮನ ಹರಿಸಿದರೆ, ಎಡಪಕ್ಷಗಳ ತತ್ವ ಸಿದ್ದಾಂತಗಳು ಗಾಳಿಗೆ ತೂರಿ ಹೋಗಿದೆ ಎಂಬುದರಲ್ಲಿ ಯಾವ ಅನುಮಾನವಿಲ್ಲ.
ಜಾಗತೀಕರಣದ ಪ್ರಬಲ ವಿರೋಧಿಯಾಗಿರುವ ಎಡಪಕ್ಷದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಆಧುನಿ ಕತೆಯ ಹರಿಕಾರರಾಗಲು ಹೊರಟಿದ್ದಾರೆ. ತಾವು ಅಭಿವೃದ್ದಿ ವಿರೋಧಿಗಳಲ್ಲ, ಹಳೇ ಸಿದ್ದಾಂತಕ್ಕೆ ಜೋತು ಬಿದ್ದರೆ ಪ್ರಗತಿ ಸಾಧ್ಯವಿಲ್ಲ ಎಂದು ವಿಶ್ಲೇಷಣೆಗಿಳಿದ ಬುದ್ಧದೇವ್, ಪ್ರಗತಿಯ ಹರಿಕಾರರಾಗಲು ಹೋಗಿ ರೈತರ ಜನಸಾಮಾನ್ಯರ ಬದುಕನ್ನು ಬೀದಿಪಾಲು ಮಾಡಿಬಿಟ್ಟಿದ್ದಾರೆ.
ಪಶ್ಚಿಮಬಂಗಾಳದಲ್ಲಿ 1947 ರಿಂದ 2000ವರೆಗೆ ಅಭಿವೃದ್ಧಿ ಹೆಸರಿನಲ್ಲಿ 47ಲಕ್ಷ ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಇದ ರಿಂದ ಸುಮಾರು 70 ಲಕ್ಷ ಜನರು ತೊಂದರೆ ಅನುಭವಿಸುವಂತಾಗಿದೆ. ಇದರಲ್ಲಿ 36ಲಕ್ಷ ಜನ ವಾಸಿಸಲು ಜಾಗವಿಲ್ಲದೆ ಪರದಾಡುವಂತಾದರೆ, 34 ಲಕ್ಷ ಜನ ಹೊಟ್ಟೆಪಾಡಿಗಾಗಿ ಇದ್ದ ಸಾಗುವಳಿ ಭೂಮಿಯನ್ನೂ ಕಿತ್ತುಕೊಂಡಿದ್ದರು! ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಈ ರೀತಿ ಕೈಗಾರಿಕಾ ಹೆಸರಿನಲ್ಲಿ ಭೂಮಿ ಕಳೆದುಕೊಂಡವರು ಸರಾಸರಿ 60ಮಿಲಿಯನ್ ಮಂದಿ!
ಅದರಲ್ಲಿ ಶೇ.10ರಷ್ಟು ಭಾಗ ಪಶ್ಚಿಮಬಂಗಾಳದ ರೈತರು. ಹೀಗೆ ಭೂಮಿ ಕಳೆದುಕೊಂಡವರಲ್ಲಿ ಶೇ.20 ಬುಡಕಟ್ಟು ಜನಾಂಗ, ಶೇ.30 ದಲಿತರು, ಇನ್ನುಳಿದ ಶೇ.20 ಅತ್ಯಂತ ಕಡು ಬಡವರು, ಮೀನು ಹಿಡಿಯುವವರು ಮತ್ತು ಕೂಲಿ ಕಾರ್ಮಿಕರು. ಇವರಾರು ಧ್ವನಿ ಎತ್ತಲು ಶಕ್ತರಾಗದ ಜನ!!
1951-1955ರವರೆಗೆ ನಡೆದ ಅಭಿವೃದ್ದಿ ಕಾರ್ಯದಲ್ಲಿ ಭೂರಹಿತವಾದ ಶೇ.28ರಷ್ಟು ಜನರಿಗೆ ಪುನರ್ವಸತಿ ಕಲ್ಪಿಸಿಕೊಡಲಾಗಿತ್ತು. ಅದರಂತೆ ಒರಿಸ್ಸಾ ಶೇ.33ರಷ್ಟು, ಗೋವಾ ಶೇ.34, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪುನರ್ವಸತಿ ಕಲ್ಪಿಸಿಕೊಟ್ಟ ರಾಜ್ಯ ಪಶ್ಚಿಮಬಂಗಾಳ(ಕೇವಲ ಶೇ.9), ಮತ್ತೊಂದು ರಾಜ್ಯ ಕೇರಳ(ಶೇ.13), ಇವೆರಡೂ ರಾಜ್ಯಗಳು ರೈತರ ಮತ್ತು ಕಾರ್ಮಿಕರ ಪರ ಎಂದು ಅಧಿಕಾರದ ಗದ್ದುಗೆ ಏರಿದ್ದರೂ ಸಹ ಇವರು ರೈತರ ಬಗ್ಗೆ ತೋರಿದ ಕಾಳಜಿ ಎಷ್ಟರ ಮಟ್ಟಿಗೆ ಇದೆ ಎಂಬುದು ಈ ಅಂಕಿ-ಅಂಶಗಳಿಂದ ಸಾಬೀತಾಗುತ್ತದೆ.!! ರೈತರ ಬದುಕಿನ ಬಗ್ಗೆ, ಅವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಪಶ್ಚಿಮಬಂಗಾಳದಲ್ಲಿ ಒತ್ತಡ ಬಿದ್ದಿದ್ದರೆ ಅದು ಮಾನವ ಹಕ್ಕುಗಳ ಕಾರ್ಯಕರ್ತರಿಂದ.
ಸಿಂಗೂರ್‌ನಲ್ಲಿ ಭೂಮಿ ಕಳೆದುಕೊಂಡವರ ರೈತರಿಗೆ ಪುನರ್ವಸತಿ ಕಲ್ಪಿಸಿಕೊಡುವ ಬಗ್ಗೆ ಪಶ್ಚಿಮಬಂಗಾಳ ಸರಕಾರ ಆಶ್ವಾಸನೆ ನೀಡಿದೆ. ಆದರೆ 70 ಲಕ್ಷ ಜನರಿಂದ ಜಾಗ ಕಿತ್ತುಕೊಂಡಿದ್ದರೂ ಸಹ ಅವರ ಹೊಟ್ಟೆಪಾಡಿಗಾಗಲಿ, ಪುನರ್ವಸತಿ ಕುರಿತಾಗಲಿ ಸರಕಾರ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ!.ಪಶ್ಚಿಮಬಂಗಾಳ ಹೆಚ್ಚಿನ ಭೂಮಿಯನ್ನು ವಶಪಡಿಸಿಕೊಳ್ಳುವ ಮೂಲಕ ಖಾಸಗಿ ಬಂಡವಾಳ ಹೂಡಿಕೆದಾರರಿಗೆ ಅವಕಾಶ ಮಾಡಿಕೊಡುತ್ತಿದೆ ವಿನಃ ಜನಸಾಮಾನ್ಯರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಸುಮಾರು 250 ರೈತರು ಬೆಳೆದಿರುವ 997 ಹೆಕ್ಟೇರ್ ಕೃಷಿ ಭೂಮಿಯನ್ನು ಸಿಂಗೂರ್‌ನಲ್ಲಿ ವಶಪಡಿಸಿಕೊಂಡಿತ್ತು. ಆದರೆ ಆ ಭೂಮಿಯನ್ನು ನೋಂದಾಯಿಸಿರಲಿಲ್ಲ, ಆ ನಿಟ್ಟಿನಲ್ಲಿ ಅವರಾರಿಗೂ ಪರಿಹಾರವೂ ಇಲ್ಲ, ಪುನರ್ವಸತಿಗೆ ಅವಕಾಶವೂ ಇಲ್ಲ. ಹೀಗೆ ಕೃಷಿ ಭೂಮಿ ಕಳೆದುಕೊಂಡ ಒಂದು ಸಾವಿರ ಕುಟುಂಬಗಳು ವಿವಿಧ ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದೆ. ಕೃಷಿ ಮಾಡುತ್ತಿರುವ ರೈತರು ದಿನದ ಸಂಬಳಕ್ಕಾಗಿ ದುಡಿಯುವವರು, ಶೇ.50ಕ್ಕಿಂತಲೂ ಹೆಚ್ಚಿನ ಜನರಿಗೆ ಕೆಲಸವಿಲ್ಲ. ಅವರೆಲ್ಲ ಬಡತನ ರೇಖೆಗಿಂತ ಕೆಳಗಿರುವವರು.
ಹೆಚ್ಚಿನವರು ತಮ್ಮ ಮಕ್ಕಳನ್ನು ಶಾಲೆಯಿಂದ ಬಲವಂತವಾಗಿ ಬಿಡಿಸಿ, ಕೆಲಸ ಮಾಡಲು ಕಳುಹಿಸುತ್ತಿದ್ದಾರೆ. ಅದಕ್ಕಿಂತಲೂ ಆಘಾತಕಾರಿ ಅಂಶ ಆದಾಯ ಗಳಿಕೆಗಾಗಿ ಹೆಚ್ಚಿನವರು ಪಾತಕ ಕೃತ್ಯ ಮತ್ತು ವೇಶ್ಯಾವಾಟಿಕೆಗೆ ಇಳಿದುಬಿಟ್ಟಿದ್ದಾರೆ!! ಇವೆಲ್ಲದರ ಪರಿಣಾಮ ಪಶ್ಚಿಮಬಂಗಾಳ ಸರಕಾರ ಈಗ ಕರಾಳ ನೋವನ್ನು ಅನುಭವಿಸುತ್ತಿದೆ. ಇತ್ತೀಚೆಗಷ್ಟೇ ಪಶ್ಚಿಮಬಂಗಾಳದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನ ಎಡಪಕ್ಷಗಳನ್ನು ತಿರಸ್ಕರಿಸಿದ್ದಾರೆ.
ಜೂನ್ 29ರ ಟೈಮ್ಸ್ ಆಫ್ ಇಂಡಿಯಾದಲ್ಲಿ ಖ್ಯಾತ ಲೇಖಕಿ ಮಹಾಶ್ವೇತ ದೇವಿಯವರು ಕಾರೋಲ್ ಅಂದ್ರಾದೆ ಅವರಿಗೆ ನೀಡಿದ ಸಂದರ್ಶನದಲ್ಲಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಅವರು ಗುಜರಾತ್‌ನ ನರೇಂದ್ರ ಮೋದಿಗಿಂತ ಕಡೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತ್ಯತೀತ, ರೈತ ಪರ ಮುಖವಾಡದ ಎಡಪಕ್ಷ ಮೂಲಭೂತವಾದಿಗಳ ಒತ್ತಡಕ್ಕೆ ಮಣಿದೇ ತಸ್ಲೀಮಾ ನಸ್ರೀನ್‌ಳಿಗೆ ರಕ್ಷಣೆ ನೀಡಲಾಗದೆ ಕೋಲ್ಕತಾದಿಂದ ಹೊರಗಟ್ಟಿದೆ.
ಪಶ್ಚಿಮಬಂಗಾಳದ ನಂದಿಗ್ರಾಮದಲ್ಲಿ ನಡೆದ ಹಿಂಸೆ, ಅತ್ಯಾಚಾರ ಭಯಾನಕ ಹುಟ್ಟಿಸುವಂತಾದದ್ದು, ಆ ಕಾರಣಕ್ಕಾಗಿಯೇ ಪಶ್ಚಿಮಬಂಗಾಳದ ಹೃದಯಭಾಗದಂತಿರುವ ನಂದಿಗ್ರಾಮ ಮತ್ತು ಸಿಂಗೂರ್‌ನಲ್ಲಿ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಎಡಪಕ್ಷವನ್ನು ಜನ ತಿರಸ್ಕರಿಸಿದ್ದಾರೆ.
ನಿಜಕ್ಕೂ ಪಶ್ಚಿಮಬಂಗಾಳ ಸರಕಾರಕ್ಕೆ ಆಡಳಿತದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಹಾಶ್ವೇತ ದೇವಿ ಹೇಳಿರುವ ಮಾತಿನಲ್ಲಿ ಯಾವುದೇ ಹುರುಳಿಲ್ಲದಿಲ್ಲ. ಅಲ್ಲದೇ ಗುಜರಾತ್‌ನಲ್ಲಿ ಕೋಮು ಹಿಂಸಾಚಾರ ನಡೆದ ಬಳಿಕ ತಾನು ಅಹಮದಾಬಾದ್, ಬರೋಡಾ ಮತ್ತು ಸೂರತ್‌ಗೆ ಭೇಟಿ ನೀಡಿದ್ದೆ, ಅಲ್ಲಿ ಉತ್ತಮವಾದ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿದೆ, ವಿದ್ಯುತ್ ವ್ಯವಸ್ಥೆ ಮಾದರಿಯಾಗಿದೆ. ಅದೇ ಪಶ್ಚಿಮಬಂಗಾಳವನ್ನು ಒಮ್ಮೆ ನೋಡಿ, ರಸ್ತೆ ಇಲ್ಲ, ಆರೋಗ್ಯ ಕೇಂದ್ರ, ವಿದ್ಯುತ್ ಏನೂಂದ್ರೆ ಏನೂ ಇಲ್ಲ ಇಲ್ಲಿ ಎಂದು ದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಅಣುಒಪ್ಪಂದದಲ್ಲಿಯೂ ಖ್ಯಾತೆ ತೆಗೆಯುತ್ತಿರುವ ಎಡಪಕ್ಷಗಳು ಯಾವ, ಸಿದ್ದಾಂತ, ತಾತ್ವಿಕ ನೆಲೆಗಟ್ಟಿನ ಮೇಲೆ ಹೋರಾಟ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದೇ ಜನರಲ್ಲಿ ಗೊಂದಲ ಹುಟ್ಟಿಸುತ್ತಿದ್ದರೆ, ಮತ್ತೊಂದೆಡೆ ಎಡಪಕ್ಷಗಳ ಧೋರಣೆ ಕಾರ್ಮಿಕ ವರ್ಗ ಸೇರಿದಂತೆ ಜನಸಾಮಾನ್ಯರಲ್ಲೂ ರೇಜಿಗೆ ಹುಟ್ಟಿಸಿದೆ. ಎಡಪಕ್ಷಗಳು ಎತ್ತ ಸಾಗುತ್ತಿವೆ.....

Tuesday, May 27, 2008

ಹೂ ಕಿಲ್ಡ್ ಗಾಂಧಿ.....


ಸ್ವಾತಂತ್ರ್ಯ ಚಳವಳಿಗಾರರಲ್ಲಿ ನನ್ನನ್ನ ಬಹುವಾಗಿ ಕಾಡಿದ ವ್ಯಕ್ತಿ ''ವೀರ ಸಾವರ್‌‌ಕರ್'', ಪಿಯುಸಿಯಲ್ಲಿ ಇತಿಹಾಸ ಓದುವಾಗ ಸಾವರ್‌‌ಕರ್ ಹೋರಾಟದ ಬಗ್ಗೆ ಅಭಿಮಾನ, ಮೆಚ್ಚುಗೆ ತುಂಬಿತ್ತು. ಆ ಸಂದರ್ಭದಲ್ಲಿ ಆರ್‌ಎಸ್‌‌ಎಸ್‌ನ ಶಿವರಾಮು ಅವರು ಬರೆದ ''ಆತ್ಮಾಹುತಿ' ಪುಸ್ತಕ ಓದಿದ ಮೇಲಂತೂ ಎಂತಹ ವ್ಯಕ್ತಿಯಾದರು ಸಾವರ್‌ಕರ್ ದೇಶಪ್ರೇಮದ ಬಗ್ಗೆ ಅಪಸ್ವರ ಎತ್ತುವಂತಿಲ್ಲ. ಆದರೆ ಯಾವಾಗ ಅಟಲ್‌‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌‌ಡಿಎ ಸರಕಾರ ಸಂಸತ್ ಭವನದಲ್ಲಿ ಗಾಂಧಿ ಫೋಟೋದ ಮುಂಭಾಗ ಸಾವರ್‌‌ಕರ್ ಪೋಟೋ ತೂಗು ಹಾಕಿದರೋ ಆಗ ಪ್ರತಿಭಟನೆ ಭುಗಿಲೆದ್ದಿತು.
ಗಾಂಧಿ ಹತ್ಯೆ ಸಂಚು ರೂಪಿಸಿದ ಸಾವರ್‌‌ಕರ್‌‌ರಂತಹವರಿಗೆ ಅಲ್ಲಿ ಸ್ಥಾನ ನೀಡುವುದು ರಾಷ್ಟ್ರಪಿತನಿಗೆ ಮಾಡಿದ ಅವಮಾನ ಎಂಬುದಾಗಿ ಬಿಜೆಪಿಯನ್ನು ಹೊರತುಪಡಿಸಿ ಎಲ್ಲಾ ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ 50 ವರ್ಷಗಳ ಕಾಲ ಕರಿನೀರ ಶಿಕ್ಷೆಯನ್ನು ಅನುಭವಿಸಿದ ವೀರ ಸಾವರ್‌‌ಕರ್ ನಿಜಕ್ಕೂ ವೀರರೇ ? ಅವರು ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಬ್ರಿಟಿಷರಲ್ಲಿ ಗೋಗರೆದಿದ್ದರು....ಹೀಗೆ ಒಂದೊಂದೆ ಅಂಶಗಳು ತಿಳಿಯತೊಡಗಿದಾಗ ಸಾವರ್‌‌ಕರ್ ಕುರಿತ ಪರ-ವಿರೋಧದ ಪುಸ್ತಕಗಳನ್ನು ಜಾಲಾಡತೊಡಗಿದ್ದೆ.ಆ ನಿಟ್ಟಿನಲ್ಲಿ ಕನ್ನಡದ ಪ್ರಮುಖ ಲೇಖಕ, ಅನುವಾದದಲ್ಲಿ ಸಿದ್ಧಹಸ್ತರಾಗಿರುವ ರವಿ ಬೆಳೆಗೆರೆಯವರು ಇದೀಗ 95ರ ವಯೋವೃದ್ದ ಮನೋಹರ್ ಮಳಗಾಂವ್‌‌ಕರ್ ಅವರು ಬರೆದಿರುವ ''ಹೂ ಕಿಲ್ಡ್ ಗಾಂಧಿ'' ಪುಸ್ತಕದ ಅನುವಾದವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಬೆಳೆಗರೆಯವರು ಈ ಮೊದಲು ಬರೆದ ಗಾಂಧಿ ಮತ್ತು ಹತ್ಯೆ ಸಾಕಷ್ಟು ಚರ್ಚೆಗೆ ಈಡಾಗಿತ್ತು. ಇದೀಗ ಸಾವರ್‌ಕರ್‌‌ಗೆ ಸಂಬಂಧಿಸಿದ ಪುಸ್ತಕದ ಬಿಡುಗಡೆಗೆ ಮುನ್ನವೇ ಅವರು ಹಾಯ್‌‌ಬೆಂಗಳೂರು ಇತ್ತೀಚೆಗಿನ ಸಂಚಿಕೆಯಲ್ಲಿ, ತಾನು ಪುಸ್ತಕ ಅನುವಾದದಲ್ಲಿ ತೊಡಗಿದಾಗ, ನನಗೆ ಹೊಸದಾದ ಗೋಡ್ಸೆ, ಅಪ್ಟೆ ಕಾಣಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ.ಅದಕ್ಕೂ ಮೊದಲು ನಾನು ಉದಾಹರಿಸ ಹೊರಟಿರುವುದು ಕನ್ನಡದ ಹಿರಿಯ ಲೇಖಕರು ಆಗಿರುವ ಕೋ.ಚೆನ್ನಬಸಪ್ಪ ಅವರು ''ಗಾಂಧಿ ಹಂತಕರು ಯಾರು'' ಎಂಬ ಪುಸ್ತಕ ಕೂಡ ಈಗ ಮಾರುಕಟ್ಟೆಯಲ್ಲಿದೆ.ಚೆನ್ನಬಸಪ್ಪ ಅವರು ಗಾಂಧೀಜಿ ಹತ್ಯೆ ಸೇರಿದಂತೆ ಸಾವರ್‌‌ಕರ್ ಅವರು ದಯಾಭಿಕ್ಷೆ ಬೇಡಿದ ಪತ್ರದ ನಕಲನ್ನೂ ಕೂಡ ಪುಸ್ತಕದಲ್ಲಿ ದಾಖಲಿಸಿದ್ದಾರೆ.ಸಾವರ್‌‌ಕರ್‌‌ರನ್ನು ತನ್ನ ಗುರುವೆಂದೇ ನಂಬಿದ್ದ ಗೋಡ್ಸೆಯ ಮೇಲೆ ಅವರಿಗೆ ಅಪಾರ ಪ್ರೀತಿ, ಆದರೂ ಸಾವರ್‌‌ಕರ್ ಅವರು ಗಾಂಧಿ ಹತ್ಯೆಯ ವಿಚಾರಣೆ ವೇಳೆ ತನಗೆ ಗೋಡ್ಸೆ ಪರಿಚಯವೇ ಇಲ್ಲವೆಂಬಂತೆ ನಟಿಸುವ ಮೂಲಕ, ಚಾಣಾಕ್ಷತನದಿಂದ ತಮ್ಮ ಮೇಲಿನ ಆರೋಪದಿಂದ ಬಚಾವಾಗಿದ್ದರು ಎಂದು ಸಾಕ್ಷ್ಯಾಧಾರಗಳ ಸಹಿತ ವಿವರಿಸಿದ್ದಾರೆ.ಭಾಷಾಂತರದಲ್ಲಿ ಸಿದ್ಧಹಸ್ತರಾಗಿರುವ ರವಿಬೆಳೆಗೆರೆಯವರ ಪುಸ್ತಕ ಬಿಡುಗಡೆಯಾದ ಮೇಲೆ ಅದು ಪಡೆಯುವ ಪ್ರಚಾರ,ಚರ್ಚೆ ಬಹುಶಃ ಚೆನ್ನಬಸಪ್ಪ ಅವರ ಹೊತ್ತಗೆ ದೊರೆತಿಲ್ಲ ಎಂಬುದು ಸತ್ಯ.
ಆ ನಿಟ್ಟಿನಲ್ಲಿ ನಾನು ಕೂಡ ಮನೋಹರ್ ಮಳ್‌ಗಾಂವ್‌‌ಕರ್ ಅವರ ಇಂಗ್ಲಿಷ್ ಆವೃತ್ತಿಯನ್ನು ಬೆಳೆಗೆರೆ ಕನ್ನಡಕ್ಕೆ ತರ್ಜುಮೆ ಮಾಡಿ ಬಿಡುಗಡೆಗೊಳಿಸುವುದನ್ನು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ.ಆದರೂ ಮೇ 28ಕ್ಕೆ ಸಾವರ್‌‌ಕರ್ ಅವರ ಜನ್ಮ ಜಯಂತಿ ಆ ಹಿನ್ನೆಲೆಯಲ್ಲಿ ಚೆನ್ನಬಸಪ್ಪ ಅವರು ಬರೆದಿರುವ ಪುಸ್ತಕದ ಅಂಶವನ್ನು ದಾಖಲಿಸುತ್ತ ಗಾಂಧಿ ಹತ್ಯೆ ಬಗೆಗಿನ ಮತ್ತೊಂದು ಮುಖದ ಪರಿಚಯವಾಗುವ ನಿಟ್ಟಿನಲ್ಲಿ ಈ ಬರಹ....
ಮಹಾತ್ಮನ ಹತ್ಯಾಕಾಂಡ: ಗಾಂಧಿ ಹತ್ಯೆಗೆ ತಾನೊಬ್ಬನೆ ಕಾರಣ ಅದರಲ್ಲಿ ಮತ್ತ್ಯಾರೂ ಭಾಗಿಯಾಗಿಲ್ಲ ಎಂದು ನಾಥೂರಾಮ್ ನ್ಯಾಯಾಲಯದಲ್ಲಿ ''ಕೊನೆಯ''ವರೆಗೂ ವಾದಿಸಿದ್ದ. ಸಾವರ್‌‌ಕರರು ತಮಗೆ ನಾಥೂರಾಮ್ ಯಾರೆಂಬ ಬಗ್ಗೆ ಸರಿಯಾಗಿ ತಿಳಿದಿಲ್ಲ ಎಂದು ವಿಚಾರಣೆ ವೇಳೆ ವಾದಿಸಿದ್ದರು. ಅಲ್ಲದೇ ಗಾಂಧಿ ಹತ್ಯೆ ವಿಚಾರಣೆ ವೇಳೆ ಒಂದು ದಿನವೂ ನಾಥೂರಾಮನನ್ನು ಕಣ್ಣೆತ್ತಿ ನೋಡಿರಲಿಲ್ಲ!! 1930ರಿಂದ 1948ರವರೆಗಿನ ಗಳಸ್ಯ ಕಂಠಸ್ಯ ಗೆಳೆತನ ಈ ರೀತಿ ಅಪರಿಚಿತವಾಗಲು ಕಾರಣವೇನು ?.ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲೂ ಗಾಂಧಿ ಮೇಲೆ ನಾಲ್ಕೈದು ಬಾರಿ ಹತ್ಯಾ ಪ್ರಯತ್ನಗಳು ನಡೆದಿದ್ದವು.
ಆದರೆ ಆಫ್ರಿಕಾದ ''ಸ್ಮಟ್ಸ್'' ಆಡಳಿತ ಗಾಂಧಿ ಕೊಲೆಯನ್ನು ತಪ್ಪಿಸಿತ್ತು. ಭಾರತದಲ್ಲಿ ಆಗಿನ ಬ್ರಿಟಿಷ್ ಆಡಳಿತ ಗಾಂಧಿಗೆ ಪ್ರಾಣಾ ಪಾಯವಾಗದಂತೆ ರಕ್ಷಿಸಿಕೊಂಡು ಬಂದಿತ್ತು. ಆದರೆ ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯ ಬಂದ ಆರು ತಿಂಗಳಲ್ಲಿ ಅವರ ಪ್ರಾಣ ರಕ್ಷಣೆ ಮಾಡಲಾರದೆ ಹಿಂದೂಗಳ ಕೈಯಲ್ಲೇ ಹತರಾಗಿದ್ದರು. ಆಗ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕಡು ವಿರೋಧಿ ವಿನ್ಸೆಂಟ್ ಚರ್ಚಿಲ್ ಕೂಡ, ನಾವು ಗಾಂಧಿ ಪ್ರಾಣವನ್ನು 30ವರ್ಷ ರಕ್ಷಿಸಿದ್ದೇವು, ಸ್ವತಂತ್ರ (ಗಾಂಧಿ ಹತ್ಯೆ ನಡೆಯಲೇಬೇಕಾದದ್ದು ಎಂಬುದಕ್ಕೆ ಇಂದು ಬಹುತೇಕ ಸಹಮತ ಇದೆ!!) ಭಾರತ ಒಂದು ವರ್ಷ ಕೂಡ ಅವರನ್ನು ರಕ್ಷಿಸಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದರು.ನಾಥೂರಾಮ ಗೋಡ್ಸೆ ನಾನೇ ಗಾಂಧಿ ಹತ್ಯೆ ಮಾಡಿದ್ದ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆದರೂ ಮತ್ಯಾಕೆ ಗಾಂಧಿ ಹತ್ಯೆಯ ಕುರಿತು ಕೆದಕಬೇಕು ಎಂಬ ಪ್ರಶ್ನೆ ಉದ್ಭವಿಸಿಬಹುದು.
ಹೌದು, ಗಾಂಧಿ ಹತ್ಯೆಯನ್ನು ಮಾಡಿಸಿದವರು ಯಾರು?!ಯಾರು ಶಿಕ್ಷಾರ್ಹರು ಎಂಬುದು ನ್ಯಾಯಾಲಯದ ಮುಂದಿದ್ದ ಪ್ರಶ್ನೆ ಯಾಗಿತ್ತು. ಒಂದು ವೇಳೆ ನಾಥೂರಾಮ್ ಗೋಡ್ಸೆ ಒಬ್ಬನೇ ಆರೋಪಿತನಾಗಿದ್ದರೆ ದೋಷಾರೋಪಣೆಯನ್ನು ಓದಿ ಹೇಳಿ ಅವನ ತಪ್ಪೊಪ್ಪಿಗೆಯ ಹೇಳಿಕೆಯನ್ನು ನ್ಯಾಯಾಧೀಶರು ದಾಖಲಿಸಿ ಅವನು ದೋಷಿ ಎಂದು ತೀರ್ಪು ನೀಡುವುದಕ್ಕೆ ಯಾವ ಕಷ್ಟವೂ ಇರುತ್ತಿರಲಿಲ್ಲ.ಆದರೆ ಆ ಸಂದರ್ಭದಲ್ಲಿ ಸಂಗ್ರಹಿಸಿದ ದಾಖಲೆ, ಮಾಹಿತಿ ಆಧಾರದ ಮೇಲೆ ವೀರ ಸಾವರ್‌‌ಕರ್ ಗಾಂಧಿ ಹತ್ಯೆಯ ಪಿತೂರಿಯಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ನೆರವಾಗಿದ್ದರು ಎಂಬ ಅಂಶ ತನಿಖಾಧಿಕಾರಿ ನಗರವಾಲಾರಿಗೆ ಮನವರಿಕೆ ಆಗಿತ್ತು. ಹತ್ಯೆ ನಡೆಸಿದ ಆರೋಪಿಗಳೊಂದಿಗೆ ಅವರಿಗೆ ಸಂಪೂರ್ಣ ಸಂಪರ್ಕವಿತ್ತು.
ನಿಕಟ ಪರಿಚಯ, ಬೆಂಬಲ ಇತ್ತೆಂದು ಮಾಹಿತಿ ಸಂಗ್ರಹಿಸಿದ್ದರು.ಅವರನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಿ ಬಂಧಿಸುವುದೇ ಬೇಡವೇ ಎಂಬ ಬಗ್ಗೆ ಮುಂಬೈ ಗೃಹಮಂತ್ರಿ ಮೊರಾರ್ಜಿ ದೇಸಾಯಿ ಜತೆ ಸಮಾಲೋಚಿನೆ ನಡೆಸಿ, ಸಾವರ್‌‌ಕರರು ಕಳೆದ ಶತಮಾನದ ಆದಿಯಲ್ಲಿ ಅಪ್ರತಿಮ ಸಾಹಸ ಮಾಡಿದ್ದರು ಎಂಬುದರಲ್ಲಿ ಸಂಶಯ ಇಲ್ಲ, ಆ ಪ್ರಯತ್ನದಲ್ಲಿ ಅಂಡಮಾನ್ ದ್ವೀಪದಲ್ಲಿ ದೀರ್ಘಾವಧಿಯ ಸೆರೆಮನೆವಾಸ ಅನುಭವಿಸಿದ್ದರು. ಅವರು ಬರೆದ ಭಾರತೀಯ ಪ್ರಥಮ ಸ್ವಾತಂತ್ರ್ಯ ಸಮರ(1857) ಆಗ ಪ್ರಸಿದ್ಧವಾಗಿದ್ದು, ಸಾವಿರಾರು ದೇಶಪ್ರೇಮಿಗಳಿಗೆ ಸ್ಫೂರ್ತಿ ನೀಡಿತ್ತು.
ಈ ಹಿನ್ನೆಲೆಯಲ್ಲಿ ವೀರ ಸಾವರ್‌‌ಕರರು ಹಿಂದೆ ದೇಶಕ್ಕಾಗಿ ಬಹಳ ತ್ಯಾಗ ಮಾಡಿದ್ದಾರೆ ಅವರನ್ನು ವಿಚಾರಣೆಗೆ ಗುರಿ ಪಡಿಸುವದೇ ಎಂದು ನಗರವಾಲ್ ಕೇಳಿದ್ದರು. ಅದಕ್ಕೆ ಮೊರಾರ್ಜಿ ದೇಸಾಯಿ, ಅವರು ಈ ಹಿಂದೆ ಮಾಡಿದ ತ್ಯಾಗ ಇಂದು ಮಾಡಿರುವ ಕೃತ್ಯದಿಂದ ಅಳಿಸಿ ಹೋಗಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಮೊರಾರ್ಜಿ ಆದೇಶ ನೀಡಿದ್ದರು. ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಕೂಡ ವಿಚಾರಣೆಗೆ ಅನುಮತಿ ನೀಡಿದ್ದರು.1948 ಜನವರಿ 15 ಮತ್ತು 17ರಂದು ನಾಥೂರಾಮ್ ಗೋಡ್ಸೆ, ನಾರಾಯಣ ಅಪ್ಟೆ, ಬಡಗೆ ಸಾವರ್‌ಕರ್ ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಹೊರಬರುವ ಸಂದರ್ಭದಲ್ಲಿ ''ಯಶಸ್ವಿಯಾಗಿ ಹಿಂದಿರುಗಿ ಬನ್ನಿ''ಎಂದು ಸಾವರ್‌‌ಕರರು ಆಶೀರ್ವದಿಸಿದ್ದರು ಎಂದು ಸಾಕ್ಷ್ಯ ಹೇಳಲಾಗಿತ್ತು. ಆದರೆ ವಿಚಾರಣೆ ವೇಳೆ ಸಾವರ್‌‌ಕರರು ತರ್ಕಬದ್ಧವಾಗಿ ವಾದ ಮಂಡಿಸಿ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದರು.
ದೀರ್ಘ ವಿಚಾರಣೆಯ ನಂತರ ಅವರನ್ನು ಸಂಶಯದ ಸೌಲಭ್ಯ(Benefit of Doubt)ಆಧಾರದ ಮೇಲೆ ಖುಲಾಸೆ ಮಾಡಲಾ ಗಿತ್ತು.ಸಾವರ್‌ಕರ್ ಹೊರತಾಗಿ ಉಳಿದ ಐದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಗೋಡ್ಸೆ ಮತ್ತು ನಾರಾಯಣ ಅಪ್ಟೆಗೆ ಗಲ್ಲು ಶಿಕ್ಷೆ ವಿಧಿಸಿ, ರಾಮಕೃಷ್ಣ ಕರಕರೆ, ಮದನಲಾಲ ಪಹ್ವಾ, ಶಂಕರ ಕ್ರಿಸ್ಟಯ್ಯ, ಗೋಪಾಲ ಗೋಡ್ಸೆ,ಡಾ.ಪರಚುರೆಗೆ ಜೀವಾವಧಿ ಶಿಕ್ಷೆ ನೀಡಲಾಯಿತು.ಇದೀಗ ಮುಖ್ಯವಾದದ್ದೆಂದರೆ ಗಾಂಧಿ ಹತ್ಯೆಯ ಹಿಂದಿನ ಪ್ರೇರಣೆ ಯಾವುದು ? ಹಿಂದು-ಮುಸ್ಲಿಂ ಐಕ್ಯತೆ ಪ್ರಶ್ನೆ, ದೇಶ ವಿಭಜನೆಗೆ ಪ್ರಬಲ ವಿರೋಧಿಯಾಗಿದ್ದವರು ಗಾಂಧೀಜಿ.
ನನ್ನ ಹೆಣವನ್ನು ತುಳಿದು ದಾಟಿ ದೇಶವನ್ನು ವಿಭಜಿಸಬೇಕಾದೀತು ಎಂಬ ಗಾಂಧಿ ಮಾತಿನ ವಿರುದ್ಧ ಗೋಡ್ಸೆ ಕೆಂಡಮಂಡಲನಾಗಿ, ದೇಶ ಇಬ್ಭಾಗವಾದ ಬಳಿಕ ಗಾಂಧಿ ಇನ್ನು ಬದುಕಿರಬಾರದು, ಅವರಿನ್ನೂ ಬದಕಿಯೇ ಇದ್ದಾರೆ, ಅವರನ್ನು ಮುಗಿಸಬೇಕು ಎಂದು ಘೋಷಿಸಿದ್ದ. ಮತ ಧರ್ಮದ ಆಧಾರದ ಮೇಲೆ ರಾಷ್ಟ್ರ, ರಾಜ್ಯ ನಿರ್ಮಾಣ ಸಾಧುವಲ್ಲ ಎಂದು ವಾದಿಸಿದವರು ಗಾಂಧೀಜಿ.
ಆದರೆ ಮತೀಯ ಆಧಾರದ ಮೇಲೆ ದ್ವಿ ರಾಷ್ಟ್ರ ಸಿದ್ದಾಂತವನ್ನು ಪ್ರತಿಪಾದಿಸಿದವರು ಸಾವರ್‌ಕರ್ !!. ಅವರ ಈ ಸಿದ್ದಾಂತ ಅವ ಲಂಬಿಸಿಯೇ ಜಿನ್ನಾ ಪಾಕಿಸ್ತಾನದ ಹಕ್ಕು ಸಾಧಿಸಿದ್ದು, ಹಾಗಾದರೆ ಸಾವರ್‌‌ಕರ್, ಗೋಡ್ಸೆಯ ರಾಜಕೀಯ ಸಿದ್ದಾಂತ ಏನು?. ಸಾವರ್‌‌ಕರಿಸಂ ತತ್ವದ ಪ್ರಕಾರ ನಡೆಯುವ ವಧೆ, ಹತ್ಯೆ ಕ್ಷಮಾರ್ಹ ಅವರ ತತ್ವಕ್ಕೆ ಆಧಾರವಾಗಿ ಜರ್ಮನಿಯಲ್ಲಿ ಆರ್ಯರಿಗೂ, ಯಹೂದಿ ಜನಾಂಗದವರಿಗೂ ಆದ ನರಮೇಧ ಉದಾಹರಿಸುತ್ತಾರೆ, ಇದೇ ತತ್ವವನ್ನು ಡಾ.ಹೆಗ್ಡೆವಾರ್ ವಿರಚಿತ With Nation ಹಾಗೂ ಗುರೂಜಿ ಗೋಲ್ವಾಲ್ಕರ್ ಅವರು Bunch of Thought's ಅವರ ಪಾಲಿಗೆ ಗೀತೋಪದೇಶವಾಗಿದೆ. ಜರ್ಮನಿಯೇ ಅವರ ಆದರ್ಶ ದೇಶ, ಹಿಟ್ಲರನೇ ಅವರ ಆದರ್ಶ ನಾಯಕ!! ಇಂತಹ ಅಪಸವ್ಯಗಳೇ ಪಾಕಿಸ್ತಾನ ಸ್ಥಾಪನೆಗೆ ಕಾರಣ, ಈ ದ್ವೇಷದ ಜ್ವಾಲಾಗ್ನಿ ಗಾಂಧಿಯನ್ನು ಬಲಿತೆಗೆದುಕೊಂಡ ನಂತರ ಅದು ಅಲ್ಲಿಗೆ ಮುಗಿದು ಹೋಗಿಲ್ಲ...
ಇದು ಗುಜರಾತಿನಲ್ಲಿನ ನರಮೇಧ..ಬಾಬರಿ ಮಸೀದಿ ಧ್ವಂಸದೊಂದಿಗೆ ಮುಂದುವರಿದಿದೆ, ಸಾವರ್‌‌ಕರಿಸಂನ ಈ ತತ್ವ ಅನಾಹುತ ಕ್ಕೆ ಕಾರಣವಾಗಿದೆ, ಹಾಗಾದರೆ ಭಾರತದ ಇಬ್ಭಾಗಕ್ಕೆ ಕಾರಣ್ಯಾರು ಗಾಂಧಿ ಅಥವಾ ಸಾವರ್‌ಕರರೇ...?ನಾನೇಕೆ ಗಾಂಧಿಯನ್ನು ಕೊಂದೆ ಎಂಬ ಪುಸ್ತಕ ಓದಿದ ಬಹುತೇಕರು ಗಾಂಧಿ ದೇಶದ್ರೋಹಿಯಾಗಿ-ಗೋಡ್ಸೆ ಮಹಾನ್ ದೇಶಭಕ್ತ ಎಂದು ಬೊಬ್ಬಿರಿ ಯುವುದು ಹಾಸ್ಯಾಸ್ಪದ. ಧೀರ-ವೀರ ಎಂದು ಖ್ಯಾತಿ ಗಳಿಸಿದ ವಿನಾಯಕ ದಾಮೋದರ ಸಾವರ್‌ಕರ್ ಅಂಡಮಾನ್ ಜೈಲಿನಲ್ಲಿದ್ದಾಗ 1911ರಲ್ಲಿ ಭಾರತ ಸರಕಾರಕ್ಕೆ ಕ್ಷಮಾ ಯಾಚನಾ ಪತ್ರ ಕಳುಹಿಸಿದ್ದರು !!.
ಪತ್ರದ ಉಲ್ಲೇಖ- ''ಕೊನೆಯದಾಗಿ, 1911ರಲ್ಲಿ ನಾನು ಕಳುಹಿಸಿದ ಕ್ಷಮಾಯಾಚನಾ ಮನವಿ ಪತ್ರವನ್ನು ತಾವು ಪರಾಂಬರಿಸಿ ಕೊಂಡು ಇಂಡಿಯಾ ಸರಕಾರಕ್ಕೆ ಅದನ್ನು ಮಂಜೂರಾತಿಗಾಗಿ ಕಳುಹಿಸಿಕೊಡಬೇಕೆಂದು ಘನವೆತ್ತ ತಮಗೆ ನೆನಪು ಮಾಡ ಬಹು ದೇ?....ಹೀಗೆ ಸಾಗುವ ''ವೀರ''ಸಾವರ್‌‌ಕರರ ಪತ್ರ ನನ್ನ ಮುಂದಿನ ಭವಿಷ್ಯ ನಡತೆ ಪರಿವರ್ತನೆಯಾಗುತ್ತದೆ,ನನ್ನನ್ನು ಜೈಲಿನಲ್ಲಿ ಇಡುವುದರಿಂದ,ಬಿಡುವುದರಿಂದಾಗುವ ಯಾವ ಒಳಿದು ಆಗಲಾರದು. ಆದ್ದರಿಂದ ಉಡಾಳ ಮಗ ಸರಕಾರದ ಮಾತೃ ಮಂದಿರದ ಬಾಗಿಲಿಗಲ್ಲದೆ ಮತ್ತೆಲ್ಲಿಗೆ ಹೋದಾನು!! ತಾವು ಈ ಕೆಲವು ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುವಿರೆಂದು ನಂಬುತ್ತೇನೆ.
ಸಹಿ
ವಿ.ಡಿ.ಸಾವರ್‌‌ಕರ
ಬಳಿಕ 5-01-1924ರಲ್ಲಿ ಮುಂಬೈ ಸರಕಾರ, ವಿನಾಯಕ ದಾಮೋದರ ಸಾವರ್‌‌‌ಕರ್ ಅವರನ್ನು ಬಿಡುಗೊಳಿಸಲು ನಿರ್ಧರಿಸಿರು ವುದಾಗಿ ಪತ್ರ ಮುಖೇನ ತಿಳಿಸಿ, 1898ರ ಕ್ರಿಮಿನಲ್ ಪ್ರೊಸಿಜರ್ ಕೋಡ್ ಸೆಕ್ಷನ್ 401ರ ಪ್ರಕಾರ, ಆಡಳಿತ ಮಂಡಳಿಯ ಮುಖ್ಯ ಸ್ಥರಾದ ರಾಜ್ಯಪಾಲರು ದ್ವೀಪಾಂತರ ಶಿಕ್ಷೆಗೆ ಗುರಿಯಾಗಿರುವ ವಿ.ಡಿ.ಸಾವರ್‌‌ಕರ್‌‌ರ ಇನ್ನು ಉಳಿದಿರುವ ಶಿಕ್ಷೆಯನ್ನು ಮನ್ನಾ ಮಾಡಲಾಗಿದೆ ಎಂದು ಆದೇಶ ನೀಡಲಾಗಿದೆ.
ಶಿರಗಾಂವ 9ನೇ ಮೇ 1925.

Thursday, May 8, 2008

ಚಂದಮಾಮನಿಗೆ ಅರವತ್ತು......

ಬಹುತೇಕ ಮಂದಿ ಚಂದಮಾಮದಲ್ಲಿನ ವಿಕ್ರಮ ಮತ್ತು ಬೇತಾಳ, ನೀತಿ ಕಥೆಗಳನ್ನು ಓದಿಯೇ ಆಡುಗೂಲ ಜ್ಜಿಯ ಕಥೆಯೆಡೆಗೊಂದು ಮೋಹ ಬೆಳೆಸಿಕೊಂಡಿರುವುದು. ಆ ಕಾಲಕ್ಕೆ ನಮಗೆ ಚಂದಮಾಮ, ಬಾಲಮಿತ್ರಿ ನಮ್ಮ ಬಾಲ್ಯದ ಸಂಗಾತಿಯಾಗಿದ್ದವು. ನಾವೆಲ್ಲ ಓದುತ್ತಾ, ಓದುತ್ತಾ ಬೆಳೆದ ಚಂದಮಾಮನಿಗೆ ಈಗ 60ರ ಸಂಭ್ರಮ..
ಅಬ್ಬಾ ಚಂದಮಾಮಕ್ಕೆ ಅರವತ್ತು ವರ್ಷಗಳು ತುಂಬಿತೆಂದರೆ, ನಮ್ಮ ಕಣ್ಣುಗಳೇ ಇಷ್ಟಗಲ ತೆರೆದುಕೊಳ್ಳು ತ್ತದೆ. ಇತ್ತೀಚೆಗಷ್ಟೇ ಮುಂಬೈಯಲ್ಲಿ ಚಂದಮಾಮದ 60ನೇ (61ವರ್ಷ) ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ, ನಾನು ಚಿಕ್ಕವನಿದ್ದಾಗ ಪಾಶ್ಚಾತ್ಯ ಕಾಮಿಕ್ಸ್‌‌ನೆಡೆಗೆ ಮೋಹಿತನಾಗಿದ್ದೆ.
ಆದರೆ ನನ್ನ ಪೋಷಕರು ನನಗೆ ಚಂದಮಾಮದ ರುಚಿ ಹತ್ತಿಸಿದ ಮೇಲೆ ನನಗೆ ಬಾಲ್ಯದಲ್ಲಿ ಅದೇ ನನ್ನ ಸಂ ಗಾತಿಯಾಗಿತ್ತು. ಆದರೆ ಈಗ ನನಗೆ ಸಮಯದ ಒತ್ತಡ ಇರುವುದರಿಂದ ಓದಲಾಗುತ್ತಿಲ್ಲ, ಆದರೂ ಚಂದ ಮಾಮವನ್ನ ನನ್ನ ಮೊಮ್ಮಕ್ಕಳಿಗೆ ಪರಿಚಯಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದರು. ಹೌದು ಈಗ ಚಂದಮಾಮನ ನೆನಪು-ನೇವರಿಕೆ ನಮ್ಮಿಂದ ನಿಧಾನಕ್ಕೆ ತೆರೆ-ಮರೆಗೆ ಸರಿಯತೊಡಗಿದೆ.
ಆ ಜಾಗದಲ್ಲಿ ಹ್ಯಾರಿ ಪಾಟರ್ ಬಂದು ಕುಳಿತಿದ್ದಾನೆ. ಯಾರು ಎಷ್ಟೇ ಬಾಯಿ ಬಡಿದಕೊಂಡರೂ ಚಂದಮಾಮ, ಬಾಲಮಿತ್ರ, ಈಸೋಪನ ಕಥೆಗಳು, ಅಕ್ಬರ್-ಬೀರ್‌‌ಬಲ್‌ ಕಥೆಗಳ ಮುಂದೆ ಹ್ಯಾರಿ ಪಾಟರ್ ಅನ್ನು ನಿವಾಳಿಸಿ ಒಗೆಯಬೇಕು.
1947ರ ಜುಲೈ ತಿಂಗಳಿನಲ್ಲಿ ನಾಗಿ ರೆಡ್ಡಿ ಮತ್ತು ಅವರ ಆಪ್ತಮಿತ್ರ ಚಕ್ರಪಾಣಿಯವರು ಜತೆಗೂಡಿ ಚಂದಮಾ ಮನನ್ನು ಹುಟ್ಟು ಹಾಕಿದ್ದರು. ಚಂದಮಾಮ ಎರಡು ಬಣ್ಣಗಳಲ್ಲಿ ಪ್ರಪ್ರಥಮವಾಗಿ ಹೊರಬಿದ್ದ 64ಪುಟಗಳ ಸಂಚಿಕೆಯ ಬೆಲೆ 6ಅನ್ನಾ (ಅಂದರೆ 37 ಪೈಸೆ), 1947ರ ಜುಲೈಯಲ್ಲಿ 6 ಸಾವಿರ ಪ್ರತಿಯನ್ನು ಅಚ್ಚು ಹಾಕಿಸಲಾಗಿತ್ತಂತೆ. ಅದನ್ನು ಅಂಚೆ ಕಚೇರಿ ಮೂಲಕ ಕಳುಹಿಸುವ ಏರ್ಪಾಟು ಮಾಡಲಾಗಿತ್ತು.
ಹೀಗೆ ನಿರಂತರವಾಗಿ ಮಾಸಿಕ ಪ್ರಕಟಣೆ ಕಂಡ ಚಂದಮಾಮ 1998ರಲ್ಲಿ ನೌಕರರ ವಿವಾದದಿಂದಾಗಿ ಪ್ರಕ ಟಣೆ ನಿಂತುಹೋಗಿತ್ತು.ನಂತರ ಮತ್ತೆ ಪ್ರಕಟಣೆಯನ್ನು ಆರಂಭಿಸಲಾಗಿತ್ತು, ಪ್ರಥಮವಾಗಿ ಚಂದಮಾಮ ಚೆ ನ್ನೈಯಲ್ಲಿ ಆರಂಭಗೊಂಡಿದ್ದು, ತೆಲುಗು ಮತ್ತು ತಮಿಳು ಭಾಷೆಯಲ್ಲಿ, ನಂತರ ನಾಲ್ಕು ವರ್ಷಗಳ ಬಳಿಕ ಆರು ಭಾಷೆಗಳಲ್ಲಿ ಪ್ರಕಟಣೆ ಕಾಣಲು ಆರಂಭಿಸಿದ ಚಂದಮಾಮ ನಂತರ ಏಕಕಾಲದಲ್ಲಿ ಇಂಗ್ಲೀಷ್, ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ ಅದರಲ್ಲೂ ಚಂದಮಾಮದ ಹೆಗ್ಗಳಿಕೆ ಯಾವುದೆಂದರೆ ಪ್ರಪ್ರಥಮವಾಗಿ ಸಿಂಥಿ, ಗುರುಮುಖಿ, ಸಿಂಹಳ ವಿದೇಶ ಭಾಷೆಗಳಲ್ಲಿಯೂ ಪ್ರಕಟವಾಗತೊಡಗಿತು.
1978ರಲ್ಲಿ ಸಂಸ್ಕೃತ ಭಾಷೆಯಲ್ಲಿಯೂ ಚಂದಮಾಮವನ್ನು ಆರಂಭಿಸಲಾಗಿತ್ತು. 2004ರಲ್ಲಿ ಮಕ್ಕಳಿಗಾಗಿ ಬುಡಕಟ್ಟು ಭಾಷೆಯಲ್ಲಿ ಪ್ರಕಟಣೆ ಆರಂಭಿಸಿದ ಕೀರ್ತಿಗೆ ಭಾಜನವಾದದ್ದೂ ಚಂದಮಾಮ. 1981ರಲ್ಲಿ ಅಂಧರಿ ಗಾಗಿ ಬ್ರೈಲ್ ಎಡಿಷನ್ ಅನ್ನು ಹೊರ ತರಲು ಆರಂಭಿಸಿತ್ತು. ಆ ಮಟ್ಟದಲ್ಲಿ ಬೆಳೆದ ಹೆಮ್ಮೆ ಚಂದಮಾಮ ಕಾಮಿ ಕ್ಸ್‌‌ನದ್ದು.
ಹೀಗೆ ಚಂದಮಾಮ ತನ್ನ ಅರವತ್ತು ಸಂವತ್ಸರಗಳ ಯಶೋಗಾಥೆಯಲ್ಲಿ ಏರಿದ ಎತ್ತರ ಮಾತ್ರ ಆಗಾಧ ವಾದದ್ದು, 2003ರಲ್ಲಿ ಸಿಂಗಾಪುರದಲ್ಲಿ ಇಂಗ್ಲಿಷ್-ತಮಿಳ್ (ಸಿಂಗಾಪುರದಲ್ಲಿ ಅಂಬುಲಿಮಾಮಾ ಎಂಬ ಹೆಸರಿನಲ್ಲಿ ಪ್ರಕಟಣೆ ಕಾಣುತ್ತಿದ್ದು, ಇದನ್ನು ಅಲ್ಲಿನ ತಮಿಳು ಟಿಚರ್ಸ್ ಯೂನಿಯನ್ ಪುಸ್ತಕ ಹೊರತರುವ ಜವಾಬ್ದಾರಿ ವಹಿಸಿಕೊಂಡಿದೆ). ಭಾಷೆಯಲ್ಲಿ, ಉತ್ತರ ಅಮೆರಿಕದಲ್ಲಿ ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ಗುಜರಾತಿ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ.
ಸುಮಾರು 3 ಲಕ್ಷಕ್ಕೂ ಅಧಿಕ ಓದುಗರನ್ನು ಪಡೆದಿರುವ ಚಂದಮಾಮ, ಅಂದಾಜು ಏಳು ಲಕ್ಷ ಪ್ರಸಾರ ಸಂಖ್ಯೆ ಯನ್ನು ಹೊಂದಿದೆ. ಅಲ್ಲದೇ ಚಂದಮಾಮ ದೀರ್ಘಕಾಲ ಪ್ರಕಟಣೆ ಕಂಡ ಮಕ್ಕಳ ಮ್ಯಾಗಜೀನ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಲ್ಲದೆ, 2002ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲೂ ದಾಖಲೆ ಬರೆದಿದೆ. ಆದರೂ ನಮ್ಮನ್ನೆಲ್ಲ ಸಾಹಿತ್ಯದೆಡೆಗೆ ದೂಡಿದ, ಅರವತ್ತು ವರ್ಷಗಳನ್ನು ಪೂರೈಸಿದ ಚಂದಮಾಮಕ್ಕೊಂದು ಶುಭ ಹಾರೈಕೆ......

Sunday, May 4, 2008

ಆಶ್ವಾಸನೆಗಳ ಭರವಸೆಯಲ್ಲಿ ಕೊಚ್ಚಿಹೋದ ಮತದಾರ !!

ಕರ್ನಾಟಕ ರಾಜ್ಯ ರಾಜಕಾರಣದಲ್ಲೀಗ ಮತದಾರರಿಗೆ ಭರವಸೆಗಳ ಸುಗ್ಗಿ ಕಾಲ...ಶತಾಯಗತಾಯ ಅಧಿಕಾರದ ಗದ್ದುಗೆ ಏರಲೇ ಬೇಕೆಂಬ ಹಂಬಲ ಚುನಾವಣಾ ಅಖಾಡದಲ್ಲಿರುವವರದ್ದಾದರೆ, ರಾಜ್ಯದ ಸೂತ್ರವನ್ನು ಹಿಡಿಯುವಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಇನ್ನಿಲ್ಲದ ಪೈಪೋಟಿ ನಡೆಯುತ್ತಿದೆ.

ಭರ್ಜರಿ ಪ್ರಚಾರದೊಂದಿಗೆ ಮತದಾರರ 'ಬೇಟೆಗೆ' ಇಳಿದಿರುವ ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ ಮೊದಲಿಗೆ ರೈತರನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇಂದಿರಾ ಆವಾಜ್ ಯೋಜನೆಯಡಿಯಲ್ಲಿ ರೈತರ ಸಾಲ ಮನ್ನಾ, ಪ್ರತಿ ಹಸಿರು ಕಾರ್ಡ್ ಹೊಂದಿರುವವರಿಗೆ 2ರೂ.ಗೆ ಅಕ್ಕಿ, ಕಲರ್ ಟಿವಿ, ಹಸಿರು ಕಾರ್ಡ್‌‌ದಾರರಿಗೆ ಯಶಸ್ವಿನಿ ಯೋಜನೆ ವಿಸ್ತರಣೆ, ನಿರುದ್ಯೋಗಿಗಳಿಗೆ 2ವರ್ಷ ತರಬೇತಿ, ಮಾಸಿಕ ಭತ್ಯೆ ಸೇರಿದಂತೆ ಇನ್ನಿತರ ಭರವಸೆ ನೀಡಿದೆ.

ಕೇಂದ್ರ ಸರಕಾರ ಕೂಡ ಈ ಬಾರಿ ಬಜೆಟ್‌‌ನಲ್ಲಿ ರೈತರ 60ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಘೋ ಷಿಸಿದೆ. ಇವೇ ಅಸ್ತ್ರಗಳನ್ನು ಬಳಸಿಕೊಂಡು ಕಾಂಗ್ರೆಸ್, ರಾಜ್ಯದಲ್ಲಿಯೂ ರೈತರನ್ನ ಗಮನದಲ್ಲಿಟ್ಟು ಕೊಂಡು, ಅಕ್ಕಿ. ಟಿವಿಗಳ ಆಮಿಷದ ಮೂಲಕ ಮತದಾರರನ್ನು ಸೆಳೆಯಲು ಹೊರಟಿದೆ. ಆ ಕಾರಣಕ್ಕಾಗಿಯೇ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರು ರಾಜ್ಯರಾಜಕಾರಣದಲ್ಲಿ ಪಾಂಚಜನ್ಯ
ಮೊಳಗಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಲಿಂಗಾಯಿತ ಮತ್ತು ಒಕ್ಕಲಿಗ ಮತ ಮತ್ತು ಹಿಂದುಳಿದ ಮತಗಳೇ ನಿರ್ಣಾಯಕವಾ ಗಿದ್ದರಿಂದ, ದೇವೇಗೌಡರಿಗೆ ಎದುರಾಳಿಯಾಗಿ ಕೃಷ್ಣರನ್ನು ಅಖಾಡಕ್ಕೆ ಇಳಿಸಲಾಗಿದೆ. ಎಸ್.ಎಂ.ಅವರು ತಮ್ಮ ಅಧಿಕಾರಾವಧಿಯಲ್ಲಿ ಹೈಟೆಕ್ ಮಂತ್ರ ಜಪಿಸುತ್ತಿದ್ದರು. ಈಗ ಅಕ್ಕಿ, ಅನ್ನ ದಾಸೋಹ, ರೈತರ ಪರ ಮುಖವಾಡದೊಂದಿಗೆ ಪ್ರಚಾರಕ್ಕೆ ಇಳಿದಿದ್ದಾರೆ.

ಆದರೆ ಇದೇ ಎಸ್.ಎಂ.ಕೃಷ್ಣರ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ತಲೆದೋರಿದ ಬಿಕ್ಕಟ್ಟು, ಬರಗಾಲದಿಂದಾಗಿ ಕಂಗೆಟ್ಟ ಸುಮಾರು ನೂರಾರು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಸೌಜನ್ಯಕ್ಕಾದರೂ ಭೇಟಿ ನೀಡಿದ್ದೀರಾ ಎಂಬ ಮಾತನ್ನು ಮಾಧ್ಯಮದವರು ಕೇಳಿದಾಗ, ಅದಕ್ಕೆ ಉಡಾಫೆಯ ಉತ್ತರ ನೀಡಿದ್ದರು. ತೆಂಗಿನ ಮರಗಳಿಗೆ ತಗುಲಿದ ನುಸಿ ರೋಗ ನಿವಾರಣೆ ಹೆಸರಲ್ಲಿ ಕೋಟ್ಯಂತರ ರೂಪಾಯಿ ಗುಳುಂ ಮಾಡಲಾಗಿತ್ತು.

ನುಸಿರೋಗದಿಂದ ತತ್ತರಿಸಿದ ರೈತರು ''ನೀರಾ'' ತೆಗೆಯಲು ಮುಂದಾದವರ ಮೇಲೆ ಗೋಲಿಬಾರ್ ನಡೆಸಿದ್ದು ಕೃಷ್ಣ ನೇತೃತ್ವದ ಸರಕಾರ. ಈಗ ಅಧಿಕಾರದ ಗದ್ದುಗೆಗಾಗಿ ರೈತರನ್ನ ಮುಂದಿಟ್ಟುಕೊಂಡು ಮತಯಾಚನೆಗೆ ಹೊರಟಿದ್ದಾರೆ.ಆಶ್ವಾಸನೆಗಳು ಕೊಡಲು ಹಣ ಕೊಡಬೇಕೆಂದಿಲ್ಲ, ಮತ್ತು ಆಶ್ವಾಸನೆ ನೀಡುವುದು ಅಪರಾಧವೂ ಅಲ್ಲ!!

ಕಳೆದ ಚುನಾವಣೆಯಲ್ಲೂ ಧರಂಸಿಂಗ್ ಅಧಿಕಾರಕ್ಕೆ ಏರುವ ಮುನ್ನು ನಿರುದ್ಯೋಗಿಗಳಿಗೆ ಭತ್ಯೆಯ ಆಶ್ವಾಸನೆ ನೀಡಿತ್ತು. ಬಳಿಕ ಮೈತ್ರಿ ಸರಕಾರ ರಚನೆಗೊಂಡಾಗ ಅದರ ಮಾತೇ ಇಲ್ಲ, ಆಗ ನಮ್ಮನ್ನು ನೀವು ಪೂರ್ಣಪ್ರಮಾಣದಲ್ಲಿ ಬೆಂಬಲಿಸಿಲ್ಲದ ಕಾರಣ ಆಶ್ವಾಸನೆ ಈಡೇರಿಕೆ ಮಾಡಲು ಸಾಧ್ಯವಿಲ್ಲ ಎಂದು ಧರಂ ಗರಂ ಆಗಿ ಹೇಳಿದ್ದರು.ಅಷ್ಟಕ್ಕೂ ಟಿವಿ, 2 ರೂ.ಅಕ್ಕಿ, ಸಾಲ ಮನ್ನಾ ಅಂತ ಸಾಲು, ಸಾಲು ಪಟ್ಟಿ ನೀಡುತ್ತಾರೆ, ಹಾಗಂತ ಅವರ ಆಸ್ತಿಯ ಹಣ ಸುರಿದು ಸಾಲ ಮನ್ನಾ, ಟಿವಿ ಖರೀದಿ ಮಾಡುವುದಿಲ್ಲ, ಅವೆಲ್ಲವೂ ಮತ್ತೆ ಸರಕಾರ ಬೊಕ್ಕಸಕ್ಕೆ ಖೋತಾ!!.

ಅಧಿಕಾರದ ಗದ್ದುಗೆ ಏರುವ ಮುನ್ನಾ ನೂರೆಂಟು ಆಶ್ವಾಸನೆ ಕೊಟ್ಟು, ಬಳಿಕ ಅಧಿಕಾರಕ್ಕೆ ಏರಿ ಆಶ್ವಾಸನೆ ಈಡೇರಿಸಿದರೂ ಅದು ಜನಸಾಮಾನ್ಯರಿಗೆ ಹೊರೆಯಾಗುತ್ತ ಹೋಗುತ್ತದೆ. ಕಳೆದ 50ವರ್ಷಗಳಿಂದ ಕಾಂಗ್ರೆ ಸ್ ದೇಶವನ್ನು ಲೂಟಿ ಮಾಡಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ಕೇವಲ 20 ತಿಂಗಳ ಅಧಿಕಾರದ ಅವಧಿ ಯಲ್ಲೇ ಕಾಂಗ್ರೆಸ್ ಅನ್ನು ಮೀರಿ ಬೆಳೆದಿದೆ ಎನ್ನುವುದಕ್ಕೆ ಈ ಬಾರಿ ಚುನಾವಣೆಯಲ್ಲಿ ಅದರ ನಿಲುವು ಗಮನಿಸಿದರೆ ತಿಳಿಯುತ್ತದೆ. ಲ್ಯಾಂಡ್ ಮಾಫಿಯಾ, ಗಣಿ ದೊರೆಗಳಿಗೆ ಮಣೆ ಹಾಕುವ ಮೂಲಕ ಕೋಟ್ಯಾಧೀಶ್ವರರು ಜನಪ್ರತಿನಿಧಿಗಳಾಗಲು ಹೊರಟಿದ್ದಾರೆ.

ಹಾಗಾದರೆ ಇವರಿಗೆಲ್ಲಾ ಜನಸೇವೆಯ ಮೇಲೆ ಅಷ್ಟೊಂದು ಕಾಳಜಿಯಾ ಅಥವಾ ಅವರ ಸ್ವ ರಕ್ಷಣೆಗಾಗಿ ಅಧಿಕಾರದ ಬೆನ್ನತ್ತಿ ಹೊರಟಿದ್ದಾರೋ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ.ಅಪ್ಪ-ಮಕ್ಕಳ ಪಕ್ಷ ಕಳ್ಳರದ್ದು, ಭೂ ಕಬಳಿಕೆ ಮಾಡುತ್ತಾರೆ ಎಂದೆಲ್ಲಾ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದ ಬಿಜೆಪಿಯ ಯಡಿಯೂರಪ್ಪ ಅವರು ಭ್ರಷ್ಟರಿಗೆ, ಕ್ರಿಮಿನಲ್, ಭೂ ಕಳ್ಳರಿಗೆ ರೆಡ್ ಕಾರ್ಪೆಟ್ ಹಾಸಿ ಪಕ್ಷದಲ್ಲಿ ಸೀಟು ಕೊಟ್ಟಿದ್ದಾರೆ.

ಅಷ್ಟೇ ಅಲ್ಲಾ ಬಿಜೆಪಿ ಕೂಡ ಕಾಂಗ್ರೆಸ್ ಪ್ರಣಾಳಿಕೆಯಂತೆ ರೈತರಿಗೆ ಉಚಿತ ವಿದ್ಯುತ್, ಕಲರ್ ಟಿವಿ, ಬಡವರಿಗೆ 2ರೂ.ಅಕ್ಕಿ, ಆಶ್ರಯ, ಇಂದಿರಾ ಅವಾಜ್ ಗೃಹ ಸಾಲಮನ್ನಾ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.ಯಾವ ಪಕ್ಷದಲ್ಲೂ ಸಿದ್ದಾಂತ, ನೈತಿಕತೆ ಉಳಿದಿಲ್ಲ, ಭರವಸೆಗಳ ಮೂಟೆಯೊಂದಿಗೆ ಮತದಾರರ ಮುಂದೆ ಕೈಮುಗಿಯುವ ಜನಪ್ರತಿನಿಧಿಗಳು ಅಧಿಕಾರದ ಗದ್ದುಗೆ ಏರಿದ ಮೇಲೆ ''ಕೈ'' ಕೊಡುವ ಚಾಳಿಯನ್ನು ಮತದಾರರ ನೋಡಿ,ನೋಡಿ ಸುಸ್ತಾಗಿದ್ದಾನೆ.

ಈಗಾಗಲೇ ರಾಜ್ಯದಲ್ಲಿ ಕೋಟ್ಯಂತರ ರೂಪಾಯಿಯ ಮದ್ಯ, ನಗದು, ಸೀರೆ, ಬಟ್ಟೆಗಳನ್ನು ವಶಪಡಿಸಿಕೊಳ್ಳ ಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಖರ್ಗೆಯ ಹೆಲಿಕ್ಯಾಪ್ಟರ್, ದೇವೇಗೌಡರ ಕಾರು, ಯಡಿಯೂರಪ್ಪನವರ ಕಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಬಿಹಾರ, ಉತ್ತರ ಪ್ರದೇಶ ಚುನಾವಣೆ ಗೂಂಡಾಗಿರಿಯಿಂದ ನಲುಗುತ್ತಿರುವುದನ್ನು ಕೇಳಿದ್ದೇವೆ.

ಆದರೆ ಈ ಬಾರಿ ಚುನಾವಣಾ ಆಯೋಗ ಎಷ್ಟೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಅಕ್ರಮಗಳಿಗೆ ಕಡಿವಾಣ ಹಾಕುವುದು ತುಸು ಕಠಿಣವೇ ಆಗಬಹುದಾದ ಲಕ್ಷಣ ಗೋಚರಿಸತೊಡಗಿದೆ.ವೈಯಕ್ತಿಕ ಪ್ರತಿಷ್ಠೆ, ಅಸಮಾ ಧಾನ, ಪಿತೂರಿ, ಸ್ವಾರ್ಥಗಳ ಸರಮಾಲೆ ಮೂಲಕ ರಾಜ್ಯ ರಾಜಕೀಯದ ಚದುರಂಗದಾಟದಲ್ಲಿ
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್ಪಿ, ಬಿಎಸ್ಪಿ, ಸಿಪಿಐಎಂ ಅಖಾಡ ಇಳಿದಿದ್ದರೆ, ತ್ರಿಶಂಕು ಸ್ಥಿತಿಯಲ್ಲಿರುವ ಮತದಾರನಿಗೆ ಸುಭಗರನ್ನು ಗುರುತಿಸಿ ಆರಿಸುವುದೇ ಒಂದು ದೊಡ್ಡ ಸವಾಲಾಗಿ ಬಿಟ್ಟಿದೆ..........

Monday, April 28, 2008

ಸಂಜೀವ್ ಗಾಂಧಿ ಯಾರು ?!

ಕೆಲವೊಂದು ವಿಚಾರಗಳು ಅನಾವಶ್ಯಕ ಎಂದೆನಿಸಿದರೂ ಕೂಡ, ಕೆಲವೊಮ್ಮೆ ಆಗಾಗ ವಿವಾದಗಳನ್ನು ಹುಟ್ಟು ಹಾಕುತ್ತಲೇ ಇರುತ್ತದೆ, ಇಂದಿಗೂ ಸುಭಾಶ್ಚಂದ್ರ ಬೋಸ್ ಅವರ ಸಾವಿನ ಪ್ರಕರಣ, ಲಾಲ್ ಬಹದ್ದೂರ್ ಶಾಸ್ತ್ರಿಗಳ ನಿಧನ, ಗಾಂಧಿ ನಿಲುವಿನ ಬಗ್ಗೆ, ಸಂಜಯ್ ಗಾಂಧಿ ಬಲಿ, ಸಾವರ್‌‌ಕರ್ ದೇಶಪ್ರೇಮ ಹೀಗೆ....

ಅದರಲ್ಲೂ ಗಾಂಧಿ ಕುಟುಂಬದ ಬಗ್ಗೆ ನೆಹರೂ ಕುರಿತು, ಇಂದಿರಾ ಬಗ್ಗೆ ಈಗಾಗಲೇ ಸಾಕಷ್ಟು ವಾದ-ವಿವಾದಗಳು ನಡೆಯುತ್ತಲೇ ಇದೆ, ಇತ್ತೀಚೆಗೆ ನನ್ನ ಎದುರಿಗೆ ಧುತ್ತನೇ ಸಂಜಯ್ ಗಾಂಧಿ ಬಗ್ಗೆ ಪ್ರಶ್ನೆ ಎಸೆದಾಕೆ ರಶ್ಮಿ ಪೈ, ಆಕೆ ಗಾಂಧಿ ಕುಟುಂಬದ ತಲೆಮಾರಿನ ಹೆಸರನ್ನು ನೋಡುತ್ತಿದ್ದಾಗ, ಅಲ್ಲಿ ಸಂಜಯ್ ಗಾಂಧಿ ಮುಂದೆ ಮೊಹಮ್ಮದ್ ಯೂನುಸ್ ಅಂತ ದಾಖಲಿಸಲಾಗಿತ್ತು. ಸಂಜಯ್‌‌‌ಗೂ - ಯೂನುಸ್‌‌ಗೂ ಏನು ಸಂಬಂಧ, ಇದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಯಾವ ಸಂಬಂಧ ಎಂಬಂತೆ, ಇದರ ಹಿಂದಿನ ರಹಸ್ಯ ಈಗಾಗಲೇ ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ.

ಆದರೂ ಆ ಹೆಸರಿನ ಹಿಂದಿನ ಇರುವ ರಹಸ್ಯವಾದರು ಏನು, ಹಾಗಾದರೆ ಯಾವ ಸಂಬಂಧ....ಎಂಬುದಕ್ಕಿಂತ ಸ್ವಲ್ಪ ವಿವರವಾಗಿ ನೆಹರು ವಂಶದ ಬಗ್ಗೆ ರಾವ್ ಅವರು ದಾಖಲಿಸಿದ ವಿವರಗಳನ್ನು ಓದುತ್ತಾ ಹೋದರೆ ನಿಮಗೆ ತಿಳಿಯುತ್ತೆ...ಇಂದಿಗೂ ಸಂಜಯ್ ಗಾಂಧಿಯನ್ನು ತಾಯಿ ಇಂದಿರಾಳೇ ಕೊಲೆ ಮಾಡಿಸಿದ್ದಾರೆ, ಆತನ ಬಳಿ ಇದ್ದ ರಿಸ್ಟ್ ವಾಚ್ ಏನಾಯಿತು ಎಂಬಂತಹ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದಿರುವಂತೆ ಇವತ್ತಿಗೂ ಅಂತಹ 'ಚಿದಂಬರ ರಹಸ್ಯ'ದೆಡೆಗೊಂದು ಕುತೂಹಲ ಎಲ್ಲರಲ್ಲಿಯೂ ಇದೆ.ಕೆ.ಎನ್.ರಾವ್ ಅವರು ಬರೆದ ' ನೆಹರು ವಂಶ ' ಪುಸ್ತಕದಲ್ಲಿ ಅವರೇ ಬರೆದಿರುವಂತೆ, ಜವಾಹರಲಾಲ್ ನೆಹರು ಅವರ ಏಕೈಕ ಪುತ್ರಿ ಇಂದಿರಾ ಪ್ರಿಯದರ್ಶಿನಿ ನೆಹರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ.

ಕಮಲ ನೆಹರು ಇಂದಿರಾ ತಾಯಿ, ಆಕೆ ತೀರಿಕೊಂಡಿದ್ದು ಸ್ವಿಡ್ಜ್‌‌ರ್‌‌ಲ್ಯಾಂಡ್‌‌ನಲ್ಲಿ. ನೆಹರು ಪ್ರೀತಿಯ ಮಗಳು ಇಂದಿರಾಳ ಮದುವೆ ಗೆ ಮಾತ್ರ ಕಮಲ ನೆಹರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು,ಯಾಕೆ ಫಿರೋಜ್ ಜತೆಗಿನ ಮದುವೆಗೆ ವಿರೋಧ ವ್ಯಕ್ತಪಡಿ ಸಲಾ ಯಿತು, ಫಿರೋಜ್ ಯಾರು? ಆತ ಕಿರಾಣಿ ಅಂಗಡಿ ವರ್ತಕನ ಮಗನಾಗಿದ್ದ, ವೈನ್ ಸಪ್ಲೈಯ್‌‌ರ್ ಮಗನಾಗಿದ್ದ ಹೀಗೆ ನಾನಾ ರೀತಿಯಲ್ಲಿ ಫಿರೋಜ್‌‌ನನ್ನು ಗುರುತಿಸಲಾಗಿತ್ತು. ರಾಜೀವ್ ಅಜ್ಜನ ಹೆಸರು ಪಂಡಿತ್ ಜವಾಹರಲಾಲ್ ನೆಹರು, ಎಲ್ಲರಿಗೂ ತಿಳಿದಿರುವಂತೆ ಇಬ್ಬರು ಅಜ್ಜಂದಿರು ಇರುತ್ತಾರೆ, ಒಂದು ತಂದೆಯ ತಂದೆ, ಇನ್ನೊಂದು ತಾಯಿಯ ತಂದೆ.

ಹೆಚ್ಚಿನ ಸಮಾಜದಲ್ಲಿ ತಂದೆಯ ತಂದೆಗೆ ಹೆಚ್ಚಿನ ಸ್ಥಾನಮಾನ. ಹಾಗಾದರೆ ರಾಜೀವ್ ಅಜ್ಜನ ಹೆಸರೇನು ಎಂಬುದಾಗಿ ಕೆ. ಎನ್. ರಾವ್ ನೆಹರು ವಂಶ ಪುಸ್ತಕದ ಲೇಖನದಲ್ಲಿ ಪ್ರಶ್ನಿಸುತ್ತಾರೆ. ನಿಜಕ್ಕೂ ರಾಜೀವ್ ಗಾಂಧಿ ಮತ್ತೊಬ್ಬ ಅಜ್ಜ(ತಂದೆಯ ತಂದೆ) ಮುಸ್ಲಿಂ, ಆತ ಗುಜರಾತ್ ಜುನಾಗಢ್ ಪ್ರದೇಶದ 'ಜಂಟಲ್‌‌ಮೆನ್" ಆಗಿದ್ದರು.ಅವರ ಹೆಸರು ನವಾಬ್ ಖಾನ್ ಅವರು ಮದುವೆ ಯಾಗಿದ್ದು ಪಾರ್ಸಿ ಮಹಿಳೆಯನ್ನ, ವಿವಾಹದ ನಂತರ ಆಕೆಯನ್ನು ಇಸ್ಲಾಂಗೆ ಮತಾಂತರಿಸಲಾಯಿತು.

ಹೀಗೆ ಸಾಗುವ ನೆಹರು ವಂಶ ಪುರಾಣ ಕಥನ, ರಾಜೀವ್ ತಂದೆ ಫಿರೋಜ್, ಇಂದಿರಾ ಗಾಂಧಿಯನ್ನು ಮದುವೆಯಾಗುವ ಮುನ್ನ ಫಿರೋಜ್ ಖಾನ್ ಆಗಿದ್ದರು. ಫಿರೋಜ್ ತಾಯಿ ಕುಟುಂಬದ ಹೆಸರು ಗಾಂಡಿ, ಈ ಹೆಸರನ್ನು ಇಂದಿರಾ ಮದುವೆ ಬಳಿಕ ಗಾಂಧಿ ಎಂದು ಬದಲಾಯಿಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧಿ!!.ಚಂಚಲ ಚಿತ್ತದ ಇಂದಿರಾಗೆ ಆಪ್ತರಾಗುತ್ತ ಹೋದವರು ಫಿರೋಜ್ ಖಾನ್, ಬಳಿಕ ಆಕೆಯನ್ನು ಲಂಡನ್‌‌ನ ಮಸೀದಿಯಲ್ಲಿ ವಿವಾಹವಾಗಿದ್ದರು.

ಇದು ನೆಹರುಗೆ ನುಂಗಲಾರದ ತುಪ್ಪವಾಗಿತ್ತು.ಫಿರೋಜ್ ಮದುವೆಯ ಬಳಿಕ ಇಂದಿರಾ ಹೆಸರು ಕೂಡ ಮೈಮುನಾ ಬೇಗಂ ಎಂ ದಾಗಿತ್ತು, ಅಷ್ಟೇ ಅಲ್ಲ ಆಕೆ ಮುಸ್ಲಿಂರಂತೆಯೇ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದರು. ಫಿರೋಜ್ ಇಂದಿರಾಗಾಂಧಿಯನ್ನು ಲಂಡನ್ ಮಸೀದಿಯಲ್ಲಿ ಮದುವೆಯಾಗಿದ್ದು, ನೆಹರು ಅವರನ್ನು ಕೆಂಡಮಂಡಲರನ್ನಾಗಿಸಿತ್ತು. ಆದರೆ ಅವರಿಬ್ಬರು ಭಾರತಕ್ಕೆ ಹಿಂದಿರುಗಿದ ಕೂಡಲೇ ವೈದಿಕ ಸಂಪ್ರದಾಯದಲ್ಲಿ ಮದುವೆಯಾದಂತೆ ಎಲ್ಲ ಪತ್ರಿಕೆಗಳಲ್ಲೂ ಫೋಟೋ ಪ್ರಕಟಿಸಲಾಗಿತ್ತು. (ಈ ಮೊದಲೇ ಅವರಿಬ್ಬರು ಲಂಡನ್ ಮಸೀದಿಯಲ್ಲಿ ಮದುವೆಯಾದ ಫೋಟೋವನ್ನು ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯೊಂದು ಪ್ರಕಟಿಸಿತ್ತು).

ಇಂತಹ ಸಂಗತಿಗಳನ್ನೇ ನೆಹರು ರಹಸ್ಯವಾಗಿಡುವಲ್ಲಿ ತುಂಬಾ ಮುತುವರ್ಜಿ ವಹಿಸುತ್ತಿದ್ದರು, ಅದರಂತೆಯೇ ಫಿರೋಜ್-ಇಂದಿರಾ ಪುತ್ರರಾದ ರಾಜೀವ್, ಸಂಜಯ್ ಬಗೆಗೂ ಅನುಮಾನದ ಹುತ್ತಗಳು ಸುತ್ತುತ್ತಲೇ ಇವೆ.ಇಂದಿರೆಯ ಆಡಳಿತ ಅವಧಿಯಲ್ಲಿ ಸಂಜಯ್ ರಾಜಕೀಯ ಶಕ್ತಿಯನ್ನು ದುರ್ಬಳಕೆ ಮಾಡಿಕೊಂಡಿದ್ದ. ಅಲ್ಲದೇ ಕಾರು ಕದ್ದು ಸಿಕ್ಕಿ ಬಿದ್ದ ಸಂಜಯ್‌‌ನನ್ನು ರಕ್ಷಿಸಲು ಇಂದಿರಾ ಮತ್ತು ಸಹೋದ್ಯೋಗಿಗಳು ಇನ್ನಿಲ್ಲದಂತೆ ಶ್ರಮಿಸಿದ್ದರು.ಸಂಜಯ್ ಗಾಂಧಿ ನಿಜವಾದ ಹೆಸರು ಸಂಜೀವ್ ಗಾಂಧಿ, ಈತ ಯುಕೆಯಲ್ಲಿ ಕಾರು ಕದ್ದು ಸಿಕ್ಕಿ ಬಿದ್ದಿದ್ದು, ಅಲ್ಲಿ ಆತನ ಪಾಸ್‌‌ಫೋರ್ಟ್ ಅನ್ನು ವಶಪಡಿಸಿಕೊಂಡಿದ್ದರು.

ನಂತರ ಯುಕೆಯಲ್ಲಿ ಭಾರತದ ರಾಯಭಾರಿಯಾಗಿದ್ದ ನೆಹರು ಆಪ್ತಮಿತ್ರ ಕೃಷ್ಣಮೆನನ್ ಅವರು ಸಂಜಯ್ ಎಂಬ ಹೆಸರಲ್ಲಿ ಹೊಸ ಪಾಸ್‌‌ಫೋರ್ಟ್ ಮಾಡಿಕೊಟ್ಟಿದ್ದರು.ಎಲ್ಲಕ್ಕಿಂತ ಹೆಚ್ಚಾಗಿ ಸಂಜಯ್ ಇಂದಿರಾಗಾಂಧಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ, ಅಲ್ಲದೇ ಪರೋಕ್ಷವಾಗಿ ಸರಕಾರವನ್ನೇ ಹಿಡಿತಲ್ಲಿ ಇಟ್ಟುಕೊಂಡಿದ್ದ, ಆತ ರಾಷ್ಟ್ರವನ್ನು ತನ್ನ ಸ್ವಂತದ ಆಸ್ತಿ ಎಂಬಂತೆ ವರ್ತಿಸುತ್ತಿದ್ದ. ಅಷ್ಟಾಗಿಯೂ ಇಂದಿರೆ ಪುತ್ರ ವ್ಯಾಮೋಹಕ್ಕೆ ಒಳಗಾಗಿ ಗಾಂಧಾರಿಯಂತೆ ಕಣ್ಣಿದ್ದು ಕುರುಡರಾಗಿದ್ದರು.ಇದಕ್ಕೆಲ್ಲಾ ಅಸ್ತ್ರ ಎಂಬಂತೆ ಸಂಜಯ್ ತಾಯಿ ಇಂದಿರೆಯನ್ನು ಅಂಗೈಯಲ್ಲಿಟ್ಟ ಬುಗುರಿಯಂತೆ ತಿರುಗುಸುತ್ತಿದ್ದ, ಮತ್ತೆ ಪದೇ, ಪದೇ ಅದೇ ಮಾತನ್ನು ಕೇಳುತ್ತಿದ್ದ ಹೇಳು ನನ್ನ ನಿಜವಾದ ಅಪ್ಪ ಯಾರು ಅಂತ ??

ಇಂದಿರಾ ಪತಿ ಫಿರೋಜ್ ಖಾನ್‌‌ ಅವರನ್ನು ಪ್ರಧಾನಿ ನಿವಾಸ ತೀನ್‌‌‌ಮೂರ್ತಿ ಭವನದೊಳಗೆ ಕಾಲಿಡದಂತೆ ನೆಹರು ಕಟ್ಟಪ್ಪಣೆ ಹೊರಡಿಸಿದ್ದರು. ಇಂತಹ ಜಂಜಾಟಗಳ ನಡುವೆ ಇಂದಿರಾ ಮತ್ತು ಫಿರೋಜ್ ಕಾನೂನು ಬದ್ಧವಾಗಿ ಅಲ್ಲದಿದ್ದರೂ ಅವರು ಪ್ರತ್ಯೇಕವಾಗಿಯೇ ವಾಸಿಸತೊಡಗಿದ್ದರು. 1960ರಲ್ಲಿ ಫಿರೋಜ್ ಸಾವನ್ನಪ್ಪಿದ್ದರು ಕೂಡ ಈ ಸಾವು ಕೂಡ ಇಂದಿಗೂ ನಿಗೂಢವಾಗಿಯೇ ಉಳಿದಿದೆ.ಸಂಜಯ್ ಗಾಂಧಿ ಫಿರೋಜ್ ಗಾಂಧಿ ಮಗನಲ್ಲ ಆತ ಮತ್ತೊಬ್ಬ ಮುಸ್ಲಿಂ ಜಂಟಲ್ ಮೆನ್ ಆಗಿದ್ದ ಮೊಹಮ್ಮದ್ ಯೂನಿಸ್ ಪುತ್ರ ಎಂಬ ವಾಸ್ತವ ಸಂಗತಿ ಸಂಜಯ್ ತಿಳಿದುಹೋಗಿತ್ತು.

ಅಲ್ಲದೇ ಯೂನಿಸ್‌‌ಗೆ ಸಂಜಯ್ ಸಿಖ್ ಯುವತಿ ಮೇನಕಳಾನ್ನು ಮದುವೆಯಾಗುವುದು ಇಷ್ಟ ಇಲ್ಲವಾಗಿತ್ತು. ಅಷ್ಟರಲ್ಲಾಗಲೇ ಸಂಜಯ್ ಕರ್ನಲ್ ಆನಂದ್ ಎಂಬವರ ಮಗಳನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ, ಆಕೆಯನ್ನೇ ಮದುವೆಯಾಗ ಬೇಕು ಎಂದು ಕರ್ನಲ್ ಸಂಜಯ್‌ಗೆ ಬೆದರಿಕೆ ಕೂಡ ಒಡ್ಡಿದ್ದರು. ಆದರೆ ಸಂಜಯ್ ಮೇನಕಳನ್ನು ವರಿಸಿಬಿಟ್ಟಿದ್ದ.

ಸಂಜಯ್ ಮುಸ್ಲಿಂ ಯುವತಿಯನ್ನೇ ಮದುವೆಯಾಗಬೇಕು ಎಂದು ಹಂಬಲಿಸಿದ್ದರು. ಸಂಜಯ್ ವಿಮಾನ ಅಪಘಾತದಲ್ಲಿ ತೀರಿ ಕೊಂಡಾಗ ಯೂನುಸ್ ವೇದನೆಗೊಳಗಾಗಿರುವುದಾಗಿ ಯೂನುಸ್ ತಮ್ಮ ವ್ಯಕ್ತಿ,ಮೋಹ ಮತ್ತು ರಾಜಕೀಯ ಎಂಬ ಪುಸ್ತಕದಲ್ಲಿ ದಾಖಲಿಸಿರುವುದಾಗಿ ನೆಹರು ಅವರ ದೀರ್ಘಕಾಲದ ಖಾಸಗಿ ಕಾರ್ಯದರ್ಶಿಯಾಗಿದ್ದ ಎಂ.ಒ.ಮಥಾಯ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.ಹೀಗೆ ನೆಹರು ಕಾಲದ ನೆನಪು (ರಿಮಿನಿಸೆಸ್ಸ್ ಆಫ್ ದಿ ನೆಹರು ಏಜ್ ) ಎಂಬ ಪುಸ್ತಕದಲ್ಲಿ ಎಸ್.ಒ.ಮಥಾಯ್ ಅವರು ಇಂತಹ ಹಲವಾರ ರಹಸ್ಯಗಳನ್ನು ಹೊರಗೆಡಹಿದ್ದರು. ಆದರೆ ಭಾರತ ಸರಕಾರ ಆ ಪುಸ್ತಕವನ್ನು ನಿಷೇಧಿಸಿತ್ತು!!.

Thursday, April 3, 2008

ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ

ಇತ್ತೀಚೆಗೆ ಜೈತ್ರಯಾತ್ರೆ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬೆಳಗಾವಿ ಯಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ರಾಷ್ಟ್ರೀಯ ಪಕ್ಷಗಳು ದ್ವಂದ್ವ ನೀತಿ ಅನುಸರಿಸುತ್ತವೆ.ಕೇಂದ್ರದಿಂದ ನ್ಯಾಯ ಸಿಗುವುದಿಲ್ಲ. ರಾಜ್ಯಕ್ಕೆ ತಕ್ಕ ಗೌರವ ಸಲ್ಲಬೇಕಾದರೆ ತಮಿಳುನಾಡನ್ನು ಮಾದರಿಯಾಗಿಟ್ಟುಕೊಂಡು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸ ಬೇಕು ಎಂಬುದಾಗಿ ಹೇಳಿದ್ದರು.

ಆದರೆ ರಾಜಕೀಯವಾಗಿ ಕುಮಾರಸ್ವಾಮಿಯವರ ಹೇಳಿಕೆಯನ್ನು ತಿರಸ್ಕರಿಸಬಹುದು ಅಥವಾ ಅವರ ವಿಶ್ವಾಸ ದ್ರೋಹವನ್ನೇ ನೆಪವಾಗಿಟ್ಟುಕೊಂಡು ಹಂಗಿಸಬಹುದು. ನಾವು ಅವೆರಡನ್ನೂ ಬಿಟ್ಟು ರಾಜ್ಯದ ವಿಷಯವನ್ನು ಗಮದಲ್ಲಿಟ್ಟುಕೊಂಡರೆ, ಕುಮಾರಸ್ವಾಮಿಯವರು ಹೇಳಿದ ಮಾತಿನಲ್ಲಿ ಸತ್ಯಾಂಶ ಇದೆ. ಅಲ್ಲದೇ 1996ರ ಬಳಿಕ ಹಲವು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸಿರುವುದನ್ನು ಮನಗಾಣಬೇಕಾಗಿದೆ.

1960ರಲ್ಲಿ ಹಿಂದಿ ವಿರೋಧಿ ಚಳವಳಿಯೊಂದಿಗೆ ಜನ್ಮತಳೆದ ಡಿಎಂಕೆ ಜನಪ್ರಿಯವಾಗುವುದರೊಂದಿಗೆ ರಾಜ ಕೀಯವಾಗಿ ಬಹಳಷ್ಟು ಪ್ರಬಲವಾಯಿತು. 1967ರಲ್ಲಿ ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಬಲವನ್ನು ಕುಗ್ಗಿಸುವ ಮೂಲಕ ಡಿಎಂಕೆಯ ಸಿಎನ್ ಅಣ್ಣಾದೊರೈ ಪ್ರಥಮ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದರು. ಅಣ್ಣಾ ಮರಣಾ ನಂತರ 1969ರಲ್ಲಿ ಕರುಣಾನಿಧಿ ಮುಖ್ಯಮಂತ್ರಿ ಗಾದಿಗೆ ಏರಿದ್ದರು.

ಬಳಿಕ ಕಾಂಗ್ರೆಸ್ ತೊರೆದು ಡಿಎಂಕೆ ಸೇರಿದ್ದ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಎಂ.ಜಿ.ರಾಮಚಂದ್ರನ್(ಎಂಜಿಆರ್) ಕರುಣಾನಿಧಿ ನಡುವಿನ ವಿರಸದಿಂದಾಗಿ 1972ರಲ್ಲಿ ಎಡಿಎಂಕೆ(ನಂತರ ಎಐಎಡಿಎಂಕೆ ಆಗಿದ್ದು) ಅನ್ನು ಹುಟ್ಟು ಹಾಕುವ ಮೂಲಕ ಡಿಎಂಕೆಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಬೆಳೆದಿದೆ. ಇಂದು ತಮಿಳುನಾಡಿನ ಡಿಎಂಕೆ ಕೇಂದ್ರದಲ್ಲಿ ಬಲವಾಗಿ ಧ್ವನಿ ಎತ್ತುವಷ್ಟು ಶಕ್ತವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ತಮಿಳುನಾಡಿನಲ್ಲಿ ಪ್ರತಿ ಮನೆಯಲ್ಲೂ ಗ್ಯಾಸ್ ಸಿಲೆಂಡರ್ (ಪ್ರತಿಮನೆಯಲ್ಲಿ ಟಿವಿ)ಇದೆ, ಇಲ್ಲಿನ ರೈಲು ವ್ಯವಸ್ಥೆ, ಪ್ಲೈ ಒವರ್, ಬಸ್ ಟಿಕೇಟ್ ದರ, ವಿದ್ಯುತ್ ದರ ಎಲ್ಲವೂ ಜನಪರವಾಗಿದೆ.

ಇದು ಸಾಧ್ಯವಾಗಿದ್ದು ಪ್ರಾದೇಶಿಕ ಪಕ್ಷಗಳ ಹೋರಾಟದ ಫಲ. ಅದೇ ರೀತಿಯಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತಕ್ಕೆ ಸೆಡ್ಡು ಹೊಡೆದು 1982 ಮಾರ್ಚ್ 29ರಂದು ತೆಲುಗು ಸಿನಿಮಾರಂಗದ ಖ್ಯಾತ ಚಿತ್ರನಟ ಎನ್.ಟಿ.ರಾಮರಾವ್(ಎನ್‌ಟಿಆರ್) ತೆಲುಗು ದೇಶಂ ಪಕ್ಷವನ್ನು ಸ್ಥಾಪಿಸಿದರು.1984ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 35ಸೀಟುಗಳನ್ನು ಪಡೆದಿತ್ತು. 1999-2004ರಲ್ಲಿ ನಡೆದ 13ನೇ ಲೋಕಸಭಾ ಚುನಾವಣೆಯಲ್ಲೇ ಅದು ನಾಲ್ಕನೇ (29ಸೀಟುಗಳನ್ನು ಗಳಿಸಿತ್ತು) ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ನಂತರ 1996ರಲ್ಲಿ ಚಂದ್ರಬಾಬು ನಾಯ್ಡು ಅವರು ಅಧಿಕಾರಕ್ಕೆ ಬಂದ ಮೇಲೆ ಆಂಧ್ರಪ್ರದೇಶ, ಹೈದರಾಬಾದ್ ಹೆಸರು ಜಾಗತಿಕವಾಗಿ ಬೆಳೆಯಿತು. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ 1969ರಲ್ಲಿ ಕಾಂಗ್ರೆಸ್‌‌ಗೆ ಸೇರ್ಪಡೆಗೊಂಡಿದ್ದ ರಾಮಕೃಷ್ಣ ಹೆಗಡೆಯವರು, ನಂತರದಲ್ಲಿ 1975ರ ತುರ್ತುಪರಿಸ್ಥಿತಿಯಿಂದ ರೋಸಿಹೋದ ಅವರು, ಜನತಾ ಪಕ್ಷವನ್ನು ಸೇರಿದ್ದರು.

ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ಸೇವೇ ಸಲ್ಲಿಸಿದ್ದ, ರಾಮಕೃಷ್ಣ ಹೆಗಡೆ 1983ರಲ್ಲಿ ಬಿಜೆಪಿ ಮತ್ತು ಎಡಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿಯಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ, ಸಾರ್ವಜನಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೀಗೆ ಪ್ರಮುಖ ನಿರ್ಧಾರಗಳು ಜನಪರವಾಗಿದ್ದವು.

ಅಲ್ಲದೆ ಮೌಲ್ಯಾಧಾರಿತ ರಾಜಕಾರಣಿ ಎಂದೆ ಹೆಸರು ಪಡೆದಿದ್ದರು(ಹಗರಣಗಳ ವಿವಾದಗಳಲ್ಲಿ ಸಿಲುಕಿದ್ದು ಕೂಡ ಅಷ್ಟೇ ವಿಪರ್ಯಾಸ) ನಂತರ ಆರೋಪ, ಅಧಿಕಾರ, ಒಳರಾಜಕೀಯ, ಹಗರಣಗಳಿಂದ 1986ರಲ್ಲಿ ರಾಜೀನಾಮೆ ನೀಡಿದ ಹೆಗಡೆ, ನಂತರ ಮತ್ತೆ ಅಧಿಕಾರಕ್ಕೆ ಬಂದ ಅವರು 1988ರವರೆಗೆ ಮುಖ್ಯಮಂತ್ರಿ ಯಾಗಿದ್ದರು. ಬಳಿಕ ರಾಷ್ಟ್ರೀಯ ನವನಿರ್ಮಾಣ ವೇದಿಕೆ,ನಂತರ ಲೋಕಶಕ್ತಿಯನ್ನು ಹುಟ್ಟುಹಾಕಿದರು ಕೂಡ ಅದು ದುರ್ಬಲಗೊಂಡಿತ್ತು.

ಆದರೆ ಇಂದು ಜನತಾಪಕ್ಷ ಒಡೆದು, ಒಡೆದು ಅವುಗಳೇ ತಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದಿಕೊಂಡಿರುವುದು ಹಾಗೂ ಸಮಾಜವಾದಿಗಳಾಗಿ, ಕಾಂಗ್ರೆಸ್ ವಿರೋಧಿ ಧೋರಣೆ ಹೊಂದಿದ್ದ ನಾಯಕರುಗಳೇ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ದುರಂತವಲ್ಲದೆ ಇನ್ನೇನು. ಇವತ್ತು ಕರ್ನಾಟಕದ ಪ್ರತಿಯೊಂದು ಸಮಸ್ಯೆಗೂ ನಮ್ಮ ರಾಜಕಾರಣಿಗಳು ಕೇಂದ್ರದಲ್ಲಿ ಹ್ಯಾಪು ಮೋರೆ ಹಾಕಿಕೊಳ್ಳವಂತಾಗಿದೆ.

ಅದೇ ತಮಿಳುನಾಡು ವಿಷಯಕ್ಕೆ ಬನ್ನಿ ಕಾವೇರಿ ವಿವಾದ, ಹೊಗೇನಕಲ್ ವಿವಾದ, ವಿದ್ಯುತ್ ಸರಬರಾಜು ಯಾವುದೇ ಇರಲಿ ತನ್ನ ರಾಜ್ಯದ ಹಿತಾಸಕ್ತಿಯನ್ನು ಬಲಿಗೊಡುವುದಿಲ್ಲ, ಅದ್ಯಾಕೆ ಇತ್ತೀಚೆಗೆ ಮಧುರೈಯಲ್ಲಿ ಸಾಂಪ್ರದಾಯಿಕ ಹೆಸರಲ್ಲಿ ನಡೆಯುವ ಜಲ್ಲಿಕಾಟ್ಟು (ಗೂಳಿಕಾಳಗ)ಗೆ ಸ್ವತಃ ಸರಕಾರವೇ ಸರ್ವೊಚ್ಛನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿ, ಅದರಿಂದ ಯಾರಿಗೂ ಜೀವಹಾನಿ ಇಲ್ಲ, ಜಲ್ಲಿಕಾಟ್ಟುಗೆ ಕೆಲವು ಶತಮಾನಗಳ ಇತಿಹಾಸ ಇದೆ ಎಂಬುದಾಗಿ ಸಮರ್ಥಿಸಿಕೊಂಡಿತ್ತು.

ಆದರೂ ನ್ಯಾಯಾಲಯ ಷರತ್ತನ್ನು ವಿಧಿಸಿ ಗೂಳಿಕಾಳಗಕ್ಕೆ ಅನುಮತಿ ನೀಡಿತ್ತಾದರೂ, ಇಬ್ಬರು ಪ್ರಾಣಕಳೆದು ಕೊಂಡಿದ್ದರು.ಇಂದು ತಮಿಳುನಾಡಿನಲ್ಲಿ ಡಿಎಂಕೆ (ದ್ರಾವಿಡ ಮುನ್ನೇತ್ರಾ ಕಜಗಂ), ಎಐಡಿಎಂಕೆ (ಅಣ್ಣಾ ದ್ರಾವಿಡ ಮುನ್ನೇತ್ರಾ ಕಜಗಂ), ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಪಕ್ಷ, ರಾಷ್ಟ್ರೀಯ ತೆಲಂಗಾಣ ಪಕ್ಷ, ಇಂಡಿಯಾ ಫಾರ್ವರ್ಡ್ ಬ್ಲಾಕ್ (ಪಶ್ಚಿಮಬಂಗಾಳ), ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಮೇಘಾಲಯ,ಪಶ್ಚಿಮಬಂಗಾಲ),

ಅಸ್ಸೋಮ್ ಗಣ ಪರಿಷತ್ (ಅಸ್ಸಾಂ), ಬಿಜು ಜನತಾದಳ (ಒರಿಸ್ಸಾ), ಇಂಡಿಯನ್ ಫೆಡರಲ್ ಡೆಮೋಕ್ರೆಟಿಕ್ ಪಾರ್ಟಿ(ಕೇರಳ), ಇಂಡಿಯನ್ ನ್ಯಾಶನಲ್ ಲೋಕದಳ (ಹರಿಯಾಣ),ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಕೇರಳ),ಜನತಾದಳ (ಬಿಹಾರ,ಜಾರ್ಖಂಡ್,ನಾಗಾಲ್ಯಾಂಡ್) ರಾಷ್ಟ್ರೀಯ ಜನತಾದಳ (ಬಿಹಾರ್,ಜಾರ್ಖಂಡ್),ಸಮಾಜವಾದಿ ಪಕ್ಷ (ಮಧ್ಯಪ್ರದೇಶ, ಉತ್ತರಪ್ರದೇಶ, ಉತ್ತರಖಂಡ), ಶಿವಸೇನೆ(ಮಹಾರಾಷ್ಟ್ರ),ಯುನೈಟೆಡ್ ಗೋವನ್ಸ್ ಡೆಮೋಕ್ರೆಟಿಕ್ ಪಾರ್ಟಿ(ಗೋವಾ)ಇವು ಪ್ರಮುಖ ಪ್ರಾದೇಶಿಕ ಪಕ್ಷಗಳು.

ತಮಿಳುನಾಡಿನಲ್ಲಂತೂ ಜನ ಒಮ್ಮೆ ಕರುಣಾನಿಧಿಯವರನ್ನು ಅಧಿಕಾರದ ಗದ್ದುಗೆ ಏರಿಸಿದರೆ, ಮತ್ತೊಮ್ಮೆ ಎಐಎಡಿಎಂಕೆ ಜಯಲಲಿತಾ ಅವರನ್ನು, ಹೀಗೆ ಕಳೆದ 40ವರ್ಷಗಳಿಂದ ಪ್ರಾದೇಶಿಕ ಪಕ್ಷಗಳೇ ಇಲ್ಲಿ ಪ್ರಾಬಲ್ಯ ಪಡೆದಿದೆ. ಯಾವುದೇ ರಾಷ್ಟ್ರೀಯ ಪಕ್ಷಗಳು ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ. ಉತ್ತರಪ್ರದೇಶದಲ್ಲಿಯೂ ಬಹುಜನ್ ಸಮಾಜ ಪಕ್ಷ ಗಟ್ಟಿಯಾಗಿ ನೆಲೆಯೂರಿದೆ, ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ, ತೆಲಂಗಾಣ ರಾಷ್ಟ್ರ ಸಮಿತಿ ಬಲವರ್ಧಿಸಿಕೊಂಡಿವೆ.

ಕರ್ನಾಟಕದ ಜನ ಹೆಸರಿಗಷ್ಟೇ ಬುದ್ಧಿವಂತರಾಗಿದ್ದೇವೆ. ರಾಷ್ಟ್ರೀಯ ಪಕ್ಷಗಳಲ್ಲಿನ ರಾಜಕೀಯ ನಾಯಕರಿಗೆ ಇಚ್ಛಾಶಕ್ತಿಯ ಕೊರತೆ ತುಂಬಿಕೊಂಡಿದ್ದರೆ, ಕೇವಲ ಭರವಸೆಗಳ ಮೂಟೆಯೊಂದಿಗೆ ಅಧಿಕಾರದ ಗದ್ದುಗೆ ಏರುವುದು ಮಾತ್ರ ಮುಖ್ಯವಾಗಿದೆ ವಿನಃ ಜನಪರ ಕಾಳಜಿ ಬೇಕಾಗಿಲ್ಲ ಎನ್ನುವುದಕ್ಕೆ ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಬಗೆಹರಿಯದೆ ಇರುವ ಸಮಸ್ಯೆಗಳೇ ಸಾಕ್ಷಿ. ಕರ್ನಾಟಕದ ಸಮಸ್ಯೆಯನ್ನು ಪಟ್ಟು ಹಿಡಿದು ಮಾಡಿಸಿಕೊಳ್ಳಲಿಕ್ಕಾದರೂ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ, ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆಯಂತೆ, ಅಂತಹ ನಾಯಕರು ಮತ್ತು ಮತದಾರರು ಯಾರು...!!

Thursday, March 27, 2008

ಬದುಕಿದು ಜಟಕಾ ಬಂಡಿ...


ಮನುಷ್ಯನ ಬದುಕು ಹಾವು-ಏಣಿ ಆಟ ಇದ್ದ ಹಾಗೆ, ಆಸೆ, ಆಕಾಂಕ್ಷೆಗಳ ಬೆನ್ನತ್ತಿ ಹೋಗುತ್ತಿರುವಾಗಲೇ ಧುತ್ತನೆ ಎದುರಾಗುವ ಘಟನೆಗಳು ನಮ್ಮ ಜೀವನದ ಗತಿಯನ್ನೇ ಬದಲಿಸಿಬಿಡುತ್ತದೆ. ಅಂತಹ ನೂರಾರು ಘಟನೆಗಳು ನಮ್ಮ ಸುತ್ತ-ಮುತ್ತ ನಡೆಯುತ್ತಲೇ ಇರುತ್ತದೆ. ನಾನೀಗ ಹೇಳ ಹೊರಟಿರುವುದು ಮನಸ್ಸಿನ ತುಂಬಾ ಕನಸುಗಳನ್ನೆ ತುಂಬಿಕೊಂಡು ಸ್ವಪ್ನಲೋಕದಲ್ಲಿ ವಿಹರಿಸುತ್ತ ಇದ್ದ ಹೆಣ್ಣೊಬ್ಬಳ ಕಥಾನಕ..

ಆ ಮನೆಯಲ್ಲಿ ಒಂದು ತಿಂಗಳಿನಿಂದ ಸಂಭ್ರಮವೋ ಸಂಭ್ರಮ, ಯಾಕೆಂದರೆ ಆ ಮನೆಯಲ್ಲಿ ಮದುವೆ ಕಾರ್ಯ ಕ್ರಮ ನಡೆಯುವುದರಲ್ಲಿತ್ತು. ಆಮಂತ್ರಣ ಪತ್ರಿಕೆ ಹಂಚುವುದರಿಂದ ಹಿಡಿದು (ವರದಕ್ಷಿಣೆ, ಖರ್ಚು ವೆಚ್ಚಗಳ ತಲೆಬಿಸಿಯ ನಡುವೆಯೂ) ಪ್ರತಿಯೊಂದು ಕೆಲಸದಲ್ಲಿ ಮನೆಯ ಸದಸ್ಯರೆಲ್ಲ ತೊಡಗಿಕೊಂಡಿದ್ದರು. ಬಂಧು-ಮಿತ್ರರಿಗೆ, ಊರಿನವರಿಗೆ ಹೀಗೆ ಎಲ್ಲರಿಗೂ ಮದುವೆಗಾಗಿ ಆಮಂತ್ರಣ ಪತ್ರಿಕೆ ಹಂಚಲಾಗಿತ್ತು.

ಹಸೆಮಣೆ ಏರುವ ದಿನ ಹತ್ತಿರ ಬರುತ್ತಿದ್ದಂತೆಲ್ಲಾ, ಮನಸ್ಸಿನ ಮೂಸೆಯಲ್ಲಿ ಆಸೆಗಳು ಗರಿಗೆದರತೊಡಗಿದ್ದವು. (ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾಲ ಮಾಡಿ ಮದುವೆ ಮಾಡಿಸುವುದೇ ಹೆಚ್ಚು, ಅಲ್ಲದೆ ಮಗಳು ಗಂಡನ ಮನೆ ಸೇರಿ ಅಲ್ಲಿಯಾದರು ಸುಖದಿಂದ ಇರುತ್ತಾಳಲ್ಲ (!) ಎಂಬ ಸಂತೋಷ ಹುಡುಗಿಯ ತಂದೆ-ತಾಯಿ ಯರದ್ದು.) ನೋಡ, ನೋಡುತ್ತಿದ್ದಂತೆ ಮದುವೆ ದಿನ ಬಂದೆ ಬಿಟ್ಟಿತ್ತು, ದೂರದ ಬಂಧುಗಳು, ನೆಂಟರಿಷ್ಟರು ಬಂದು ಮನೆಯಲ್ಲಿ ಜಮಾಯಿಸಿದ್ದರು.

ಮರುದಿನ ಬೆಳಿಗ್ಗೆ ಮದುವೆ,ರಾತ್ರಿ ಇಡೀ ಹೆಣ್ಣಿನ ಹಾಗೂ ಗಂಡಿನ ಮನೆಯಲ್ಲಿ ತರಾತುರಿಯ ಕೆಲಸ. ಇತ್ತ ವರನ ಮನೆಯಲ್ಲಿ ಮನೆಯವರೆಲ್ಲ ಮನೆಯ ಚಾವಡಿಯ ಸಮೀಪ ನಿಂತು ಮಾತನಾಡುತ್ತಿದ್ದರು, ಆಗ ಸುಮಾರು 10ಗಂಟೆ ರಾತ್ರಿಯಾಗಿದ್ದಿರಬಹುದು, ಯಾರೋ ಹೇಳಿದ ಹಾಸ್ಯಕ್ಕೆ 'ಮದುಮಗ' ನಗುತ್ತಿದ್ದ. ಆ ಸಂದರ್ಭದಲ್ಲೇ ಮರೆಯಿಂದ ತೂರಿಬಂದ ಕಾಡತೂಸು ವರನ ಬೆನ್ನಿನ ಮೂಲಕ ಎದೆಯನ್ನ ಸೀಳಿ ಹಾಕಿತ್ತು.

ಮದುವೆ ಮನೆಯಾಗಿ ಶೃಂಗರಿಸಿದ್ದ ತುಳಸಿಕಟ್ಟೆ ಎದುರುಗಡೆನೆ ರಕ್ತದೋಕುಳಿಯಲ್ಲಿ ವರ ಬೋರಲಾಗಿ ಬಿದ್ದಿದ್ದ. ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು, ಇತ್ತ ಗುಂಡು ಹೊಡೆದ ಖದೀಮ ಕಾಡಿನ ದಾರಿಯ ಓಟ ಕಿತ್ತಿದ್ದ. ಬೆಳಗಿನ ಜಾವದಲ್ಲಿ ವಧುವಿನ ಮನೆಗೆ ಸುದ್ದಿ ತಲುಪಿದಾಗ ವಧುವಿನ ಮನೆಯಲ್ಲಿ ಸ್ಮಶಾನ ಮೌನ, ರೋಧನ, ನವದಾಂಪತ್ಯದ ಕನಸು ಕಟ್ಟಿಕೊಂಡಿದ್ದ ಯುವತಿಗೆ ಯಾವ ರೀತಿಯ ಸಾಂತ್ವಾನ ಹೇಳಲಿ....

(ಇದು ಕುಂದಾಪುರ ತಾಲೂಕಿನ ಸಿದ್ಧಾಪುರದ ಒಂದು ಕುಗ್ರಾಮದಲ್ಲಿ ನಡೆದ ಘಟನೆ, ಸುಮಾರು ಆರೇಳು ವರ್ಷವಾಗಿರಬೇಕು ನಾನು ವರದಿ ಮಾಡಲು ತೆರಳಿದಾಗ ಮದುವೆ ಮನೆಯಲ್ಲಿನ ದೃಶ್ಯ ನೋಡಿ ಆಘಾತಗೊಂಡಿದ್ದೆ. ಆ ಮೇಲೆ ಯುವತಿ ಬದುಕು ಏನಾಯಿತೋ ಗೊತ್ತಿಲ್ಲ. ಹಳೆ ದ್ವೇಷಕ್ಕಾಗಿ ಮನೆಯ ಸಂಬಂಧಿಯೊಬ್ಬ ನಾಡಕೋವಿಯಿಂದ ಗುಂಡು ಹೊಡೆದು ಸಾಯಿಸಿದ್ದ. ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎರಡು-ಮೂರು ವರ್ಷ ಕಾಡಿನಲ್ಲೆ ಅಲೆದಿದ್ದ, ಈಗಲೂ ಆತ ಪೊಲೀಸರ ಕೈಗೆ ಸಿಕ್ಕಿದಂತಿಲ್ಲ)

Saturday, March 22, 2008

ಭಗತ್‌‌ಗೊಂದು 'ಸಲಾಂ'


ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿ ಉರಿಯುತ್ತಿದ್ದ ಸಂದರ್ಭ ಗಾಂಧಿ ಅಹಿಂಸೆಯ ಅಸ್ತ್ರದೊಂದಿಗೆ ಹೋರಾ ಡುತ್ತಿದ್ದರೆ, ಭಗತ್‌‌ನಂತಹ ತರುಣರು ಮಾಡು ಇಲ್ಲವೇ ಮಡಿ ಎನ್ನುವಂತಹ ಹೋರಾಟಕ್ಕೆ ಇಳಿದುಬಿಟ್ಟಿದ್ದರು. ಅದರ ಪರಿಣಾಮ ಎಂಬಂತೆ 1929 ಏಪ್ರಿಲ್ 9ರಂದು ಬ್ರಿಟಿಷ್ ಅಸೆಂಬ್ಲಿಯ ಒಳಗೆ ಎರಡು ಕಚ್ಛಾ ಬಾಂಬ್‌‌ಗಳನ್ನು ಎಸೆಯುತ್ತಾರೆ, ಹಾಗೆ ಬಾಂಬ್ ಎಸೆದವರು ಕಾಲಿಗೆ ಬುದ್ಧಿ ಹೇಳಿ ಓಡಿ ಹೋಗಿಲ್ಲ, ಬಿ.ಕೆ.ದತ್ತಾ ಮತ್ತು ಭಗತ್ ಸದನದ ಕುರ್ಚಿಯಲ್ಲಿ ಕುಳಿತು, ಬನ್ನಿ ನಮ್ಮನ್ನು ಬಂಧಿಸಿ ಅಂತ ಪೊಲೀಸರನ್ನೇ ಆಹ್ವಾನಿಸುತ್ತಾರೆ, ಬಂಧಿಸುವಾಗಲೂ ಯಾವುದೇ ಪ್ರತಿರೋಧವನ್ನು ಒಡ್ಡಿಲ್ಲ!!.

ದೇಶದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಚರಿತ್ರೆಯಲ್ಲಿ ಭಗತ್‌‌ ಸಿಂಗ್‌ನದ್ದು ಚಿರಸ್ಥಾಯಿಯಾದ ಹೆಸರು, ಭಾರತ ಸಂಗ್ರಾಮದ ಕ್ರಾಂತಿಕಾರಿ ಹಾಗೂ ಭಾರತದ ಪ್ರಥಮ ಮಾರ್ಕಿಸ್ಟ್‌‌ಗಳಲ್ಲಿ ಭಗತ್ ಒಬ್ಬರಾಗಿದ್ದರು. ಭಗತ್ 1907 ಸೆಪ್ಟೆಂಬರ್ 27ರಂದು ಪಂಜಾಬಿನ ಲಾಯಲ್‌‌ಪುರ ಎಂಬ ಜಿಲ್ಲೆಯ ಬಾಂಗಾ ಎಂಬ ಹಳ್ಳಿಯ ಸಿಖ್ ಸಮುದಾಯದ ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿ ದಂಪತಿಗಳ ಪುತ್ರನಾಗಿ ಜನಿಸಿದ್ದರು.

ಜಲಿಯನ್ ವಾಲಾ ಬಾಗ್ ದುರಂತದಿಂದ ಪ್ರಭಾವಿತರಾದ ಇವರು ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿದರು. ನಾವು ಇವತ್ತು ಭಗತ್,ರಾಜಗುರು, ಸುಖ್‌‌ದೇವ್‌‌ ಅವರನ್ನ ನೆನಪಿಸಿಕೊಳ್ಳಬೇಕು, ಒಂದೆಡೆ ಗಾಂಧಿ ಹಾಗೂ ಅಹಿಂಸಾ ಚಳವಳಿಯಲ್ಲಿ ತೊಡಗಿಕೊಂಡವರ ಹಿರಿಯರ ಗುಂಪಿನ ಮೇಲೆ ಅಪಾರ ಗೌರವ ಇದ್ದಿದ್ದರೂ ಕೂಡ, ಬ್ರಿಟಿಷರನ್ನು ಬಗ್ಗು ಬಡಿಯಲು ಅಹಿಂಸಾ ಮಾರ್ಗವೊಂದೇ ಪರಿಣಾಮಕಾರಿಯಾಗಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಈ ಯುವಪಡೆ ದಿಟ್ಟ ಹೋರಾಟಕ್ಕೆ ಧುಮುಕಿದ್ದವು. ಆಜಾದ್, ದತ್, ಪಡ್ಕೆ, ಚಾಪೇಕರ್ ಸಹೋದ ರರು ಹೀಗೆ ನೂರಾರು ಯುವಪಡೆ ಸ್ವಾತಂತ್ರ್ಯ ಹೋರಾಟದಲ್ಲಿ ನಿಸ್ವಾರ್ಥದಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು.

ಆ ನೆಲೆಯಲ್ಲಿ ಭಗತ್‌‌ನಂತಹವರು 23ರ ಹರೆಯದಲ್ಲಿ ಅವರಲ್ಲಿ ಉಕ್ಕುತ್ತಿದ್ದ ದೇಶಪ್ರೇಮ, ಬ್ರಿಟಿಷರೆಡೆಗೆ ಇದ್ದ ಆಕ್ರೋಶ, ವಿಚಾರಧಾರೆ ಗಂಭೀರವಾಗಿದ್ದವು. ಮಾ.22ರ ದಿ ಹಿಂದೂ ಆಂಗ್ಲ ಪತ್ರಿಕೆಯಲ್ಲಿ ಎಸ್.ಇರ್ಫಾನ್ ಹಬೀಬ್ ಅವರು(Bhagat singh as seen by Ramasami Periyar) ಭಗತ್ ಬಗ್ಗೆ ಬರೆಯುತ್ತಾ, ಭಗತ್‌‌ ವಿಚಾರಧಾರೆಗೆ ತಮಿಳುನಾಡಿನ ಇ.ವಿ.ರಾಮಸ್ವಾಮಿ ಪೆರಿಯಾರ್ ಅವರು ತಮ್ಮ ತಮಿಳು ವಾರಪತ್ರಿಕೆಯಾದ ಕುಡಿ ಅರಸುವಿನಲ್ಲಿ ಬರೆದ ಸಂಪಾದಕೀಯ ಹಾಗೂ ಪೆರಿಯಾರರಿಗೆ ಭಗತ್‌‌ನೆಡೆಗೆ ಇದ್ದ ಅಭಿಮಾನದ ಕುರಿತು ಉಲ್ಲೇಖಿಸಿದ್ದಾರೆ.

ಗಾಂಧಿ ಮತ್ತು ಕಾಂಗ್ರೆಸ್ ಭಗತ್‌‌ನನ್ನು ನೇಣುಕುಣಿಕೆಯಿಂದ ತಪ್ಪಿಸಲು ವಿಫಲರಾದರು, ಅಲ್ಲದೇ ಯಾರೊ ಬ್ಬರು ಭಗತ್‌‌ನನ್ನು ಗಲ್ಲಿಗೇರಿಸಿದ ಬಗ್ಗೆ ಸಂತಾಪ ಸೂಚಿಸಿಲ್ಲ, ಆದರೆ ಭಗತ್ ರಾಷ್ಟ್ರದ ಸ್ವಾಭಿಮಾನಿ ಪ್ರಜೆಗಳ ದೃಷ್ಟಿಯಲ್ಲಿ ಹೀರೋ ಆಗಿ ನೆಲೆಗೊಂಡಿದ್ದ ಎಂಬುದಾಗಿ ಸಂಪಾದಕೀಯದಲ್ಲಿ ಸ್ವಾಮಿ ಬರೆದಿದ್ದರು.

ಭಗತ್ ಕೇವಲ ಕೋಮುವಾರು ಅಷ್ಟೇ ಅಲ್ಲ, ಒಡಕಿನ ರಾಜಕೀಯ ನೀತಿಯನ್ನೂ ವಿರೋಧಿಸುತ್ತಿದ್ದ, ಭಾರತೀ ಯ ಜಾತಿ ಪದ್ಧತಿಯನ್ನೂ ದ್ವೇಷಿಸುತ್ತಿದ್ದ, ಮನುಷ್ಯರ ಹುಟ್ಟನ್ನು ಜಾತಿ ಆಧಾರದ ಮೇಲೆ ಪರಿಗಣಿಸಿ ಅಸ್ಪ್ರಶ್ಯ ತೆಯಿಂದ ನೋಡುತ್ತಿರುವ ಭಾವನೆಯ ವಿರುದ್ಧ ಸಿಡಿದೇಳುವ ಮನೋಭಾವದ ಬಗ್ಗೆ, ಕುರುಡು ನಂಬಿಕೆಯನ್ನು ವಿರೋಧಿಸುತ್ತಿದ್ದ ಸಿಂಗ್‌‌ನ ನಾನೇಕೆ ನಾಸ್ತಿಕ ಎಂಬ ವಿಚಾರಲಹರಿಗಳು ಪೆರಿಯಾರರ ಸಂಪಾದಕೀಯದಲ್ಲಿ ಢಾಳಾಗಿ ಬಳಸಿಕೊಂಡಿರುವುದನ್ನು ಹಬೀಬ್ ವಿವರಿಸಿದ್ದಾರೆ.

ಇಂಕಿಲಾಬ್ - ಜಿಂದಾಬಾದ್ ಘೋಷಣೆಯೊಂದಿಗೆ ಅವರ ಧಮನಿಧಮನಿಗಳಲ್ಲಿ ಹರಿಯುತ್ತಿದ್ದ ಸ್ವಾತಂತ್ರ್ಯದ ಕಿಚ್ಚು ಬರೇ ಬೂಟಾಟಿಕೆಯದ್ದಾಗಿರಲಿಲ್ಲ. ಅವರ ಹೋರಾಟ, ಕೆಚ್ಚು ಹೋರಾಟಗಾರರಿಗೆ, ಯುವಪೀಳಿಗೆಗೆ ಮಾದರಿಯಾಗಿದ್ದವು. ದೇಶದ ಸ್ವಾತಂತ್ರ್ಯಕ್ಕಾಗಿ ಮಾರ್ಚ್ ೨೩, ೧೯೩೧ ರಂದು ನಗುನಗುತ್ತಾ ನೇಣುಕುಣಿಕೆಗೆ ಕೊರಳನೊಡ್ಡಿದ ಭಗತ್, ರಾಜ್‌‌ಗುರು, ಸುಖ್‌‌ದೇವ್ ಅವರ ಬಲಿದಾನಕ್ಕೊಂದು ಹೃತ್ಪೂರ್ವಕ ನಮನ...

ಪುಸ್ತಕ ಬಿಡುಗಡೆ: 'Shaheed Bhagat Singh's Jail Diary' ಎಂಬ 400 ಪುಟಗಳ ಆಂಗ್ಲ ಭಾಷೆಯ ಪುಸ್ತಕವನ್ನು ದೆಹಲಿಯ ಹೋಪ್‌ ಇಂಡಿಯಾ ಭಗತ್‌ ಸಿಂಗ್‌ ಹುತಾತ್ಮರಾದ ದಿನವಾದ (ಇಂದು) ಮಾ.23 ರಂದು ಪುಸ್ತಕ ಬಿಡುಗಡೆಗೊಳಿಸುತ್ತಿದೆ.

Saturday, March 15, 2008

ಚಂಡೆ - ಮದ್ದಳೆ ಗುಂಗಿನಲ್ಲಿ....


ಆ ದಿನಗಳಲ್ಲಿ ರಿಕ್ಷಾದಲ್ಲಿ ಮೈಕ್ ಕಟ್ಟಿಕೊಂಡು, ಇಂದು ರಾತ್ರಿ ಒಂಬತ್ತುವರೆಗೆ ಸರಿಯಾಗಿ ಒಂದೇ ಒಂದು ಆಟ (ಯಕ್ಷಗಾನ), ಪ್ರಿಯ ಯಕ್ಷಗಾನ ಪ್ರೇಮಿಗಳೇ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ ಎಂದು ಕೂಗುತ್ತ, ಸಾಗುವ ರಿಕ್ಷಾದ ಹಿಂದೆ, ಆತ ಬಿಸಾಕುವ ಪ್ಯಾಂಪ್ಲೆಟ್ ಹೆಕ್ಕಲು ಓಡುತ್ತಿದ್ದೆವು.


ಹೀಗೆ ಕೂಗುತ್ತ ಸಾಗುವಾಗಲೇ, ಮನೆಯಲ್ಲಿ ಅಡುಗೆ, ಬೇರೆ, ಬೇರೆ ಕೆಲಸಗಳೆಲ್ಲ ಜಟಾಪಟಾ ಮುಗಿಯುತ್ತಿ ದ್ದವು, ಯಾಕೆಂದರೆ ಒಂಬತ್ತುವರೆಗೆ ಸರಿಯಾಗಿ ಯಕ್ಷಗಾನ ನೋಡಲು ಹೋಗಬೇಕಲ್ಲ ಅದಕ್ಕೆ. ಯಕ್ಷಗಾನದ ಚೌಕಿಯಿಂದ ಕರಿಮುಖದವಗೆ ಗಣಾಧಿಪತಿ....ಎಂದು ಗಣಪತಿ ಪೂಜೆ ಆರಂಭಗೊಂಡು ಚಂಡೆ-ಮದ್ದಳೆ ಸದ್ದು ಕಿವಿಗೆ ಬೀಳುವ ಮುನ್ನ ಹರುಕು-ಮುರುಕು ಚಾಪೆಯೊಂದಿಗೆ ಪಸ್ಟ್ ಕ್ಲಾಸ್ ( ರಂಗಸ್ಥಳದ ಎದುರುಭಾಗದ ನೆಲ)ನಲ್ಲಿ ಕುಳಿತಿರುತ್ತಿದ್ದೆವು.


ಜಾತ್ರೆ ಎಂಬಂತೆ ಜನ ಹಿಂಡು, ಹಿಂಡಾಗಿ ಬಂದು ಕೂರುತ್ತಿದ್ದರು. ಮಕ್ಕಳು, ಹೆಂಗಸರು, ಮುದುಕರು, ಎಲ್ಲರೂ ಬಂದು ಚಾಪೆ, ವಸ್ತ್ರ ಹಾಕಿಕೊಂಡು ಕಣ್ಣಲ್ಲಿ, ಕಣ್ಣಿಟ್ಟು ಯಕ್ಷಗಾನ ವೀಕ್ಷಿಸುತ್ತಿದ್ದರು. ನಮಗೆ ಆರಂಭದಲ್ಲಿ ಭಾರೀ ಉತ್ಸಾಹ, ಸುಮಾರು 11 ಗಂಟೆ ಸುಮಾರಿಗೆ ನಮ್ಮ ಗಾಡಿ ಪ್ಯಾಚ್ (ನಿದ್ರೆ) ಆಗಿರುತ್ತಿತ್ತು.

ಮಧ್ಯರಾತ್ರಿ 12ರ ನಂತರ ರಂಗಸ್ಥಳ ಪ್ರವೇಶಿಸುವ ರಾಕ್ಷಸ, ಒಡ್ಡೋಲಗ ಪ್ರವೇಶದ ಸಂದ ರ್ಭದಲ್ಲಿ ಚಂಡೆಯ ಹೊಡೆತದ ಅಬ್ಬರ, ಭಾಗವತರ ಆರ್ಭಟ, ರಾಕ್ಷಸನ ಕಿರುಚಾಟ, ಬೆಳಕಿನ ಸರ್ಕಸ್‌‌ ಆರಂಭಗೊಂಡ ಕೂಡಲೇ ಮನೆಯಿಂದ ಬಂದಿದ್ದ ಹಿರಿಯರು, ಏಯ್ ಮಕ್ಕಳೇ ಏಳಿ, ಏಳಿ, ರಾಕ್ಷಸ, ರಾಕ್ಷಸ ಅಂತ ಇವರೂ ಬೊಬ್ಬೆ ಹೊಡೆಯುವುದರಿಂದ ನಾವು ದಿಗಿಲುಗೊಂಡು ನಿದ್ದೆಗಣ್ಣಲ್ಲೇ ಎದ್ದು ಕೂರುತ್ತಿದ್ದೇವು.

ಮತ್ತೆ ಯಕ್ಷಗಾನ ವೀಕ್ಷಣೆ. ಅಷ್ಟು ವೇಳೆಗೆ ನಮಗೆ ಒಂದು ಸುತ್ತಿನ ನಿದ್ದೆ ಆಗಿರುತ್ತದೆ. ಆದರೆ ನಮ್ಮಂತೆ ಬರುವ ಉಳಿದ ಹುಡುಗರು ಪಾಳಿ ಎಂಬಂತೆ ಅವರು ನಿದ್ದೆಗೆ ಶರಣಾಗಿರುತ್ತಿದ್ದರು. ಆಗ ನಾವು ಅವರ ಬಾಯಿಗೆ ಕಾಗದವನ್ನು ಬೀಡಿಯಂತೆ ಸುರುಳಿ ಸುತ್ತಿ ಇಡುತ್ತಿದ್ದೇವು. ಕೆಲವೊಮ್ಮೆ ಬೆಂಕಿ ಹಚ್ಚಿ ನಂದಿಸಿ, ಬಾಯಿಗೆ ಇಟ್ಟಾಗ ಅದು ಬೀಡಿಯಂತೆ ಹೊಗೆಯುಳುತ್ತಿತ್ತು. ಅಲ್ಲಿ ಯಕ್ಷಗಾನ ನಡೆಯುತ್ತಿದ್ದರೆ, ಇಲ್ಲಿ ನಮ್ಮದೇ ಒಂದು ಮೇಳ. ಕೆಲ ಸಂದರ್ಭದಲ್ಲಿ ದೊಡ್ಡವರಿಂದ ಬಾಯಿಗೆ ಬಂದಂತೆ ಬೈಗುಳ ತಿಂದದ್ದು (!!) ಇದೆ.

ಮಧ್ಯರಾತ್ರಿಯಲ್ಲಿ ಚಂಡೆ ಮದ್ದಳೆ ಸದ್ದಿನೊಂದಿಗೆ, ಮಲಗಿದವರಿಂದಲೂ ''ಸದ್ದು'' ಹೊರಡುತ್ತಿದ್ದು, ಆದರೆ ಅದು ಚಂಡೆ ಸದ್ದಿನೊಂದಿಗೆ ಮಿಳಿತವಾಗಿ ಹೋಗುತ್ತಿತ್ತು...... !! ದೇವಿ ಮಹಾತ್ಮೆ, ರಾಮಾಯಣ, ಮಹಾಭಾರತ, ಗದಾಯುದ್ಧ, ಭೀಷ್ಮ ವಿಜಯ, ರತಿ ಕಲ್ಯಾಣ, ಮಹಾಮಂತ್ರಿ ದುಷ್ಟಬುದ್ಧಿ, ನಳದಮಯಂತಿ, ಶಬರಿಮಲೆ ಅಯ್ಯಪ್ಪ, ಸಂಪೂರ್ಣ ಕುರುಕ್ಷೇತ್ರ, ವಿಜಯಶ್ರೀ, ರಾಮ ನಿರ್ಯಾಣ, ಶರಸೇತು ಬಂಧನ, ವಿಭೀಷಣ ನೀತಿ, ಲಂಕಾ ದಹನ, ಲವ-ಕುಶ ಕಾಳಗ, ಕೃಷ್ಣಾರ್ಜುನ, ಕೃಷ್ಣಗಾರುಡಿ, ಸುಭದ್ರೆ ಕಲ್ಯಾಣ, ಸೀತಾ ಕಲ್ಯಾಣ ಹೀಗೆ ಸಾಲು,ಸಾಲು ಯಕ್ಷಗಾನ ನೋಡುತ್ತಿದ್ದೆವು.

ಹಳ್ಳಿಗರಿಗಂತೂ ಯಕ್ಷಗಾನದ ಮೂಲಕವೇ ಎಲ್ಲಾ ಪುರಾಣ ಕಥೆಗಳು ಬಾಯಿಪಾಠವಾಗುವಷ್ಟರ ಮಟ್ಟಿಗೆ ಯಕ್ಷಗಾನದ ಪ್ರಸಂಗಗಳು ಚಿರಪರಿಚಿತವಾಗಿದ್ದವು. ಒಮ್ಮೆ ನಮ್ಮೂರ ಸಮೀಪದ ಅರಾಟೆ ಎಂಬಲ್ಲಿ ಬಯಲಾಟ ನಡೆಯುತ್ತಿದ್ದಾಗ, 1 ಗಂಟೆ ರಂಗಸ್ಥಳ ಪ್ರವೇಶಿಸಿದ ರಾಜನ ವೇಷಧಾರಿ ಇದೇನಾಶ್ಚರ್ಯ ಎಂದು ಗಂಭೀರವಾಗಿ ನುಡಿದಾಗ, ಎದುರು ಸಾಲಿನಲ್ಲಿ ಕುಳಿತು ನಿದ್ದೆಗಣ್ಣಲ್ಲಿದ್ದ ವ್ಯಕ್ತಿಯೊಬ್ಬರು ದಡಬಡಿಸಿ, ಏನಿಲ್ಲಾ ಸುಮ್ಮನೆ ಒಂದು ಗಳಿಗೆ ಆಟ ನೋಡಿಕೊಂಡು ಹೋಗುವಾ ಅಂತ ಬಂದೆ ಅಂದಾಗ,ಪಕ್ಕದಲ್ಲೇ ಕುಳಿತಿದ್ದವರು,

ಆಯ್ಯೋ ಆಚಾರ್ಯರೆ (ವೃತ್ತಿಯಲ್ಲಿ ಅವರು ಬಡಗಿ ನಮ್ಮಲ್ಲಿ ಆಚಾರ್ಯರು ಎನ್ನುತ್ತೇವೆ,ಯಕ್ಷಗಾನದಲ್ಲಿ ಇದೇನು ಆಶ್ಚರ್ಯ ಎಂದಿದ್ದು, ಇವರಿಗೆ ಏನು ಆಚಾರ್ರೇ ಎಂದು ಕೇಳಿಸಿತ್ತು!!!) ಅವರು ನಿಮ್ಮನ್ನು ಕರೆದ್ದಲ್ಲ, ಸ್ವಲ್ಪ ಕಣ್ಣು ಬಿಟ್ಟು ನೋಡಿ ಎಂದಾಗ ನಕ್ಕಿದ್ದೇ, ನಕ್ಕಿದ್ದು.

ಇದು ಸುಮಾರು 20 ವರ್ಷಗಳ ಹಿಂದಿನ ಕಥೆ. ಆ ಸಂದರ್ಭಗಳಲ್ಲಿ ಮಂದರ್ತಿ ಮೇಳ, ಸಾಲಿಗ್ರಾಮ, ಧರ್ಮ ಸ್ಥಳ, ಕಟೀಲು, ಮಾರಣಕಟ್ಟೆ, ಸಿಗಂಧೂರೇಶ್ವರಿ, ಮಂಗಳಾದೇವಿ, ಗರಡಿ-ಮೇಳ ಪ್ರಸಿದ್ಧವಾಗಿದ್ದವು. ಕಾಳಿಂಗ ನಾವಡ, ಸುಬ್ರಹ್ಮಣ್ಯ ಧಾರೇಶ್ವರ, ದಿನೇಶ್ ಅಮ್ಮಣ್ಣಾಯ, ನೆಬ್ಬೂರ್, ಕಡತೋಕರ ಭಾಗವತಿಕೆ ಕೇಳುವುದೇ ಒಂದು ವಿಶಿಷ್ಟ ಅನುಭವ ನೀಡುತ್ತಿತ್ತು.

ಕುಂಬ್ಳೆ ಸುಂದರ ರಾವ್, ಮಲ್ಪೆ ರಾಮದಾಸ ಸಾಮಗರು, ವಾಸುದೇವ ಸಾಮಗ, ದೇರಾಜೆ ಸೀತಾರಾಮಯ್ಯ, ಗೋವಿಂದ ಭಟ್, ನಾರಾಯಣ ಹೆಗ್ಡೆ, ಶೇಣಿ ಗೋಪಾಲಕೃಷ್ಣ ಮುಂತಾದ ಹಿರಿಯರ ಅರ್ಥಗರ್ಭಿತ ಮಾತು ಗಳು ಇಂದಿಗೂ ಚಿರಸ್ಮರಣೀಯ.ಇತ್ತೀಚೆಗೆ ಊರಿನಲ್ಲಿ ಯಕ್ಷಗಾನ ನೋಡುವ ಅವಕಾಶ ಬಂದೊದಗಿತ್ತು.

ನಮ್ಮ ಮನೆಯ ಸಮೀಪವೇ ಯಕ್ಷಗಾನ ಬಯಲಾಟ ಇದ್ದಿತ್ತು. 10ಗಂಟೆ ಸುಮಾರಿಗೆ ಯಕ್ಷಗಾನದತ್ತ ಹೆಜ್ಜೆ ಹಾಕಿದ್ದೆ, ರಂಗಸ್ಥಳದ ಮುಂಭಾಗದಲ್ಲಿ ಬೆರಳೆಣಿಕೆಯ ಜನ ನಿಂತಿದ್ದರು. 12ಗಂಟೆಯಾಗುವ ಹೊತ್ತಿಗೆ ಒಬ್ಬೊ ಬ್ಬರೆ ಮನೆಯತ್ತ ದಾಪುಗಾಲು ಹಾಕತೊಡಗಿದ್ದರು. ಕೊನೆಗೆ ಉಳಿದದ್ದು ರಂಗಸ್ಥಳದಲ್ಲಿ ಕುಣಿಯುವವರು ಮತ್ತು ಚೌಕಿಯಲ್ಲಿದ್ದವರು ಮಾತ್ರ. ಆಗ ನನಗೆ ಹಳೆಯ ನೆನಪುಗಳೆಲ್ಲ ಕಾಡಿದವು.

ಆ ಸಂದರ್ಭದಲ್ಲಿ ಯಕ್ಷಗಾನಕ್ಕೆ ಜನಜಾತ್ರೆ, ರಾತ್ರಿಯಿಂದ ಬೆಳಿಗ್ಗಿನ ಜಾವದವರೆಗೆ ಯಾರೂ ಕದಲುತ್ತಿರಲಿಲ್ಲ, ಅಷ್ಟು ಆಸಕ್ತಿಯಿಂದ ನೋಡುತ್ತಿದ್ದರು. ಹಾಗಂತ ಇತ್ತೀಚೆಗೆ ಸಿನಿಮಾ ಕಥೆ ಆಧಾರಿತ ಯಕ್ಷಗಾನ ಪ್ರಸಂಗಗಳು ಟೆಂಟ್ ಮೇಳಗಳಲ್ಲಿ ಯಶಸ್ವಿ ನೂರನೇ ಪ್ರಯೋಗ ಅಂತ ಕಾಣುತ್ತೇವೆ ಹಾಗೂ ಮಂದರ್ತಿ, ಕಟೀಲು, ಧರ್ಮಸ್ಥಳ ಮೇಳಗಳನ್ನು ಹರಕೆ ರೂಪದಲ್ಲಿ ಆಡಿಸುತ್ತಾರೆ.

ಮಂದರ್ತಿಯ ನಾಲ್ಕು ಮೇಳಗಳೂ 2017ರವರೆಗೂ ಬುಕ್ಕಿಂಗ್ ಆಗಿದೆ. ಇದನ್ನು ಕೂಡ ಹರಕೆ ಹೊತ್ತ ಮನೆ ಮಂದಿ, ನೆಂಟರು ನೋಡಬೇಕಷ್ಟೇ ವಿನಃ ಈ ಹಿಂದಿನ ಆಸಕ್ತಿ, ಕುತೂಹಲ ಇಂದು ಜನರಲ್ಲಿ ಉಳಿದಿಲ್ಲ ಎನ್ನುವುದಂತೂ ಸತ್ಯ..



ರಾಜ್ಯರಾಜಕೀಯದ 'ತ್ರಿಶಂಕು ಸ್ಥಿತಿ'


ಬೆಂಗಳೂರು: ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವುದು ಖಚಿತವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಾಜಕಾರಣದಲ್ಲೀಗ ಬಿರುಸಿನ ಚಟುವಟಿಕೆ ನಡೆಯತೊಡಗಿದೆ. ಎಲ್ಲವೂ ಸರಿಯಾಗಿದೆ ಎಂಬಷ್ಠರಲ್ಲಿ ಯೇ ಕಾಂಗ್ರೆಸ್ ಹೈಕಮಾಂಡ್ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರನ್ನು ರಾಜ್ಯ ರಾಜಕಾರಣದ ಪಡಸಾಲೆಗೆ ಎಳೆದುತಂದಿದೆ.

ಕೃಷ್ಣ ಅವರು ರಾಜ್ಯ ರಾಜಕೀಯ ಆಗಮಿಸುತ್ತಾರೆ ಎಂಬ ಸುದ್ದಿ ಹಬ್ಬುತ್ತಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅಸಮಾಧಾನ ವ್ಯಕ್ತಪಡಿಸಿದ್ದರು. ಡಿ.ಕೆ.ಶಿವಕುಮಾರ್ ಗುಂಪಿಗೆ ಕೃಷ್ಣರ ಆಗಮನ ಮಹತ್ವದೆನಿಸಿದ್ದರೂ ಕೂಡ ಕಾಂಗ್ರೆಸ್‌‌ನ ಬಹುತೇಕ ಮುಖಂಡರಿಗೆ ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಿದೆ. ಅದರ ಪರಿಣಾಮ ಎಂಬಂತೆ ಮೈಸೂರಿನಲ್ಲಿ ಖರ್ಗೆ ನೇತೃತ್ವದಲ್ಲಿ ನಡೆಯಲಿರುವ ರಾಜ್ಯದ ಉದ್ದಗಲಕ್ಕೂ ಜನಜಾಗೃತಿ ಮೂಡಿಸಲು ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆದರೆ ಎಸ್.ಎಂ.ಕೃಷ್ಣ ಅವರನ್ನು ಆಹ್ವಾನಿಸದೆ ಆಮಂತ್ರಣ ಪತ್ರದಿಂದ ಅವರ ಹೆಸರನ್ನು ಕೈ ಬಿಡಲಾಗಿದೆ. ಇದರಿಂದ ಕಾಂಗ್ರೆಸ್ ಗುಂಪುಗಾರಿಕೆ ಮತ್ತೊಮ್ಮೆ ಬಯಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ರಾಹುಲ್ ಗಾಂಧಿಯನ್ನು ಹೆಚ್ಚಾಗಿ ಪ್ರಚಾರಕ್ಕೆ ಬಳಸಿಕೊಳ್ಳತೊಡಗಿದೆ. ಅದರ ಫಲಿತಾಂಶ ಎಂಬಂತೆ ಗುಜರಾತ್, ಹಿಮಾಚಲ ಪ್ರದೇಶಗಳಲ್ಲಿ ರಾಹುಲ್ ರೋಡ್ ಶೋ ಯಾವುದೇ ಫಲ ಕೊಟ್ಟಿಲ್ಲ.

ಆದರೂ ಒರಿಸ್ಸಾದಿಂದ ಡಿಸ್ಕವರ್ ಇಂಡಿಯಾ ಪ್ರವಾಸ ಆರಂಭಿಸಿರುವ ರಾಹುಲ್ ಕರ್ನಾಟಕಕ್ಕೂ ಆಗಮಿಸು ತ್ತಿದ್ದಾರೆ. ಆದರೆ ಜನರು ರಾಹುಲ್‌‌ಗೆ ಹೆಚ್ಚಿನ ಮಹತ್ವ ನೀಡುವುದು ಅನುಮಾನವೇ, ಇಂದಿರಾ, ರಾಜೀವ್‌‌ಗಾಂಧಿ ರೋಡ್ ಶೋಗಳಿಗೆ ಜನ ಮುಗಿ ಬೀಳುತ್ತಿದ್ದರು, ಹಾಗೂ ನಿಮ್ಮದು ಯಾವುದಕ್ಕೆ ಮತ ಅಂತ ಕೇಳಿದರೆ 'ಕೈ'ಎನ್ನುತ್ತಿದ್ದರು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ!! ಕಾಂಗ್ರೆಸ್ ಪಕ್ಷಕ್ಕೆ ಸಿದ್ಧರಾಮಯ್ಯ, ಎಂ.ಪಿ.ಪ್ರಕಾಶ್‌‌ರಂತಹ ಘಟಾನುಘ ಟಿಗಳು ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್ ಬಲಶಾಲಿಯಾಗಿದೆ ಎಂಬ ಅಂಶ ಮೇಲ್ನೋಟಕ್ಕೆ ಕಂಡು ಬಂದರೂ ಕೂಡ, ರಾಜ್ಯ ರಾಜಕಾರಣದಲ್ಲಿನ ಸೂಕ್ಷ್ಯ ಎಳೆಗಳನ್ನು ಅವಲೋಕಿಸುತ್ತ ಹೋದರೆ, ಕಾಂಗ್ರೆಸ್‌‌ನಲ್ಲಿ ಒಗ್ಗಟ್ಟು ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಅಲ್ಲದೇ ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರ ಅಸ್ತು ಎಂದ ಮೇಲೆ ಕೆಲವು ಮುಖಂಡರಿಗೆ ದಿಕ್ಕೇ ತೋಚದಂತಾ ಗಿದೆ. ಈ ಸ್ಥಿತಿ ಕೇವಲ ಕಾಂಗ್ರೆಸ್‌‌ಗೆ ಮಾತ್ರವಲ್ಲ,ಬಹುತೇಕ ಪಕ್ಷದಲ್ಲಿನ ಮುಖಂಡರು ಹಲವು ವರ್ಷಗಳ ಕಾಲ ಒಂದೇ ಕ್ಷೇತ್ರದಲ್ಲಿ ಪಾಳೆಗಾರರಂತೆ ಸ್ಪರ್ಧಿಸಿ ಗೆಲ್ಲುತ್ತಿದ್ದರು. ಆ ಅವಕಾಶ ಈ ಬಾರಿ ಕೈ ತಪ್ಪಿ ಹೋಗುವ ಮೂಲಕ ಅವರ ಅಸ್ತಿತ್ವಕ್ಕೆ ಕೊಡಲಿಯೇಟು ಬಿದ್ದಂತಾಗಿರುವುದರಿಂದ ಈ ಬಾರಿಯ ಚುನಾವಣೆ ಅಖಾಡ ಮತ್ತಷ್ಟು ರಂಗೇರಲಿದೆ.

ಇನ್ನು ಭಾರತೀಯ ಜನತಾ ಪಕ್ಷ ಅನುಕಂಪ, ಹಿಂದುತ್ವದ ಅಜೆಂಡಾದ ಮೇಲೆ ಮುನ್ನುಗ್ಗಲು ಪ್ರಯತ್ನಿಸಿದರೂ ಕೂಡ ಯಾವುದೇ ಫಲ ನೀಡದ ಕಾರಣ ಇದೀಗ ಬಿಜೆಪಿ ತನ್ನ ವರಸೆಯನ್ನು ಬದಲಾಯಿಸಿ, ಗಲಭೆ, ದತ್ತ ಪೀಠಗಳೆಲ್ಲವನ್ನು ಬದಿಗೊತ್ತಿ-ರೈತಪರ, ಶಾಸ್ತ್ರೀಯ ಸ್ಥಾನಮಾನ, ಭ್ರಷ್ಠಾಚಾರ ಅಜೆಂಡಾವನ್ನು ಮುಂದಿಟ್ಟು ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧವಾಗಿದೆ.

ಜೆಡಿಎಸ್ ಕಾಂಗ್ರೆಸ್-ಬಿಜೆಪಿಯನ್ನು ಸಮಾನ ಶತ್ರುಗಳೆಂದು ದೂರ ಸರಿದಿದ್ದು (ಕೆಟ್ಟ ಮೇಲೆ ಬುದ್ಧ ಬಂತು ಎಂಬ ಗಾದಿ ಮಾತಿನಂತೆ)ತಮ್ಮ ಸರಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟು ಮತದಾರರ ಬಳಿ ಹೋಗುವುದಾಗಿ ಹೇಳಿದೆ. ಇನ್ನು ಬಿಎಸ್ಪಿ, ಸಮಾಜವಾದಿ,ಸಿಪಿಐಎಂ ಮುಂತಾದವುಗಳು ಕಣದಲ್ಲಿವೆ.

ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷವಾಗಲಿ,ಪ್ರಾದೇಶಿಕ ಪಕ್ಷದಲ್ಲಾಗಲಿ ಹೇಳಿಕೊಳ್ಳುವಂತಹ ಒಬ್ಬನೇ ಒಬ್ಬ ಡೈನಾಮಿಕ್ ರಾಜಕಾರಣಿ ಇದ್ದಾರೆಯೇ ಎಂಬುದು ಮತದಾರರ ಮುಂದಿರುವ ಪ್ರಶ್ನೆ. ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾ ವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಆದರೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಈ ಬಾರಿಯೂ ಯಾವ ಪಕ್ಷಕ್ಕೂ ಬಹುಮತ ದೊರೆಯಲಾರದು ಎಂಬ ಅಂಶ ನಿಚ್ಚಳವಾಗತೊಡಗಿದೆ....

ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರ ಸಚಿವ ಸಂಪುಟ ಅನಮೋದನೆ ನೀಡಿರುವ ಹಿನ್ನೆಲೆಯಲ್ಲಿ ಕ್ಷೇತ್ರಗಳನ್ನು ಕಳೆದುಕೊಳ್ಳಲಿರುವವರಲ್ಲಿ ಪ್ರಮುಖರಾಗಿ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(ಗುರುಮಿಠಕಲ್), ಎಂ.ಪಿ.ಪ್ರಕಾಶ್(ಹೂವಿನ ಹಡಗಲಿ), ಡಿ.ಕೆ.ಶಿವಕುಮಾರ್ (ಸಾತನೂರು), ಟಿ.ಬಿ.ಜಯಚಂದ್ರ (ಕಳ್ಳಂಬೆಳ್ಳ), ಡಾ.ಜಿ.ಪರಮೇಶ್ವರ(ಮಧುಗಿರಿ), ಎನ್.ಎಸ್. ಬೋಸರಾಜು (ಮಾನ್ವಿ),

ಗುರುಪಾದಪ್ಪ ನಾಗಮಾರಪಲ್ಲಿ (ಔರಾದ್), ಕೃಷ್ಣಬೈರೇಗೌಡ (ವೇಮಗಲ್). ಸಿ.ಚನ್ನಿಗಪ್ಪ (ಕೊರಟಗೇರಿ), ಡಿ.ಮಂಜುನಾಥ್ (ಹಿರಿಯೂರು), ಅಲಂಗೂರು ಶ್ರೀನಿವಾಸ್(ಮುಳಬಾಗಿಲು), ಕೆ.ಎನ್.ರಾಜಣ್ಣ (ಬೆ ಳ್ಳಾವಿ), ನಾಗರಾಜಯ್ಯ (ಹುಲಿಯೂರುದುರ್ಗ), ಸಂತೋಷ್ ಲಾಡ್ (ಸಂಡೂರು), ಅಮರೇಗೌಡ ಬಯ್ಯಾಪುರ (ಲಿಂಗಸೂರು), ವೈಜನಾಥ್ ಪಾಟೀಲ್(ಚಿಂಚೋಳಿ).

ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ (ಮಾಯಾಕೊಂಡ), ಪಕ್ಷೇತರ ಶಾಸಕರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ (ಬ್ರಹ್ಮಾವರ), ಎಚ್. ಆಂಜನೇಯ (ಭರಮಸಾಗರ), ನಾಗಮಣಿ ನಾಗೇಗೌಡ ಕಿರಗಾವಲ). ಅಲ್ಲದೇ, ದಾವಣಗೆರೆ, ರಾಯಚೂರು, ಬಳ್ಳಾರಿಯಲ್ಲಿ ತಲಾ ಒಂದೊಂದು ವಿಧಾನಸಭಾ ಕ್ಷೇತ್ರಗಳು ಜಾಸ್ತಿಯಾಗಲಿದ್ದು, ಮಂಗಳೂರು, ಚಿಕ್ಕಮಗಳೂರು, ಉಡುಪಿ, ಮಂಡ್ಯ, ಕೋಲಾರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಮಡಿಕೇರಿ, ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಒಂದೊಂದು ಹಾಗೂ ತುಮಕೂರು ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳು ಕಡಿಮೆ ಆಗಲಿದೆ.


Tuesday, March 4, 2008

ಮಹಿಳೆಯರು ಎಷ್ಟು ಸುರಕ್ಷಿತ.... ?!



ಹೆಣ್ಣಿಗೆ ಭಾರತೀಯ ಸಮಾಜದಲ್ಲಿ ಅದೆಷ್ಟು ಗೌರವ, ಪೂಜನೀಯ ಸ್ಥಾನ, ಆಕೆ ಪ್ರೀತಿಯ ತಾಯಿ, ಅಕ್ಕ, ತಂಗಿ, ಪ್ರಿಯೆ, ಪ್ರಿಯತಮೆ ಹೀಗೆ ಎಲ್ಲ ಸ್ಥಾನವನ್ನೂ ಅಲಂಕರಿಸುತ್ತಾಳೆ. ಆದರೆ ಪುರುಷ ಪ್ರಧಾನ (!!) ವ್ಯವಸ್ಥೆಯಲ್ಲಿ ಇಂದಿಗೂ ಹೆಣ್ಣು ಅನುಭವಿಸುತ್ತಿರುವ ಯಾತನೆ, ನೋವುಗಳಿಗೆ ಪರಿಹಾರ ಸಿಕ್ಕಿದೆಯೇ ಎಂಬ ಬಗ್ಗೆ ಮಹಿಳಾ ದಿನಾಚರಣೆ (ಮಾ.8) ಅಂಗವಾಗಿ ಒಂದು ಬರಹ ಇಲ್ಲಿದೆ...

ಹೆಣ್ಣು ನಾಲ್ಕು ಗೋಡೆ ಮಧ್ಯೆಯೇ ವಾಸಿಸಬೇಕಾದವಳಲ್ಲ, ಆಕೆಗೂ ಸ್ವಾತಂತ್ರ್ಯ, ಹಕ್ಕು, ಸ್ಥಾನಮಾನದ ಅಗತ್ಯ ಇದೆ ಎಂಬಂತಹ ಮಾತುಗಳು ಬಹಳ ಹಿಂದಕ್ಕೆ ಹೋಗಿವೆ. ಅಂತಹ ವಾತಾವರಣ ಬಹಳಷ್ಟು ಕಡಿಮೆಯಾಗಿದೆ. ಇಂದು ಮಹಿಳೆಯರು ನಾಲ್ಕು ಗೋಡೆಯನ್ನು ಯಶಸ್ವಿಯಾಗಿ ದಾಟಿ ಮುಖ್ಯವಾಹಿನಿಗೆ ಬಂದಿದ್ದಾರೆ. ಸ್ವಾತಂತ್ರ್ಯ, ಹಕ್ಕು ಎಲ್ಲವೂ ದೊರೆತಿದೆ ಎಂಬಂತಹ ನಿಟ್ಟುಸಿರುವ ಬಿಡುವ ವಾತಾವರಣ ಭಾರತದಲ್ಲಿ (ಸ್ಥಳೀಯವಾಗಿಯಾಗಲಿ) ಸೃಷ್ಟಿಯಾಗಿದೆಯೇ ಎಂಬುದನ್ನು ವಿಶ್ಲೇಷಿಸಬೇಕಾಗಿದೆ.

ಇಂದು ಸ್ವಾತಂತ್ರ್ಯ, ಹಕ್ಕುಗಳಿಗಿಂತ ಮಹಿಳೆಯರ ಪಾಲಿಗೆ ಬೇರೆಯದೆ ತೆರನಾದ ಸಮಸ್ಯೆಗಳು ಆವರಿಸಿಕೊಂಡು ಬಿಟ್ಟಿದೆ ಎನ್ನು ವುದಕ್ಕೆ ನಾಗರಿಕ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನೇ ಗಮನಿಸಿದರೆ ಸಾಕು, ಹೆಚ್ಚಿಗೆ ಏನು ಹೇಳಬೇಕಾದ ಅವಶ್ಯಕತೆ ಇಲ್ಲ..

ಘಟನೆ 1 : ನನ್ನ ಮೇಲೆ ಆಸಿಡ್ ದಾಳಿ ನಡೆಸಿದ ಪತಿ ಈಗ ನನ್ನ ಕಣ್ಣ ಮುಂದೆಯೇ ಆರಾಮವಾಗಿದ್ದಾನೆ. ಅವನ ವಿಕೃತಿಗೆ ನನ್ನ ಬದುಕೇ ಬಲಿಯಾಯಿತು. ಆ ಬಗ್ಗೆ ಆತನಿಗೆ ಯಾವುದೇ ಅಳುಕಿಲ್ಲ. ಈ ಘಟನೆ ನಂತರ ನನಗೆ ಯಾರು ಮನೆಯನ್ನು ಬಾಡಿಗೆಗೆ ನೀಡಲಿಲ್ಲ. ಹತ್ತಾರು ಮನೆಗಳ ಬಾಗಿಲು ಬಡಿದರೂ ಮನೆ ಸಿಗಲಿಲ್ಲ, ನನಗೆ ಮನೆ ನೀಡದಿರಲು ಕಾರಣವಾದರೂ ಏನು ಎಂದು ಅಲವತ್ತುಕೊಂಡಾಕೆ ಗಂಡನ ಆಸಿಡ್ ದಾಳಿಗೆ ತುತ್ತಾದ ನತದೃಷ್ಟೆ ಶಾಂತಿ. ನನ್ನ ಮೇಲೆ ಆಸಿಡ್ ದಾಳಿ ನಡೆಸಿದ ಆರೋಪಿಗಳಿಗೆ ಒಂಬತ್ತು ವರ್ಷ ಕಳೆದರೂ ಶಿಕ್ಷೆಯಾಗಿಲ್ಲ ಎಂದು ಕಣ್ಣೀರು ಸುರಿಸಿದಾಕೆ ಹಸೀನಾ.


ಇವರೆಲ್ಲ ಇತ್ತೀಚೆಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ವತಿಯಿಂದ ನಡೆದ ಆಸಿಡ್ ದಾಳಿ ರಾಷ್ಟ್ರೀಯ ವಿಚಾರಣ ಸಂಕಿರಣದಲ್ಲಿ ಭಾಗವಹಿಸಿ ವಿಕೃತ ಪುರುಷನ ಕ್ರೌರ್ಯಕ್ಕೆ ಬಲಿಯಾದ ನೋವಿನ ಘಟನೆಯ ಸುರುಳಿಯನ್ನು ಬಿಚ್ಚಿಟ್ಟಿದ್ದರು.


ಘಟನೆ 2: ಒಬ್ಬಂಟಿ ಆದಿವಾಸಿ ಮಹಿಳೆಯನ್ನು ಅಸ್ಸಾಂನ ಗುವಾಹಟಿಯಲ್ಲಿ ಹಾಡಹಗಲೇ ಎಲ್ಲರೆದುರಲ್ಲೇ ಬೆತ್ತಲೆಗೊಳಿಸಿ ಅಟ್ಟಾಡಿ ಸುತ್ತಿರುವ ಪುರುಷನ ಅಮಾನವೀಯ ಕ್ರೌರ್ಯದ ದೃಶ್ಯವನ್ನು ಸಿಎನ್‌‌ಎನ್ ಹಾಗೂ ಟೈಮ್ಸ್ ಮಾಧ್ಯಮಗಳು ಪದೇ, ಪದೇ ತೋರಿಸು ತ್ತಿದ್ದವು. ಒಬ್ಬ ಮಹಿಳೆಯನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಆಕೆಯನ್ನು ಗೋಳುಹೊಯ್ದುಕೊಳ್ಳುವುದು ಇದು ನಾಗರಿಕ ಸಮಾಜದ ಲಕ್ಷಣಗಳಾ ??,


ಬಳಿಕ ಆಯೋಗ, ದೂರು-ದುಮ್ಮಾನಗಳು ಅಂತ ಗಮನಸೆಳೆದಾಗ ಮುಖ್ಯಮಂತ್ರಿಗಳು ಆಕೆಗೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಆರೋಪಿಗಳನ್ನು ಬಂಧಿಸಿದರು.ಮಾನ ಎಲ್ಲರಿಗೂ ಒಂದೇ, ಆಕೆಯ ದಯನೀಯ ಸ್ಥಿತಿಯನ್ನು ಕೋಟ್ಯಂತರ ಮಂದಿ ವೀಕ್ಷಿಸಿದ್ದರು. ಹಾಗೆ ಹೋದ ಮಾನ ಪರಿಹಾರ ಕೊಟ್ಟರೆ ಮತ್ತೆ ವಾಪಸು ಬರುತ್ತದೆಯಾ... ಯಾವ ಪರಿಹಾರ ಆಕೆಯ ಮಾನಸಿಕ ನೋವು, ಯಾತನೆಗಳನ್ನು ನೀಗಿಸುತ್ತದೆ..


ಅದರಂತೆಯೇ ಹೊಸ ವರ್ಷದ ಅಮಲಿನಲ್ಲಿ ಮುಂಬೈಯಲ್ಲಿ ಪಡ್ಡೆಗಳು ನಡೆಸಿದ ಮಹಿಳೆಯರ ಮೇಲಿನ ಚುಡಾಯಿಸುವ ಘಟನೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಗೋವಾ ಕಡಸ ಕಿನಾರೆಯಲ್ಲೂ ಅದೇ ತೆರನಾದ ಘಟನೆ ನಡೆಯಿತು. ವಿದೇ ಶಿ ಮಹಿಳೆ ಮೇಲೆ ಅತ್ಯಾಚಾರ ನಡೆಸಲಾಯಿತು. ಹೀಗೆ ಸಾಲು,ಸಾಲಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅಮಾನವೀಯ ಕೃತ್ಯಕ್ಕೆ ಸರಿಯಾದ ಕಾನೂನಾದರೂ ಬಂದಿದೆಯಾ.


ವರದಕ್ಷಿಣೆ ಹಿಂಸೆಗೆ ಬಲಿಯಾಗುವವರ ಸಂಖ್ಯೆ ಇಂದಿಗೂ ಮುಂದುವರಿದಿದೆ.ಭಾರತದಲ್ಲಿ ನಡೆಯುತ್ತಿರುವ ಆಸಿಡ್ ದಾಳಿ ಪ್ರಕರಣ ಗಳಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ. ಈವರೆಗೆ 58 ಪ್ರಕರಣಗಳು ನಡೆದಿವೆ. ಹೀಗೆ ಪುರುಷನ ವಿಕೃತಿಯ ದಾಳಿಗೆ ಸಿಲುಕಿದವರಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ಆಸಿಡ್ ದಾಳಿಯಿಂದ ಬದುಕುಳಿದ ಯುವತಿಯರು, ಮಹಿಳೆಯರು ನರಕಯಾತನೆ ಅನುಭವಿಸುತ್ತಿದ್ದಾರೆ.


ಇದೀಗ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಮಹಿಳಾ ಆಯೋಗ (ರಾತ್ರಿ ಪಾಳಿ ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ ನೀಡುವ ಬಗ್ಗೆ) ಐಟಿ-ಬಿಟಿ, ಕಾಲ್ ಸೆಂಟರ್, ಬಿಪಿಒಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ಕುರಿತು ವಿಶೇಷ ಕಾನೂನು ಜಾರಿಗೆ ತರಲು ಆಗ್ರಹಿಸುವುದಾಗಿ ಹೇಳಿದೆ. ಆದರೆ ಇತ್ತೀಚೆಗಷ್ಟೇ ಬಿಪಿಒ ಉದ್ಯೋಗಿ ಪ್ರತಿಭಾ ಹತ್ಯೆ ಕುರಿತು ಸರ್ವೊಚ್ಛನ್ಯಾಯಾಲಯ, ಮಹಿಳಾ ಸಿಬ್ಬಂದಿಯ ರಕ್ಷಣೆ ಕುರಿತು ಹೊಣೆಯನ್ನು ಕಂಪೆನಿ ಅಥವಾ ಸಾರಿಗೆ ಸೌಲಭ್ಯವನ್ನು ಒದಗಿಸುವ ಸಂಸ್ಥೆ ಹೊರಬೇಕೆ ಎಂಬುದಾಗಿ ಪ್ರಶ್ನಿಸಿತ್ತು. ( ಈ ಬಗ್ಗೆ ಸ್ಪಷ್ಟ ನಿಲುವು ನೀಡುವಂತೆ ಸುಪ್ರೀಂಕೋರ್ಟ್‌‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಆಯೋಗ ಹೇಳಿದೆ) ಹಾಗಾದರೆ ಮಹಿಳೆಯರ ಬದುಕಿಗೆ ರಕ್ಷಣೆ ನೀಡುವವರು ಯಾರು...,


Wednesday, February 27, 2008

ಬಾವಡಿ ಜಲಪಾತಕ್ಕೊಂದು ಸುತ್ತು...

ಮನಸ್ಸು ಒಮ್ಮೊಮ್ಮೆ ಲಂಗು ಲಗಾಮಿಲ್ಲದೆ ಓಡತೊಡಗಲು ಆರಂಭಿಸಿದಾಗ ಅದಕ್ಕೊಂದು ಬ್ರೇಕ್ ನೀಡಲು ಆಗಾಗ ಚಾರಣ, ಪಿಕ್‌‌ನಿಕ್ ಅಂತ ಸುತ್ತಾಡುತ್ತಿರುವುದೇ ತುಂಬಾ ಖುಷಿಯ ವಿಷಯವಾಗಿತ್ತು. ಕೊಲ್ಲೂರಿನ ಅರಸಿನ ಗುಂಡಿ ಜಲಪಾತ, ಬೆಳ್ಕಲ್‌ನ ಗೋವಿಂದ ತೀರ್ಥ, ಕೊಡಚಾದ್ರಿ ಬೆಟ್ಟ ಏರಿ ಇಳಿದು, ಕುಣಿದು ಕುಪ್ಪಳಿಸುತ್ತಿದ್ದೆವು.

ಜಲಪಾತಗಳಿಗೆ ಹಲವು ಬಾರಿ ಭೇಟಿ ಕೊಟ್ಟಾಗಲು ಆದೊಂದು ಥರ ದಿವ್ಯ ಆನಂದ ದೊರೆಯುತ್ತಿತ್ತು. ಕೊಲ್ಲೂರು ಸುತ್ತಮುತ್ತ ಪ್ರದೇಶವೇ ತುಂಬಾ ಆಹ್ಲಾದಕರವಾದದ್ದು. ಹೀಗೆ ನಾನು ಮತ್ತು ಕಿರಿಯ ಪತ್ರಕರ್ತ ಮಿತ್ರ ರಾಘವೇಂದ್ರ ಪಡುಕೋಣೆ ಕೊಲ್ಲೂರು ಭೇಟಿ ನಿರಂತರವಾಗಿದ್ದ ಸಂದರ್ಭದಲ್ಲಿ, ಅಲ್ಲಿನ ಸ್ಥಳೀಯ ರಮೇಶ್ ಗಾಣಿಗರು ಒಂದು ದಿನ ನೀವು ಅರಸಿನ ಗುಂಡಿ, ಬೆಳ್ಕಲ್ ಅಂತ ಪದೇ, ಪದೇ ಸುತ್ತಿದ್ದಲ್ಲೇ ಸುತ್ತುತ್ತೀರಿ, ಇಲ್ಲಿಯೇ ಮತ್ತೊಂದು ಜಲಪಾತ ಇದೆ ಅದನ್ನ ನೋಡಿದಿರಾ ಅಂತ ಪ್ರಶ್ನಿಸಿದ್ದರು.

ಅರೆ, ಇದ್ಯಾವುದಪ್ಪಾ ನಮ್ಮ ಲಿಸ್ಟ್‌‌ನಿಂದ ಜಾರಿಕೊಂಡ ಜಲಪಾತ ಅಂತ ಎಷ್ಟೇ ಭಾಗಾಕಾರ ಗುಣಕಾರ ಮಾಡಿದರೂ ಉತ್ತರ ದೊರೆಯದಿದ್ದಾಗ ,ಕೊನೆಗೆ ಅವರು, ಮಾಸ್ತಿಕಟ್ಟೆ ಸಮೀಪವೇ ಮಣ್ಣುರಸ್ತೆ ಇದೆಯಲ್ಲ ಅಲ್ಲಿಂದ ನೇರಕ್ಕೆ ಹೋದರೆ ನಿಮಗೆ ಬಾವಡಿ ಅಂತ ಊರು ಸಿಗುತ್ತೆ ಅಲ್ಲೇ ಒಂದೊಳ್ಳೆ ಜಲಪಾತ ಇದೆ ಒಮ್ಮೆ ಹೋಗುವ ಅಂತ ಹೇಳಿದ್ದರು.


ಗಾಣಿಗರು ಆ ವಿಚಾರ ಹೇಳಿದ ಮೇಲೆ ತಲೆಯಲ್ಲಿ ಜಲಪಾತ ನೋಡುವ ಹಂಬಲ ಜಾಸ್ತಿಯಾಗತೊಡಗಿತ್ತು. ನಮ್ಮ,ನಮ್ಮ ಕೆಲಸದ ಒತ್ತಡ ಅಲ್ಲಿಗೆ ಹೋಗಲು ಕಾಲ ಕೂಡಿ ಬರಲೇ ಇಲ್ಲ.

ಆದರೆ ನನ್ನ ಮನದೊಳಗೆ ಅದು ಕಾಡುತ್ತಲೇ ಇತ್ತು. ಕೊನೆಗೊಂದು ದಿನ ಹಿರಿಯರು, ಪತ್ರಕರ್ತ ಮಿತ್ರರಾದ ಶ್ರೀಪತಿ ಹಕ್ಲಾಡಿ ಇಬ್ಬರೆ ಸೇರಿ ಕೊಲ್ಲೂರಿನ (ದೇವಾಲಯಕ್ಕಿಂತ 1ಕಿ.ಮಿ.ಮೊದಲೇ ಈ ನಿಲ್ದಾಣ ಇದೆ) ಮಾಸ್ತಿಕಟ್ಟೆಯಲ್ಲಿ ಇಳಿದು ಕಾಲಿಗೆ ಚಕ್ರಕಟ್ಟಿಕೊಂಡವರ ಥರ ನಡೆಯತೊಡಗಿದೆವು, ಮುಂದೆ, ಮುಂದೆ ಹೋದಾಗ ದಟ್ಟಾರಣ್ಯದಲ್ಲಿ ಮರಗಳನ್ನು ಬಿಟ್ಟರೆ ಮನುಷ್ಯರೆಲ್ಲೂ ಕಾಣಿಸುತ್ತಲೆ ಇಲ್ಲ, ದಾರಿ ಮೊದಲೇ ಗೊತ್ತಿಲ್ಲ, ಯಾರಲ್ಲಿ ಕೇಳುವುದು, ಅಲ್ಲೊಂದು ದನ ಮೇಯುತ್ತಿತ್ತಾದರೂ ಅದಕ್ಕೆ ಮಾತು ಬರುವುದಿಲ್ಲವಲ್ಲ ಅಂತ ತಮಾಷೆ ಮಾಡುತ್ತ ಅಂದಾಜಿಗೆ ಗುಂಡು ಹೊಡೆದಂತೆ ನಡೆಯುತ್ತಾ ಸಾಗಿದೆವು.

ಸುಮಾರು ಏಳೆಂಟು ಕಿ.ಮಿ.ಕ್ರಮಿಸಿದ ನಂತರ ಆ ಅಭಯಾರಣ್ಯದೊಳಗೊಂದು ಮನೆ ಕಾಣಿಸಿತು, ಅಯ್ಯಬ್ಬಾ ಅಂತ ನಿಟ್ಟುಸಿರು ಬಿಟ್ಟು ಆ ಪ್ರದೇಶಕ್ಕೆ ತಲುಪಿದೆವು, (ಅಲ್ಲಿ ನಾಲ್ಕಾರು ಮನೆಗಳಿದ್ದವು, ನಮಗೆ ಆಶ್ಚರ್ಯ ವಾಗಿದ್ದು ಯಾವುದೆಂದರೆ, ಈ ಅಭಯಾರಣ್ಯದಲ್ಲಿ ಇವರು ಇಷ್ಟು ವರ್ಷ ಹೇಗೆ ಕಳೆದಿರಬಹುದು ಅಂತ, ಅವರ ಜೀವನದ ಬಗ್ಗೆ, ಅಕ್ಕಿ,ಸಾಮಾನು ಖರೀದಿ ಕುರಿತು ವಿಚಾರಿಸಿದಾಗ ಹೇಳಿದರು, ಏನೇ ಬೇಕಿದ್ದರೂ ಹತ್ತು ಕಿ.ಮಿ.ನಡೆದು ಕೊಲ್ಲೂರಿಗೆ ಬರಬೇಕಂತೆ.

ಆ ಕಾರಣಕ್ಕಾಗಿಯೇ ಮಕ್ಕಳು ಅರ್ಧಂಬರ್ಧ ಓದು ಮುಗಿಸಿ, ಹೋಟೆಲುಗಳಲ್ಲಿ ದುಡಿಯುತ್ತಿರುವುದಾಗಿ ತಿಳಿಸಿದರು. ರಾತ್ರಿ ಆನೆ, ಹುಲಿಗಳ ಕಾಟ ಜೀವ ಕೈಯಲ್ಲಿ ಹಿಡಿದು ಬದುಕು ಸಾಗಿಸಬೇಕು ಎಂದು ಸಂಕ್ಷಿಪ್ತ ವಿವರ ನೀಡಿದ್ದರು) ಆದಾಗಲೇ ಮಧ್ನಾಹ್ನ 2ಗಂಟೆ ದಾಟಿತ್ತು. ಮನೆಯಲ್ಲಿದ್ದವರು ಗಂಜಿ ಊಟ ಪೂರೈಸಿ, ಎಲೆ ಅಡಿಕೆ ತಿನ್ನುತ್ತಿದ್ದರು.

ನಾವು ಹೋಗುತ್ತಲೇ ಆತ್ಮೀಯತೆಯಿಂದ ನಮ್ಮನ್ನು ಬರಮಾಡಿಕೊಂಡು ವಿಚಾರಿಸತೊಡಗಿದರು. (ಆ ಸಂದ ರ್ಭದಲ್ಲಿ ನಕ್ಸಲೀಯರ ಹಾವಳಿ, ಓಡಾಟ ಆರಂಭವಾಗಿದ್ದರಿಂದ ನಮ್ಮನ್ನು ಅನುಮಾನದ ಮೇಲೆ ಮಾತನಾಡಿ ಸಿತೊಡಗಿದ್ದರು) ನಂತರ ಅವರಲ್ಲಿ ಈ ಊರಿಗೆ ಏನು ಹೆಸರು ಅಂತ ಕೇಳಿದೆವು, ಇದು ಬಾವಡಿ ಅಂದಾಗ, ಓಹ್ ಸರಿಯಾದ ಜಾಗಕ್ಕೆ ಬಂದಿದ್ದೆವು ಅಂತ ಒಳಗೊಳಗೆ ಖುಷಿಪಟ್ಟೆವು.

ಜಲಪಾತ (ಆದರೆ ಅವರಿಗೆ ಜಲಪಾತ ಅಂದರೆ ಪಕ್ಕನೆ ತಿಳಿಯಬೇಕಲ್ಲ, ನೀರು ಬೀಳುತ್ತದೆಯಂತಲ್ಲ ಅಂತ ಕೇಳಿದ್ದೇವು) ಇದೆಯಲ್ಲ ಎಲ್ಲಿ ಎಂದಾಗ, ನಮ್ಮ ಮನೆಯಿಂದ ಸ್ವಲ್ಪವೇ ದೂರದಲ್ಲಿ ನಾನೇ ನಿಮಗೆ ತೋರಿಸು ತ್ತೇನೆ ಎಂದು ನಮ್ಮ ಜತೆ ಬಂದಿದ್ದರು. ಹದಿನೈದು-ಇಪ್ಪತ್ತು ನಿಮಿಷಗಳ ಬಳಿಕ ನೋಡಿ ಇದೆ ಬಾವಡಿ ಜಲಪಾತ ಎಂದು ತೋರಿಸಿ, ನೋಡಿ ಇನ್ನು ನೀವುಂಟು ಜತೆಗೆ ಜಲಪಾತ ಇದೆ ಅಂತ ಹೊರಟು ಹೋಗಿದ್ದರು.

ತಿಂಗಳಾಗಿದ್ದರಿಂದ ಜಲಧಾರೆಯ ರಭಸ ಕಡಿಮೆ ಇದ್ದಿದ್ದರೂ ಕೂಡ ನಮಗೆ ತುಂಬಾ ಸಂತೋಷವಾಗಿತ್ತು, ಬೃಹದಾಕಾರದ ಬಂಡೆಯ ಎಡೆಯಿಂದ ಬಳಕುತ್ತ ನೆಲಕ್ಕೆ ಬಂದಪ್ಪಳಿಸುವ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಂಡಿದ್ದೆವು, ಸಂಜೆ ಅಲ್ಲಿಂದ ಹೊರಟು ಮನೆಯವರಿಗೆ ಕೃತಜ್ಞತೆ ಹೇಳಿ ಊರಿನತ್ತ ಪ್ರಯಾಣ ಬೆಳೆಸಿದ್ದೆವು...



Thursday, February 21, 2008

ಜೋಧಾ ಯಾರು?


ಇತಿಹಾಸದಲ್ಲಿನ ವಿಷಯಗಳೇ ಹೆಚ್ಚು ಬಾರಿ ವಿವಾದಕ್ಕೆ ಒಳಗಾಗುವುದು, ಅದು ನಿರಂತರ, ಯಾಕೆಂದರೆ ಇತಿಹಾಸ ಅಂದರೆ ಇತಿ-ಹೀಗೆ, ಹಾಸ-ಆಗಿತ್ತು ಎಂಬುದಾಗಿ ಅರ್ಥ. ಆದರೆ ಭಾರತದ ಇತಿಹಾಸದಲ್ಲಿ ನೈಜ ಇತಿಹಾಸ ಕೂಡ ಸಮಾಧಿಯಾಗಿದೆ. ಎಡ ಪಂಥೀಯ, ಬಲುಪಂಥೀಯ ಇತಿಹಾಸಕಾರರ ದೃಷ್ಟಿಕೋನಗಳಿಂದ ಲಭ್ಯವಿರುವ ಇತಿಹಾಸಗಳು ಒಂದೊಂದು ಕಥೆ ಹೇಳುತ್ತವೆ, ನಾವು ಯಾವುದನ್ನು ನಂಬಬೇಕು ಎಂಬ ಗೊಂದಲ ಮಾತ್ರ ನಮಗೆ ಉಳಿಯುವಂತಾದ್ದು.

ರಾಮನೂ ಸುಳ್ಳು, ರಾಮಾಯಣನೂ ಸುಳ್ಳು, ರಾಮ ಸೇತು ಸುಳ್ಳು, ಟಿಪ್ಪು ಕನ್ನಡ ವಿರೋಧಿ, ಅಲ್ಲ ಆತ ಕನ್ನಡ ಪರ, ಕೃಷ್ಣ ದೇವರಾಯನ ಕಾಲದಲ್ಲಿ ಬೀದಿ, ಬೀದಿಗಳಲ್ಲಿ ಚಿನ್ನಾಭರಣ ಮಾರಲಾಗುತ್ತಿತ್ತು, ಇಲ್ಲ ಅವೆಲ್ಲ ಸುಳ್ಳು, ಅವರೆಲ್ಲ ಪುಕ್ಕಲು ರಾಜರಾಗಿ ದ್ದರು, ಪುಲಕೇಶಿ ಪುಕ್ಕಲು ರಾಜನಾಗಿದ್ದ, ತಾಜ್ ಮಹಲ್ ಹಿಂದೂಗಳ ಶಿವ ದೇವಾಲಯವಾಗಿತ್ತು....ಹೀಗೆ ಇತಿಹಾಸದ ಎಲ್ಲವೂ ವಾದ-ವಿವಾದಗಳಿಗೆ ಎಡೆಯಾಗುತ್ತಲೇ ಇರುತ್ತದೆ.

ಇದೀಗ ವಿವಾದಕ್ಕೆ ಗ್ರಾಸವಾಗಿರುವುದು ಜೋಧಾ-ಅಕ್ಬರ್ ಐತಿಹಾಸಿಕ ಕಥೆಯ ಸಿನಿಮಾ. ಈ ಚಿತ್ರದಲ್ಲಿ ಜೋಧಾಳನ್ನು ಅಕ್ಬರನ ಪತ್ನಿಯನ್ನಾಗಿ ಚಿತ್ರಿಸಲಾಗಿದೆ. ಆದರೆ ರಜಪೂತ ಕೆಲವು ಸಂಘಟನೆಗಳು, ಜೋಧಾ ಅಕ್ಬರನ ಪತ್ನಿಯಲ್ಲ, ಪುತ್ರ ಸಲೀಂ(ಜಹಾಂ ಗೀರ್)ನ ಪತ್ನಿ ಎಂಬುದಾಗಿ ಆರೋಪಿಸುತ್ತಿದ್ದಾರೆ.ಆದರೆ ಇತಿಹಾಸ ಪುಟಗಳಲ್ಲಿ ದಾಖಲಾಗಿರುವ ಅಂಶಗಳನ್ನ ಗಮನಿಸಿ:

1542 ಅಕ್ಟೋಬರ್ 1 ರಂದು ಅಂಬರದ ರಾಜ ಬಾರಾಮಲ್‌‌ನ ಪ್ರಥಮ ಪುತ್ರಿಯಾಗಿ ಜನಿಸಿದವಳು ಹೀರಾ ಕುನ್ವರಿ (ಜೋಧಾ) ಇದು ಆಕೆಯ ಮೊದಲ ಹೆಸರು. 1562 ಜನವರಿ 20ರಂದು ಮೊಗಲ್ ದೊರೆ ಅಕ್ಬರ್ ಜೈಪುರ್ ಸಮೀಪದ ಸಾಂಭಾರ್ ಎಂಬಲ್ಲಿ ಹೀರಾ ಕುನ್ವರ್‌‌ಳನ್ನು ಮದುವೆಯಾಗಿದ್ದ. ನಂತರ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ ಬಳಿಕ ಹಿರಾ ಹೆಸರನ್ನು ಮಾರಿಮ್ ಉಜ್ ಜಮಾನಿ ಎಂಬುದಾಗಿ ಬದಲಾಯಿಸಲಾಗಿತ್ತು.

ಈಕೆ ಅಕ್ಬರನ ಆಸ್ಥಾನಕವಿಗಳಲ್ಲಿ ಒಬ್ಬನಾಗಿದ್ದ ಭಗವಾನ್‌‌ದಾಸ್ ತಂಗಿ. ಜೋಧಾ ಅಕ್ಬರನ ಮೂವರು ರಾಣಿಯರಲ್ಲಿ ಒಬ್ಬಳಗಾ ಗಿದ್ದಳು, ಮತ್ತು ಪ್ರಥಮ ರಜಪೂತ ಪತ್ನಿಯಾಗಿದ್ದಳು. 1586ರಲ್ಲಿ ಜಮಾನಿ (ಜೋಧಾ) ಯುವರಾಜ ಸಲೀಂ (ನಂತರದ ಹೆಸರು ಜಹಾಂಗೀರ್) ಮದುವೆ ಏರ್ಪಾಡು ಮಾಡಿ, ಮಾನ್‌‌ಸಿಂಗ್‌‌ನ ತಂಗಿ ಮಾನ್ಮಥಿಯೊಂದಿಗೆ ವಿವಾಹ ನಡೆಸಲಾಗುತ್ತದೆ. ಹೀರಾ(ಜೋಧಾ) 1611ರಲ್ಲಿ ಸಾವನ್ನಪ್ಪಿದ್ದಳು.

ಆಕೆಗಾಗಿ ಜಹಾಂಗೀರ್ 1611ರಲ್ಲಿ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿ ಬಳಿಯ ಫತೆಪುರ್ ಸಿಕ್ರಿಯಲ್ಲಿ ಸ್ಮಾರಕವನ್ನು ಕಟ್ಟಿಸಿದ್ದ. ಆದರೆ ಗೊಂದಲ ಆರಂಭವಾಗಿದ್ದು, ಅಕ್ಬರನ ಜೀವನಚರಿತ್ರೆಯ ಅಕ್ಬರ್‌‌ನಾಮಾದಲ್ಲಾಗಲಿ, ಜಹಾಂಗೀರ್‌‌ನ ತುಜ್ಕ್ ಎ ಜಹಾಂಗೀರಿಯಲ್ಲಾಗಲಿ ಎಲ್ಲೂ ಜೋಧಾಬಾಯ್ ಎಂಬ ಹೆಸರು ನಮೂದಾಗಿಲ್ಲ, ಎಲ್ಲೆಡೆ ಮಾರಿಮ್ ಉಜ್ ಜಮಾನಿ ಅಂತಲೇ ಉಲ್ಲೇಖಿಸಲಾಗಿದೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಪ್ರೊ.ಶಿರನ್ ಮಾನ್ವಿ ಅವರ ಪ್ರಕಾರ, 18-19ನೇ ಶತಮಾನದ ಇತಿಹಾಸಕಾರರು ಪ್ರಥಮವಾಗಿ ಜೋಧಾಬಾಯ್ ಹೆಸರನ್ನು ನಮೂದಿಸಿದ್ದರು ಎನ್ನುತ್ತಾರೆ.

ಪಾಟ್ನಾ ಖುದಾ ಭಕ್ಷ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ, ಇತಿಹಾಸ ತಜ್ಞ ಇಮ್ತಿಯಾಜ್ ಅಹ್ಮದ್ ಅವರು, ಅಕ್ಬರನ ಪತ್ನಿ ಜೋಧಾ ಎಂಬುದಾಗಿ ಪ್ರಥಮವಾಗಿ ನೌಕಾಪಡೆಯ ಕಿರಿಯ ಅಧಿಕಾರಿ ಕರ್ನಲ್ ಜೆಮ್ಸ್ ಟೋಡ್ ಅವರು ಅನ್ನಾಲ್ಸ್ ಅಂಡ್ ಆಂಟಿಕ್ವಿಟಿಸ್ ಆಫ್ ರಾಜಸ್ಥಾನ್ ಪುಸ್ತಕದಲ್ಲಿ ಉಲ್ಲೇಖಿಸಿದ್ದರು. ಆದರೆ ಟೋಡ್ ಒಬ್ಬ ಇತಿಹಾಸಕಾರನಲ್ಲ, ಜನಪದ ಸಾಹಿತ್ಯದ ಅಂಶ ಪಡೆದು ದಾಖಲಿಸಿದ್ದಾನೆ ಎಂಬುದಾಗಿ ಹೇಳುತ್ತಾರೆ.

ಅಲ್ಲದೇ ಮೊಗಲ್ ಎ ಅಜಾಮ್ ಎಂಬ ಸಿನಿಮಾದ ಬಳಿಕ ಜೋಧಾ-ಅಕ್ಬರ್ ಹೆಸರು ಹೆಚ್ಚು ಜನಪ್ರಿಯವಾಯಿತು. ಜೋಧಾ ಬಾ ಯ್ ಎಂಬುದು ಅಕ್ಬರನ ರಜಪೂತ ರಾಣಿಯ ಹೆಸರಲ್ಲ, ಇದು ಜಹಾಂಗೀರನ ಪತ್ನಿಯ ಎಂಬುದು ಎಂ.ಎನ್.ಫಾರುಕಿ ವಾದ. ಜೋಧಾ ಬಾಯ್ ಅಥವಾ ಜೋಧಿ ಬೀಬಿ ಉದಯ ಸಿಂಗ್‌‌ನ ಪುತ್ರಿ ಮತ್ತು ಜಹಾಂಗೀರನ ಪತ್ನಿ ,ಖುರ್ರಮ್‌‌ನ (ಷಹಜಹಾನ್) ತಾ ಯಿ ಎಂಬುದು ಇತಿಹಾಸಕಾರ ಗೋಸಾಯ್ ವಿವರಣೆ.ಜಹಾಂಗೀರ್ ಜನಿಸಿದ್ದು 1569 ಅಗೋಸ್ಟ್ 31 ರಲ್ಲಿ, ಜೋಧಾ ಜನಿಸಿದ್ದು, 1542ರಲ್ಲಿ ಈ ಅಂಕಿ-ಅಂಶದ ಪ್ರಕಾರ ನೋಡಿದರೂ ಜೋಧಾ ಜಹಾಂಗೀರ್‌‌ಗಿಂತ 27ವರ್ಷ ಹಿರಿಯವಳು.

ಆದರೂ ಇತಿಹಾಸಕಾರರಲ್ಲಿ ಅನೇಕರೂ ಜೋಧಾಬಾಯ್ ಅಕ್ಬರನ ಪತ್ನಿ ಎಂಬುದಾಗಿಯೇ ದಾಖಲಿಸಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು ಎಂದು ನಿರ್ಧರಿಸುವುದು ಇನ್ನೂ ಗೊಂದಲದ ವಿಷಯವಾಗಿದೆ.

ಅಮೆರಿಕಕ್ಕೆ ಸಿಂಹಸ್ವಪ್ನವಾದ ಕ್ಯಾಸ್ಟ್ರೋ


ಕ್ಯೂಬಾದ ಕ್ರಾಂತಿಕಾರಿ ಫಿಡಲ್ ಕ್ಯಾಸ್ಟ್ರೋ ಅವರು (ಫೆ19) ಅಧಿಕೃತವಾಗಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕ್ಯಾಸ್ಟ್ರೋ ಅವರ ಜೀವನಗಾಥೆಯೇ ರೋಮಾಂಚಕವಾದದ್ದು, 1926,ಆಗೋಸ್ಟ್ 13ರಂದು ಶ್ರೀಮಂತ ಮನೆತನದಲ್ಲಿ ಹುಟ್ಟಿದ ಫಿಡಲ್ ಕ್ಯಾಥೋಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಬಳಿಕ ಹವಾನ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದರು.

ಬೇಸ್ ಬಾಲ್ ಆಟಗಾರನಾಗಿದ್ದ ಕ್ಯಾಸ್ಟ್ರೋ, ಅಮೆರಿಕ ನಡೆಸುವ ಲೀಗ್‌‌ ಪಂದ್ಯಾಟದಲ್ಲಿ ಮಹತ್ತರವಾದದ್ದನ್ನು ಸಾಧಿಸಬೇಕು ಎನ್ನುವ ಕನಸು ಕಂಡಿದ್ದರು.

ಆದರೆ ನಂತರ ಅವರು ಕ್ರಾಂತಿಕಾರಿ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸುವಂತಾಯಿತು. ದ್ವೀಪಪ್ರದೇಶವಾದ ಕ್ಯೂಬಾ ದಲ್ಲಿನ ವಸಾಹತುಶಾಹಿ ವ್ಯವಸ್ಥೆ ಹಾಗೂ ಸರ್ವಾಧಿಕಾರಿ ಪುಲ್‌‌ಜೆನ್ಸಿಯೋ ಬಾಟಿಸ್ತಾ ವಿರುದ್ಧ ಚೆಗವೇರಾ (ಲ್ಯಾಟಿನ್ ಅಮೆರಿಕದ ಲ್ಲಿನ ಗೆರಿಲ್ಲಾ ಯುದ್ಧದ ಕ್ರಾಂತಿಕಾರಿ), ರೌಲ್ ಕ್ಯಾಸ್ಟ್ರೋ , ಫಿಡೆಲ್, ಕ್ಯಾಮಿಲಿಯೋ (1959ರಲ್ಲಿ ವಿಮಾನದುರಂತದಲ್ಲಿ ಬಲಿ), ಫ್ರ್ಯಾಂಕ್ ಪಾಯಸ್ ನೇತೃತ್ವದ ತಂಡ ಕೇವಲ 82 ಜನರ ಗುಂಪಿನೊಂದಿಗೆ ಸಶಸ್ತ್ರ ಹೋರಾಟಕ್ಕೆ ಧುಮುಕಿದ್ದರು.

ಈ ವಿಶ್ವದ ಮಹಾನ್ ಪ್ರಜಾಪ್ರಭುತ್ವ ದೇಶ, ಮಾನವ ಹಕ್ಕುಗಳ ಏಕೈಕ ಸಂರಕ್ಷಕ , ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ಹೋರಾಡುವ ದೇಶ ಎಂದು ಬಾಯಿಬಡಿದುಕೊಳ್ಳುತ್ತಿರುವ ರಕ್ತಪಿಪಾಸು, ಅಮೆರಿಕ ಇಂತಹ ಗೋ ಮುಖ ವ್ಯಾಘ್ರತನ, ಕಪಟ ನಾಟಕದ ಮೂಲಕ ಅದು ಎಸಗಿರುವ ಅಪರಾಧಗಳ ಪಟ್ಟಿಯೇ ಆಘಾತಕಾರಿಯಾದದ್ದು.ಅಮೆರಿಕದ ರಕ್ತಪಿಪಾಸು, ಸಾಮ್ರಾಜ್ಯಶಾಹಿ ಕಬಂಧಬಾಹುವಿಗೆ ವೆನಿಜುಲಾ, ಪೆರಾಗ್ವೆ, ಕೋಸೋರಿಕಾ, ಅರ್ಜೈಂಟೀನಾ, ಬೊಲಿವಿಯಾ, ವಿಯೆಟ್ನಾಂ, ಕಾಂಬೋಡಿಯಾ, ಚಿಲಿ, ಸಾಲ್ವೋಡಾರ್, ಲಿಬಿಯಾ, ಲೆಬನಾನ್, ಕ್ಯೂಬಾ, ಇರಾನ್, ಇರಾಕ್, ಅಷ್ಟೇ ಅಲ್ಲ ನಮ್ಮ ದೇಶದಲ್ಲೂ ವಿಚ್ಛಿದ್ರಕಾರಿ ಶಕ್ತಿಗಳಿಗೆ ಹಾಗೂ ಪ್ರತ್ಯೇಕವಾದಿಗಳಿಗೆ, ಕಟ್ಟಾ ಎಡಪಂಥಿ ಮತ್ತು ಬಲಪಂಥಿಯ ಸಂಘಟನೆಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಸದಾ ದೇಶದಲ್ಲಿ ಅರಾಜಕತೆಯನ್ನು ಹುಟ್ಟುಹಾಕುವಲ್ಲಿ ನಿಸ್ಸೀಮವಾಗಿದೆ.

ಅಮೆರಿಕದ ಸಾಮ್ರಾಜ್ಯಶಾಹಿತನಕ್ಕೆ ಅದು ನಡೆಸಿದ ಕುಟಿಲ ರಾಜನೀತಿಯಿಂದಾಗಿ ಲಕ್ಷಾಂತರ ಮಂದಿ ಹತರಾಗಿದ್ದಾರೆ, ಮಾನವಹಕ್ಕು ಉಲ್ಲಂಘನೆ, ಅಂತಾರಾಷ್ಟ್ರೀಯ ಭಯೋತ್ಪಾದನೆ ಎಂದು ಬೊಬ್ಬಿರುವ ಅಮೆರಿಕದ ಎಸಗಿರುವ ಕರ್ಮಕಾಂಡಕ್ಕೆ ಅದ್ಯಾವ ಶಿಕ್ಷೆಗೆ ಒಳಪಡಿಸಬೇಕು.ಇಂತಹ ಸಾಮ್ರಾಜ್ಯಶಾಹಿ ದೇಶದ ಅಬ್ಬರ, ಕೊಲೆ ಪ್ರಯತ್ನವನ್ನೆಲ್ಲಾ ಮೆಟ್ಟಿನಿಂತು ಸೆಡ್ಡು ಹೊಡೆದ ಏಕೈಕ ವ್ಯಕ್ತಿಯೆಂದರೆ ಫಿಡಲ್ ಕ್ಯಾಸ್ಟ್ರೋ. ಕ್ಯೂಬಾವನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆ ಇಂದಿಗೂ ನೆರವೇರಿಲ್ಲ.

ಕ್ಯಾಸ್ಟ್ರೋವನ್ನು ಹತ್ಯೆಗೈಯಲು ಅಮೆರಿಕದ ಸಿಐಎ ಸುಮಾರು 600ಕ್ಕೂ ಅಧಿಕ ಬಾರಿ ಪ್ರಯತ್ನಿಸಿತ್ತು!!.ಆದರೂ ಕ್ಯಾಸ್ಟ್ರೋ ಅವೆಲ್ಲ ಅಪಾಯದಿಂದ ಪಾರಾಗಿ ಅಮೆರಿಕದ ನಿದ್ದೆಗೆಡಿಸಿದ ಕ್ರಾಂತಿಕಾರಿಯಾಗಿದ್ದರು. 50 ವರ್ಷಗಳ ಕಾಲ ಕ್ಯೂಬಾವನ್ನು ಕೆಚ್ಚೆದೆಯಿಂದ ಮುನ್ನೆಡಿಸಿದ ಕ್ಯಾಸ್ಟ್ರೋ ದೇಶದಲ್ಲಿ ಸಾಕ್ಷರತೆ, ಮನೆ, ಆರೋಗ್ಯ ಎಲ್ಲವೂ ಅಭಿವೃದ್ಧಿ ಪಥದಲ್ಲಿದ್ದರೂ ಕೂಡ, ಇಂದಿಗೂ ಕ್ಯೂಬಾ ಆರ್ಥಿಕವಾಗಿ ತುಂಬಾ ದುರ್ಬಲವಾಗಿದೆ, ಮತ್ತೊಂದೆಡೆ ಸ್ವಾತಂತ್ರ್ಯಕ್ಕಾಗಿ ಹಪಹಪಿಸುವವರ ಸಂಖ್ಯೆಯೂ ಕಡಿಮೆಯಾಗಿಲ್ಲ.

ಇದೆ ವಿಷಯದಲ್ಲಿ ಫಿಡೆಲ್ ಅವರನ್ನು ಹಳಿಯುವವರೂ ಬಹಳಷ್ಟು ಮಂದಿ ಇದ್ದಾರೆ. ಫಿಡೆಲ್ ಸರ್ವಾಧಿಕಾರತನದಿಂದಾಗಿ ಕ್ಯೂಬಾ ವನ್ನು ಆರ್ಥಿಕ ದುಸ್ಥಿತಿಗೆ ತಳ್ಳಿದ್ದಾರೆ ಎಂಬುದಾಗಿ ಆಪಾದಿಸಲಾಗುತ್ತಿದೆ. ಆದರೆ ಅಮೆರಿಕದಂತಹ ರಕ್ತ ಪಿಪಾಸು ದೇಶಕ್ಕೆ ಸಿಂಹ ಸ್ವಪ್ನವಾಗಿ ಒಂದು ದೇಶವನ್ನು ಸತತ 50 ವರ್ಷಗಳ ಕಾಲ ಮುನ್ನೆಡೆಸುವುದು ಸುಲಭದ ಮಾತಲ್ಲ. ಕ್ಯಾಸ್ಟ್ರೋ ಇನ್ನೊಬ್ಬ ನಾಯ ಕನನ್ನು ಬೆಳೆಸದಿರಬಹುದು. ಆತ ತನ್ನ ದೇಶದ ಜನರಿಗಾಗಿ ಹಾಗೂ ಜನರು ಈತನಿಗೆ ನೀಡಿದ ಬೆಂಬಲ ಮಾತ್ರ ಅಮೋಘವಾದದ್ದು.

ಸಮಾಜವಾದಿ, ಸಾಮ್ರಾಜ್ಯಶಾಹಿ ಅರ್ಥಹೀನ ಎನಿಸಿಕೊಂಡರೂ ಕೂಡ ,ಅಮೆರಿಕದಂತಹ ದೇಶ ಸೋಗಿನ ಮಾತು ಹಾಗೂ ಬಲವಂತದ ಆಕ್ರಮಣ, ಕುಯುಕ್ತಿಯಿಂದಾಗಿ ಇಂದು ನೂರಾರು ದೇಶಗಳು ಆಂತರಿಕ ಕಲಹದಿಂದ ಹೊತ್ತಿ ಉರಿಯುತ್ತಿವೆ ಎಂಬುದನ್ನು ಗಮನಿಸಬೇಕು. ಅದು ಪಕ್ಕಾ ವ್ಯಾವಹಾರಿಕವಾಗಿ ವರ್ತಿಸುತ್ತಿದೆ. ಕ್ಯೂಬಾ ಫಿಡೆಲ್ ಅವರ ಸರ್ವಾಧಿಕಾರದಿಂದ ನರಳಿದರೆ, ಅಮೆರಿಕದ ಸಾಮ್ರಾಜ್ಯಶಾಹಿ ವ್ಯವಸ್ಥೆಗೆ ನೂರಾರು ದೇಶಗಳು ಬಲಿಪಶುವಾಗಿದೆಯಲ್ಲ ಅದಕ್ಕೆ ಏನೆನ್ನೋಣ ?.

ಫಿಡೆಲ್, ಚೆಗುವೆರಾ, ರೌಲ್ ಅವರು ಸಣ್ಣ ಗುಂಪಿನೊಂದಿಗೆ ಸಂಘಟಿಸಿದ ಗೆರಿಲ್ಲಾ ಪಡೆಯ ಯುದ್ಧ ಹಾಗೂ ಜನತೆಯ ಸಹಕಾ ರದಿಂದ ಕ್ಯೂಬಾದ ಸರ್ವಾಧಿಕಾರಿ ಬತಿಸ್ತಾ ಅವರಿಂದ 1959 ಜನವರಿ 1ರಂದು ಮುಕ್ತಿಗೊಳಿಸಿತ್ತು. ಫಿಡೆಲ್ ಸತತ 15 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. 1960ರಲ್ಲಿ ಫಿಡೆಲ್ ದೇಶದ ಅಧಿಕಾರದ ಗದ್ದುಗೆ ಏರಿದ ಮೇಲೆ ಅಮೆರಿಕದ ಸಹಾಯವನ್ನು ತಿರಸ್ಕರಿಸಿದ್ದರು. ತದನಂತರ ಅಮೆರಿಕದ ಕ್ಯೂಬಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಸಕ್ಕರೆಯನ್ನು ನಿಷೇಧಿಸಿತ್ತು.

ಈ ಸಂದರ್ಭದಲ್ಲಿ ಎಲ್ಲ ರೀತಿಯಿಂದಲೂ ಸಹಾಯ ನೀಡಿದ್ದು ರಷ್ಯಾ.ಇಂದು ಹೆಚ್ಚು ಕಡಿಮೆ ಜಗತ್ತಿನ ಅನೇಕ ದೇಶಗಳು ಅಮೆರಿಕದ ದಾಸರಾಗಿವೆ. ಜಾಗತೀಕರಣದ ಹೆಸರಲ್ಲಿ ಅದಾಗಲೇ ತಳವೂರಿ, ತನಗೆ ಬೇಕಾದ ಹಾಗೆ ವರ್ತಿಸುವುದು ಅಮೆರಿಕಕ್ಕೆ ಚೆನ್ನಾಗಿ ಗೊತ್ತು. ಅಮೆರಿಕವೇ ಬೆಳೆಸಿದ ಭಯೋತ್ಪಾದನೆ ಇಂದು ಆ ದೇಶವನ್ನು ಬಲಿ ತೆಗೆಯಲು ಹೊರಟಿದೆ. ಸಿಐಎ ಪ್ರಪಂಚದಲ್ಲಿ ನಡೆಸಿದ ಸಂಚುಗಳ ಜಗಜ್ಜಾಹೀರಾಗಿವೆ.

ಅಮೆರಿಕ ಎಕ್ಸಪಿರಿಯನ್ಸ್ ಬ್ಲಾಗ್‌‌ನಲ್ಲಿ ಫಿಡೆಲ್ ಕ್ಯಾಸ್ಟ್ರೋ ಕುರಿತ ಬರಹಕ್ಕೆ ಕ್ಯಾಲಿಫೋರ್ನಿಯಾದಿಂದ ಪ್ರತಿಕ್ರಿಯಿಸಿದ ಓದುಗರೊ ಬ್ಬರ ಪ್ರತಿಕ್ರಿಯೆಯನ್ನು ಇಲ್ಲಿ ಬಳಸಿಕೊಂಡಿದ್ದೇನೆ.
( I have gone to Cuba 4 different times under licensed travel. My experiences completely flew in the face of what I expected from what I now know as U.S. propaganda. The results of the revolution are powerful and wonderful. Cuba is a place where you can experience a society without racism. The population is literate, nearly 100% -- much higher than ours. Education is free -- tuition, books, and a stipend -- for all levels, including medical school, law school, art school, whatever. Even adults who want to change careers re-enter the university mid-life, free. I experienced freedom of religion -- Fidel is open to all things,

as long as they are not against the values of social justice that are the heart of the revolution. Your approach at PBS has been slanted against what I have come to know is the truth. Cuba is, however, a threat to the U.S. way of doing business in the world -- the threat of a good idea, said one international scholar.Cuba IS actually an ownership society -- everyone has a home, there are no homeless. They pay the government 10% of their income toward ownership. Of course, there is economic poverty, the result, they believe, of our 40+ years of blockade and economic warfare.

We refuse to let them pay reparation for the land they nationalized -- all other nations have done so, and now have business partnerships on the island. The bottom line -- that Cuba has the lowest infant mortality rate and the highest literacy rate in the Western Hemisphere -- speaks well for Fidel. Of course he is strong. He is brilliant, idealistic, charismatic, a leader loved by many worldwide... when the U.S. stops sending millions of $s to fund mercenaries on the island to work against the revolution, then Cubans will be able to have greater political freedoms. They now have human rights (education, jobs, food, shelter, health care) -- now they wait for greater political rights, when the playing field of their sovereignty is respected.)
G.R.A.Encinitas, California


Wednesday, February 13, 2008

''ಪ್ರೇಮಲೋಕ'' ದ ವಿಸ್ಮಯ..!!


ಅಲ್ಲಿ ಎಲ್ಲವೂ ಇದೆ, ಕೊಂಚ ಮುನಿಸು, ಕೊಂಚ ಜಗಳ, ಈರ್ಷ್ಯೆ, ಮತ್ಸರ, ಬಾಹುಕತೆ, ಧಾರಾಳತನ, ಸ್ನೇಹಪರತೆ, ಹೃದಯ ವೈಶಾಲ್ಯತೆ, ನಿಷ್ಕಲ್ಮಶವಾದ ಹಾಗೂ ವಂಚನೆ, ಮದುವೆ, ವಿಚ್ಛೇದನ ಹೀಗೆ ಎಲ್ಲವೂ, ಇದೆ ಅಲ್ಲವೇ ''ಪ್ರೇಮಲೋಕ''..ಪ್ರೀತಿ ಕುರುಡು ಎಂಬ ಮಾತೊಂದಿದೆ, ಪ್ರೀತಿಯೇ ಹಾಗೆ ಅದು ಜಾತಿ, ಅಂತಸ್ತು, ವಯಸ್ಸು ಎಲ್ಲವನ್ನೂ ದಾಟಿ ಪ್ರೇಮಾಲಾಪದಲ್ಲಿ ಅವೆಲ್ಲವೂ ಕೊಚ್ಚಿಹೋಗಿ ಅಲ್ಲಿ ಪ್ರೇಮದ ಅಮೃತಧಾರೆ ಹರಿಯುತ್ತಿರುತ್ತದೆ.....

ವಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪಕ್ಕನೆ ನೆನಪಿಗೆ ಬಂದದ್ದೇ , ಯಶೋಧರ ಚರಿತೆ...ಇತಿಹಾಸ ಹಾಗೂ ಪುರಾಣ ಸೇರಿದಂತೆ ಕನ್ನಡದ ಕಾವ್ಯ ಪರಂಪರೆಯಲ್ಲಿ ಇಂತಹ ಅದ್ಭುತ ಪ್ರೇಮಕಾವ್ಯಗಳು ಹೇರಳವಾಗಿವೆ. ಪ್ರೀತಿ ಕುರುಡು ಮತ್ತು ಅದು ಎಲ್ಲವನ್ನೂ ಮೀರಿ ಹೇಗೆ ಪ್ರೇಮಪಾಶದೊಳಕ್ಕೆ ಬಂಧಿಯಾಗುತ್ತಾರೆ ಎಂಬುದಕ್ಕೆ ಕನ್ನಡದ ರನ್ನತ್ರಯರಲ್ಲಿ ಒಬ್ಬನಾದ ಜನ್ನ ಕವಿಯ ಯಶೋಧರ ಚರಿತೆ ಉತ್ತಮ ಪ್ರೇಮ ಕಾವ್ಯವಾಗಿದೆ.

ಜನ್ನ ಕವಿ ರಚಿಸಿದ ಯಶೋಧರ ಚರಿತೆ ಸಂಕಲ್ಪ ಹಿಂಸೆ ಕೃತಿಯ ಕೇಂದ್ರ ಬಿಂದುವಾದರೂ ಕೂಡಾ ಅದು ಈಗಲೂ ಕಾಡುವ ಸುಂದರವಾದ ಪ್ರೇಮ ಕಥನ...ಯಶೋಧರ ರಾಜನ (ಯಕ್ಷಗಾನದ ಖ್ಯಾತ ಭಾಗವತರಾದ ದಿ.ಪಿ.ಕಾಳಿಂಗ ರಾವ್ ಅವರ ಅಮೃತಮತಿ ಯಕ್ಷಗಾನವೂ ಕೂಡ ಬಹಳಷ್ಟು ಹೆಸರು ಗಳಿಸಿತ್ತಲ್ಲದೆ, ಕಾಳಿಂಗ ರಾವ್ ಅವರ ಕಂಚಿನ ಕಂಠದಿಂದ ಹೊರಹೊಮ್ಮುತ್ತಿದ್ದ ಅದರಲ್ಲಿನ ರೂಪಕ ರಾಗಗಳು ಕೇಳುಗರ ಮತ್ತೇರಿಸುತ್ತಿತ್ತು, ಆ ಪದಗಳು ಈಗಲೂ ಕಿವಿಯಲ್ಲಿ ರಿಂಗಣಿಸುತ್ತದೆ)
ಪತ್ನಿ, ರಾಣಿ ಅಮೃತಮತಿ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದ ಆಕೆಗೆ ಸಕಲ ಐಶ್ವರ್ಯವೂ ಇದ್ದಿತ್ತು. ಆದರೆ ಅಂತಹ ಚೆಲುವಿನ ಅಮೃತಮತಿಗೆ, ಅರಮನೆಯ ಪಕ್ಕದಿಂದ ತೇಲಿಬರುತ್ತಿದ್ದ ಕೊಳಲನಾದ ಆಕೆಯ ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸುತ್ತದೆ. ರಾಗದ ಜಾಡನ್ನು ಹಿಡಿದು ಅರಸುತ್ತ ಬಂದ ಆಕೆಗೆ ಕಾಣಸಿಕ್ಕಿದ್ದು, ಅರಮನೆಯ ಮಾವುತ.

ರೂಪದಿಂದ ಚೆಲುವನಲ್ಲದ್ದರೂ ಆತನ ಕೊಳಲಿನಿಂದ ಹೊರಹೊಮ್ಮುವ ರಾಗ ಅಮೃತಮತಿಯನ್ನು ಬಿಟ್ಟುಬಿಡದೆ ಕಾಡುತ್ತೇ, ಈ ನಾದಕ್ಕೆ ಸೋತ ರಾಣಿ ಅಮೃತಮತಿ ಮಾವುತನಿಗೆ ಮನಸ್ಸು ಮತ್ತು ದೇಹವನ್ನೂಪ್ಪಿಸುತ್ತಾಳೆ. ಹೀಗೆ ಮಾವುತನೊಂದಿಗೆ ಅಮೃತಮತಿ ಪ್ರೇಮ ಸಲ್ಲಾಪ ನಿರಂತರವಾಗಿ ನಡೆಯುತ್ತಿರುತ್ತದೆ. ಒಮ್ಮೆ ರಾಜ ಅಮೃತಮತಿಯನ್ನು ಹಿಂಬಾಲಿಸಿ ಬಂದಾಗ, ಆತ ಕಂಡದ್ದು, ಮಾವುತನ ತೋಳತೆಕ್ಕೆಯಲ್ಲಿ ಬಂಧಿಯಾಗಿದ್ದ ರಾಣಿ ಅಮೃತಮತಿಯನ್ನ!!, ಆ ಕ್ಷಣದಲ್ಲೇ ಆಕೆಯನ್ನು ಕೊಲ್ಲಬೇಕೆಂದು ಸಂಕಲ್ಪಿಸುತ್ತಾನೆ, ಆದರೆ ಜಿನ ಧರ್ಮ ಆತನನ್ನ ತಡೆಯುತ್ತೆ, ಆಕೆಯ ವಿಷಯ ತಿಳಿದೂ ಯಶೋಧರ ಸುಮ್ಮನಿರುತ್ತಾನೆ.

ಆದರೆ ರಾಜನ ತಾಯಿ ರಾಜಮಾತೆ ಚಂದ್ರಮತಿಗೆ ಮಗನ ಬೇಗುದಿ ತಿಳಿಯುತ್ತೆ, ಸಂಕಲ್ಪ ಹಿಂಸೆಯನ್ನು ನಿವಾರಿಸಲು ಹಿಟ್ಟಿನ ಕೋಳಿ ಬಲಿ ಕೊಡಲು ನಿರ್ಧರಿಸುತ್ತಾರೆ. ಆದರೆ ಬಲಿಕೊಡುವ ಸಂದರ್ಭದಲ್ಲಿ ಹಿಟ್ಟಿನ ಕೋಳಿ ಒಳಗೆ ಸೇರಿಕೊಂಡಿದ್ದ ಪ್ರೇತಾತ್ಮವೊಂದು ಜೀವತಳೆದು ಕಿರುಚಿಕೊಳ್ಳುತ್ತದೆ. ಅದು ಮತ್ತೆ ಸಂಕಲ್ಪ ಹಿಂಸೆಯಾಗಿ ಕಾಡತೊಡಗುತ್ತದೆ. ಮುಂದೆ ಯಶೋಧರ ಮತ್ತು ಚಂದ್ರಮತಿ ಪಶು-ಪಕ್ಷಿ ನಾನಾ ವಿಧದಲ್ಲಿ ಜನ್ಮವೆತ್ತಿ , ಅಂತಿಮವಾಗಿ ಅಭಯ ರುಚಿ ಹಾಗೂ ಅಭಯಮತಿ ಎಂಬ ಅಣ್ಣ-ತಂಗಿಯರಾಗಿ ಹುಟ್ಟುತ್ತಾರೆ.

ಅದೇ ರೀತಿ ಜನ್ನನ ಅನಂತನಾಥ ಪುರಾಣ, 13ನೇ ಶತಮಾನದ ದೇವ ಕವಿಯ ಕುಸುಮಾವಳಿ, ನೇಮಿಚಂದ್ರನ ಲೀಲಾವತಿ, ಬಾಣನ ಕಾದಂಬರಿ, ಸುವಿಂಧುವಿನ ವಾಸವದತ್ತೆ, ಬೌದ್ಧ ಸಾಹಿತ್ಯದ ಮಣಿಚೋರ ಜಾತಕ, ಶುಭೆಯ ಕಥೆ, ಮಹಾಭಾರತದಲ್ಲಿನ ನಳದಮಯಂತಿ, ಕನಕದಾಸರ ಮೋಹನ ತರಂಗಿಣಿ ಸೇರಿದಂತೆ ದೇಶಿಯ ಮತ್ತು ಪೌರಾತ್ಯ ಸಾಹಿತ್ಯಗಳ ಕಾವ್ಯ ಪ್ರಪಂಚದಲ್ಲಿ ಇಂತಹ ಹಲವಾರು ಪ್ರೇಮ ಕಾವ್ಯಗಳು ದೊರೆಯುತ್ತದೆ.