Sunday, October 21, 2007

ದತ್ತ ಪೀಠ ವಿವಾದದ ಸುತ್ತ


ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯಲ್ಲಿ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಸೇರಿದಂತೆ ಸಂಘ ಪರಿವಾರ ಮತ್ತೆ ಬಿಗುಪಟ್ಟು ಹಿಡಿದಿದೆ.ಆದರೆ ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡಬಾರದು ಎಂದು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ಫರ್ಮಾನು ಹೊರಡಿಸಿದ್ದಾರೆ.

ದೇಶದ ಶ್ರದ್ಧಾ ಕೇಂದ್ರಗಳು, ಜಾತಿ, ಒಲೈಕೆ, ಹಿಂದುತ್ವದಂತಹ ವಿಷಯಗಳು 'ರಾಜಕೀಯ ಪಕ್ಷ' ಗಳ ಓಟ್ ಬ್ಯಾಂಕ್‌ನ ಪ್ರಮುಖ 'ದಾಳ' ವಾಗಿ ಬಿಟ್ಟಿವೆ ಎನ್ನುವುದಕ್ಕೆ ನಡೆಯುತ್ತಿರುವ ಘಟನೆಗಳು ಮತ್ತಷ್ಟು ಪುಷ್ಠಿ ನೀಡುತ್ತಿವೆ. ಬಾಬಾಬುಡನ್ ಗಿರಿ ಬಡ ಹಿಂದು ಮತ್ತು ಮುಸ್ಲಿಮರ ಧಾರ್ಮಿಕ ಕೇಂದ್ರವಾಗಿತ್ತು.ಹಿಂದು ಧರ್ಮದ ಕಂದಾಚಾರಗಳ ವಿರುದ್ಧ ಸಿಡಿದೆದ್ದ ಚಾರುವಾಕರಂತೆ,ಮುಸ್ಲಿಂ ಕಂದಾಚಾರಗಳನ್ನು ವಿರೋಧಿಸಿದ ಸೂಫಿ ಪಂಥದ ಸಮಾಗಮ ಕ್ಷೇತ್ರ ಇದಾಗಿತ್ತು.

ಇದನ್ನು ಬಡ ಹಿಂದು-ಮುಸ್ಲಿಮರು ಬೇರೆ, ಬೇರೆ ಹೆಸರಲ್ಲಿ ಆರಾಧಿಸುತ್ತಾ,ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ನಿರಾತಂಕವಾಗಿ ಪೂಜೆ,ವಿಧಿವಿಧಾನಗಳು ನಡೆಯುತ್ತಿದ್ದವು.ಮುಸ್ಲಿಮರು ನಾಸಿರುದ್ದೀನ್ ಎಂದು ಅಡ್ಡಬಿದ್ದರೆ, ಹಿಂದುಗಳು ನಾಗನಾಥ ಎಂದು ಆರಾಧಿಸುತ್ತಿದ್ದರು, ಹಿಂದು-ಮುಸ್ಲಿಂ ಎರಡರಲ್ಲೂ ಭೇದ-ಭಾವ,ಕಂದಾಚಾರಾ, ಅಸ್ಪ್ರಶ್ಯತೆಗಳಿಂದ ಕಂಗೆಟ್ಟ ಜಾತಿಗಳಾಗಿದ್ದವು.

ಅಂತಹ ಸಂದರ್ಭದಲ್ಲಿ ಸಹಬಾಳ್ವೆಯನ್ನು ಕಲಿಸಿಕೊಟ್ಟಿದ್ದ ಸೂಫಿ ಪಂಥ 12ನೇ ಶತಮಾನದ ಬಸವಣ್ಣನವರ ಶರಣ ಸಂಪ್ರದಾಯದಂತೆ, ಬಡ ಜನತೆ, ಜಾತಿ-ಧರ್ಮಗಳನ್ನು ಮೀರಿ ಬಾಬಾ ಬುಡನ್‌ಗಿರಿಯಲ್ಲಿ ನೆಲೆಸಿದ್ದ ದಾದಾ ಹಯಾತ್ ಮೀರ್ ಖಲಂದರ್‌ನನ್ನು ದತ್ತಾತ್ತ್ರೇಯನೆಂದೂ, ಬಾಬಾ ಬುಡನ್ ಎಂದೂ ನಂಬಿಕೊಂಡು ಪೂಜಿಸುತ್ತಿದ್ದರು.ಆತ ಮರಣವನ್ನಪ್ಪಿದ ಮೇಲೂ ಅದೇ ಸಂಪ್ರದಾಯ ಮುಂದುವರಿಯಿತು.

ಸುಮಾರು 90ರ ದಶಕದವರೆಗೆ ಈ ಶ್ರದ್ಧಾ ಕೇಂದ್ರಗಳ ಬಗೆಗಿನ ವಿವಾದದ ಪ್ರಮಾಣ ಕಡಿಮೆಯಾಗಿತ್ತು. 1992ರ ಬಾಬರ್ v/s ರಾಮನ ವಿವಾದ ಮತ್ತು ಮಸೀದಿ ಧ್ವಂಸದ ಘಟನೆ ಎಲ್ಲಾ ಅನಾಹುತಗಳಿಗೂ ಮೂಲವಾಯಿತು. ಅವೆಲ್ಲ ರಾಜಕೀಯಗೊಂಡ ಮೇಲೆ ಚುನಾವಣಾ ವಿಷಯಗಳಾಗಿ ಜನರ ಸೌಹಾರ್ದತೆಯನ್ನೇ ಬಲಿ ತೆಗೆದುಕೊಂಡು ಬಿಟ್ಟವು. ಕೋಮು ವಿಷ ಜ್ವಾಲೆ, ಓಲೈಕೆಯ ರಾಜಕಾರಣದಿಂದಾಗಿ ಇಂದು ಮಧುರಾ, ಕಾಶಿ, ಅಯೋಧ್ಯೆ, ತಾಜ್ ಮಹಲ್, ಕುತುಬ್ ಮಿನಾರ್ ಸೇರಿದಂತೆ ಐತಿಹಾಸಿಕ, ಧಾರ್ಮಿಕ ತಾಣಗಳೆಲ್ಲವೂ ವಿವಾದದ ಕೇಂದ್ರಗಳಾಗಿವೆ.

ದತ್ತ ಪೀಠದ ವಿವಾದವೀಗ ಮತ್ತೆ ಚುನಾವಣೆಯ ಅಜೆಂಡವಾದಂತಿದೆ. ಕಳೆದ ಚುನಾವಣೆಯಲ್ಲಿ ದತ್ತ ದೇವರ ಕೃಪೆಯಿಂದ ಬಿಜೆಪಿ ಅಧಿಕ ಸೀಟುಗಳನ್ನು ಪಡೆಯುವಲ್ಲಿ ಸಹಕಾರಿಯಾಗಿತ್ತು. ಜಾತಿ-ಮತ, ಭೇದ-ಭಾವ ತೊಡೆದು ಸೌಹಾರ್ದತೆಯ ಕೇಂದ್ರವಾಗಿದ್ದ ಬಾಬಾಬುಡನ್ ಗಿರಿಯ ಸುತ್ತ ಈಗ ಪೊಲೀಸ್ ಸರ್ಪಗಾವಲು. ನಿರಾತಂಕವಾಗಿ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದ ಬಡ ಹಿಂದು - ಮುಸ್ಲಿಂ ಭಕ್ತರಲ್ಲಿ ಇದೀಗ ತುಂಬಿರುವುದು ಆತಂಕ ಮಾತ್ರ.

1 comment:

jomon varghese said...

ಚಿಂತನೆಗೆ ಹಚ್ಚಿದ ಲೇಖನ. ತುಂಬಾ ಚೆನ್ನಾಗಿದೆ.