Tuesday, January 27, 2009

ಶ್ರೀರಾಮಸೇನೆಯ 'ತಾಲಿಬಾನ್' ಸಂಸ್ಕೃತಿ...

ಮಂಗಳೂರಿನ ಎಮ್ನೇಶಿಯ ಪಬ್‌‌ನಲ್ಲಿ ಅಶ್ಲೀಲ ನರ್ತನ ಮಾಡುತ್ತಿದ್ದರು, ಅನೈತಿಕ ಚಟುವಟಿಕೆ ನಡೆಸುತ್ತಿದ್ದರು, ಇದು ದೇಶದ ಸಂಸ್ಕೃತಿಗೆ ಆದ ಅಪಚಾರ ಎಂದು ಆರೋಪಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಇದೀಗ ದೇಶವ್ಯಾಪಿ ಚರ್ಚೆಗೆ ಒಳಗಾಗಿದೆ. ಹೌದು, ಪಬ್‌ನಲ್ಲಿ ನರ್ತನ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ್ದು ಸರಿ ಎಂಬುದು ಹಲವರ ವಾದವಾದರೆ, ದೇಶದ ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲು ಅವರಿಗೆ ಅಧಿಕಾರ ಕೊಟ್ಟವರಾರು ಎಂದೂ ಮಹಿಳಾ ಸಂಘಟನೆಗಳು ಕಟುವಾಗಿ ಪ್ರಶ್ನಿಸಿವೆ. ಇದು ತಾಲಿಬಾನ್ ಸಂಸ್ಕೃತಿಯ ಪ್ರತಿರೂಪ ಎಂದು ಕೇಂದ್ರ ಸಚಿವ ರೇಣುಕ ಚೌಧುರಿ ಗಂಭೀರವಾಗಿ ಆರೋಪಿಸಿದ್ದಾರೆ.

ಪಬ್‌ನಲ್ಲಿ ಅಶ್ಲೀಲವಾಗಿ ನರ್ತಿಸುತ್ತಿದ್ದರು, ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಬರುತ್ತದೆ. ಈ ರೀತಿ ಮಾಡುವುದರಿಂದ ಯುವ ಪೀಳಿಗೆಗೆ ಎಚ್ಚರಿಕೆಯ ಸಂದೇಶ ಹೋಗುತ್ತದೆ. ಮತ್ತು ಇಂತಹ ಹೋರಾಟವನ್ನು ಮುಂದುವರಿಸುವುದಾಗಿಯೂ ಸೇನೆಯ 'ದಂಡಾಧಿಕಾರಿ' ಪ್ರಮೋದ್ ಮುತಾಲಿಕ್ ಸ್ಪಷ್ಟನೆಯನ್ನೂ ನೀಡಿದ್ದಾರೆ. ನಿಜಕ್ಕೂ ಪಬ್ ಮೇಲೆ ದಾಳಿ ಮಾಡುವುದರಿಂದ ಸಂಸ್ಕೃತಿಯ ರಕ್ಷಣೆ ಸಾಧ್ಯವೆ?ಅಲ್ಲಿ ಅರೆಬೆತ್ತಲೆ ನರ್ತನ ಮಾಡುತ್ತಿದ್ದರು ಇದರಿಂದ ನಮ್ಮ ಸಂಸ್ಕೃತಿಯೇ ಎಕ್ಕುಟ್ಟಿ ಹೋಗುತ್ತಿದೆ ಅಂತ ಲಬೋ, ಲಬೋ ಅಂತ ಬಡಿದುಕೊಳ್ಳುವುದರಲ್ಲಿ ಅರ್ಥವಿದೆಯಾ ?

ಮಂಗಳೂರಿನ ಪಬ್‌ನಲ್ಲಿ ಅರೆಬೆತ್ತಲೆ ನರ್ತನ ಮಾಡುತ್ತಿರುವುದರಿಂದ ಸಂಸ್ಕೃತಿ ಹಾಳಾಗುತ್ತದೆ ಎಂದು ಬೊಬ್ಬೆ ಹೊಡೆಯುತ್ತಿರುವ ಶ್ರೀರಾಮಸೇನೆ (ಇದನ್ನು ಸಂಘ-ಪರಿವಾರ ಕೂಡ ಅದನ್ನೇ ಮಾಡಿದೆ, ಈಗ ಬಿಜೆಪಿಯಿಂದ ಮುನಿಸಿಕೊಂಡು ಶ್ರೀರಾಮಸೇನೆ ಕಟ್ಟಿರುವ ಮುತಾಲಿಕ್ ಮೇಲೆ ಅಸಮಾಧಾನ ಇರುವುದರಿಂದಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ಗಟ್ಟಿಧ್ವನಿಯಲ್ಲಿ ಹೇಳಿದ್ದಾರೆ. ಅದೇ ಬಿಜೆಪಿ ಅಂಗಸಂಸ್ಥೆಗಳು ಮಾಡಿದ್ದರೆ ಅಂತಹ ಕ್ರಮಕ್ಕೆ ಶೀಘ್ರವೇ ಮುಂದಾಗುತ್ತಿದ್ದರೆ ಎಂಬುದು ಬೇರೆ ಪ್ರಶ್ನೆ. ಚರ್ಚ್ ದಾಳಿ ಪ್ರಕರಣದಲ್ಲಿ ಬಜರಂಗದಳದ ಮಹೇಂದ್ರ ಕುಮಾರ್ ಮಾಧ್ಯಮದಲ್ಲಿ ಘಟನೆಯ ಹೊಣೆ ಹೊತ್ತುಕೊಂಡು ಹೇಳಿಕೆ ನೀಡಿದ್ದರಿಂದ ಅವರು ತಲೆದಂಡ ಕೊಡಬೇಕಾಯಿತು ಅಷ್ಟೇ.)

ಇಂದು ಹಿಂದಿ, ತಮಿಳು, ಕನ್ನಡ ಸಿನಿಮಾಗಳಲ್ಲಿ ತೋರಿಸುವ ಅರೆನಗ್ನ ದೃಶ್ಯಗಳನ್ನು ನೋಡಿ ಯುವ ಪೀಳಿಗೆ ಹಳ್ಳಹಿಡಿದು ಹೋಗುವುದಿಲ್ಲವಾ?ಪ್ರತಿ ತಾಲೂಕುಗಳಲ್ಲಿ 'ಎ' (ಹೆಚ್ಚಾಗಿ ಮಲಯಾಳಂ ಭಾಷೆಯ) ಸಿನಿಮಾಗಳು ಪ್ರದರ್ಶನಗೊಳ್ಳುತ್ತದೆ, ಅಲ್ಲೆಲ್ಲ ಸಾಲು,ಸಾಲಾಗಿ ನಿಂತು ಸಿನಿಮಾ ನೋಡಿ ಬರುತ್ತಾರಲ್ಲ, ಅದರಿಂದ ಸಂಸ್ಕೃತಿಗೆ ಧಕ್ಕೆ ಬರುವುದಿಲ್ಲವಾ? ಹೋಗಲಿ ಹಿಂದಿ, ಇಂಗ್ಲಿಷ್ ಕೆಲವು ಸಿನಿಮಾಗಳಲ್ಲಿ ಮೈಮೇಲೆ ಬಟ್ಟೆ ಎಲ್ಲಿದೆ ಎಂದು ಹುಡುಕಬೇಕಾಗುತ್ತೆ.... ಅದನ್ನು ಬಾಯಿ ಚಪ್ಪರಿಸಿಕೊಂಡು, ಸಿಳ್ಳೆ ಹಾಕಿ ನೋಡುವ ನಾವು ಅದರಿಂದ ಸಂಸ್ಕೃತಿಗೆ ಅಪಚಾರ ಅಗುವುದಿಲ್ಲವಾ? ಇವತ್ತು ಸೈಬರ್ ಸೆಂಟರ್‌ಗಳಲ್ಲಿ ನಡೆಯುತ್ತಿರುವ ಸೈಬರ್ ಸೆಕ್ಸ್ ಬಗ್ಗೆ ನೀವ್ಯಾಕೆ ಸುಮ್ಮನಿದ್ದೀರಿ ಸೇನೆಯವರೇ ? ಪಬ್‌ಗೆ ಹೋಗುವುದರಿಂದ, ಅವರನ್ನು ನೋಡುವುದರಿಂದ ಉಳಿದವರು ಹಾಳಾಗುತ್ತಾರೆಂಬ ಧೋರಣೆ ಇದೆಯಲ್ಲ ಅದೇ ದೊಡ್ಡ ವಿಪರ್ಯಾಸದ್ದು. ನಾವು ನೆಟ್ಟಗಿದ್ದರೆ ಅದ್ಯಾಕೆ ಹಾಗಾಗುತ್ತೆ, ಹೋಗಲಿ ಒಬ್ಬರನ್ನು ನೋಡಿ ಹಾಳಾಗುವುದು, ಹೇಳಿದ್ದನ್ನು ಕೇಳಿ ಹಾಳಾಗುವುದು,ಒಳ್ಳೆಯದಾಗುವುದು ಅಂತ ಆದರೆ... ರಾಮಾಯಣ, ಮಹಾಭಾರತ ಸಿರಿಯಲ್ ನೋಡಿ ಅದೆಷ್ಟು ಮಂದಿ ಶ್ರೀರಾಮ, ಧರ್ಮರಾಯ ಆಗಬೇಕಿತ್ತು. ಯಾರು ಆಗಿಲ್ವಲ್ಲಾ.

ಧರ್ಮದ ರಕ್ಷಣೆ, ಸಂಸ್ಕೃತಿಯ ರಕ್ಷಣೆ ಮಾಡಲು ಶ್ರೀರಾಮಸೇನೆಗೆ ಗುತ್ತಿಗೆ ನೀಡಿದ್ದಾರಾ? ಹೋಗಲಿ ಸಾಹಿತ್ಯಗಳಲ್ಲಿ ಎಷ್ಟು ಅಶ್ಲೀಲ ಇಲ್ಲ, ಅವೆಲ್ಲ ಓದಿದವನು ಹಾಳಾಗಬೇಕಲ್ಲ....ಹಾಗಾದರೆ ತಾಲಿಬಾನ್ ಹುಡುಗಿಯರಿಗೆ ಶಾಲೆಗೆ ಹೋಗಬೇಡಿ, ಪುರುಷರು ಗಡ್ಡ ಬೋಳಿಸಿಕೊಳ್ಳಬೇಡಿ ಎಚ್ಚರ ಎಂದು ಫರ್ಮಾನು ಹೊರಡಿಸುತ್ತೆ....ಅದು ಮಾಡುವುದು ಸಂಸ್ಕೃತಿ ಮತ್ತು ಧರ್ಮದ ಹೆಸರಲ್ಲಿ. ನೀವು ಕೂಡ ಅದನ್ನೇ ಮಾಡುತ್ತೀರಲ್ಲ ಏನಾದರು ವ್ಯತ್ಯಾಸ ಇದೆ ಅನ್ನಿಸುತ್ತಾ ?ನೀವು ಧರ್ಮದ ರಕ್ಷಣೆ....ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಮಾಡುತ್ತೀರಿ ಎಂದು ಸಮರ್ಥನೆ ನೀಡುತ್ತೀರಿ ಎಂದಾದರೆ...ತಾಲಿಬಾನಿಗಳು ಅದನ್ನೇ ಹೇಳುತ್ತಾರಲ್ಲ. ಅವರ ದೃಷ್ಟಿಯಲ್ಲಿ ಅದು ಪವಿತ್ರ ಕೆಲಸ !! ಪಬ್ ಸಂಸ್ಕೃತಿಯಿಂದ ಯುವ ಪೀಳಿಗೆ ಕೆಟ್ಟ ಹಾದಿ ಹಿಡಿಯುತ್ತೆ, ಅದನ್ನು ನಾವು ನಿಲ್ಲಿಸುತ್ತೇವೆ ಸಂಸ್ಕೃತಿಯನ್ನು ರಕ್ಷಿಸುತ್ತೇವೆ ಎಂಬ ವಾದ ಇದೆಯಲ್ಲ.... ಸಿನಿಮಾದಲ್ಲಿ ಹೀರೋ ನೂರು ಜನರನ್ನು ಹೊಡೆದು ಸಮಾಜದ ಉದ್ದಾರಕ್ಕೆ ಹೊರಟ ಹಾಗೇ...ಅಷ್ಟೇ ಬಾಲಿಶವಾದದ್ದು......

3 comments:

ಹೊರಗಣವನು said...

talibangu, ramasenegu vytayasvenill. erdu onde.
mutalik pub mele dali madiddannu samartisikonda nantara, dress code bagge kooda pharmanu horadisiddarru.
adre maryada purushottamana hesaralli mutalika maduttirodu sariyalla.
mutalik sanatatige dhikkaravirali

Nagendra Trasi said...

Prthikriyage thanx


Trasi

Nagendra Trasi said...

Prthikriyage thanx


Trasi