Wednesday, September 3, 2008

ವಂಡಾರು ಕಂಬಳ ಮತ್ತು ನರಬಲಿ...

ನಮ್ಮ ಊರಿನ ಹಿರಿಯರು ಆಗಾಗ ಗಾದೆ ಮಾತೊಂದನ್ನು ಹೇಳುತ್ತಿರುತ್ತಾರೆ, ಅದೇನೆಂದರೆ ' ಹಿಂದಿನ ಕಾಲವಲ್ಲ-ವಂಡಾರು ಕಂಬಳವಲ್ಲ' ಅಂತ. ಈಗಿನ ಕೆಟ್ಟು ಹೋದ ಪರಿಸ್ಥಿತಿಗೆ ರೋಸಿಹೋದ ಹಿರಿಯ ತಲೆಗಳು ಆಗಾಗ ಈ ಗಾದೆಯನ್ನು ಹೇಳುತ್ತಿ ರುತ್ತಾರೆ. ಆದರೆ ಆ ಗಾದೆ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ.

ಮಂಗಳೂರು, ಉಡುಪಿ, ಕುಂದಾಪುರ, ಮೂಡಲಕಟ್ಟೆ, ಪುತ್ತೂರುಗಳಲ್ಲಿ ಕಂಬಳ ಒಂದು ವಿಶೇಷವಾದ ಸಾಂಪ್ರದಾಯಿಕ ಕ್ರೀಡೆ ಯಾಗಿದೆ. ಈ ಭಾಗಗಳಲ್ಲಿ ಹಬ್ಬ ಹರಿದಿನಗಳು ಹೇಗೋ, ಹಾಗೇ ಕಂಬಳ ಕೂಡ ಪ್ರಮುಖವಾದದ್ದು. ನಾನೀಗ ಹೇಳ ಹೊರಟಿ ರುವುದು ಕುಂದಾಪುರದಿಂದ ಸುಮಾರು 15ಕಿ.ಮೀ.ದೂರದಲ್ಲಿರುವ ವಂಡಾರು ಎಂಬ ಊರಿನ ಕಂಬಳದ ಬಗ್ಗೆ. ಇದಕ್ಕೆ ಕ್ರಿ.ಶ. 1200ರ ಆಳುಪರ ಜರ್ಕೆಯ ಶಾಸನದಲ್ಲಿ ಕೆಲವು ವಿವರಗಳು ಲಭ್ಯವಾಗುತ್ತದೆ.

ಇದು ಉಡುಪಿ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಕಂಬಳಗದ್ದೆಯಾಗಿದೆ. ಇದು ಅಂದಾಜು 10 ಎಕರೆ ವಿಸ್ತಿರ್ಣ ಹೊಂದಿದೆ. ಈ ಕಂಬಳಗದ್ದೆ ಬಗ್ಗೆ ಬಹಳಷ್ಟು ಐತಿಹ್ಯಗಳಿವೆ. ಆ ಕಾಲದಲ್ಲಿ ಇದನ್ನು ಮನುಷ್ಯರು ಬೀಜ ಬಿತ್ತಿ ಬೆಳೆ ತೆಗೆಯುತ್ತಿರಲಿಲ್ಲವಂತೆ, ದೇವತೆ ಗಳು ರಾತ್ರಿ-ಬೆಳಗಾಗುವುದರೊಳಗೆ ನೇಜಿ ಮಾಡಿ ಮುಗಿಸುತ್ತಿದ್ದರಂತೆ !.

ವಂಡಾರಿನ ಈ ಕಂಬಳ ಗದ್ದೆ ಹೆಗ್ಗಡೆ ಮನೆತನದ್ದು, ಅವರ ಮನೆಯ ಪಕ್ಕ ನಿಗಳೇಶ್ವರನ (ಮೊಸಳೆ) ಗುಡಿ ಇದೆ. ಈ ಗುಡಿಯಲ್ಲಿ ಲಿಂಗಾರಾಧನೆ ನಡೆಯುತ್ತದೆ, ಇಲ್ಲಿ ಬಂಟರೇ ಅರ್ಚಕರಾಗಿದ್ದು, ಕಂಬಳದ ದಿನ ಮಾತ್ರ ಪೂಜೆ-ಪುನಸ್ಕಾರ ನಡೆಯುತ್ತದೆ. ವಂಡಾ ರಿನಲ್ಲಿರುವ ನಿಗಳನ ಗುಡಿಯ ಗರ್ಭಗುಡಿಯ ಕೆಳಗೆ ನಿಗಳನ ಬಾವಿ ಇದ್ದು, ಇದನ್ನು ನೂರಾರು ವರ್ಷಗಳ ಹಿಂದೆಯೇ ಮುಚ್ಚಿದ್ದರು. ಆ ಬಾವಿಯನ್ನು ಯಾಕೆ ಮುಚ್ಚಿದರು ಎಂಬುದು ಈಗಲೂ ಜನಜನಿತವಾಗಿರುವ ಐತಿಹ್ಯ ಹೀಗಿದೆ...

ವಂಡಾರು ಕಂಬಳಕ್ಕೆ ಜಿಲ್ಲೆಯ ಸುತ್ತಮುತ್ತಲಿನಿಂದ ಕೋಣಗಳನ್ನು ಶೃಂಗರಿಸಿ ಡೋಲು, ಬಾಜಭಜಂತ್ರಿ ಮೂಲಕ ಕರೆ ತರುತ್ತಿದ್ದರು, ಅಲ್ಲಿಯೇ ದೊಡ್ಡ ಜಾತ್ರೆಯೇ ನೆರೆದಿರುತ್ತಿದ್ದು, ಕಂಬಳ ನಡೆಯುವ ಹಿಂದಿನ ದಿನ ಎಲ್ಲೆಡೆಯಿಂದ ಕೋಣಗಳನ್ನು ತಂದು ಕಟ್ಟಿಹಾಕಿ, ದಿನಬೆಳಗು ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ರಾತ್ರಿ ನಿದ್ದೆಹೋದ ಸಂದರ್ಭ ಹೆಗ್ಗಡೆಯವರ ಮನೆಯಲ್ಲಿ ನಿದ್ದೆ ಹೋದವರೊಬ್ಬರ ಕಾಲಿಗೆ ಬಳ್ಳಿ ಹಾಕಲಾಗುತ್ತದೆ. ಹಾಗೇ ಯಾರ ಕಾಲಿಗೆ ಬಳ್ಳಿ ಬೀಳುತ್ತಿತ್ತೋ ಅವರನ್ನು ನಸುಕಿನಲ್ಲಿಯೇ ಎತ್ತಿ ನಿಗಳನ (ಮೊಸಳೆ) ಬಾವಿಗೆ ಹಾಕಲಾಗುತ್ತಿತ್ತು. ಅಂದರೆ ನರಬಲಿ ಕೊಡಲಾಗುತ್ತಿತ್ತು !!

ಹೀಗೆ ಇದು ನಿರಂತರ ಪ್ರತಿ ಬಾರಿಯ ಕಂಬಳದ ಮುನ್ನ ನಿಗಳನಿಗೆ ನರಬಲಿ ನಡೆಯುತ್ತಿತ್ತು. ಏತನ್ಮಧ್ಯೆ ಒಮ್ಮೆ ಹಾಗೆ ಕಾಲಿಗೆ ಬಳ್ಳಿ ಹಾಕಿದ ವ್ಯಕ್ತಿಯನ್ನು ನಿಗಳನಿಗೆ ಬಲಿ ಕೊಡಲಾಯಿತಂತೆ, ಆದರೆ ನಿಗಳನಿಗೆ ಬಲಿಯಾದ ವ್ಯಕ್ತಿ ಹೆಗ್ಗಡೆ ಮನೆಯ ಆಳು ಎಂಬುದು ನಂತರ ತಿಳಿಯಿತಂತೆ. ಆ ದಿನದಿಂದ ನಿಗಳನಿಗೆ ನರಬಲಿ ಕೊಡುವ ಸಂಪ್ರದಾಯವನ್ನು ನಿಲ್ಲಿಸಲಾಯಿತಂತೆ.

ಹೀಗೆ ಬಹಳಷ್ಟು ಇತಿಹಾಸವನ್ನು ಹೊಂದಿರುವ ವಂಡಾರು ಕಂಬಳ ಗದ್ದೆಯನ್ನು ನೀವೊಮ್ಮೆ ನೋಡಬೇಕು(ಜನವರಿಯಿಂದ ಮಾ ರ್ಚ್ ತಿಂಗಳ ನಡುವೆ ನಡೆಯುತ್ತದೆ), ಅದೇ ರೀತಿ ಡೈನೋಸಾರಸ್ಸ್ ರೂಪದ ನಿಗಳನ ಗುಡಿಯನ್ನು ಕಾಣಬೇಕು. ಅಲ್ಲದೇ ಇಲ್ಲಿ ಪ್ರತಿ 12ವರ್ಷಗಳಿಗೊಮ್ಮೆ ಪಟ್ಟದ ಹೆಗ್ಗಡೆವರಿಗೆ ಆಗುವ ಉತ್ಸವ ಪಟ್ಟೋತ್ಸವ ನಡೆಯುತ್ತಿತ್ತು.

ಅದು ಕಳೆದ ಒಂದು ಶತಮಾನದಿಂದ ನಿಂತು ಹೋಗಿದೆ,ಈಗ ಕಾಶಿಯಿಂದ ತಂದ ಮೂರ್ತಿಗೆ ಸಾಂಕೇತಿಕವಾಗಿ ಪಟ್ಟದ ಉತ್ಸವ ನಡೆಯುತ್ತದೆ. ಹೀಗೆ ವಂಡಾರು ಕಂಬಳದ ಗದ್ದೆಗೆ ಅಣ್ಣ-ತಮ್ಮ ಒಟ್ಟಿಗೆ ಇಳಿಯುವಂತಿಲ್ಲ,ಪಟ್ಟದ ಹೆಗ್ಗಡೆಯವರು ಗದ್ದೆಗೆ ಪೂರ್ಣ ಸುತ್ತು ಬರುವಂತಿಲ್ಲ,

ವಂಡಾರು ಕಂಬಳದ ದಿನ ಕೋಟೇಶ್ವರದ ಕೆರೆ ನೀರು ಕೆಸರಾಗುವುದು, ಕಂಬಳದ ಗದ್ದೆ ಪಾಲಾಗುವಂತಿಲ್ಲ, ಇಲ್ಲಿ ಒಬ್ಬಳೇ ಹೆಣ್ಣು ಮಗಳು ಹುಟ್ಟುವುದು, ಆ ಹೆಣ್ಣಿನ ಮಗನೇ ಪಟ್ಟದ ಹೆಗ್ಗಡೆಯವರಾಗಿ ಕಂಬಳವನ್ನು ನಡೆಸುತ್ತಾರೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ವಂಡಾರು ಕಂಬಳ ಮತ್ತು ಅಲ್ಲಿನ ವೈಭವವನ್ನು ನೀವೂ ಒಮ್ಮೆ ಕಣ್ಣಾರೆ ನೋಡಬೇಕು...ಇದು ಜೂಜಿಗಾಗಿ ನಡೆಯುವ ಕಂಬಳವಲ್ಲ...

'ವಲಸೆ ರಾಜಕಾರಣ'ದ ದೊಂಬರಾಟ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟವನ್ನು ಗಮನಿಸಿದರೆ ನೈತಿಕತೆ, ಮೌಲ್ಯ, ತತ್ವ ಸಿದ್ಧಾಂತದ ಪದಗಳೆಲ್ಲ ಸವಕಲಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಬಹುಶಃ ನೈತಿಕತೆ ಮತ್ತು ತತ್ವದ ಪ್ರಶ್ನೆಗೆ ಬಂದಾಗ ಆ ಪರಿಧಿಯೊಳಗೆ ಎಲ್ಲರೂ ತಾನೇ ತಾನಾಗಿ ಸೇರಿಕೊಳ್ಳುತ್ತೇವೆ. ಹೇಳುವುದು ಒಂದು ಮಾಡುವುದು ಇನ್ನೊಂದು ಅಂತ ಆದ ಮೇಲೆ ಅಲ್ಲಿ ನೈತಿಕತೆಗೆ ಯಾವ ಅರ್ಥ ಉಳಿಯಿತು.

ಇದೀಗ ಕರ್ನಾಟಕ ರಾಜ್ಯಕಾರಣದಲ್ಲಿ ಇತ್ತೀಚೆಗೆ ಆಡಳಿತರೂಢ ಭಾರತೀಯ ಜನತಾ ಪಕ್ಷ ನಡೆಸುತ್ತಿರುವ ಆಪರೇಶನ್ ಕಮಲ ನಿಜಕ್ಕೂ ರಾಜಕೀಯ ಅಧಃಪತನದ ಸಂಕೇತ. ಈ ಹಿಂದೆಂದೂ ಇಂತಹ ಕೀಳು ಮಟ್ಟದ ರಾಜಕೀಯ ನಡೆದಿಲ್ಲ ಎಂಬುದನ್ನು ಮನಗಾಣುವ ಮೂಲಕ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬ ಏಕಾಏಕಿ ಅಧಿಕಾರದ ಬೆನ್ನತ್ತಿ, ರಾಜೀನಾಮೆ ಎಸೆದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾನೆಂದರೆ ಅದು ಎಷ್ಟರ ಮಟ್ಟಿಗೆ ಸಂವಿಧಾನ ಬದ್ಧವಾದದ್ದು ಎಂದು ಪ್ರಶ್ನಿಸಿಕೊಳ್ಳ ಬೇಕಾ ಗಿದೆ.

ಅವೆಲ್ಲಕ್ಕಿಂತ ಮುಖ್ಯವಾಗಿ ಒಂದು ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಯನ್ನು ಕ್ಷೇತ್ರದ ಲಕ್ಷಾಂತರ ಮಂದಿ ಮತದಾರರು ತಮ್ಮ ಒಮ್ಮತಾಭಿಪ್ರಾಯದ ಮತ ಚಲಾಯಿಸಿ ಆಯ್ಕೆ ಮಾಡುತ್ತಾರೆ. ಹಾಗಾದರೆ ಮತದಾರರ ನೀಡಿದ ತೀರ್ಪನ್ನು ಧಿಕ್ಕರಿಸಿ, ನೀವು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೀರಿ ಎಂದಾದರೆ ಅದು ಮತದಾರರಿಗೆ ಮಾಡಿದ ಮಹಾದ್ರೋಹವಲ್ಲದೆ ಇನ್ನೇನು !

ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ, ಕಾನೂನಿನ ಕಣ್ಣಿಗೆ ಮಣ್ಣೆರೆಚುವುದರಲ್ಲಿ ನಾವು ಸಿದ್ಧಹಸ್ತರಲ್ಲವೆ, ಆ ನಿಟ್ಟಿನಲ್ಲಿ ಕಾನೂನಿನ ಸುಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ,ಮತ್ತೊಂದು ಪಕ್ಷಕ್ಕೆ ಸೇರ್ಪಡೆ ಗೊಂಡು, ಅಧಿಕಾರ, ಸ್ಥಾನವನ್ನು ಅಲಂಕರಿಸುವುದು. ಮತ್ತೆ ಆ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ರಾಜಕಾರಣಿಗಳ ಲೆಕ್ಕಚಾರ.

ಇಲ್ಲಿ ಕ್ಷೇತ್ರದ ಮತದಾರರನಿಗೆ ಯಾವ ಬೆಲೆಯೂ ಇಲ್ಲ,ನೈತಿಕತೆ ಅಂತೂ ಕೇಳುವುದೇ ಬೇಡ. ಇಂತಹದ್ದೊಂದು ವಲಸೆ ರಾಜಕಾರ ಣಕ್ಕೆ ಬಿಜೆಪಿ ಚಾಲನೆ ನೀಡಿದೆ. ಆ ಮೂಲಕ ತನ್ನ ಸರ್ಕಾರವನ್ನು ಭದ್ರಪಡಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವರು ಕೂಡ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಆದರೆ ರಾಜ್ಯದಲ್ಲಿ ಬಿಜೆಪಿಯ ಆಪರೇಶನ್ ಕಮಲದ ಬಗ್ಗೆ ಆಕ್ಷೇಪಿಸುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ, ಇತ್ತೀಚೆಗಷ್ಟೇ ಕೇಂದ್ರ ದ ಆಡಳಿತರೂಢ ಯುಪಿಎ ಅಣುಒಪ್ಪಂದದ ವಿಚಾರದಲ್ಲಿ ಶಾಸಕರನ್ನು ಖರೀಸಿತ್ತಲ್ಲ ಎಂದು ಬಾಯಿ ಮುಚ್ಚಿಸಬಹುದು. ಇಲ್ಲವೇ ಅಂದು ಪ್ರಧಾನಿ ಹುದ್ದೆ ಅಲಂಕರಿಸಲು ಪಿ.ವಿ.ನರಸಿಂಹರಾವ್‌ಗೂ ಕೂಡ ಜೆಎಂಎಂ ಇದೇ ತೆರನಾಗಿ ಲಂಚ ಸ್ವೀಕರಿಸಿಯೇ ಬೆಂಬಲ ನೀಡಿತ್ತು ಎಂಬ ಸಮಜಾಯಿಷಿ ನೀಡಬಹುದು.

ರಾಜಕಾರಣದಲ್ಲಿ ಇಂತಹ ಅಪಸವ್ಯ ನಡೆಯುತ್ತಿದ್ದಾದರು ಕೂಡ, ರಾಜ್ಯರಾಜಕಾರಣದ ಮಟ್ಟಿಗೆ ಸಾರಸಗಟಾಗಿ ಜನರಿಂದ ಆಯ್ಕೆ ಯಾದ ಶಾಸಕರು ಜನರ ಆಶಯಕ್ಕೆ ವಿರುದ್ಧವಾಗಿ ರಾಜೀನಾಮೆ ನೀಡಿ ವಿರೋಧ ಪಕ್ಷವನ್ನು ಸೇರಿ ಅಲ್ಲಿ ಅಧಿಕಾರ,ಹುದ್ದೆಯನ್ನು ಅಲಂಕರಿಸುತ್ತಿರುವುದು ಕೀಳು ರಾಜಕೀಯದ ಪರಮಾವಧಿಯಾಗಿದೆ. ರಾಜಕಾರಣಿಗಳ ಇಂತಹ ಎಡಬಿಡಂಗಿತನಗಳಿಗೆ ಕ್ಷೇತ್ರದ ಪ್ರಜ್ಞಾವಂತ ಮತದಾರರೇ ತಕ್ಕ ಬುದ್ಧಿ ಕಲಿಸಬೇಕಾಗಿದೆ.

Sunday, August 17, 2008

ಕೆಂಪುಕೋಟೆ ಚೀನಾದ ಮುಖವಾಡ....

ನಾ ಬೀಜಿಂಗ್‌ನಲ್ಲಿ ಆರಂಭಿಸಿದ ಒಲಿಂಪಿಕ್ ಗೇಮ್ಸ್‌‌ನ ತಯಾರಿ,ಉದ್ಘಾಟನಾ ಸಮಾರಂಭದ ಅದ್ದೂರಿ ಜಗತ್ತನ್ನೇ ನಿಬ್ಬೆರಗಾಗಿಸಿ ದ್ದಂತೂ ಸುಳ್ಳಲ್ಲ. ಉದ್ಘಾಟನಾ ಸಮಾರಂಭದ ಕಾರ್ಯಕ್ರಮವಂತೂ ಮೈನವಿರೇಳಿಸಿದ್ದವು,ಜಾಗತಿಕವಾಗಿ ಶಕ್ತಿ ಪ್ರದರ್ಶನ ಮಾಡಲು ಹೊರಟ ಕಮ್ಯೂನಿಷ್ಟ್ ದೇಶ ತನ್ನ ಮೇಲಿನ ಅಪವಾದದ ಕೊಳೆಯನ್ನು ತೆಗೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಂತೂ ಸತ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೂ 'ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ' ಎಂಬ ಗಾದೆಯಂತೆ ಒಲಿಂಪಿಕ್ ಉದ್ಘಾಟನಾ ಸಮಾರಂಭದಲ್ಲಿಯೂ ಅದರ ಮುಖವಾಡ ಕಳಚಿಬಿದ್ದಿದೆ.ಒಲಿಂಪಿಕ್ ಉದ್ಘಾಟನೆ ದಿನದಂದು ಪುಟ್ಟ ಬಾಲಕಿಯೊಬ್ಬಳು ಹಾಡೊಂದನ್ನು ಹಾಡಿದ್ದಳು, ಅದನ್ನು ಟಿವಿಗಳಲ್ಲಿ ಕೋಟ್ಯಂತರ ಜನರು ವೀಕ್ಷಿಸಿದ್ದರು.

ಬಳಿಕ ಬೀಜಿಂಗ್ ರೇಡಿಯೋಗೆ ಸಂದರ್ಶನ ನೀಡಿದ್ದ ಚೀನಾದ ಸಂಗೀತ ನಿರ್ದೇಶಕ ಜಾಂಗ್ ಯಿಮೂವ್,ಆಘಾತಕಾರಿ ಸುದ್ದಿಯೊಂದನ್ನು ಹೊರಗೆಡಹಿದ್ದರು. ನಿಜಕ್ಕೂ ಆ ದಿನ ಸಂಗೀತ ಹಾಡಿದಾಕೆ ಮಿಯೋಕೆ ಎಂಬಾಕೆ,ಆದರೆ ಆಕೆಯ ಹಲ್ಲು ಸ್ವಲ್ಪ ಉಬ್ಬಾಗಿದ್ದರಿಂದ ಕೊನೆಯ ಕ್ಷಣದ ಬದಲಾವಣೆ ಎಂಬಂತೆ,ಹಾಡು ಮಾತ್ರ ಮಿಯೋಕೆಯದ್ದು,ಎದುರುಗಡೆ ನಿಂತಿದ್ದು ಯಾಂಗ್ ಪೇಯಿ ಎಂಬ ಚೆಂದದ ಬಾಲಕಿ.

ಆದರೆ ಇದನ್ನು ಕಮ್ಯೂನಿಷ್ಟ್ ಸರ್ಕಾರ ತಾನು ಮಾಡಿದ್ದೇ ಸರಿ ಎಂಬುದಾಗಿ ಸಮರ್ಥಿಸಿಕೊಂಡಿದೆ. ಮಿಯೋಕೆ ತಂದೆ ಮಾತ್ರ ಕಣ್ಣೀರು ಸುರಿಸಿದ್ದರು,ತನ್ನ ಮಗಳ ಹಾಡನ್ನು ಕೋಟ್ಯಂತರ ಜನ ಆಲಿಸಿದ್ದಾರೆ,ಆದರೆ ಆಕೆ ಅಂದ ಇಲ್ಲ ಎಂಬ ಒಂದೇ ಕಾರಣಕ್ಕೆ ಷೋಕಿಗಾಗಿ ಹೊರಪ್ರಪಂಚದ ಕಣ್ಣಿಗೆ ಕಾಣಲು ಮತ್ತೊಬ್ಬಾಕೆಯನ್ನು ಉತ್ಸವ ಮೂರ್ತಿಯಾಗಿ ನಿಲ್ಲಿಸಿದ್ದರು ಎಂದು !!

ಹೊರ ಪ್ರಪಂಚಕ್ಕೆ ತಾನೊಂದು ಸುಭಗ ದೇಶ ಎಂದು ತೋರಿಸಿಕೊಳ್ಳಲು ಹೊರಟ ಚೀನಾದ ಕೀಳುಮಟ್ಟದ ಆಲೋಚನೆ ಮತ್ತು ಕ್ರಮದ ಚಿಕ್ಕ ಉದಾಹರಣೆ ಇದಾಗಿದೆ. ಚೀನಾ ಮತ್ತು ಅಮೆರಿಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಮೆರಿಕ ಕೂಡ ಅಷ್ಟೇ ಭಯೋತ್ಪಾದನೆ ವಿರುದ್ಧ ,ನ್ಯೂಕ್ಲಿಯರ್ ವಿರುದ್ಧ,ಮಾನವಹಕ್ಕುಗಳ ಉಲ್ಲಂಘನೆ ವಿರುದ್ಧ ಗುಟುರು ಹಾಕುವ ದೊಡ್ಡಣ್ಣನ ಸಣ್ಣತನ ಮಾತ್ರ ಜಗಜ್ಜಾಹೀರು.

ನಮ್ಮ ದೇಶದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಮಗಳು ಇತ್ತೀಚೆಗಷ್ಟೇ ಅಧಿಕೃತವಾಗಿ ಅಮೆರಿಕ ನಡೆಸಿರುವ ಮಾನವಹಕ್ಕು ಉಲ್ಲಂಘನೆಯ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿರುವ ಬಗ್ಗೆ ವರದಿಯಾಗಿತ್ತು. ಅಲ್ಲದಿದ್ದರೂ ಸಾಮ್ರಾಜ್ಯಶಾಹಿ ಯಾಗಿರುವ ಅಮೆರಿಕ ಉಳಿದೆಲ್ಲ ದೇಶಗಳಿಗೂ ಹಿತೋಪದೇಶ ನೀಡುತ್ತೇ, ಆದರೆ ತಾನು ಮಾತ್ರ ಮಾಡುವ ಲುಚ್ಚಾ ಕೆಲಸ ಗಳಿಂದಾಗಿ ಲಕ್ಷಾಂತರ ಅಮಾಯಕರ ಬಲಿ ತೆಗೆದುಕೊಂಡಿದೆ, ಅದೆಷ್ಟೋ ದೇಶಗಳಲ್ಲಿ ಭಯೋತ್ಪಾದನೆ, ಗೂಂಡಾಗಿರಿ ಸೃಷ್ಟಿಸಿದೆ(ಒಸಾಮ ಬಿನ್ ಲಾಡೆನ್ ಕೂಡ ಅಮೆರಿಕ ಸಾಕಿ-ಸಲುಹಿತ ಕೂಸು ಎಂಬುದನ್ನು ಮರೆಯಬೇಡಿ).

ಆರ್ಥಿಕ ಅಲ್ಲೋಲ - ಕಲ್ಲೋಲ ಮಾಡುವ ಮೂಲಕ ತನ್ನ ಅಂಗೈಯಲ್ಲಿಟ್ಟುಕೊಂಡಿದೆ. ತನ್ನೆಲ್ಲಾ ತಪ್ಪುಗಳನ್ನು ಮುಚ್ಚಿ,ಬೇರೆಯವರತ್ತ ಕೈ ತೋರಿಸುವ ಅಮೆರಿಕದ ಚಾಳಿ ಎಗ್ಗಿಲ್ಲದೆ ಮುಂದುವರಿದಿದೆ. ಆದೇ ತೆರನಾದ ಮುಖವಾಡ ಹೊಂದಿರುವ ಚೀನಾ ಕೂಡ ಕಡಿಮೆಯಿಲ್ಲ,1999ರಲ್ಲಿ ಲೀ ಹೊಂಗ್‌‌ಚೀ ಎಂಬಾತ ಫಾಲುನ್ ಗೊಂಗ್ ಎಂಬ ಧಾರ್ಮಿಕ ಪಂಥವನ್ನು ಹುಟ್ಟು ಹಾಕುತ್ತಾನೆ. ಅದು ನೋಡ,ನೋಡುತ್ತಿದ್ದಂತೆಯೇ ಚೀನಾದಾದ್ಯಂತ ಹೊಸ ಅಲೆಯನ್ನೇ ಎಬ್ಬಿಸುತ್ತೆ,ಆತನದ್ದು ಕೇವಲ ಐದು ವಿಧಗಳ ಧ್ಯಾನ ಪದ್ಧತಿ(ಬೌದ್ಧಿಸಂ ಮಾದರಿ)ಯಾಗಿತ್ತು.

ಇದರಲ್ಲಿ ಚೀನಾ ಕಮ್ಯೂನಿಷ್ಟ್ ಪಾರ್ಟಿಯ(ಸಿಸಿಪಿ)ಸದಸ್ಯರೇ ಲಕ್ಷಾಂತರ ಸಂಖ್ಯೆಯಲ್ಲಿ ಅವನ ಅನುಯಾಯಿಗಳಾಗ ತೊಡಗಿದರು. ಇದರಿಂದ ಬೆಚ್ಚಿ ಬಿದ್ದ ಚೀನಾ,ಓಹ್ ಇದು ತನ್ನ ಬುಡಕ್ಕೆ ಬರುತ್ತದೆ ಎಂಬು ಅಸೂಯೆಯಿಂದ,ಪಾಲುನ್ ಅನುಯಾಯಿಗಳನ್ನು ಕಂಡ,ಕಂಡಲ್ಲಿ ಮಕ್ಕಳು,ಮಹಿಳೆಯರು,ಪುರುಷರು ಎಂಬ ಭೇದಭಾವ ಇಲ್ಲದೆ,ಬೆತ್ತಲಾಗಿಸಿ ಚಿತ್ರ ಹಿಂಸೆ ನೀಡತೊಡಗಿತ್ತು.

ದಿನದಿಂದ ದಿನಕ್ಕೆ ಆತನ ಅನುಯಾಯಿಗಳ ಸಂಖ್ಯೆ ಏರುತ್ತಿದ್ದಂತೆಯೇ,ಚೀನಾ ನಾಗರಿಕ ವ್ಯವಹಾರಗಳ ಸಚಿವಾಲಯ ಅಧಿಕೃತ ಆದೇಶ ವೊಂದನ್ನು ಹೊರಡಿಸುತ್ತದೆ, ಪಾಲುನ್ ಒಂದು ಅಧಿಕೃತವಾದ ಸಂಸ್ಥೆಯಲ್ಲ,ಅದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು,ಜನರಲ್ಲಿ ಮೂಢನಂಬಿಕೆಗಳನ್ನು ಬೆಳೆಸುತ್ತಿದ್ದು,ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ ಎಂದು ಹೇಳಿ,ಫಾಲುನ್ ಅನ್ನು ನಿಷೇಧಿಸುತ್ತದೆ.

ಅಲ್ಲದೇ ಅದರ ಸ್ಥಾಪಕ ಲೀ ಅವರ ಬಂಧನಕ್ಕೆ ವಾರೆಂಟ್ ಹೊರಡಿಸಿದೆ.ಇದೀಗ ಲೀ ಅಮೆರಿಕದಲ್ಲಿದ್ದಾರೆ. ಚೀನಾ ಎಷ್ಟೇ ಚಿತ್ರಹಿಂಸೆ, ನಿಷೇಧ ಹೇರಿದರೂ ಕೂಡ ಇದೀಗ ಚೀನಾದ್ಯಂತ ಸುಮಾರು 70ಮಿಲಿಯನ್ ಮಂದಿ ಲೀ ಅನುಯಾಯಿಗಳಿದ್ದಾರೆ. ಆದರೆ ಪಾಲುನ್ ವರದಿ ಪ್ರಕಾರ ಪ್ರಪಂಚದ 80ದೇಶಗಳಲ್ಲಿ ಒಟ್ಟು 100ಮಿಲಿಯನ್ ಬೆಂಬಲಿಗರನ್ನು ಹೊಂದಿರುವುದಾಗಿ ಹೇಳಿದೆ.

ಲೀ ವಿರುದ್ಧ ಬಂಧನದ ಆದೇಶ ಹೊರಡಿಸಿದ ನಂತರವೂ ಆತ ಯುಎಸ್‌ನಿಂದ ಪ್ರಕಟಣೆಯೊಂದನ್ನು ನೀಡಿದರು,ನಮ್ಮದು ಧ್ಯಾನ ಸಂಸ್ಥೆ ಯಾಗಿದೆ, ಜನರಿಗೆ ನೈತಿಕ ಸ್ಥೈರ್ಯ ಮತ್ತು ಮಾನಸಿಕ ಉನ್ನತಿ ಬಗ್ಗೆ ಹೇಳಲಾಗುತ್ತಿಯೇ ಹೊರತು ನಾವು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಲ್ಲ, ಅಲ್ಲದೇ ನಾನು ಯಾವುದೇ ರಾಜಕೀಯ ಸಂಘಟನೆಯನ್ನೂ ಕಟ್ಟುತ್ತಿಲ್ಲ ಎಂದು ತಿಳಿಸಿದರು.

ಆದರೂ ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಚೀನಾ ಮಾತ್ರ ಲೀ ಬೆಂಬಲಿಗರನ್ನು ಹುಡುಕಿ,ಹುಡುಕಿ ಚಿತ್ರ ಹಿಂಸೆ ನೀಡುತ್ತಿದೆ, ಮಾನವಹಕ್ಕುಗಳ ಕೂಗಿಗೂ ಬೆಲೆ ಇಲ್ಲದಂತಾಗಿದೆ. ಒಂದು ವರದಿ ಪ್ರಕಾರ 2002ರಲ್ಲಿ ಚೀನಾ ಸರ್ಕಾರ ಪಾಲುನ್‌ನ ಸುಮಾರು 1600 ಅನುಯಾಯಿಗಳನ್ನು ಚಿತ್ರ ಹಿಂಸೆ ನೀಡಿ ಹತ್ಯೆಗೈದಿದೆ.

ಕೆಲವರು ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೆಲ್ಲವೂ ಪೊಲೀಸ್ ಕಸ್ಟಡಿಯಲ್ಲೇ ನಡೆದ ಘಟನೆ ಯಾಗಿದೆ. (ಅಮೆರಿಕ ಕೂಡ ಓಶೋ ರಜನೀಶ್ ಬಗ್ಗೆ ಇದೇ ರೀತಿ ಮಾಡಿತ್ತು,ಅವರು ಹೋದಲ್ಲೆಲ್ಲಾ ಅನುಯಾಯಿಗಳದ್ದೇ ಹಿಂಡು, ಅಮೆರಿಕದಲ್ಲಿ ಅವರ ಪ್ರಭಾವ ಹೆಚ್ಚಾಗುತ್ತಿದ್ದುದನ್ನು ನೋಡಿಯೇ ಅವರಿಗೆ ಥೇಲಿಯಂ ಎಂಬ ವಿಷಯುಕ್ತ ಚುಚ್ಚು ಮದ್ದು ನೀಡಿ ವ್ಯವಸ್ಥಿತವಾಗಿ ಸಾವಿನ ದವಡೆಗೆ ನೂಕಿತ್ತು!)

ಇದೀಗ ತನ್ನೆಲ್ಲಾ ಹುಳುಕುಗಳನ್ನು ಮುಚ್ಚಿ ಹಾಕಲು,ಜಗತ್ತಿಗೆ ತಾನೊಬ್ಬ ಬಲಿಷ್ಠ,ಸಜ್ಜನ ಎಂಬ ಫೋಸು ನೀಡಲು ಒಲಿಂಪಿಕ್ ಗೇಮ್ಸ್‌ನ ಅಬ್ಬರದಲ್ಲಿದೆ. ಆದರೆ ಕೆಂಪುಕೋಟೆಯೊಳಗೆ ನಡೆಯುತ್ತಿರುವ ಮಾರಣಹೋಮದ ಬಗ್ಗೆ ಧ್ವನಿ ಎತ್ತುವವರಾರು....

'ಚಿರಮೌನ'ಕ್ಕೆ ಜಾರಿದ ವ್ಯಾಸ

ಇತ್ತೀಚೆಗಷ್ಟೇ ವ್ಯಾಸರು ನನ್ನ ಮೊಬೈಲ್‌ಗೆ ಕರೆ ಮಾಡಿ, ಏನು ಊರಿಗೆ ಬರುವ ವಿಚಾರ ಏನಾದರು ಇದೆಯಾ ಅಂತ ಕ್ಷೇಮವನ್ನು ವಿಚಾರಿಸಿ, ಈ ಬಾರಿಯ ಮಯೂರದಲ್ಲಿ ಕಥೆ ಬರುತ್ತದೆ ಓದಿ ಎಂದಿದ್ದರು. ಪ್ರತಿ ಬಾರಿ ಊರಿಗೆ ಹೋದಾಗ ಕಾಸರಗೋಡಿನ ಮನ್ನಿಪ್ಪಾಡಿಗೆ ಹೋಗಿ ಅವರೊಂದಿಗೆ ಇದ್ದು ಹರಟಿ ಬರುವುದು ವಾಡಿಕೆ, ಆದರೆ ಈ ಬಾರಿ ಕೆಲಸದ ಒತ್ತಡದಿಂದ ಅವರನ್ನು ಮಾತನಾಡಿಸದೆ ಬಂದಿದ್ದೆ, ಹಿರಿಯ ಪತ್ರಕರ್ತ ಮಿತ್ರರಾದ ಕೆ.ತಿಮ್ಮಪ್ಪ ಅವರು ವ್ಯಾಸ ಇನ್ನಿಲ್ಲ ಎಂತ ಮೆಸೇಜ್ ಕಳುಹಿಸಿದ್ದರು. ಅದನ್ನು ನೋಡಿದವನಿಗೆ ನನ್ನಲ್ಲಿ ಅಪರಾಧಿ ಪ್ರಜ್ಞೆ ಮೂಡಿತ್ತು.

ಊರಿಗೆ ಹೋದವನು ಮಾತನಾಡಿ ಬಾರದಿದ್ದಕ್ಕೆ ಆಘಾತಗೊಂಡಿದ್ದೆ. ಚಿಕೂನ್ ಗುನ್ಯಾಕ್ಕೆ ಅವರು ಬಲಿಯಾಗಿರುವುದು ನನ್ನಿಂದ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ಪ್ರತಿಯೊಂದು ಪತ್ರಿಕೆಯ ಮೇಲೆ ಕಣ್ಣಾಡಿಸುವ ವ್ಯಾಸರು, ತನಗಿಂತ ಚಿಕ್ಕವರ ಕಥೆ, ಕವನ, ಲೇಖನಗಳನ್ನು ಓದಿ ಸಂತಸ ಪಡುತ್ತಿದ್ದರು ಮತ್ತು ಅಂತಹವರ ಹೆಸರನ್ನು ನೆನಪಿಟ್ಟುಕೊಂಡು, ನಮ್ಮಲ್ಲಿ ಮಾತನಾಡುವಾಗ, ಒಳ್ಳೇ ಬರೆಯುತ್ತಾರೆ ಮರಾಯ್ರೆ ಎನ್ನುತ್ತಿದ್ದರು.

ಸಹೃದಯಿಯಾಗಿದ್ದ ವ್ಯಾಸರು, ಎಲ್ಲರನ್ನೂ ತುಂಬಾ ಗೌರವದಿಂದ ಕಾಣುತ್ತಿದ್ದರು. ಅವರ ಕಥೆಗಳನ್ನು ಓದಿಕೊಂಡಿದ್ದವರು ಅವರ ಮನೆಗೆ ಆಗಾಗ ಬಂದು ಮಾತನಾಡಿಸಿ ಹೋಗುತ್ತಿದ್ದರು. ನಾವು ಅವರ ಮನೆಗೆ ಹೋದಾಗಲೆಲ್ಲ, ನೋಡಿ ತ್ರಾಸಿ ಇಂತವರು ಬಂದು ಮಾತನಾಡಿಸಿ ಹೋಗಿದ್ದಾರೆ, ಪತ್ರ ಕೂಡ ಬರೆದಿದ್ದಾರೆ ಎಂದೆಲ್ಲಾ ಹೇಳುತ್ತಿದ್ದರು. ವ್ಯಾಸರ ಎದುರು ಕುಳಿತಾಗ ನಾನು ಸುಮ್ಮನೆ ಕುಳಿತಿರುತ್ತಿದ್ದೆ, ಯಾಕೆಂದರೆ ಅವರು ಮಾತನಾಡುವುದೇ ಅಪರೂಪ, ಅದಕ್ಕೆ ಅವರು ಮಾತನಾಡುತ್ತಾರೆಂದರೆ ನಾನು ಬೆಪ್ಪನಂತೆ ಕೇಳಿಸಿಕೊಳ್ಳುತ್ತಿದ್ದೆ.

ಅವರಿಗೆ ಮೊಮ್ಮಕ್ಕಳ ಮೇಲೆ ಅಗಾಧವಾದ ಪ್ರೀತಿ, ಅದರಲ್ಲೂ ಅವರ ಚಿಕ್ಕ ಮೊಮ್ಮಗನ ಮೇಲೆ ಪ್ರಾಣವೇ ಇಟ್ಟುಕೊಂಡಿದ್ದರು. ಒಮ್ಮೆ ಮಿತ್ರ ಮುರಳಿ ಹತ್ತಿರ ವ್ಯಾಸರಿಗೆ ಸಣ್ಣ ಮೊಮ್ಮಗನ ಮೇಲೆ ಅಷ್ಟೊಂದು ವ್ಯಾಮೋಹ ಯಾಕೆ ಎಂದು ಕೇಳಿದ್ದಕ್ಕೆ, ಆತನ ಮುಖ ಅವರ ತಂದೆಯನ್ನು ಹೋಲುವ ಕಾರಣ ಎಂದು ತಿಳಿಸಿದ್ದ. ವ್ಯಾಸರ ತಂದೆಯನ್ನು ರಾಜಕೀಯ ದ್ವೇಷದಿಂದಾಗಿ ನಟ್ಟನಡು ರಸ್ತೆಯಲ್ಲಿ ಕೊಚ್ಚಿ ಕೊಂದಿದ್ದರು. ವ್ಯಾಸರು ಅದನ್ನು ಕಣ್ಣಾರೆ ಕಂಡವರು.

ವ್ಯಾಸರು ಯಾವುದೇ ರಾಜಕೀಯ, ಪಕ್ಷ, ಸಿದ್ದಾಂತಗಳ ಬಗ್ಗೆ ಅಂಟಿಕೊಂಡಿರಲಿಲ್ಲವಾಗಿತ್ತು. ಒಂಟಿತನವನ್ನು,ಮೌನವನ್ನು ಪ್ರೀತಿಸುತ್ತಿದ್ದ ವ್ಯಾಸರಿಗೆ ಸಿಟ್ಟು ಮಾತ್ರ ತುಂಬಾನೇ ಇತ್ತು, ಆದರೆ ಅದನ್ನು ಯಾರ ಎದುರು ತೋರ್ಪಡಿಸುತ್ತಿರಲಿಲ್ಲ, ನಾನು ಆಗಾಗ ಮನೆಗೆ ಹೋಗುತ್ತಿದ್ದಾಗ, ಮನೆಯಲ್ಲಿ ಇವರು ಏನಾದರು ಹೇಳುತ್ತಿರುವಾಗ ಪತ್ನಿ ಅಡ್ಡ ಮಾತನಾಡಿದ ಸಂದರ್ಭ ಅವರ ಮುಖದಲ್ಲಿ ತುಂಬಾ ಕೋಪವನ್ನು ಕಂಡಿದ್ದೆ.

ಅವರಲ್ಲಿ ದುರಂತ ಘಟನೆಗಳನ್ನು ಹೇಳಿದಾಗ ತುಂಬಾ ನೊಂದುಕೊಳ್ಳುತ್ತಿದ್ದರು, ಮತ್ತು ಆ ಘಟನೆಯ ಸುತ್ತ ಕಥಾಹಂದರವನ್ನು ಕಟ್ಟುತ್ತಿದ್ದರು. ರಾತ್ರಿ, ಮಧ್ಯರಾತ್ರಿ ಅವರ ಮನಸ್ಸಿನಲ್ಲಿ ಯಾವಾಗ ಕಥೆ ರೂಪು ತಾಳುತ್ತೊ ಆವಾಗೆಲ್ಲ ಎದ್ದು ಬರೆಯಲು ಕುಳಿತುಕೊಳ್ಳುತ್ತಿದ್ದರು, ಹೆಂಡತಿ ಆಗಾಗ ಟೀ ಪೂರೈಸುತ್ತಿದ್ದರು. ಅವರ ಶಬ್ದ ಜೋಡಣೆ ತುಂಬಾ ವಿಶೇಷವಾದದ್ದು, ಅವರ, ಕಥೆ, ಕವನದ ಹಾಗೆ, ಅವರು ಮಿತ್ರರಿಗೆ ಬರೆಯುತ್ತಿದ್ದ ಪತ್ರಗಳೂ ಕಥೆಯಂತೆ ಇರುತ್ತಿದ್ದವು.

ಕಳೆದ ನಲ್ವತ್ತು ವರ್ಷಗಳಿಂದ ಸಣ್ಣ ಕಥಾ ಪ್ರಪಂಚದಲ್ಲಿ ತಮ್ಮದೆ ಛಾಪನ್ನು ಮೂಡಿಸಿದ್ದ ವ್ಯಾಸರನ್ನು ಕನ್ನಡ ಸಾರಸ್ವತ ಲೋಕ ಅವರನ್ನು ಗುರುತಿಸದೆ ಜಾಣ ಕುರುಡತನ ತೋರಿಸಿತ್ತು! ಮನುಷ್ಯನ ಸ್ವಾರ್ಥ, ದ್ವೇಷಗಳ ಬಗ್ಗೆ ತುಂಬಾ ಮಾತನಾಡುತ್ತಿದ್ದರು, ಆಗಾಗ ಪತ್ರ ಬರೆಯುತ್ತಿದ್ದ ವ್ಯಾಸರು ತುಂಬಾ ಆಪ್ತರಾಗಿದ್ದರು, ನನ್ನಂತಹ ನೂರಾರು ಆಪ್ತವಲಯಗಳನ್ನು ಸೃಷ್ಟಿಕೊಂಡಿದ್ದ ವ್ಯಾಸರು ಸದ್ದಿಲ್ಲದೆ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದ್ದಾರೆ. ಇದೀಗ ಅವರೇ ಸೃಷ್ಟಿಸಿದ ಶಂಕರಿಗುಡ್ಡ, ಶಂಕರಿನದಿಗಳು ಕಥೆಯಾದ ಹಾಗೇ ವ್ಯಾಸರ ಕಥೆಗಳು ಸಾಹಿತ್ಯಲೋಕದಲ್ಲಿ 'ಜೀವ'ಪಡೆಯಬೇಕಾಗಿದೆ....

Sunday, June 29, 2008

ರಜನೀಶ್‌‌ರ ಶೂನ್ಯ ನಾವೆ.....

ಓಶೋ ರಜನೀಶ್ ಮಾತು ಎಷ್ಟು ಸುಂದರವೋ, ಅವರ ತರ್ಕಬದ್ದವಾದ ಬರಹವೂ ಅಷ್ಟೇ ಆಪ್ತವಾಗುತ್ತವೆ. ಆದರೆ ರಜನೀಶ್ ಬಗ್ಗೆ ಒಂದು ವರ್ಗ ತೀವ್ರವಾಗಿ ವಿರೋಧಿಸುತ್ತದೆ, ಆತ ಸೆಕ್ಸ್ ಗುರು, ಲೈಂಗಿಕತೆ ಬಗ್ಗೆ ಮಾತನಾಡುತ್ತಾನೆ ಹೀಗೆ ಆರೋಪಗಳು ಪುಂಖಾನುಪುಂಖವಾಗಿ ಹೊರಬೀಳುತ್ತವೆ. ಆದರೆ ರಜನೀಶ್ ರಾಜಕಾರಣಿ, ಪಂಡಿತ, ಪುರೋಹಿತ, ಮುಲ್ಲಾ, ಪಾದ್ರಿ ಹೀಗೆ ಎಲ್ಲದರ ಬಗ್ಗೆಯೂ ಟೀಕಿಸಿ ಮಾತನಾಡಿದ್ದಾರೆ.

ಯಾವುದೇ ಕಟ್ಟುಪಾಡಿಗೆ ಒಳಗಾಗಿ ಮತಾಂಧರಂತೆ, ಒಂದು ವರ್ಗದ ವಕ್ತಾರರಂತೆ ಅವರು ಮಾತನಾಡಿಲ್ಲ ಆ ಕಾರಣಕ್ಕಾಗಿಯೇ ಅವರು ಇಷ್ಟವಾಗುತ್ತಾರೆ. ರಜನೀಶ್ ಚಾಂಗ್ ತ್ಸು ಅವರ ಹಿನ್ನೆಲೆಯನ್ನಿಟ್ಟುಕೊಂಡು ಮಾತನಾಡಿದ ಶೂನ್ಯ ನಾವೆಯಲ್ಲಿನ ಒಂದು ಅಂಶವನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಯಾಕೆಂದರೆ ರಜನೀಶ್ ಯಾವುದರ ಬಗ್ಗೆಯೇ ಮಾತನಾಡಲಿ, ಅದು ನಮ್ಮನ್ನು ಅಷ್ಟು ಆಕರ್ಷಿಸುತ್ತದೆ. ಇವತ್ತಿನ ಸ್ಥಿತಿಗತಿ, ನಮ್ಮ ಕಾರ್ಯದ ಒತ್ತಡ, ನಾವು ಆ ಸನ್ನಿವೇಶದ ನಡುವೆ ಸಿಕ್ಕಿಬೀಳುತ್ತಿರುವುದನ್ನು ನೋಡಿದರೆ, ರಜನೀಶ್ ಅವರು ಈ ಮಾತು ಸತ್ಯ ಎನ್ನಿಸುತ್ತದೆ....

ಅವರ ಪ್ರಕಾರ ಮನುಷ್ಯ ಅನುಪಯುಕ್ತನಾಗಿರಬೇಕು, ಅರೇ ಇದೇನಪ್ಪಾ, ಎಲ್ಲರೂ ಕ್ರಿಯಾಶೀಲರಾಗಿ ಅಂದರೆ ಈತ ರಜನೀಶರ ಅನುಪಯುಕ್ತರಾಗಿರಿಯನ್ನೇ ಬಹಳ ಖುಷಿಕೊಡುವ ವಿಚಾರ ಎಂದು ಬರೆಯುತ್ತಿದ್ದಾರಲ್ಲಪ್ಪ ಅಂತ ಹುಬ್ಬುಗಟ್ಟಿಕ್ಕಬೇಡಿ. ಅದನ್ನು ಅವರು ಒಂದು ಕಥೆಯ ಮೂಲಕ ವಿವರಿಸುತ್ತಾರೆ. ಒಂದು ನಗರದಲ್ಲಿನ ಯುವಕರನ್ನು ಬಲಾತ್ಕಾರವಾಗಿ ಸೇನೆಗೆ ಸೇರಿಸಲ್ಪಟ್ಟಿದ್ದರಂತೆ. ಏಕೆಂದರೆ ಅವರೆಲ್ಲರೂ ಉಪಯುಕ್ತರು. ಆದರೆ ಒಬ್ಬ ಗೂನು ಬೆನ್ನಿನವನನ್ನು ಮಾತ್ರ ಸೇರಿಸಿಕೊಂಡಿಲ್ಲ.

ಈತ ಅನುಪಯುಕ್ತ ಎಂದು ಬಿಟ್ಟುಬಿಟ್ಟಿದ್ದರು. ನೀವು ಗೂನು ಬೆನ್ನಿನವನಂತಿರಿ, ಏಕೆಂದರೆ ಇವರ ದೃಷ್ಟಿಯಲ್ಲಿ ಉಪಯುಕ್ತರು ಸದಾ ಗೊಂದಲಕ್ಕೆ ಒಳಗಾಗುವವರು. ಜಗತ್ತು ನಿಮ್ಮನ್ನು ಬಳಸಿಕೊಳ್ಳುವುದು, ಪ್ರತಿಯೊಬ್ಬರು ನಿಮ್ಮನ್ನು ಉಪಯೋಗಿಸಲು ಸಿದ್ದರಾಗಿರುವರು, ಹಸ್ತಕ್ಷೇಪ ಮಾಡುತ್ತಲೇ ಇರುತ್ತಾರೆ, ನಿಮ್ಮನ್ನಾಳಲು ಸದಾ ಸಿದ್ದರಾಗಿರುತ್ತಾರೆ. ನೀವು ಅಪ್ರಯೋಜಕರಾಗಿದ್ದಾಗ ನಿಮ್ಮನ್ನು ಜನ ಮರೆತೇ ಬಿಡುತ್ತಾರೆ.

ನಿಮ್ಮನ್ನು ನಿಮ್ಮ ಮೌನದಲ್ಲಿರಲು ಬಿಡುವರು. ಅವರು ನಿಮ್ಮ ಬಗ್ಗೆ ಚಿಂತೆ ಮಾಡುವುದಿಲ್ಲ. ಆ ಕಾರಣಕ್ಕಾಗಿಯೇ ರಜನೀಶ್ ಆ ಮಾತನ್ನು ಬಹಳ ಒತ್ತಿ ಹೇಳಿದ್ದಾರೆ. ಎಚ್ಚರಿಕೆಯಿಂದಿರಿ ಮತ್ತು ಬಲು ಉಪಯುಕ್ತರಾಗದಿರಿ. ಹೀಗಿರದಿದ್ದರೆ ಎಲ್ಲರೂ ನಿಮ್ಮನ್ನು ಶೋಷಣೆ ಮಾಡುವರು. ನಂತರ ಇವರು ನಿಮ್ಮನ್ನು ನಿರ್ವಹಿಸುವರು, ನಿಯಂತ್ರಿಸುವರು, ಮತ್ತಾಗ ನೀವು ಗೊಂದಲಕ್ಕೆ ಒಳಗಾಗುವಿರಿ.

ಯಾಕೆಂದರೆ ನೀವೀಗ ರಾಜಕೀಯದಲ್ಲಿನ ದೊಂಬರಾಟವನ್ನು ಗಮನಿಸಿ ರಜನೀಶ್ ಮಾತುಗಳು ಸತ್ಯ ಎನಿಸುತ್ತದೆ. ಅಲ್ಲಿ 20-30ವರ್ಷ ಕತ್ತೆ (? ) ದುಡಿದ ಹಾಗೇ ದುಡಿದು ತಮಗೆ ಉನ್ನತ ಹುದ್ದೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತಾರೆ, ಆದರೆ ಕೊನೆಗೆ ಅವರನ್ನು ಹೇಳದೇ ಕೇಳದೆ ಒಂದೋ (ಸಿಂಧ್ಯಾ ತರ, ಅವರೇನೂ ಬಿಎಸ್ಪಿಗಾಗಿ ಹೆಚ್ಚು ದುಡಿಯಲಿಲ್ಲ ಬಿಡಿ) ಮೂಲೆಗುಂಪು ಮಾಡುತ್ತಾರೆ, ಇಲ್ಲ ಕಿತ್ತೊಗೆಯುತ್ತಾರೆ.

ಜೆಡಿಎಸ್‌, ಕಾಂಗ್ರೆಸ್, ಬಿಜೆಪಿ ಹೀಗೆ ಮೂಲೆಗುಂಪು ಮಾಡಿದ ಉದಾಹರಣೆ ಬಹಳಷ್ಟಿದೆ. ಆದರೆ ನಿರುಪಯುಕ್ತತೆಯಲ್ಲಿ ಅದರದ್ದೇ ಆದ ಉಪಯುಕ್ತತತೆ ಇದೆ ಎಂಬುದು ರಜನೀಶ್ ಅಭಿಮತ. ಇದೊಂದು ಜೀವಂತ ಅಂಶ ನೀವಿದನ್ನು ಪೂರ್ಣವಾಗಿ ಬಿಟ್ಟು ಬಿಟ್ಟರೆ ಆಗ ಯಾವುದೂ ಸಹ ಉಪಯುಕ್ತವಲ್ಲ, ನಿಷ್ಪ್ರಯೋಜಕ ವಸ್ತುಗಳು ಇರುವುದರಿಂದಲೇ ಉಪಯುಕ್ತ ವಸ್ತುಗಳು ಇರುವುದು.ಆದರೆ ಜಗತ್ತಿನಲ್ಲಿ ಏನಾಗುತ್ತಿದೆ ನೋಡಿ, ವಿನೋದದ ಎಲ್ಲಾ ಚಟುವಟಿಕೆಗಳನ್ನೂ ನಾವು ಇಲ್ಲವಾಗಿಸಿದ್ದೇವೆ.

ಏಕೆಂದರೆ ನಮ್ಮ ಅನಿಸಿಕೆ, ಆಗ ನಮ್ಮಲ್ಲಿಯ ಶಕ್ತಿಯನ್ನು ಪೂರ್ತಿ ಉಪಯೋಗಕರವಾದುದಕ್ಕೆ ವಿನಿಯೋಗಿಸಬಹುದು ಎಂದು. ಆದರೆ ಕೆಲಸವಿಂದು ಬೇಸರ ತರುವಂತಾಗಿದೆ, ನಾವಿಂದು ವಿರುದ್ಧ ಧ್ರುವದೆಡೆಗೆ ಸಾಗಲೇಬೇಕಾಗಿದೆ...ನಿಮ್ಮ ಸುತ್ತಲಿನ ಯಶಸ್ವಿ ವ್ಯಕ್ತಿಗಳನ್ನು ನೋಡಿ, ರಾಜಕಾರಣಿಗಳು, ಧನವಂತರು, ಬೃಹತ್ ಕೈಗಾರಿಕೋದ್ಯಮಿಗಳನ್ನು ಏನಾಗುತ್ತಿದೆ ಅವರಿಗೆ? ಅವರು ಸಂಗ್ರಹಿಸಿರುವ ವಸ್ತುಗಳನ್ನು ನೋಡಬೇಡಿ, ನೇರವಾಗಿ ಅವರನ್ನು ನೋಡಿ.

ನೀವೇನಾದರು ಅವರ ಬಳಿ ಇರುವ ವಸ್ತುಗಳನ್ನು ನೋಡಿದರೆ ಮೋಸ ಹೋಗುವಿರಿ, ವಸ್ತುಗಳಿಗೆ ಅಲ್ಸರ್ ಬರುವುದಿಲ್ಲ, ಕಾರುಗ ಳಿಗೆ ಹೃದಯಾಘಾತವಾಗುವುದಿಲ್ಲ, ಮನೆಗಳನ್ನು ಆಸ್ಪತ್ರೆಗೆ ಸೇರಿಸುವುದಿಲ್ಲ. ಅದಕ್ಕೆ ನೀವು ವಸ್ತುಗಳನ್ನು ನೋಡಬೇಡಿ ಎನ್ನುವ ರಜನೀಶ್, ಈ ವಸ್ತುಗಳ ಮಧ್ಯೆ ಇರುವ ಮನುಷ್ಯನನ್ನು ನೋಡಿ ಎಂದೆನ್ನುತ್ತಾರೆ, ಯಾಕೆಂದರೆ ಆಗ ನಿಮಗೆ ಕಾಣುವುದು ಆತನ ಮತ್ಸರ, ಬಡತನ, ಮುಖವಾಡದ ಬದುಕು, ಆಗ ಭಿಕ್ಷುಕ ಕೂಡ ಈತನಿಗಿಂತ ಮೇಲಾಗಿ ಕಾಣಿಸುತ್ತಾನೆ. ಈತನಿಗಿಂತ ಶ್ರೀಮಂತ ಆತನಾಗುತ್ತಾನೆ. ಬಡವನ ಜೀವನ ಶ್ರೀಮಂತನ ಜೀವನಕ್ಕಿಂತ ಶ್ರೀಮಂತವಾಗಿರುತ್ತದೆ.... ಈಗ ಹೇಳಿ ರಜನೀಶ್ ಮಾತು ಎಲ್ಲೋ ಒಂದೆಡೆ ನಿಜವೆನಿಸುವುದಿಲ್ಲವೇ......

ಎಡಪಕ್ಷಗಳ ''ಎಡ''ಬಿಡಂಗಿತನ....


ಕಾರ್ಮಿಕರ, ರೈತರ, ಶೋಷಿತರ ಧ್ವನಿಯಾಗಿದ್ದ ಕಮ್ಯೂನಿಷ್ಟ್ ಪಕ್ಷ ಯಾವ ಹಾದಿ ಹಿಡಿದಿದೆ. ಅಧಿಕಾರದ ಗದ್ದುಗೆ ಏರಲು ಎಲ್ಲಾ ಪಕ್ಷಗಳಿಗೂ ಒಂದೊಂದು ಅಜೆಂಡಾ ಇದ್ದಂತೆ, ಎಡಪಕ್ಷಗಳು ಕಾರ್ಮಿಕ, ರೈತ ಸಮಸ್ಯೆಗಳ ಅಜೆಂಡಾ ಮುಂದಿಟ್ಟು ಅಧಿಕಾರ ಪಡೆದು ಅದು ಸಾಧಿಸಿದ್ದಾದರು ಏನನ್ನು?. ಸತತವಾಗಿ ಕೆಂಪುಕೋಟೆಯನ್ನು ಭದ್ರಪಡಿಸಿ ಕೊಂಡಿರುವ ಪಶ್ಚಿಮಬಂಗಾಲದಲ್ಲಿ ರೈತರ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಗಮನ ಹರಿಸಿದರೆ, ಎಡಪಕ್ಷಗಳ ತತ್ವ ಸಿದ್ದಾಂತಗಳು ಗಾಳಿಗೆ ತೂರಿ ಹೋಗಿದೆ ಎಂಬುದರಲ್ಲಿ ಯಾವ ಅನುಮಾನವಿಲ್ಲ.
ಜಾಗತೀಕರಣದ ಪ್ರಬಲ ವಿರೋಧಿಯಾಗಿರುವ ಎಡಪಕ್ಷದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಆಧುನಿ ಕತೆಯ ಹರಿಕಾರರಾಗಲು ಹೊರಟಿದ್ದಾರೆ. ತಾವು ಅಭಿವೃದ್ದಿ ವಿರೋಧಿಗಳಲ್ಲ, ಹಳೇ ಸಿದ್ದಾಂತಕ್ಕೆ ಜೋತು ಬಿದ್ದರೆ ಪ್ರಗತಿ ಸಾಧ್ಯವಿಲ್ಲ ಎಂದು ವಿಶ್ಲೇಷಣೆಗಿಳಿದ ಬುದ್ಧದೇವ್, ಪ್ರಗತಿಯ ಹರಿಕಾರರಾಗಲು ಹೋಗಿ ರೈತರ ಜನಸಾಮಾನ್ಯರ ಬದುಕನ್ನು ಬೀದಿಪಾಲು ಮಾಡಿಬಿಟ್ಟಿದ್ದಾರೆ.
ಪಶ್ಚಿಮಬಂಗಾಳದಲ್ಲಿ 1947 ರಿಂದ 2000ವರೆಗೆ ಅಭಿವೃದ್ಧಿ ಹೆಸರಿನಲ್ಲಿ 47ಲಕ್ಷ ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಇದ ರಿಂದ ಸುಮಾರು 70 ಲಕ್ಷ ಜನರು ತೊಂದರೆ ಅನುಭವಿಸುವಂತಾಗಿದೆ. ಇದರಲ್ಲಿ 36ಲಕ್ಷ ಜನ ವಾಸಿಸಲು ಜಾಗವಿಲ್ಲದೆ ಪರದಾಡುವಂತಾದರೆ, 34 ಲಕ್ಷ ಜನ ಹೊಟ್ಟೆಪಾಡಿಗಾಗಿ ಇದ್ದ ಸಾಗುವಳಿ ಭೂಮಿಯನ್ನೂ ಕಿತ್ತುಕೊಂಡಿದ್ದರು! ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಈ ರೀತಿ ಕೈಗಾರಿಕಾ ಹೆಸರಿನಲ್ಲಿ ಭೂಮಿ ಕಳೆದುಕೊಂಡವರು ಸರಾಸರಿ 60ಮಿಲಿಯನ್ ಮಂದಿ!
ಅದರಲ್ಲಿ ಶೇ.10ರಷ್ಟು ಭಾಗ ಪಶ್ಚಿಮಬಂಗಾಳದ ರೈತರು. ಹೀಗೆ ಭೂಮಿ ಕಳೆದುಕೊಂಡವರಲ್ಲಿ ಶೇ.20 ಬುಡಕಟ್ಟು ಜನಾಂಗ, ಶೇ.30 ದಲಿತರು, ಇನ್ನುಳಿದ ಶೇ.20 ಅತ್ಯಂತ ಕಡು ಬಡವರು, ಮೀನು ಹಿಡಿಯುವವರು ಮತ್ತು ಕೂಲಿ ಕಾರ್ಮಿಕರು. ಇವರಾರು ಧ್ವನಿ ಎತ್ತಲು ಶಕ್ತರಾಗದ ಜನ!!
1951-1955ರವರೆಗೆ ನಡೆದ ಅಭಿವೃದ್ದಿ ಕಾರ್ಯದಲ್ಲಿ ಭೂರಹಿತವಾದ ಶೇ.28ರಷ್ಟು ಜನರಿಗೆ ಪುನರ್ವಸತಿ ಕಲ್ಪಿಸಿಕೊಡಲಾಗಿತ್ತು. ಅದರಂತೆ ಒರಿಸ್ಸಾ ಶೇ.33ರಷ್ಟು, ಗೋವಾ ಶೇ.34, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪುನರ್ವಸತಿ ಕಲ್ಪಿಸಿಕೊಟ್ಟ ರಾಜ್ಯ ಪಶ್ಚಿಮಬಂಗಾಳ(ಕೇವಲ ಶೇ.9), ಮತ್ತೊಂದು ರಾಜ್ಯ ಕೇರಳ(ಶೇ.13), ಇವೆರಡೂ ರಾಜ್ಯಗಳು ರೈತರ ಮತ್ತು ಕಾರ್ಮಿಕರ ಪರ ಎಂದು ಅಧಿಕಾರದ ಗದ್ದುಗೆ ಏರಿದ್ದರೂ ಸಹ ಇವರು ರೈತರ ಬಗ್ಗೆ ತೋರಿದ ಕಾಳಜಿ ಎಷ್ಟರ ಮಟ್ಟಿಗೆ ಇದೆ ಎಂಬುದು ಈ ಅಂಕಿ-ಅಂಶಗಳಿಂದ ಸಾಬೀತಾಗುತ್ತದೆ.!! ರೈತರ ಬದುಕಿನ ಬಗ್ಗೆ, ಅವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಪಶ್ಚಿಮಬಂಗಾಳದಲ್ಲಿ ಒತ್ತಡ ಬಿದ್ದಿದ್ದರೆ ಅದು ಮಾನವ ಹಕ್ಕುಗಳ ಕಾರ್ಯಕರ್ತರಿಂದ.
ಸಿಂಗೂರ್‌ನಲ್ಲಿ ಭೂಮಿ ಕಳೆದುಕೊಂಡವರ ರೈತರಿಗೆ ಪುನರ್ವಸತಿ ಕಲ್ಪಿಸಿಕೊಡುವ ಬಗ್ಗೆ ಪಶ್ಚಿಮಬಂಗಾಳ ಸರಕಾರ ಆಶ್ವಾಸನೆ ನೀಡಿದೆ. ಆದರೆ 70 ಲಕ್ಷ ಜನರಿಂದ ಜಾಗ ಕಿತ್ತುಕೊಂಡಿದ್ದರೂ ಸಹ ಅವರ ಹೊಟ್ಟೆಪಾಡಿಗಾಗಲಿ, ಪುನರ್ವಸತಿ ಕುರಿತಾಗಲಿ ಸರಕಾರ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ!.ಪಶ್ಚಿಮಬಂಗಾಳ ಹೆಚ್ಚಿನ ಭೂಮಿಯನ್ನು ವಶಪಡಿಸಿಕೊಳ್ಳುವ ಮೂಲಕ ಖಾಸಗಿ ಬಂಡವಾಳ ಹೂಡಿಕೆದಾರರಿಗೆ ಅವಕಾಶ ಮಾಡಿಕೊಡುತ್ತಿದೆ ವಿನಃ ಜನಸಾಮಾನ್ಯರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಸುಮಾರು 250 ರೈತರು ಬೆಳೆದಿರುವ 997 ಹೆಕ್ಟೇರ್ ಕೃಷಿ ಭೂಮಿಯನ್ನು ಸಿಂಗೂರ್‌ನಲ್ಲಿ ವಶಪಡಿಸಿಕೊಂಡಿತ್ತು. ಆದರೆ ಆ ಭೂಮಿಯನ್ನು ನೋಂದಾಯಿಸಿರಲಿಲ್ಲ, ಆ ನಿಟ್ಟಿನಲ್ಲಿ ಅವರಾರಿಗೂ ಪರಿಹಾರವೂ ಇಲ್ಲ, ಪುನರ್ವಸತಿಗೆ ಅವಕಾಶವೂ ಇಲ್ಲ. ಹೀಗೆ ಕೃಷಿ ಭೂಮಿ ಕಳೆದುಕೊಂಡ ಒಂದು ಸಾವಿರ ಕುಟುಂಬಗಳು ವಿವಿಧ ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದೆ. ಕೃಷಿ ಮಾಡುತ್ತಿರುವ ರೈತರು ದಿನದ ಸಂಬಳಕ್ಕಾಗಿ ದುಡಿಯುವವರು, ಶೇ.50ಕ್ಕಿಂತಲೂ ಹೆಚ್ಚಿನ ಜನರಿಗೆ ಕೆಲಸವಿಲ್ಲ. ಅವರೆಲ್ಲ ಬಡತನ ರೇಖೆಗಿಂತ ಕೆಳಗಿರುವವರು.
ಹೆಚ್ಚಿನವರು ತಮ್ಮ ಮಕ್ಕಳನ್ನು ಶಾಲೆಯಿಂದ ಬಲವಂತವಾಗಿ ಬಿಡಿಸಿ, ಕೆಲಸ ಮಾಡಲು ಕಳುಹಿಸುತ್ತಿದ್ದಾರೆ. ಅದಕ್ಕಿಂತಲೂ ಆಘಾತಕಾರಿ ಅಂಶ ಆದಾಯ ಗಳಿಕೆಗಾಗಿ ಹೆಚ್ಚಿನವರು ಪಾತಕ ಕೃತ್ಯ ಮತ್ತು ವೇಶ್ಯಾವಾಟಿಕೆಗೆ ಇಳಿದುಬಿಟ್ಟಿದ್ದಾರೆ!! ಇವೆಲ್ಲದರ ಪರಿಣಾಮ ಪಶ್ಚಿಮಬಂಗಾಳ ಸರಕಾರ ಈಗ ಕರಾಳ ನೋವನ್ನು ಅನುಭವಿಸುತ್ತಿದೆ. ಇತ್ತೀಚೆಗಷ್ಟೇ ಪಶ್ಚಿಮಬಂಗಾಳದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನ ಎಡಪಕ್ಷಗಳನ್ನು ತಿರಸ್ಕರಿಸಿದ್ದಾರೆ.
ಜೂನ್ 29ರ ಟೈಮ್ಸ್ ಆಫ್ ಇಂಡಿಯಾದಲ್ಲಿ ಖ್ಯಾತ ಲೇಖಕಿ ಮಹಾಶ್ವೇತ ದೇವಿಯವರು ಕಾರೋಲ್ ಅಂದ್ರಾದೆ ಅವರಿಗೆ ನೀಡಿದ ಸಂದರ್ಶನದಲ್ಲಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಅವರು ಗುಜರಾತ್‌ನ ನರೇಂದ್ರ ಮೋದಿಗಿಂತ ಕಡೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತ್ಯತೀತ, ರೈತ ಪರ ಮುಖವಾಡದ ಎಡಪಕ್ಷ ಮೂಲಭೂತವಾದಿಗಳ ಒತ್ತಡಕ್ಕೆ ಮಣಿದೇ ತಸ್ಲೀಮಾ ನಸ್ರೀನ್‌ಳಿಗೆ ರಕ್ಷಣೆ ನೀಡಲಾಗದೆ ಕೋಲ್ಕತಾದಿಂದ ಹೊರಗಟ್ಟಿದೆ.
ಪಶ್ಚಿಮಬಂಗಾಳದ ನಂದಿಗ್ರಾಮದಲ್ಲಿ ನಡೆದ ಹಿಂಸೆ, ಅತ್ಯಾಚಾರ ಭಯಾನಕ ಹುಟ್ಟಿಸುವಂತಾದದ್ದು, ಆ ಕಾರಣಕ್ಕಾಗಿಯೇ ಪಶ್ಚಿಮಬಂಗಾಳದ ಹೃದಯಭಾಗದಂತಿರುವ ನಂದಿಗ್ರಾಮ ಮತ್ತು ಸಿಂಗೂರ್‌ನಲ್ಲಿ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಎಡಪಕ್ಷವನ್ನು ಜನ ತಿರಸ್ಕರಿಸಿದ್ದಾರೆ.
ನಿಜಕ್ಕೂ ಪಶ್ಚಿಮಬಂಗಾಳ ಸರಕಾರಕ್ಕೆ ಆಡಳಿತದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಹಾಶ್ವೇತ ದೇವಿ ಹೇಳಿರುವ ಮಾತಿನಲ್ಲಿ ಯಾವುದೇ ಹುರುಳಿಲ್ಲದಿಲ್ಲ. ಅಲ್ಲದೇ ಗುಜರಾತ್‌ನಲ್ಲಿ ಕೋಮು ಹಿಂಸಾಚಾರ ನಡೆದ ಬಳಿಕ ತಾನು ಅಹಮದಾಬಾದ್, ಬರೋಡಾ ಮತ್ತು ಸೂರತ್‌ಗೆ ಭೇಟಿ ನೀಡಿದ್ದೆ, ಅಲ್ಲಿ ಉತ್ತಮವಾದ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿದೆ, ವಿದ್ಯುತ್ ವ್ಯವಸ್ಥೆ ಮಾದರಿಯಾಗಿದೆ. ಅದೇ ಪಶ್ಚಿಮಬಂಗಾಳವನ್ನು ಒಮ್ಮೆ ನೋಡಿ, ರಸ್ತೆ ಇಲ್ಲ, ಆರೋಗ್ಯ ಕೇಂದ್ರ, ವಿದ್ಯುತ್ ಏನೂಂದ್ರೆ ಏನೂ ಇಲ್ಲ ಇಲ್ಲಿ ಎಂದು ದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಅಣುಒಪ್ಪಂದದಲ್ಲಿಯೂ ಖ್ಯಾತೆ ತೆಗೆಯುತ್ತಿರುವ ಎಡಪಕ್ಷಗಳು ಯಾವ, ಸಿದ್ದಾಂತ, ತಾತ್ವಿಕ ನೆಲೆಗಟ್ಟಿನ ಮೇಲೆ ಹೋರಾಟ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದೇ ಜನರಲ್ಲಿ ಗೊಂದಲ ಹುಟ್ಟಿಸುತ್ತಿದ್ದರೆ, ಮತ್ತೊಂದೆಡೆ ಎಡಪಕ್ಷಗಳ ಧೋರಣೆ ಕಾರ್ಮಿಕ ವರ್ಗ ಸೇರಿದಂತೆ ಜನಸಾಮಾನ್ಯರಲ್ಲೂ ರೇಜಿಗೆ ಹುಟ್ಟಿಸಿದೆ. ಎಡಪಕ್ಷಗಳು ಎತ್ತ ಸಾಗುತ್ತಿವೆ.....

Tuesday, May 27, 2008

ಹೂ ಕಿಲ್ಡ್ ಗಾಂಧಿ.....


ಸ್ವಾತಂತ್ರ್ಯ ಚಳವಳಿಗಾರರಲ್ಲಿ ನನ್ನನ್ನ ಬಹುವಾಗಿ ಕಾಡಿದ ವ್ಯಕ್ತಿ ''ವೀರ ಸಾವರ್‌‌ಕರ್'', ಪಿಯುಸಿಯಲ್ಲಿ ಇತಿಹಾಸ ಓದುವಾಗ ಸಾವರ್‌‌ಕರ್ ಹೋರಾಟದ ಬಗ್ಗೆ ಅಭಿಮಾನ, ಮೆಚ್ಚುಗೆ ತುಂಬಿತ್ತು. ಆ ಸಂದರ್ಭದಲ್ಲಿ ಆರ್‌ಎಸ್‌‌ಎಸ್‌ನ ಶಿವರಾಮು ಅವರು ಬರೆದ ''ಆತ್ಮಾಹುತಿ' ಪುಸ್ತಕ ಓದಿದ ಮೇಲಂತೂ ಎಂತಹ ವ್ಯಕ್ತಿಯಾದರು ಸಾವರ್‌ಕರ್ ದೇಶಪ್ರೇಮದ ಬಗ್ಗೆ ಅಪಸ್ವರ ಎತ್ತುವಂತಿಲ್ಲ. ಆದರೆ ಯಾವಾಗ ಅಟಲ್‌‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌‌ಡಿಎ ಸರಕಾರ ಸಂಸತ್ ಭವನದಲ್ಲಿ ಗಾಂಧಿ ಫೋಟೋದ ಮುಂಭಾಗ ಸಾವರ್‌‌ಕರ್ ಪೋಟೋ ತೂಗು ಹಾಕಿದರೋ ಆಗ ಪ್ರತಿಭಟನೆ ಭುಗಿಲೆದ್ದಿತು.
ಗಾಂಧಿ ಹತ್ಯೆ ಸಂಚು ರೂಪಿಸಿದ ಸಾವರ್‌‌ಕರ್‌‌ರಂತಹವರಿಗೆ ಅಲ್ಲಿ ಸ್ಥಾನ ನೀಡುವುದು ರಾಷ್ಟ್ರಪಿತನಿಗೆ ಮಾಡಿದ ಅವಮಾನ ಎಂಬುದಾಗಿ ಬಿಜೆಪಿಯನ್ನು ಹೊರತುಪಡಿಸಿ ಎಲ್ಲಾ ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ 50 ವರ್ಷಗಳ ಕಾಲ ಕರಿನೀರ ಶಿಕ್ಷೆಯನ್ನು ಅನುಭವಿಸಿದ ವೀರ ಸಾವರ್‌‌ಕರ್ ನಿಜಕ್ಕೂ ವೀರರೇ ? ಅವರು ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಬ್ರಿಟಿಷರಲ್ಲಿ ಗೋಗರೆದಿದ್ದರು....ಹೀಗೆ ಒಂದೊಂದೆ ಅಂಶಗಳು ತಿಳಿಯತೊಡಗಿದಾಗ ಸಾವರ್‌‌ಕರ್ ಕುರಿತ ಪರ-ವಿರೋಧದ ಪುಸ್ತಕಗಳನ್ನು ಜಾಲಾಡತೊಡಗಿದ್ದೆ.ಆ ನಿಟ್ಟಿನಲ್ಲಿ ಕನ್ನಡದ ಪ್ರಮುಖ ಲೇಖಕ, ಅನುವಾದದಲ್ಲಿ ಸಿದ್ಧಹಸ್ತರಾಗಿರುವ ರವಿ ಬೆಳೆಗೆರೆಯವರು ಇದೀಗ 95ರ ವಯೋವೃದ್ದ ಮನೋಹರ್ ಮಳಗಾಂವ್‌‌ಕರ್ ಅವರು ಬರೆದಿರುವ ''ಹೂ ಕಿಲ್ಡ್ ಗಾಂಧಿ'' ಪುಸ್ತಕದ ಅನುವಾದವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಬೆಳೆಗರೆಯವರು ಈ ಮೊದಲು ಬರೆದ ಗಾಂಧಿ ಮತ್ತು ಹತ್ಯೆ ಸಾಕಷ್ಟು ಚರ್ಚೆಗೆ ಈಡಾಗಿತ್ತು. ಇದೀಗ ಸಾವರ್‌ಕರ್‌‌ಗೆ ಸಂಬಂಧಿಸಿದ ಪುಸ್ತಕದ ಬಿಡುಗಡೆಗೆ ಮುನ್ನವೇ ಅವರು ಹಾಯ್‌‌ಬೆಂಗಳೂರು ಇತ್ತೀಚೆಗಿನ ಸಂಚಿಕೆಯಲ್ಲಿ, ತಾನು ಪುಸ್ತಕ ಅನುವಾದದಲ್ಲಿ ತೊಡಗಿದಾಗ, ನನಗೆ ಹೊಸದಾದ ಗೋಡ್ಸೆ, ಅಪ್ಟೆ ಕಾಣಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ.ಅದಕ್ಕೂ ಮೊದಲು ನಾನು ಉದಾಹರಿಸ ಹೊರಟಿರುವುದು ಕನ್ನಡದ ಹಿರಿಯ ಲೇಖಕರು ಆಗಿರುವ ಕೋ.ಚೆನ್ನಬಸಪ್ಪ ಅವರು ''ಗಾಂಧಿ ಹಂತಕರು ಯಾರು'' ಎಂಬ ಪುಸ್ತಕ ಕೂಡ ಈಗ ಮಾರುಕಟ್ಟೆಯಲ್ಲಿದೆ.ಚೆನ್ನಬಸಪ್ಪ ಅವರು ಗಾಂಧೀಜಿ ಹತ್ಯೆ ಸೇರಿದಂತೆ ಸಾವರ್‌‌ಕರ್ ಅವರು ದಯಾಭಿಕ್ಷೆ ಬೇಡಿದ ಪತ್ರದ ನಕಲನ್ನೂ ಕೂಡ ಪುಸ್ತಕದಲ್ಲಿ ದಾಖಲಿಸಿದ್ದಾರೆ.ಸಾವರ್‌‌ಕರ್‌‌ರನ್ನು ತನ್ನ ಗುರುವೆಂದೇ ನಂಬಿದ್ದ ಗೋಡ್ಸೆಯ ಮೇಲೆ ಅವರಿಗೆ ಅಪಾರ ಪ್ರೀತಿ, ಆದರೂ ಸಾವರ್‌‌ಕರ್ ಅವರು ಗಾಂಧಿ ಹತ್ಯೆಯ ವಿಚಾರಣೆ ವೇಳೆ ತನಗೆ ಗೋಡ್ಸೆ ಪರಿಚಯವೇ ಇಲ್ಲವೆಂಬಂತೆ ನಟಿಸುವ ಮೂಲಕ, ಚಾಣಾಕ್ಷತನದಿಂದ ತಮ್ಮ ಮೇಲಿನ ಆರೋಪದಿಂದ ಬಚಾವಾಗಿದ್ದರು ಎಂದು ಸಾಕ್ಷ್ಯಾಧಾರಗಳ ಸಹಿತ ವಿವರಿಸಿದ್ದಾರೆ.ಭಾಷಾಂತರದಲ್ಲಿ ಸಿದ್ಧಹಸ್ತರಾಗಿರುವ ರವಿಬೆಳೆಗೆರೆಯವರ ಪುಸ್ತಕ ಬಿಡುಗಡೆಯಾದ ಮೇಲೆ ಅದು ಪಡೆಯುವ ಪ್ರಚಾರ,ಚರ್ಚೆ ಬಹುಶಃ ಚೆನ್ನಬಸಪ್ಪ ಅವರ ಹೊತ್ತಗೆ ದೊರೆತಿಲ್ಲ ಎಂಬುದು ಸತ್ಯ.
ಆ ನಿಟ್ಟಿನಲ್ಲಿ ನಾನು ಕೂಡ ಮನೋಹರ್ ಮಳ್‌ಗಾಂವ್‌‌ಕರ್ ಅವರ ಇಂಗ್ಲಿಷ್ ಆವೃತ್ತಿಯನ್ನು ಬೆಳೆಗೆರೆ ಕನ್ನಡಕ್ಕೆ ತರ್ಜುಮೆ ಮಾಡಿ ಬಿಡುಗಡೆಗೊಳಿಸುವುದನ್ನು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ.ಆದರೂ ಮೇ 28ಕ್ಕೆ ಸಾವರ್‌‌ಕರ್ ಅವರ ಜನ್ಮ ಜಯಂತಿ ಆ ಹಿನ್ನೆಲೆಯಲ್ಲಿ ಚೆನ್ನಬಸಪ್ಪ ಅವರು ಬರೆದಿರುವ ಪುಸ್ತಕದ ಅಂಶವನ್ನು ದಾಖಲಿಸುತ್ತ ಗಾಂಧಿ ಹತ್ಯೆ ಬಗೆಗಿನ ಮತ್ತೊಂದು ಮುಖದ ಪರಿಚಯವಾಗುವ ನಿಟ್ಟಿನಲ್ಲಿ ಈ ಬರಹ....
ಮಹಾತ್ಮನ ಹತ್ಯಾಕಾಂಡ: ಗಾಂಧಿ ಹತ್ಯೆಗೆ ತಾನೊಬ್ಬನೆ ಕಾರಣ ಅದರಲ್ಲಿ ಮತ್ತ್ಯಾರೂ ಭಾಗಿಯಾಗಿಲ್ಲ ಎಂದು ನಾಥೂರಾಮ್ ನ್ಯಾಯಾಲಯದಲ್ಲಿ ''ಕೊನೆಯ''ವರೆಗೂ ವಾದಿಸಿದ್ದ. ಸಾವರ್‌‌ಕರರು ತಮಗೆ ನಾಥೂರಾಮ್ ಯಾರೆಂಬ ಬಗ್ಗೆ ಸರಿಯಾಗಿ ತಿಳಿದಿಲ್ಲ ಎಂದು ವಿಚಾರಣೆ ವೇಳೆ ವಾದಿಸಿದ್ದರು. ಅಲ್ಲದೇ ಗಾಂಧಿ ಹತ್ಯೆ ವಿಚಾರಣೆ ವೇಳೆ ಒಂದು ದಿನವೂ ನಾಥೂರಾಮನನ್ನು ಕಣ್ಣೆತ್ತಿ ನೋಡಿರಲಿಲ್ಲ!! 1930ರಿಂದ 1948ರವರೆಗಿನ ಗಳಸ್ಯ ಕಂಠಸ್ಯ ಗೆಳೆತನ ಈ ರೀತಿ ಅಪರಿಚಿತವಾಗಲು ಕಾರಣವೇನು ?.ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲೂ ಗಾಂಧಿ ಮೇಲೆ ನಾಲ್ಕೈದು ಬಾರಿ ಹತ್ಯಾ ಪ್ರಯತ್ನಗಳು ನಡೆದಿದ್ದವು.
ಆದರೆ ಆಫ್ರಿಕಾದ ''ಸ್ಮಟ್ಸ್'' ಆಡಳಿತ ಗಾಂಧಿ ಕೊಲೆಯನ್ನು ತಪ್ಪಿಸಿತ್ತು. ಭಾರತದಲ್ಲಿ ಆಗಿನ ಬ್ರಿಟಿಷ್ ಆಡಳಿತ ಗಾಂಧಿಗೆ ಪ್ರಾಣಾ ಪಾಯವಾಗದಂತೆ ರಕ್ಷಿಸಿಕೊಂಡು ಬಂದಿತ್ತು. ಆದರೆ ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯ ಬಂದ ಆರು ತಿಂಗಳಲ್ಲಿ ಅವರ ಪ್ರಾಣ ರಕ್ಷಣೆ ಮಾಡಲಾರದೆ ಹಿಂದೂಗಳ ಕೈಯಲ್ಲೇ ಹತರಾಗಿದ್ದರು. ಆಗ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕಡು ವಿರೋಧಿ ವಿನ್ಸೆಂಟ್ ಚರ್ಚಿಲ್ ಕೂಡ, ನಾವು ಗಾಂಧಿ ಪ್ರಾಣವನ್ನು 30ವರ್ಷ ರಕ್ಷಿಸಿದ್ದೇವು, ಸ್ವತಂತ್ರ (ಗಾಂಧಿ ಹತ್ಯೆ ನಡೆಯಲೇಬೇಕಾದದ್ದು ಎಂಬುದಕ್ಕೆ ಇಂದು ಬಹುತೇಕ ಸಹಮತ ಇದೆ!!) ಭಾರತ ಒಂದು ವರ್ಷ ಕೂಡ ಅವರನ್ನು ರಕ್ಷಿಸಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದರು.ನಾಥೂರಾಮ ಗೋಡ್ಸೆ ನಾನೇ ಗಾಂಧಿ ಹತ್ಯೆ ಮಾಡಿದ್ದ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆದರೂ ಮತ್ಯಾಕೆ ಗಾಂಧಿ ಹತ್ಯೆಯ ಕುರಿತು ಕೆದಕಬೇಕು ಎಂಬ ಪ್ರಶ್ನೆ ಉದ್ಭವಿಸಿಬಹುದು.
ಹೌದು, ಗಾಂಧಿ ಹತ್ಯೆಯನ್ನು ಮಾಡಿಸಿದವರು ಯಾರು?!ಯಾರು ಶಿಕ್ಷಾರ್ಹರು ಎಂಬುದು ನ್ಯಾಯಾಲಯದ ಮುಂದಿದ್ದ ಪ್ರಶ್ನೆ ಯಾಗಿತ್ತು. ಒಂದು ವೇಳೆ ನಾಥೂರಾಮ್ ಗೋಡ್ಸೆ ಒಬ್ಬನೇ ಆರೋಪಿತನಾಗಿದ್ದರೆ ದೋಷಾರೋಪಣೆಯನ್ನು ಓದಿ ಹೇಳಿ ಅವನ ತಪ್ಪೊಪ್ಪಿಗೆಯ ಹೇಳಿಕೆಯನ್ನು ನ್ಯಾಯಾಧೀಶರು ದಾಖಲಿಸಿ ಅವನು ದೋಷಿ ಎಂದು ತೀರ್ಪು ನೀಡುವುದಕ್ಕೆ ಯಾವ ಕಷ್ಟವೂ ಇರುತ್ತಿರಲಿಲ್ಲ.ಆದರೆ ಆ ಸಂದರ್ಭದಲ್ಲಿ ಸಂಗ್ರಹಿಸಿದ ದಾಖಲೆ, ಮಾಹಿತಿ ಆಧಾರದ ಮೇಲೆ ವೀರ ಸಾವರ್‌‌ಕರ್ ಗಾಂಧಿ ಹತ್ಯೆಯ ಪಿತೂರಿಯಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ನೆರವಾಗಿದ್ದರು ಎಂಬ ಅಂಶ ತನಿಖಾಧಿಕಾರಿ ನಗರವಾಲಾರಿಗೆ ಮನವರಿಕೆ ಆಗಿತ್ತು. ಹತ್ಯೆ ನಡೆಸಿದ ಆರೋಪಿಗಳೊಂದಿಗೆ ಅವರಿಗೆ ಸಂಪೂರ್ಣ ಸಂಪರ್ಕವಿತ್ತು.
ನಿಕಟ ಪರಿಚಯ, ಬೆಂಬಲ ಇತ್ತೆಂದು ಮಾಹಿತಿ ಸಂಗ್ರಹಿಸಿದ್ದರು.ಅವರನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಿ ಬಂಧಿಸುವುದೇ ಬೇಡವೇ ಎಂಬ ಬಗ್ಗೆ ಮುಂಬೈ ಗೃಹಮಂತ್ರಿ ಮೊರಾರ್ಜಿ ದೇಸಾಯಿ ಜತೆ ಸಮಾಲೋಚಿನೆ ನಡೆಸಿ, ಸಾವರ್‌‌ಕರರು ಕಳೆದ ಶತಮಾನದ ಆದಿಯಲ್ಲಿ ಅಪ್ರತಿಮ ಸಾಹಸ ಮಾಡಿದ್ದರು ಎಂಬುದರಲ್ಲಿ ಸಂಶಯ ಇಲ್ಲ, ಆ ಪ್ರಯತ್ನದಲ್ಲಿ ಅಂಡಮಾನ್ ದ್ವೀಪದಲ್ಲಿ ದೀರ್ಘಾವಧಿಯ ಸೆರೆಮನೆವಾಸ ಅನುಭವಿಸಿದ್ದರು. ಅವರು ಬರೆದ ಭಾರತೀಯ ಪ್ರಥಮ ಸ್ವಾತಂತ್ರ್ಯ ಸಮರ(1857) ಆಗ ಪ್ರಸಿದ್ಧವಾಗಿದ್ದು, ಸಾವಿರಾರು ದೇಶಪ್ರೇಮಿಗಳಿಗೆ ಸ್ಫೂರ್ತಿ ನೀಡಿತ್ತು.
ಈ ಹಿನ್ನೆಲೆಯಲ್ಲಿ ವೀರ ಸಾವರ್‌‌ಕರರು ಹಿಂದೆ ದೇಶಕ್ಕಾಗಿ ಬಹಳ ತ್ಯಾಗ ಮಾಡಿದ್ದಾರೆ ಅವರನ್ನು ವಿಚಾರಣೆಗೆ ಗುರಿ ಪಡಿಸುವದೇ ಎಂದು ನಗರವಾಲ್ ಕೇಳಿದ್ದರು. ಅದಕ್ಕೆ ಮೊರಾರ್ಜಿ ದೇಸಾಯಿ, ಅವರು ಈ ಹಿಂದೆ ಮಾಡಿದ ತ್ಯಾಗ ಇಂದು ಮಾಡಿರುವ ಕೃತ್ಯದಿಂದ ಅಳಿಸಿ ಹೋಗಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಮೊರಾರ್ಜಿ ಆದೇಶ ನೀಡಿದ್ದರು. ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಕೂಡ ವಿಚಾರಣೆಗೆ ಅನುಮತಿ ನೀಡಿದ್ದರು.1948 ಜನವರಿ 15 ಮತ್ತು 17ರಂದು ನಾಥೂರಾಮ್ ಗೋಡ್ಸೆ, ನಾರಾಯಣ ಅಪ್ಟೆ, ಬಡಗೆ ಸಾವರ್‌ಕರ್ ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಹೊರಬರುವ ಸಂದರ್ಭದಲ್ಲಿ ''ಯಶಸ್ವಿಯಾಗಿ ಹಿಂದಿರುಗಿ ಬನ್ನಿ''ಎಂದು ಸಾವರ್‌‌ಕರರು ಆಶೀರ್ವದಿಸಿದ್ದರು ಎಂದು ಸಾಕ್ಷ್ಯ ಹೇಳಲಾಗಿತ್ತು. ಆದರೆ ವಿಚಾರಣೆ ವೇಳೆ ಸಾವರ್‌‌ಕರರು ತರ್ಕಬದ್ಧವಾಗಿ ವಾದ ಮಂಡಿಸಿ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದರು.
ದೀರ್ಘ ವಿಚಾರಣೆಯ ನಂತರ ಅವರನ್ನು ಸಂಶಯದ ಸೌಲಭ್ಯ(Benefit of Doubt)ಆಧಾರದ ಮೇಲೆ ಖುಲಾಸೆ ಮಾಡಲಾ ಗಿತ್ತು.ಸಾವರ್‌ಕರ್ ಹೊರತಾಗಿ ಉಳಿದ ಐದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಗೋಡ್ಸೆ ಮತ್ತು ನಾರಾಯಣ ಅಪ್ಟೆಗೆ ಗಲ್ಲು ಶಿಕ್ಷೆ ವಿಧಿಸಿ, ರಾಮಕೃಷ್ಣ ಕರಕರೆ, ಮದನಲಾಲ ಪಹ್ವಾ, ಶಂಕರ ಕ್ರಿಸ್ಟಯ್ಯ, ಗೋಪಾಲ ಗೋಡ್ಸೆ,ಡಾ.ಪರಚುರೆಗೆ ಜೀವಾವಧಿ ಶಿಕ್ಷೆ ನೀಡಲಾಯಿತು.ಇದೀಗ ಮುಖ್ಯವಾದದ್ದೆಂದರೆ ಗಾಂಧಿ ಹತ್ಯೆಯ ಹಿಂದಿನ ಪ್ರೇರಣೆ ಯಾವುದು ? ಹಿಂದು-ಮುಸ್ಲಿಂ ಐಕ್ಯತೆ ಪ್ರಶ್ನೆ, ದೇಶ ವಿಭಜನೆಗೆ ಪ್ರಬಲ ವಿರೋಧಿಯಾಗಿದ್ದವರು ಗಾಂಧೀಜಿ.
ನನ್ನ ಹೆಣವನ್ನು ತುಳಿದು ದಾಟಿ ದೇಶವನ್ನು ವಿಭಜಿಸಬೇಕಾದೀತು ಎಂಬ ಗಾಂಧಿ ಮಾತಿನ ವಿರುದ್ಧ ಗೋಡ್ಸೆ ಕೆಂಡಮಂಡಲನಾಗಿ, ದೇಶ ಇಬ್ಭಾಗವಾದ ಬಳಿಕ ಗಾಂಧಿ ಇನ್ನು ಬದುಕಿರಬಾರದು, ಅವರಿನ್ನೂ ಬದಕಿಯೇ ಇದ್ದಾರೆ, ಅವರನ್ನು ಮುಗಿಸಬೇಕು ಎಂದು ಘೋಷಿಸಿದ್ದ. ಮತ ಧರ್ಮದ ಆಧಾರದ ಮೇಲೆ ರಾಷ್ಟ್ರ, ರಾಜ್ಯ ನಿರ್ಮಾಣ ಸಾಧುವಲ್ಲ ಎಂದು ವಾದಿಸಿದವರು ಗಾಂಧೀಜಿ.
ಆದರೆ ಮತೀಯ ಆಧಾರದ ಮೇಲೆ ದ್ವಿ ರಾಷ್ಟ್ರ ಸಿದ್ದಾಂತವನ್ನು ಪ್ರತಿಪಾದಿಸಿದವರು ಸಾವರ್‌ಕರ್ !!. ಅವರ ಈ ಸಿದ್ದಾಂತ ಅವ ಲಂಬಿಸಿಯೇ ಜಿನ್ನಾ ಪಾಕಿಸ್ತಾನದ ಹಕ್ಕು ಸಾಧಿಸಿದ್ದು, ಹಾಗಾದರೆ ಸಾವರ್‌‌ಕರ್, ಗೋಡ್ಸೆಯ ರಾಜಕೀಯ ಸಿದ್ದಾಂತ ಏನು?. ಸಾವರ್‌‌ಕರಿಸಂ ತತ್ವದ ಪ್ರಕಾರ ನಡೆಯುವ ವಧೆ, ಹತ್ಯೆ ಕ್ಷಮಾರ್ಹ ಅವರ ತತ್ವಕ್ಕೆ ಆಧಾರವಾಗಿ ಜರ್ಮನಿಯಲ್ಲಿ ಆರ್ಯರಿಗೂ, ಯಹೂದಿ ಜನಾಂಗದವರಿಗೂ ಆದ ನರಮೇಧ ಉದಾಹರಿಸುತ್ತಾರೆ, ಇದೇ ತತ್ವವನ್ನು ಡಾ.ಹೆಗ್ಡೆವಾರ್ ವಿರಚಿತ With Nation ಹಾಗೂ ಗುರೂಜಿ ಗೋಲ್ವಾಲ್ಕರ್ ಅವರು Bunch of Thought's ಅವರ ಪಾಲಿಗೆ ಗೀತೋಪದೇಶವಾಗಿದೆ. ಜರ್ಮನಿಯೇ ಅವರ ಆದರ್ಶ ದೇಶ, ಹಿಟ್ಲರನೇ ಅವರ ಆದರ್ಶ ನಾಯಕ!! ಇಂತಹ ಅಪಸವ್ಯಗಳೇ ಪಾಕಿಸ್ತಾನ ಸ್ಥಾಪನೆಗೆ ಕಾರಣ, ಈ ದ್ವೇಷದ ಜ್ವಾಲಾಗ್ನಿ ಗಾಂಧಿಯನ್ನು ಬಲಿತೆಗೆದುಕೊಂಡ ನಂತರ ಅದು ಅಲ್ಲಿಗೆ ಮುಗಿದು ಹೋಗಿಲ್ಲ...
ಇದು ಗುಜರಾತಿನಲ್ಲಿನ ನರಮೇಧ..ಬಾಬರಿ ಮಸೀದಿ ಧ್ವಂಸದೊಂದಿಗೆ ಮುಂದುವರಿದಿದೆ, ಸಾವರ್‌‌ಕರಿಸಂನ ಈ ತತ್ವ ಅನಾಹುತ ಕ್ಕೆ ಕಾರಣವಾಗಿದೆ, ಹಾಗಾದರೆ ಭಾರತದ ಇಬ್ಭಾಗಕ್ಕೆ ಕಾರಣ್ಯಾರು ಗಾಂಧಿ ಅಥವಾ ಸಾವರ್‌ಕರರೇ...?ನಾನೇಕೆ ಗಾಂಧಿಯನ್ನು ಕೊಂದೆ ಎಂಬ ಪುಸ್ತಕ ಓದಿದ ಬಹುತೇಕರು ಗಾಂಧಿ ದೇಶದ್ರೋಹಿಯಾಗಿ-ಗೋಡ್ಸೆ ಮಹಾನ್ ದೇಶಭಕ್ತ ಎಂದು ಬೊಬ್ಬಿರಿ ಯುವುದು ಹಾಸ್ಯಾಸ್ಪದ. ಧೀರ-ವೀರ ಎಂದು ಖ್ಯಾತಿ ಗಳಿಸಿದ ವಿನಾಯಕ ದಾಮೋದರ ಸಾವರ್‌ಕರ್ ಅಂಡಮಾನ್ ಜೈಲಿನಲ್ಲಿದ್ದಾಗ 1911ರಲ್ಲಿ ಭಾರತ ಸರಕಾರಕ್ಕೆ ಕ್ಷಮಾ ಯಾಚನಾ ಪತ್ರ ಕಳುಹಿಸಿದ್ದರು !!.
ಪತ್ರದ ಉಲ್ಲೇಖ- ''ಕೊನೆಯದಾಗಿ, 1911ರಲ್ಲಿ ನಾನು ಕಳುಹಿಸಿದ ಕ್ಷಮಾಯಾಚನಾ ಮನವಿ ಪತ್ರವನ್ನು ತಾವು ಪರಾಂಬರಿಸಿ ಕೊಂಡು ಇಂಡಿಯಾ ಸರಕಾರಕ್ಕೆ ಅದನ್ನು ಮಂಜೂರಾತಿಗಾಗಿ ಕಳುಹಿಸಿಕೊಡಬೇಕೆಂದು ಘನವೆತ್ತ ತಮಗೆ ನೆನಪು ಮಾಡ ಬಹು ದೇ?....ಹೀಗೆ ಸಾಗುವ ''ವೀರ''ಸಾವರ್‌‌ಕರರ ಪತ್ರ ನನ್ನ ಮುಂದಿನ ಭವಿಷ್ಯ ನಡತೆ ಪರಿವರ್ತನೆಯಾಗುತ್ತದೆ,ನನ್ನನ್ನು ಜೈಲಿನಲ್ಲಿ ಇಡುವುದರಿಂದ,ಬಿಡುವುದರಿಂದಾಗುವ ಯಾವ ಒಳಿದು ಆಗಲಾರದು. ಆದ್ದರಿಂದ ಉಡಾಳ ಮಗ ಸರಕಾರದ ಮಾತೃ ಮಂದಿರದ ಬಾಗಿಲಿಗಲ್ಲದೆ ಮತ್ತೆಲ್ಲಿಗೆ ಹೋದಾನು!! ತಾವು ಈ ಕೆಲವು ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುವಿರೆಂದು ನಂಬುತ್ತೇನೆ.
ಸಹಿ
ವಿ.ಡಿ.ಸಾವರ್‌‌ಕರ
ಬಳಿಕ 5-01-1924ರಲ್ಲಿ ಮುಂಬೈ ಸರಕಾರ, ವಿನಾಯಕ ದಾಮೋದರ ಸಾವರ್‌‌‌ಕರ್ ಅವರನ್ನು ಬಿಡುಗೊಳಿಸಲು ನಿರ್ಧರಿಸಿರು ವುದಾಗಿ ಪತ್ರ ಮುಖೇನ ತಿಳಿಸಿ, 1898ರ ಕ್ರಿಮಿನಲ್ ಪ್ರೊಸಿಜರ್ ಕೋಡ್ ಸೆಕ್ಷನ್ 401ರ ಪ್ರಕಾರ, ಆಡಳಿತ ಮಂಡಳಿಯ ಮುಖ್ಯ ಸ್ಥರಾದ ರಾಜ್ಯಪಾಲರು ದ್ವೀಪಾಂತರ ಶಿಕ್ಷೆಗೆ ಗುರಿಯಾಗಿರುವ ವಿ.ಡಿ.ಸಾವರ್‌‌ಕರ್‌‌ರ ಇನ್ನು ಉಳಿದಿರುವ ಶಿಕ್ಷೆಯನ್ನು ಮನ್ನಾ ಮಾಡಲಾಗಿದೆ ಎಂದು ಆದೇಶ ನೀಡಲಾಗಿದೆ.
ಶಿರಗಾಂವ 9ನೇ ಮೇ 1925.